ಯಡಿಯೂರಪ್ಪ ರಾಜ್ಯ ಪ್ರವಾಸದ ಬಗ್ಗೆ ನಳಿನ್ ಕುಮಾರ್ ಕಟೀಲ್ ಮಹತ್ವದ ಹೇಳಿಕೆ!
ಬೆಂಗಳೂರು, ಸೆ. 06: ಹುಬ್ಬಳ್ಳಿ ಧಾರವಾಡ, ಬೆಳಗಾವಿ ಮತ್ತು ಕಲಬುರ್ಗಿ ಮೂರೂ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಲಭಿಸಿದೆ. ಬೆಳಗಾವಿಯಲ್ಲಿ ಮೊದಲ ಬಾರಿಗೆ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿದ್ದು ರಾಷ್ಟ್ರೀಯ ವಿಚಾರಧಾರೆ, ಬಿಜೆಪಿಯ ಉತ್ತಮ ಆಡಳಿತಕ್ಕೆ ಜನರು ಬೆಂಬಲ ಕೊಟ್ಟಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಫಲಿತಾಂಶದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಹುಬ್ಬಳ್ಳಿ-ಧಾರವಾಡದಲ್ಲಿ ನಮ್ಮ ಆಡಳಿತ ಮುಂದುವರಿಯುತ್ತಿದೆ. ಈ ಅವಳಿ ನಗರಕ್ಕೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅತಿ ಹೆಚ್ಚು ಅನುದಾನ ಕೊಟ್ಟಿದ್ದರು. ಬೆಳಗಾವಿಯಲ್ಲೂ ನಮ್ಮ ಶಾಸಕರು, ಜನಪ್ರತಿನಿಧಿಗಳ, ಕಾರ್ಯಕರ್ತರ ಪ್ರಯತ್ನ ಫಲ ನೀಡಿದೆ" ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕಲಬುರ್ಗಿ ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಂತಿತ್ತು. ಅಲ್ಲಿಯೂ ಅಧಿಕಾರ ಹಿಡಿಯಲಿದ್ದೇವೆ. ಲೋಕಸಭೆ ಮತ್ತು ಇತರ ಚುನಾವಣೆಗಳಲ್ಲಿ ಬಂದ ಫಲಿತಾಂಶದ ಮಾದರಿ ಮುಂದುವರೆದಿದೆ. ಕೇಂದ್ರ ಸರಕಾರದ ಸಾಧನೆಗಳು, ಮಾಜಿ ಸಿಎಂ ಯಡಿಯೂರಪ್ಪ ಅವರ ಎರಡು ವರ್ಷಗಳ ಆಡಳಿತ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಲ್ಯಾಣ ಕರ್ನಾಟಕದ ಚಿಂತನೆಯ ಆಡಳಿತದಿಂದ ಜನಾಶೀರ್ವಾದ ನಮಗೆ ಸಿಕ್ಕಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅವರ ರಾಜ್ಯ ಪ್ರವಾಸದ ಬಗ್ಗೆ ಎದ್ದಿದ್ದ ಎಲ್ಲ ಗೊಂದಲಗಳಿಗೆ ಕಟೀಲ್ ತೆರೆ ಎಳೆದಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಟವೆಲ್ ಹಾಕಬೇಡಿ!
ಮೂರು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿಗೆ ಬೆಂಬಲ ಕೊಡುವ ಮೂಲಕ ಮತದಾರರು, ಮುಖ್ಯಮಂತ್ರಿ ಸ್ಥಾನಕ್ಕೆ ನೀವು ಟವೆಲ್ ಹಾಕಬೇಡಿ ಎಂಬ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್ ಪಕ್ಷದವರಿಗೆ ಕೊಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ವಿಫಲರಾಗಿದ್ದಾರೆ ಎಂಬ ಸಂದೇಶ ಹೋಗಬೇಕೆಂಬ ಉದ್ದೇಶದಿಂದ ಸಿದ್ದರಾಮಣ್ಣ ಅವರು ಈ ಬಾರಿ ಹೆಚ್ಚಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿರಲಿಲ್ಲ" ಎಂದು ಮತ್ತೊಂದು ಮಹತ್ವದ ವಿಚಾರವನ್ನು ನಳಿನ್ ಕುಮಾರ್ ಕಟೀಲ್ ಅವರು ಹಂಚಿಕೊಂಡಿದ್ದಾರೆ.
