ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕಾನೂನಾತ್ಮಕ ತೊಡಕು!
ಬೆಂಗಳೂರು, ಡಿ. 03: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ಕೊಟ್ಟಿವೆ. ಇದೇ ಹಿನ್ನೆಲೆಯಲ್ಲಿ ಬಂದ್ಗೆ ಸಹಕಾರ ಕೊಡುವಂತೆ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ವಾಟಾಳ್ ನಾಗರಾಜ್ ಹಾಗೂ ಸಾ.ರಾ. ಗೋವಿಂದ್ ಅವರು ಪ್ರಚಾರ ನಡೆಸಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮರಾಠ ಪ್ರಾಧಿಕಾರ ರಚನೆ ಮಾಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕಾನೂನಾತ್ಮಕ ತೊಡಕು ಉಂಟಾಗಿದೆ.
ಬಸವಕಲ್ಯಾಣ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿರುವುದು ಎಲ್ಲರೂ ತಿಳಿದಿರುವ ವಿಚಾರ. ಭಾಷೆ ಆಧಾರದಲ್ಲಿ ಪ್ರಾಧಿಕಾರ ರಚನೆಗೆ ಬಿಜೆಪಿ ನಾಯಕರನ್ನು ಬಿಟ್ಟರೆ, ಉಳಿದವರು ಬೆಂಬಲ ಕೊಟ್ಟಿಲ್ಲ. ಕನ್ನಡ ಪರ ಸಂಘಟನೆಗಳು ಸೆರಿದಂತೆ ವಿವಿಧ ಕಡೆಗಳಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆದರೂ ಪ್ರಾಧಿಕಾರ ರಚನೆಗೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮುಂದಾಗಿತ್ತು. ಇದೀಗ ಕಾನೂನು ತೊಡಕು ಎದುರಾಗಿದ್ದು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯಿಂದ ಸರ್ಕಾರ ಹಿಂದಕ್ಕೆ ಸರಿದಿದೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ: ಸಿಎಂ ಯಡಿಯೂರಪ್ಪ ಅಂತಿಮ ನಿರ್ಧಾರ ಏನು ಗೊತ್ತಾ?
ಕಾನೂನಾತ್ಮಕ ತೊಡಕು
ಯಾವುದೇ ಪ್ರಾಧಿಕಾರ ರಚನೆ ಆಗುವ ಮೊದಲು ಅದು ವಿಧಾನ ಮಂಡಳದ ಉಭಯ ಸದನಗಳಲ್ಲಿ ಅಂಗೀಕಾರವಾಗಬೇಕು. ಏಕಾಏಕಿ ಯಾವುದೇ ಪ್ರಾಧಿಕಾರ ರಚನೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಯಾಕೆಂದರೆ ಪ್ರಾಧಿಕಾರ ರಚನೆಗೆ ಮಾಡಲು ಹೊಸ ಶಾಸನವನ್ನೇ ರಚನೆ ಮಾಡಬೇಕು. ಹೀಗಾಗಿ ಮೊದಲು ಪ್ರಾಧಿಕಾರ ರಚನೆಗೆ ಮುದಾಗಿದ್ದ ರಾಜ್ಯ ಬಿಜೆಪಿ ಸರ್ಕಾರ ತನ್ನ ನಡೆಯಿಂದ ಹಿಂದೆ ಸರಿದಿದೆ. ಹೀಗಾಗಿ ಮರಾಠ ಅಭಿವೃದ್ಧಿ ಅಭಿವೃದ್ಧಿ ಪ್ರಾಧಿಕಾರ ರಚನೆ ಕೈಬಿಡಲು ಕಾರಣವಾಗಿರುವುದು ಕಾನೂನಾತ್ಮಕ ತೊಡಕು.
ಕಾನೂನು ಮಾಡಬೇಕು
ಹಾಗಾದರೆ ಕಾನೂನಾತ್ಮಕ ತೊಡಕುಗಳು ಏನು? ಎಂಬುದನ್ನು ಅರಿಯಲು ಮಾಜಿ ಕಾನೂನು ಸಚಿವ ಹಾಗೂ ಜೆಡಿಎಸ್ ಹಿರಿಯ ನಾಯಕ ಎಂ.ಸಿ. ನಾಣಯ್ಯ ಅವರನ್ನು 'ಒನ್ಇಂಡಿಯಾ ಕನ್ನಡ' ಸಂಪರ್ಕಿಸಿದಾಗಿ ರಾಜ್ಯ ಬಿಜೆಪಿ ಸರ್ಕಾರದ ಅಚಾತುರ್ಯವನ್ನು ಅವರು ವಿವರಿಸಿದರು. ಪ್ರಾಧಿಕಾರ ರಚನೆ ಮಾಡಲು ಕಾನೂನು ಮಾಡಬೇಕಾಗುತ್ತದೆ ಎಂದು ವಿವರಿಸಿದರು.
ಉದಾಹರಣೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಕಾನೂನನ್ನು ರಚನೆ ಮಾಡಲಾಗಿದೆ. ಹಾಗೆಯೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಕಾನೂನು ರಚನೆ ಮಾಡಬೇಕಾಗುತ್ತದೆ. ಅದನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್ ಎರಡೂ ಸದನಗಳಲ್ಲಿಟ್ಟು ಅಂಗೀಕಾರ ಪಡೆದುಕೊಳ್ಳಬೇಕು.
ಜೊತೆಗೆ ಆ ಪ್ರಾಧಿಕಾರ ಏನು ಮಾಡಬೇಕು? ಏನು ಮಾಡಬಾರದು ಎಂಬ ಮಾರ್ಗಸೂಚಿಗಳನ್ನು ಆ ಕಾನೂನಿನಲ್ಲಿ ಸೇರಿಸಲಾಗಿರುತ್ತದೆ. ಆ ಕಾನೂನು ಎರಡೂ ಸದನಗಳಲ್ಲಿ ಅಂಗೀಕಾರವಾದ ಬಳಿಕ ಅದನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗುತ್ತದೆ. ರಾಜ್ಯಪಾಲರು ಒಪ್ಪಿಗೆ ಕೊಟ್ಟ ಬಳಿಕ ಅದು ಕಾನೂನಾಗಿ ಬಳಿಕ ಪ್ರಾಧಿಕಾರ ರಚನೆ ಆಗುತ್ತದೆ ಎಂದು ಎಂ.ಸಿ. ನಾಣಯ್ಯ ಅವರು 'ಒನ್ಇಂಡಿಯಾ ಕನ್ನಡ'ಕ್ಕೆ ವಿವರಿಸಿದರು.
ಮರಾಠ ಪ್ರಾಧಿಕಾರ ರಚನೆ ಸುಲಭವಲ್ಲ!
ನಿಗಮ ಮಂಡಳಿ ರಚನೆಗೆ ಸರ್ಕಾರ ಸಂಪುಟದಲ್ಲಿ ಒಪ್ಪಿಗೆ ಪಡೆದರೆ ಸಾಕು. ಆದರೆ ಪ್ರಾಧಿಕಾರ ರಚನೆ ಮಾಡುವಾರ ಎರಡೂ ಸದನಗಳಲ್ಲಿಟ್ಟು ಅದನ್ನು ಪಾಸ್ ಮಾಡಿಕೊಳ್ಳಬೇಕು. ಆಗ ದೊಡ್ಡ ಮಟ್ಟದಲ್ಲಿ ಅದು ಚರ್ಚೆ ಆಗಿ ಗಲಾಟೆ ಆಗುತ್ತದೆ. ಹೀಗಾಗಿ ಇದೆಲ್ಲದರಿಂದ ತಪ್ಪಿಸಿಕೊಳ್ಳಲು ಅದನ್ನು ನಿಗಮ ಅಂತಾ ಮಾಡಿದರೆ ಸರ್ಕಾರಕ್ಕೆ ತೊಂದರೆನೆ ಇರುವುದಿಲ್ಲ.
ಮೊದಲು 68-70 ನಿಗಮ-ಮಂಡಳಿಗಳು ಇದ್ದವು. ಈಗ ಅವು 76ಕ್ಕೆ ಏರಿಕೆ ಆಗಿವೆ. ಅವುಗಳಿಗೆಲ್ಲ ಅಧ್ಯಕ್ಷರನ್ನು ನೇಮಕ ಮಾಡಿ ಸಂಪುಟ ದರ್ಜೆಯ ಸ್ಥಾನಮಾನ ಕೊಟ್ಟರೆ ಅದಕ್ಕೆ ಬಹಳಷ್ಟು ಹಣ ವ್ಯವಯಾಗುತ್ತದೆ. ಮಂತ್ರಿಸ್ಥಾನ ಸಿಗದ ಅತೃಪ್ತ ಶಾಸಕರಿಗೆ ಈ ನಿಗಮ ಮಂಡಳಿಗಳನ್ನು ಕೊಟ್ಟು ಸಂಪುಟ ದರ್ಜೆ ಸ್ಥಾನಮಾನ ಕೊಡಲಾಗುತ್ತದೆ. ಇದು ನಿಗಮ ಮಂಡಳಿಗಳು ಹಾಗೂ ಪ್ರಾಧಿಕಾರ ರಚನೆಗೆ ಇರುವ ವ್ಯತ್ಯಾಸ ಎಂದು ಮಾಜಿ ಕಾನೂನು ಮಂತ್ರಿ ಎಂ.ಸಿ. ನಾಣಯ್ಯ ಅವರು ತಿಳಿಸಿದ್ದಾರೆ.
