ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸ್ಪಷ್ಟನೆ: ತಿರುವು ಪಡೆದುಕೊಂಡ SSLC ವಿದ್ಯಾರ್ಥಿನಿ ಗ್ರೀಷ್ಮ ಪರೀಕ್ಷೆ ಪ್ರಕರಣ!
ಬೆಂಗಳೂರು, ಜು. 17: ಮೂಡುಬಿದರೆಯ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೆಸಿಡೆನ್ಸಿಯಲ್ ಶಾಲೆಯ ಮೇಲೆ ಬಂದಿದ್ದ ಆರೋಪ ತಿರುವು ಪಡೆದುಕೊಂಡಿದೆ. ಶಾಲೆಯ ತಪ್ಪಿನಿಂದಾಗಿ ತುಮಕೂರು ಜಿಲ್ಲೆ ಕೊರಟಗೆರೆಯ ವಿದ್ಯಾರ್ಥಿನಿ ಗ್ರೀಷ್ಮಾ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವುದರಿಂದ ವಂಚಿತಳಾಗಿರುವುದಾಗಿ ಅವಳ ತಂದೆ ಈ ಮೊದಲು ಆರೋಪಿಸಿದ್ದರು. ಇದೀಗ ಇಡೀ ಪ್ರಕರಣ ತಿರುವು ಪಡೆದುಕೊಂಡಿದ್ದು, ಈ ಬಗ್ಗೆ ಆಳ್ವಾಸ್ ರೆಸಿಡೆನ್ಸಿಯಲ್ ಶಾಲೆಯ ಆಡಳಿತ ಮಂಡಳಿ ಸ್ಪಷ್ಟನೆ ಕೊಟ್ಟಿದೆ. ವಿದ್ಯಾರ್ಥಿನಿಯ ಪೋಷಕರ ತಪ್ಪಿನಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂಬ ಸ್ಪಷ್ಟನೆಯೊಂದಿಗೆ ದಾಖಲೆಯನ್ನೂ ಕೊಟ್ಟಿದೆ.
ಮುಖ್ಯೋಪಾದ್ಯಾಯರ ಸತತ ಸೂಚನೆಯ ಬಳಿಕವೂ ವಿದ್ಯಾರ್ಥಿನಿ ಗ್ರೀಷ್ಮಾ 10ನೇ ತರಗತಿಗೆ ಹಾಜರಾಗಿಯೇ ಇಲ್ಲ ಎಂದು ಆಳ್ವಾಸ್ ರೆಸಿಡೆನ್ಸಿಯಲ್ ಶಾಲೆ ಸ್ಪಷ್ಟಪಡಿಸಿದೆ. ಜೊತೆಗೆ ಶಾಲೆಯ ಸತತ ಪ್ರಯತ್ನದ ಬಳಿಕವೂ ಗ್ರೀಷ್ಮಾ ಪಾಲಕರು ಮೂಡುಬಿದರೆ ಶಾಲೆಗೆ ಬಂದು ಎಸ್ಎಸ್ಎಲ್ಸಿ ಪರೀಕ್ಷೆಗೆ ನೋಂದಣಿ ಮಾಡಿಸಲು ಸಹಕರಿಸಿಲ್ಲ, ಫಾರ್ಮ್ ತುಂಬಲು ಕೊನೆ ಪಕ್ಷ ವಿದ್ಯಾರ್ಥಿನಿಯ ಫೋಟೊವನ್ನೂ ಕೂಡ ಒದಗಿಸಲಿಲ್ಲ ಎಂದು ಸ್ಪಷ್ಟನೆ ಕೊಟ್ಟಿದೆ. ಈ ಕುರಿತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತಾಧಿಕಾರಿ ಪ್ರಕಾಶ್ ಶೆಟ್ಟಿ ಆಳ್ವಾ ಅವರು 'ಒನ್ಇಂಡಿಯಾ ಕನ್ನಡ'ಕ್ಕೆ ದಾಖಲೆ ಸಹಿತ ಸ್ಪಷ್ಟನೆ ಕೊಟ್ಟಿದ್ದಾರೆ.
ಆಗಸ್ಟ್ ಪರೀಕ್ಷೆಗೆ ಅವಕಾಶ: ಕೊರಟಗೆರೆ ವಿದ್ಯಾರ್ಥಿನಿ ಗ್ರೀಷ್ಮಾಗೆ ಸುರೇಶ್ ಕುಮಾರ್ ಭರವಸೆ!
