506 ಕೋಟಿ ಹಣವಿದ್ದರೂ ರಾಜ್ಯ ಸರ್ಕಾರದ ಬಳಕೆ ಸಿಗುತ್ತಿಲ್ಲ
ಬೆಂಗಳೂರು, ಜೂ. 11: ಸಾರ್ವಜನಿಕರ ಹಣವನ್ನು ಸಾರ್ವಜನಿಕ ಬ್ಯಾಂಕ್ ನಲ್ಲೇ ಸಾರ್ವಜನಿಕ ಅಧಿಕಾರಿಗಳೇ ತೊಡಗಿಸಿದ್ದಾರೆ! ಈ ಹಣವನ್ನು ಪುನಃ ಬಳಸಿಕೊಳ್ಳಲು ಸಾಧ್ಯವಾಗದೇ ರಾಜ್ಯ ಸರ್ಕಾರ ಒದ್ದಾಡುತ್ತಿದೆ.
ಹೌದು.. ಜನರ ಸುಮಾರು 506 ಕೋಟಿ ಮೊತ್ತದ ಬೃಹತ್ ಗಾತ್ರದ ಹಣ ಸಾರ್ವಜನಿಕ ಸ್ವಾಮ್ಯದ 6 ಬ್ಯಾಂಕ್ ಗಳಲ್ಲಿ ಬಂಧಿಯಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಗ್ರಾಮೀಣ ಅಭಿವೃದ್ಧಿ ಇಲಾಖೆ ನೇಮಕ ಮಾಡಿದ್ದ ಸಮಿತಿ ಈ ಬಗ್ಗೆ ವರದಿಯೊಂದನ್ನು ಸಲ್ಲಿಕೆ ಮಾಡಿದೆ. ಸಮಿತಿ ಮುಂದಿನ 15 ದಿನಗಳಲ್ಲಿ ತನ್ನ ಅಂತಿಮ ವರದಿ ಸಲ್ಲಿಕೆ ಮಾಡಲಿದೆ.[ಇಂಧನ ಇಲಾಖೆಯಲ್ಲಿ 8 ಸಾವಿರ ಹುದ್ದೆ ಭರ್ತಿ, ವಿವರಗಳು]
ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್, ಮಹಾತ್ಮಾ ಗಾಂಧಿ ಶಕ್ತಿ ಮತ್ತು ಅಭಿವೃದ್ಧಿ ಕೇಂದ್ರದ ನಿರ್ದೇಶಕರಾದ ಪುಮತಿ ಶ್ರೀಧರ್ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಕ ಮಾಡಿದ್ದರು. ಏಪ್ರಿಲ್ ನಲ್ಲಿ ನೇಮಕ ಮಾಡಿದ್ದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿತ್ತು. ಆದರೆ ಇಷ್ಟೊಂದು ಹಣವನ್ನು ಹೇಗೆ ಉಳಿತಾಯ ಖಾತೆಯಲ್ಲಿ ಹೂಡಿಕೆ ಮಾಡಲಾಯಿತು ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಮೊದಲು ಸುಮಾರು 200 ಕೋಟಿ ರೂ, ಹಣ ಇದೆ ಎಂಬುದು ಕಂಡುಬಂದಿತ್ತು. ಆದರೆ ಎಲ್ಲ ಮಾಹಿತಿ ಕಲೆ ಹಾಕಿದ ನಂತರ 2008 ರಿಂದ ಈಚೆಗೆ ಈ ಬಗೆಯ ಸುಮಾರು 21 ಖಾತೆಗಳನ್ನು ತೆರೆಯಲಾಗಿದ್ದು ಒಟ್ಟು 506 ಕೋಟಿ ರೂ. ಇಡಲಾಗಿದೆ.
406 ಕೋಟಿ ರೂ. ಗ್ರಾಮೀಣ ನೀರಾವರಿಗೆ ಸಂಬಂಧಿಸಿದ ಖಾತೆಯಲ್ಲಿ ಇದೆ. ಉಳಿದ ಹಣ ಗ್ರಾಮೀಣ ಮೂಲಸೌಕರ್ಯ ಹೆಸರಿನಲ್ಲಿ ಬಂಧಿತವಾಗಿದೆ. ಆಂಧ್ರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಯಿನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಣವಿದೆ.
ಸರ್ಕಾರಕ್ಕೆ ಈ ಹಣವನ್ನು ಹಿಂದಕ್ಕೆ ಪಡೆಯಲು ಯಾವುದೇ ಸಮರ್ಪಕ ದಾಖಲೆಗಳು ಲಭ್ಯವಾಗುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ಇದೊಂದು ತಲೆನೋವಾಗಿ ಪರಿಣಮಿಸಿದ್ದು ಹಣವನ್ನು ಮತ್ತೆ ಬಳಕೆ ಮಾಡಿಕೊಳ್ಳುವ ಸಂಬಂಧ ಎಲ್ಲ ಸಚಿವರೊಂದಿಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.