ಹಾಯ್, ಹಲೋ ಎಂದು ಮಾತುಕತೆ ಬದಲು ಸ್ವಚ್ಛ ಭಾರತ ಶುರು ಮಾಡಿ: ಸಚಿವ ನಾರಾಯಣಗೌಡ ಕರೆ
ವಿಜಯನಗರ/ಹಂಪಿ, ಅಕ್ಟೋಬರ್ 28: ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದಲ್ಲಿ ಸ್ವಚ್ಚ ಭಾರತ ಅಭಿಯಾನ ಚಾಲ್ತಿಯಲ್ಲಿದೆ. ಈವರೆಗೆ ದೇಶದ ನಾನಾ ರಾಜ್ಯಗಳಲ್ಲಿ ಸ್ವಚ್ಚ ಭಾರತದ ಅಭಿಯಾನಗಳು ನಡೆದಿವೆ. ಇಂದು ಕರ್ನಾಟಕದ ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಸಚಿವ ನಾರಾಯಣಗೌಡ ಕ್ಲೀನ್ ಇಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಶ್ವಪ್ರಸಿದ್ಧ ಹಂಪಿಯ ವಿರೂಪಾಕ್ಷ ದೇವಸ್ಥಾನದ ಬಳಿ ಕ್ಲೀನ್ ಇಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು," ಹಾಯ್, ಹಲೋ ಎಂದು ಮಾತುಕತೆ ಆರಂಭಿಸುವ ಬದಲು ಸ್ವಚ್ಛ ಭಾರತ ಎಂದು ಶುರು ಮಾಡಿ" ಎಂದು ವಿದ್ಯಾರ್ಥಿಗಳು, ಯುವ ಜನತೆಗೆ ಕರೆ ನೀಡಿದರು.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನೆಹರು ಯುವ ಕೇಂದ್ರ ಸಂಘಟನೆ, ಎನ್ಎಸ್ಎಸ್ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಕ್ಲೀನ್ ಇಂಡಿಯಾ ಅಭಿಯಾನ ನಡೆಯುತ್ತಿದೆ. ಹಂಪಿ ವಿಶ್ವಪ್ರಸಿದ್ಧ ಸ್ಥಳ. ಇಲ್ಲಿಗೆ ದೇಶವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ದೇಶಕ್ಕೆ ಹೆಸರು ತರಬೇಕು. 100 ಜನರಿಂದ ಸಾವಿರ ಜನ, ಸಾವಿರ ಜನರಿಂದ ಹತ್ತು ಸಾವಿರ ಜನರು ಹೀಗೆ ಎಲ್ಲರೂ ಕೈಗೂಡಿಸುವುದರಿಂದ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿ ಆಗಲಿದೆ. ನಮ್ಮ ಕಸವನ್ನು ನಾವೇ ಸಂಗ್ರಹಿಸಬೇಕು. ಆದರೆ ನಮ್ಮಲ್ಲಿ ಎಲ್ಲೆಂದರಲ್ಲಿ ಬಿಸಾಡಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಎಲ್ಲೆಂದರಲ್ಲಿ ಒಂದು ಟಿಶ್ಯೂ ಪೇಪರ್ ಕೂಡ ಹಾಕುವಂತಿಲ್ಲ. ಒಂದು ವೇಳೆ ಯಾರಾದ್ರೂ ಕಸ ಹಾಕಿದ್ರೇ ದಂಡ ಇಲ್ಲ, ಜೈಲಿಗೆ ಹಾಕುತ್ತಾರೆ. ಆದರೆ ನಮ್ಮದು ಪ್ರಜಾಪ್ರಭುತ್ವ ದೇಶ. ನಮ್ಮಲ್ಲಿ ಆ ಮಟ್ಟಕ್ಕೆ ಹೋಗುವುದು ಬೇಡ, ನಮ್ಮ ಕೆಲಸವನ್ನು ನಾವೇ ಮಾಡಬೇಕು ಎಂದು ಸಚಿವ ನಾರಾಯಣಗೌಡ ಅವರು ಕರೆ ನೀಡಿದರು.