ವಿದ್ಯಾರ್ಥಿನಿ ಸಂಪರ್ಕಿಸಲು ಪ್ರಯತ್ನ
ಶಾಲಾ ಶುಲ್ಕ ಭರಿಸಲು ಸಮಯಾವಕಾಶವನ್ನು ಕೊಟ್ಟಿರಲಿಲ್ಲ ಎಂದು ವಿದ್ಯಾರ್ಥಿನಿ ಗ್ರೀಷ್ಮಾ ತಂದೆ ನರಸಿಂಹ ನಾಯಕ್ ಆರೋಪ ಮಾಡಿದ್ದರು. ಆದರೆ ಶಾಲೆಗೆ ಬಂದು 10ನೇ ತರಗತಿಗೆ ಪ್ರವೇಶ ಪಡೆಯುವಂತೆ ಹಲವು ಬಾರಿ ತಿಳಿಸಲಾಗಿತ್ತು ಎಂದು ಆಳ್ವಾಸ್ ಶಾಲೆ ಸ್ಪಷ್ಟನೆ ಕೊಟ್ಟಿದೆ. ಜೊತೆಗೆ ಈ ಬಗ್ಗೆ ಅಧಿಕೃತವಾಗಿ ಪತ್ರ ವ್ಯವಹಾರವನ್ನು ಮಾಡಲಾಗಿದೆ ಎಂದು ದಾಖಲೆ ಒದಗಿಸಿದೆ. ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದ ಬಳಿಕ ಶಾಲೆಗೆ ಬರುವಂತೆ ಗ್ರೀಷ್ಮಾ ಪಾಲಕರಿಗೆ ಶಾಲೆಯ ಮುಖ್ಯೋಪಾದ್ಯಾಯರು ತಿಳಿಸಿದ್ದರು. ಆದರೆ ವಿದ್ಯಾರ್ಥಿನಿ ಗ್ರೀಷ್ಮಾ ಪಾಲಕರು ಪ್ರತಿಕ್ರಿಯೆ ಕೊಟ್ಟಿರಲಿಲ್ಲ ಎಂದು ಆಳ್ವಾಸ್ ರೆಸಿಡೆನ್ಸಿಯಲ್ ಶಾಲೆ ಸ್ಪಷ್ಟನೆ ಕೊಟ್ಟಿದೆ. ಜೊತೆಗೆ ಪರೀಕ್ಷಾ ಶುಲ್ಕ 22 ರೂಪಾಯಿಗಳನ್ನು ಮಾತ್ರ ಭರಿಸುವಂತೆ ಗ್ರೀಷ್ಮಾ ಪಾಲಕರಿಗೆ ತಿಳಿಸಲಾಗಿತ್ತು.
ಗ್ರೀಷ್ಮಾ ತಂದೆಗೆ ಆಳ್ವಾಸ್ ಶಾಲೆಯ ಪತ್ರ
ವಿದ್ಯಾರ್ಥಿನಿ ಗ್ರೀಷ್ಮಾ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಭಾವಚಿತ್ರ ಹಾಗೂ 22 ರೂ. ಶುಲ್ಕ ಭರಿಸಲು ಆಳ್ವಾಸ್ ರೆಸಿಡೆನ್ಸಿಯಲ್ ಶಾಲೆಯ ಮುಖ್ಯೋಪಾಧ್ಯಾಯರಾದ ವಿಜಯಾ ಟಿ.ಎಂ. ಅವರು ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಅವರು ಕಳೆದ ಫೆಬ್ರವರಿ (19.02.2021)ಯಲ್ಲಿಯೇ ಗ್ರೀಷ್ಮಾ ತಂದೆ ನರಸಿಂಹ ನಾಯಕ್ ಅವರಿಗೆ ಬರೆದಿದ್ದ ಪತ್ರ 'ಒನ್ಇಂಡಿಯಾ ಕನ್ನಡ'ಕ್ಕೆ ಲಭ್ಯವಾಗಿದೆ.
ಪತ್ರದಲ್ಲಿ ನಿಮ್ಮ ಮಗಳನ್ನು 2021ರ 10ನೇ ತರಗತಿಯ ಪರೀಕ್ಷೆಗೆ ದಾಖಲು ಮಾಡಲು ಕೊನೆಯ ಅವಕಾಶವಾಗಿರುತ್ತದೆ. ಈ ಪತ್ರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ನಿಮ್ಮ ಮಗಳ ಭವಿಷ್ಯ ನಿಮ್ಮಿಂದಲೇ ಹಾಳಾದಂತಾಗುತ್ತದೆ. ಹೀಗಾಗಿ ತಕ್ಷಣವೇ ಶಾಲೆಗೆ ಬಂದು ನಿಮ್ಮ ಮಗಳನ್ನು 10ನೇ ತರಗತಿಯ ದಾಖಲಾತಿ ಕುರಿತು ಮಾತನಾಡಲು ವಿನಂತಿ ಮಾಡುತ್ತಿದ್ದೇವೆ ಎಂದು ಶಾಲೆಯ ಮುಖ್ಯೋಪಾದ್ಯಾಯರಾದ ವಿಜಯಾ ಅವರು ವಿದ್ಯಾರ್ಥಿನಿ ಗ್ರೀಷ್ಮಾ ತಂದೆಗೆ ಮನವಿ ಮಾಡಿದ್ದರು.