ಈ ಸರ್ಕಾರಕ್ಕೆ ಸಂವಿಧಾನದ ಅರಿವಿಲ್ಲ
ಇದೇ ವಿಚಾರದ ಕುರಿತು 'ಒನ್ಇಂಡಿಯಾ ಕನ್ನಡ'ದೊಂದಿಗೆ ಮಾತನಾಡಿದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು, ಬಿಜೆಪಿ ಸರ್ಕಾರಕ್ಕೆ ಸಂವಿಧಾನದ ಅರಿವಿಲ್ಲ. ಸಾಮಾಜಿಕ ನ್ಯಾಯದ ಪರಿಜ್ಞಾನವೂ ಇಲ್ಲ ಎಂದು ಆರೋಪಿಸಿದ್ದಾರೆ. ರಾಜಕೀಯ ಪಕ್ಷಗಳು ಚುನಾವಣೆಗೆ ಹೋದಂತಹ ಸಂದರ್ಭದಲ್ಲಿ ಅವರ ಪಕ್ಷದ ಪ್ರಣಾಳಿಕೆಯಲ್ಲಿ ಆ ಪಕ್ಷದ ಸಿದ್ಧಾಂತ ಹಾಗೂ ಪಕ್ಷದ ಕಾರ್ಯಕ್ರಮಗಳನ್ನು ಘೋಷಣೆ ಮಾಡಿರುತ್ತಾರೆ. ಅವರ ಪಕ್ಷದ ಪ್ರಣಾಳಿಕೆಯಂತೆಯೆ ಪ್ರತಿ ವರ್ಷ ಬಜಟ್ನಲ್ಲಿ ಅನುದಾನ ಕೊಡುವುದು ಹಾಗೂ ಯೋಜನೆಗಳನ್ನು ರೂಪಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಹಾಗೂ ಸಂಸದೀಯ ವ್ಯವಸ್ಥೆಯ ಸಂಪ್ರದಾಯ ಎಂದು ಉಗ್ರಪ್ಪ ಅವರು ಹೇಳಿದ್ದಾರೆ.
ಪ್ರಣಾಳಿಕೆಯಲ್ಲಿ ಇಲ್ಲ, ಬಜೆಟ್ನಲ್ಲೂ ಇಲ್ಲ!
ಆದರೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಪ್ರಣಾಳಿಕೆಯಲ್ಲಿಯೂ ಇಲ್ಲ, ಬಜೆಟ್ನಲ್ಲಿಯೂ ಘೊಷಣೆ ಆಗಿಲ್ಲ. ಕೇವಲ ಚುನಾವಣೆ ಕಾರಣಕ್ಕಾಗಿ ಮತದಾರರನ್ನು ಓಲೈಸುವುದಕ್ಕಾಗಿ ಪ್ರಯತ್ನವನ್ನು ಬಿಜೆಪಿ ಸರ್ಕಾರ ನಡೆಸಿದೆ. ಮರಾಠಿಗರೆಲ್ಲರೂ ಕೂಡ ನಮ್ಮ ರಾಜ್ಯದ ವಿರುದ್ಧ ಇದ್ದಾರೆ ಎಂದು ನಾನು ಹೇಳುವುದಿಲ್ಲ. ಆದರೆ ಕೆಲವರಂತೂ ನಮ್ಮ ರಾಜ್ಯದ ವಿರುದ್ಧ ಇದ್ದಾರೆ. ಬೆಂಗಳೂರಿನಲ್ಲಿರುವ ಮರಾಠಿಗರು ಹಾಗಿದ್ದಾರೆ ಎಂದು ನಾನು ಹೇಳುವುದಿಲ್ಲ. ನಾಡಿನ ನೆಲ-ಜಲ-ಭಾಷೆ ಪರವಾಗಿರುವಂತಹ ಮರಾಠಿಗರೂ ರಾಜ್ಯದಲ್ಲಿದ್ದಾರೆ.