ಈ ವೇಳೆ ನಾರಾಯಣಗೌಡರು ತಮ್ಮ ಊರಿನಲ್ಲಿ ಸ್ವಚ್ಚತಾ ಕಾರ್ಯದ ಬಗ್ಗೆ ನೆನೆಸಿಕೊಂಡರು. ಹಿಂದೆ ನಮ್ಮ ಊರುಗಳಲ್ಲಿ ಪ್ರತಿ ಸೋಮವಾರದಂದು ಗದ್ದೆಯಲ್ಲಿ, ತೋಟದಲ್ಲಿ ಕೆಲಸ ಮಾಡುತ್ತಿರಲಿಲ್ಲ. ಎಲ್ಲರೂ ಮನೆ ಅಥವಾ ಊರುಗಳನ್ನು ಸ್ವಚ್ವತೆಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ವಿ. ಸ್ವಯಂ ಪ್ರೇರಿತವಾಗಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು, ಶಿಕ್ಷಣದ ಸ್ವಚ್ಚತೆಗೆ ಆದ್ಯತೆ ಕೊಡಬೇಕು. ಶಾಲೆ ಕಾಲೇಜುಗಳು ಸೇರಿದಂತೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ನಮ್ಮ ದೇಶ ಎಂದು ಕಾಳಜಿ ಬರಬೇಕು. ನನ್ನನ್ನೂ ಸೇರಿದಂತೆ ಪ್ರತಿಯೊಬ್ಬರು ಸುಧಾರಣೆ ಮಾಡಿಕೊಂಡರೇ ಸ್ವಚ್ಛ ಭಾರತ ಯಶಸ್ವಿ ಆಗಲಿದೆ ಎಂದು ಸಚಿವ ನಾರಾಯಣ ಗೌಡ ಹೇಳಿದರು.
ಜೊತೆಗೆ ಸಿಗರೇಟ್ ಪ್ಯಾಕ್ ಮೇಲೆ ಹಾಕುವಂತೆ ಪ್ಲಾಸ್ಟಿಕ್ ಬಾಟಲ್ಗಳ ಮೇಲೂ, ಜಾಗೃತಿ ಸಂದೇಶವನ್ನು ಹಾಕುವಂತೆ ಸಚಿವ ನಾರಾಯಣಗೌಡ ಅವರು ತಿಳಿಸಿದರು. ದೇಶದ 744 ಜಿಲ್ಲೆಗಳಲ್ಲಿ ಅಕ್ಟೋಬರ್ 1 ರಿಂದ 31 ರವರೆಗೆ ಕ್ಲೀನ್ ಇಂಡಿಯಾ ಕ್ಯಾಂಪೇನ್ ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳ ಅವಧಿಯಲ್ಲಿ 75 ಲಕ್ಷ ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದ ಗುರಿ ಹೊಂದಲಾಗಿದೆ. ಕರ್ನಾಟಕದಲ್ಲಿ ಐದೂವರೆ ಲಕ್ಷ ಕೆಜಿ ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದ ಗುರಿ ಹೊಂದಲಾಗಿದ್ದು, ಕರ್ನಾಟಕದಲ್ಲಿ ಉತ್ತಮ ಸ್ಪಂದನೆ ಸಿಕ್ಕಿರುವುದಕ್ಕೆ ಸಚಿವ ನಾರಾಯಣಗೌಡ ಅವರು ಸಂತಸ ವ್ಯಕ್ತಪಡಿಸಿದರು. ಶನಿವಾರ ಹಾಗೂ ಭಾನುವಾರದಂದು ಸಾವಿರಾರು ಪ್ರವಾಸಿಗರು ಹಂಪಿಗೆ ಬರುತ್ತಾರೆ. ಹಾಗಾಗಿ, ಪ್ರತಿ ಶುಕ್ರವಾರ ಹಂಪಿಯಲ್ಲಿ ವಿಶೇಷವಾಗಿ ಸ್ವಚ್ಛತಾ ಅಭಿಯಾನ ಕೈಗೊಳ್ಳುತ್ತೇವೆ ಎಂದು ಉಪ ವಿಭಾಗಧಿಕಾರಿ ಸಿದ್ದರಾಮೇಶ್ವರ ಅವರು ಸಚಿವ ನಾರಾಯಣಗೌಡ ಅವರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿ ಪ್ರಕಾಶ್ ವೈದ್ಯ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.