ಕರ್ನಾಟಕ ರಾಜಕೀಯ: ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ ಬಣಕ್ಕೆ ಎಚ್ಚರಿಕೆ ಗಂಟೆ!?
ಬೆಂಗಳೂರು, ಜೂನ್ 17: "ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದಿಗ್ಧ ಪರಿಸ್ಥಿತಿಯನ್ನು ಸರ್ಕಾರವು ಸಮರ್ಥವಾಗಿ ಎದುರಿಸುವುದು ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದೇವೆ," ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶಾಸಕರು ಮತ್ತು ಸಚಿವರ ಜೊತೆಗೆ ನಡೆಸಿದ ಸಭೆಯ ನಂತರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. "ಕೊವಿಡ್ ಸಂದರ್ಭದಲ್ಲಿ ಏನೇನು ಕಾರ್ಯಕ್ರಮ ಮಾಡಬೇಕು, ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು ಎಂದು ನಮ್ಮ ಶಾಸಕರ ಜೊತೆ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ," ಎಂದು ಹೇಳಿದ್ದಾರೆ.
'ಯಡಿಯೂರಪ್ಪ ಬದಲಾವಣೆ ಬೇಡಿಕೆ': ಅರುಣ್ ಸಿಂಗ್ಗೆ ಎಚ್ ವಿಶ್ವನಾಥ್ ಹೇಳಿದ್ದೇನು?
"ರಾಜ್ಯದಲ್ಲಿ ಯೋಗ ದಿನದ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚಿಸಲಾಗಿದ್ದು, ಅವರವರ ಕ್ಷೇತ್ರದಲ್ಲಿ ಕಾರ್ಯಕ್ರಮ ರೂಪಿಸುವಂತೆ ಸೂಚಿಸಿದ್ದೇನೆ. ಸರ್ಕಾರ ಬಡವರ ಪರ ತಂದಿರುವ ಕಾರ್ಯಕ್ರಮ ಕುರಿತು ಚರ್ಚಿಸಿದ್ದೇವೆ. ಪಕ್ಷ ಸಂಘಟನೆಯ ಜೊತೆಗೆ ಸರ್ಕಾರ ಬಡವರ ಪರ ತಂದಿರುವ ಕಾರ್ಯಕ್ರಮ ಕುರಿತು ಸಲಹೆ ಸೂಚನೆಗಳನ್ನು ನೀಡಲಾಗಿದೆ," ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.
"ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುವಂತಿಲ್ಲ"
ಕರ್ನಾಟಕದ ಭಾರತೀಯ ಜನತಾ ಪಕ್ಷದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಇದರ ಮಧ್ಯೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಎಲ್ಲ ನಾಯಕರ ಜೊತೆಗೂ ಚರ್ಚೆ ನಡೆಸಿರುವುದಾಗಿ ಹೇಳಿದ್ದಾರೆ. "ಪಾರ್ಟಿಯಲ್ಲಿ ಕೆಲವರು ಅಸಮಾಧಾನ ಹೊರಹಾಕಿರಬಹುದು. ಎಲ್ಲರ ಹೇಳಿಕೆಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಮನಿಸುತ್ತಿದ್ದಾರೆ. ಇದರ ಬಗ್ಗೆ ಸ್ಪಷ್ಟ ಎಚ್ಚರಿಕೆಯನ್ನು ನಾವು ಕೊಟ್ಟಿದ್ದೇವೆ," ಎಂದು ಎಚ್ಚರಿಕೆ ನೀಡಿದ್ದಾರೆ.
"ನಾಯಕತ್ವ ಬದಲಾವಣೆ ಬಗ್ಗೆ ಶಾಸಕರ ಜೊತೆ ಚರ್ಚಿಸಿಲ್ಲ"
"ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಮಹತ್ವದ ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಶಾಸಕರ ಜೊತೆ ಯಾವುದೇ ರೀತಿ ಚರ್ಚೆ ನಡೆಸಿಲ್ಲ," ಎಂದು ಸ್ವತಃ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಹೆಚ್ ವಿಶ್ವನಾಥ್ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಲಾಗಿದೆ. ಅವರು ಹೊಸಬರು, ಅವರಿಗೆ ಪಕ್ಷದ ರೀತಿ ರಿವಾಜು ಗೊತ್ತಿಲ್ಲ," ಎಂದು ಅರುಣ್ ಸಿಂಗ್ ಹೇಳಿದ್ದಾರೆ.
ಬಿಜೆಪಿ ಸಿದ್ದಾಂತಗಳಂತೆ ನಡೆದುಕೊಳ್ಳಲು ಸೂಚನೆ
"ಭಾರತೀಯ ಜನತಾ ಪಕ್ಷದ ನಾಯಕರು ಸಿದ್ದಾಂತಗಳಿಗೆ ತಕ್ಕಂತೆ ನಡೆದುಕೊಳ್ಳಬೇಕು. ಯಾವ ನಾಯಕರು ಕೂಡ ಪಕ್ಷಕ್ಕೆ ಮುಜುಗರ ತರುವಂತೆ ಕೆಲಸ ಯಾರೂ ಮಾಡಬಾರದು. ಪಾರ್ಟಿಗೆ ನಷ್ಟ ಉಂಟು ಮಾಡುವಂತಹ ಹೇಳಿಕೆ ನೀಡುವಂತಿಲ್ಲ. ಪಕ್ಷವಿರೋಧಿ ಹೇಳಿಕೆಗಳನ್ನು ನೀಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು," ಎಂದಿದ್ದಾರೆ.
Recommended Video
"ನಾಯಕರ ಹೇಳಿಕೆಯಿಂದ ಕಾರ್ಯಕರ್ತರಲ್ಲಿ ಗೊಂದಲ"
"ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಮೂವರು ನಾಯಕರು ಮಾತ್ರ ಹೇಳಿಕೆ ನೀಡಿದ್ದಾರೆ. ಇದರ ಬಗ್ಗೆ ನಾವು ಗಮನಹರಿಸಿದ್ದು, ಇಂತ ಹೇಳಿಕೆಗಳಿಂದ ಕಾರ್ಯಕರ್ತರಿಗೆ ಸಮಸ್ಯೆ ಆಗುತ್ತಿದೆ. ನಾಯಕರ ಈ ಗೊಂದಲಕಾರಿ ಹೇಳಿಕೆಗಳ ಬಗ್ಗೆ ಗಂಭೀರವಾಗಿ ಗಮನಹರಿಸಿದ್ದೇವೆ. ಅವರ ಹೇಳಿಕೆ ಪರಿಶೀಲಿಸುತ್ತಿದ್ದೇವೆ, ಇದರ ಜೊತೆ ಅವರಿಗೂ ಸ್ಪಷ್ಟವಾದ ಎಚ್ಚರಿಕೆ ನೀಡಿದ್ದೇವೆ," ಎಂದು ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.