ಆದರೆ
ಮಹಾರಾಷ್ಟ್ರದ
ಗಡಿಭಾಗದಲ್ಲಿರುವ
ಮರಾಠಿಗರು
ಅನೇಕ
ದಶಕಗಳಿಂದ
ಕಾಲು
ಕೆರೆದು
ಜಗಳಕ್ಕೆ
ಬರುತ್ತಿದ್ದಾರೆ.
ಅಂಥವರಿಗೆ
ಪ್ರಾಶಸ್ತ್ಯ
ಕೊಡುವಂಥದ್ದು
ಚುನಾವಣಾ
ಗಿಮಿಕ್
ಆಗಿದೆ.
ನಿಜಕ್ಕೂ
ಅವರಿಗೆ
ಸಹಾಯ
ಮಾಡಬೇಕು
ಎನ್ನುವುದಾದರೆ
ಅವರೂ
ಯಾವುದಾದರೂ
ಒಂದು
ವರ್ಗದಲ್ಲಿಯೆ
ಬರುತ್ತಾರಲ್ಲವಾ?
ಉತ್ತರ
ಕನ್ನಡ
ಹಾಗೂ
ದಕ್ಷಿಣ
ಕನ್ನಡದಲ್ಲಿ
ಮರಾಠಿ-ಮರಾಠ
ಪರಿಶಿಷ್ಟ
ಪಂಗಡದಲ್ಲಿ
ಬರುತ್ತಾರೆ.
ನೆಲ-ಜಲ-ಭಾಷೆ ಬಗ್ಗೆ ಬದ್ಧತೆಯಿಲ್ಲದ
ಅವರಿಗೆ ಎಸ್ಟಿ ನಿಗಮದಿಂದ ಸೌಕರ್ಯಗಳನ್ನು ಕೊಡಬಹುದಾಗಿತ್ತಲ್ವಾ? ಜೊತೆಗೆ ಮರಾಠಿ ಮಾತನಾಡುವಂಥವರಲ್ಲಿ ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರೂ ಇದ್ದಾರೆ. ಅವರೆಲ್ಲರೂ ನಮ್ಮ ನಾಡಿನ ಒಂದು ಭಾಗವೇ ಆಗಿದ್ದಾರೆ. ಆದರೆ ಸರ್ಕಾರದ ಈ ತೀರ್ಮಾನದಿಂದ ರಾಜ್ಯದ ಒಂದಿಷ್ಟು ಭಾಗ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಹೇಳುವ ಜನರ ಪರವಾಗಿ ರಾಜ್ಯ ಸರ್ಕಾರವಿದೆ ಎಂಬ ಸಂದೇಶ ಹೋಗುವುದಿಲ್ಲವೇ? ಎಂದು ಪ್ರಶ್ನಿಸಿರುವ ವಿ.ಎಸ್. ಉಗ್ರಪ್ಪ ಅವರು, ಒಟ್ಟಾರೆ ಬಿಜೆಪಿ ಸರ್ಕಾರಕ್ಕೆ ನಮ್ಮ ನಾಡಿನ ನೆಲ-ಜಲ-ಭಾಷೆಯ ಮೇಲೆ ಯಾವುದೇ ಆದರ ಇಲ್ಲ ಎಂದು 'ಒನ್ಇಂಡಿಯಾ ಕನ್ನಡ'ದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
Recommended Video
ಪ್ರಾಧಿಕಾರದ ಬದಲಿಗೆ ನಿಗಮ!
ಈ ಕಾನೂನಾತ್ಮಕ ಕಾರಣದಿಂದ ರಾಜ್ಯ ಬಿಜೆಪಿ ಸರ್ಕಾರವು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರದ ಬದಲು ಮರಾಠ ಅಭಿವೃದ್ಧಿ ನಿಗಮ ಎಂದು ಬದಲಾಯಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಒಟ್ಟಾರೆ ಇಡೀ ರಾಜ್ಯಾದ್ಯಂತ ಪ್ರಾಧಿಕಾರ ರಚನೆಗೆ ತೀವ್ರ ವಿರೋಧದ ಹೊರತಾಗಿಯೂ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿರುವುದರ ಪರಿಣಾಮ ಮುಂದೆ ಬಿಜೆಪಿ ಮೇಲೆ ಆಗಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.