ಗೆಲವಿಗೆ ಕಾರಣ ನಮ್ಮ ಕಾರ್ಯಕರ್ತರ ಶ್ರಮ!
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳು, ವ್ಯವಸ್ಥಿತ ಚುನಾವಣಾ ತಂತ್ರಗಾರಿಕೆ, ಸಂಘಟನಾ ಪ್ರಯತ್ನವು ನಮಗೆ ಉತ್ತಮ ಫಲ ಕೊಟ್ಟಿದೆ. ಮೂರು ಮಹಾನಗರ ಪಾಲಿಕೆಗಳ ಚುನಾವಣೆಯ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾಣಾ ಅವರ ನೇತೃತ್ವದಲ್ಲಿ ವಿವಿಧ ತಂಡಗಳ ಜನಪ್ರತಿನಿಧಿಗಳ, ಕಾರ್ಯಕರ್ತರ ಪರಿಶ್ರಮದಿಂದ ನಾವು ಗೆಲುವು ಸಾಧಿಸಿದ್ದೇವೆ ಎಂದು ಕಟೀಲ್ ಹೇಳಿದ್ದಾರೆ.
ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಗೆದ್ದಿದ್ದೇವೆ!
ಮೂರು ನಗರಪಾಲಿಕೆಗಳು ಸೇರಿದಂತೆ ಕೆಲವು ಉಪ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಅದಕ್ಕಾಗಿ ಮತದಾರರನ್ನು ಹಾಗೂ ತಮಗೆ ಆಶೀರ್ವಾದ ಮಾಡಿದ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕಟೀಲ್ ಹೇಳಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಈ ಚುನಾವಣೆ ನಡೆದಿದೆ. ಇದೇ ಸಂದರ್ಭದಲ್ಲಿ ಮತ್ತೊಂದು ಮಹತ್ವದ ಮಾತನ್ನು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅದು ರಾಜ್ಯ ಪ್ರವಾಸದ ಬಗ್ಗೆ ಆಡಿರುವ ಮಾತು.
ಯಡಿಯೂರಪ್ಪ ಜೊತೆ ಸೇರಿ ರಾಜ್ಯ ಪ್ರವಾಸ!
ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಆಡಳಿತ ಮತ್ತು ಯಡಿಯೂರಪ್ಪ ಅವರ ಮಾರ್ಗದರ್ಶನದಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರದ ಜನೋಪಯೋಗಿ ಕಾರ್ಯಗಳಿಗೆ ಜನಮನ್ನಣೆ ದೊರಕಿದೆ. ಈ ಮೂಲಕ ಜನರು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಜೊತೆಗೆ ಯಡಿಯೂರಪ್ಪ ಅವರು ಮಾಡಲು ಉದ್ದೇಶಿಸಿರುವ ರಾಜ್ಯ ಪ್ರವಾಸದ ಗೊಂದಲಕ್ಕೆ ಕಟೀಲ್ ತೆರೆ ಎಳೆದಿದ್ದು, "ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗೆ ತಾವು ರಾಜ್ಯ ಪ್ರವಾಸ ಮಾಡುವುದಾಗಿ ತಿಳಿಸಿದ್ದಾರೆ. ಇಬ್ಬರೂ ನಾಯಕರು ಜೊತೆಯಾಗಿ ರಾಜ್ಯ ಪ್ರವಾಸ ಮಾಡಲಿದ್ದು, ಈ ಕುರಿತ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
Recommended Video