ಪರೀಕ್ಷಾ ನೋಂದಣಿ ಮಾಡಿಸುವಂತೆ ಮನವಿ
ಜೊತೆಗೆ, "ಶಿಕ್ಷಣ ಇಲಾಖೆಯಿಂದ ಈಗಾಗಲೇ ಪರೀಕ್ಷಾ ಶುಲ್ಕ ಪಾವತಿಯ ಕುರಿತು ಸುತ್ತೋಲೆ ಬಂದಿರುತ್ತದೆ. ತಮ್ಮ ಮಗಳಿಗೆ 22 ರೂಪಾಯಿ ಪರೀಕ್ಷಾ ಶುಲ್ಕವಿರುತ್ತದೆ. ಇದನ್ನು ಪಾವತಿಸಿ, ಇದರ ಜೊತೆಗೆ ಮಗಳ ಭಾವಚಿತ್ರ ಹಾಗೂ ತಮ್ಮ ಸಹಿಯನ್ನು ನಮ್ಮ ಶಾಲೆಗೆ ಕೊಡಿ" ಎಂದು ಪತ್ರದಲ್ಲಿ ವಿನಂತಿಸಿದ್ದಾರೆ.
"ನಿಮ್ಮ ಮಗಳ ಭವಿಷ್ಯ ರೂಪಿಸಲು ಇದು ಕೊನೆಯ ಅವಕಾಶ ವಾಗಿದೆ. ಹೀಗಾಗಿ ಈ ಪತ್ರವನ್ನಾದರೂ ಗಂಭೀರವಾಗಿ ಪರಿಗಣಿಸಿ ಎಂದು ಶಾಲೆಯ ಮುಖ್ಯೋಪಾದ್ಯಾಯರು ಪತ್ರದಲ್ಲಿ ವಿನಂತಿಸಿದ್ದಾರೆ. ಆದರೂ ವಿದ್ಯಾರ್ಥಿನಿ ಗ್ರೀಷ್ಮಾ ಅವರ ತಂದೆ ನರಸಿಂಹ ನಾಯಕ್ ಸ್ಪಂಧಿಸಲಿಲ್ಲ' ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತಾಧಿಕಾರಿ ಹೇಳಿದ್ದಾರೆ.
Recommended Video
ಗ್ರೀಷ್ಮಾ ಅಕ್ಕ ಕೂಡ ಆಳ್ವಾಸ್ ಮಾಜಿ ವಿದ್ಯಾರ್ಥಿನಿ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತಾಧಿಕಾರಿ ಪ್ರಕಾಶ್ ಶೆಟ್ಟಿ ಆಳ್ವಾ ಅವರು ಮತ್ತೊಂದು ಅಚ್ಚರಿಯ ವಿಷಯ ತಿಳಿಸಿದ್ದಾರೆ. "ಗ್ರೀಷ್ಮಾ ನಾಯಕ್ ಸಹೋದರಿ ಕೂಡ ನಮ್ಮ ಆಳ್ವಾಸ್ ರೆಸಿಡೆನ್ಸಿಯಲ್ ಶಾಲೆಯ ಮಾಜಿ ವಿದ್ಯಾರ್ಥಿನಿ. ಅವಳ ಶಾಲಾ ಶುಲ್ಕವನ್ನೂ ಕೂಡ ನರಸಿಂಹ ನಾಯಕ್ ಅವರು ಭರಿಸಿರಲಿಲ್ಲ. ಆದರೂ ನಮ್ಮ ಶಿಕ್ಷಣ ಪ್ರತಿಷ್ಠಾನ ಯಾವುದೇ ಕ್ರಮಕ್ಕೂ ಮುಂದಾಗಿಲ್ಲ. ಹೀಗಿರುವಾಗ ನಾವು ಗ್ರೀಷ್ಮಾ ಶುಲ್ಕ ಭರಿಸದ ಹಿನ್ನೆಲೆಯಲ್ಲಿಯೇ ಎಸ್ಎಸ್ಎಲ್ಸಿ ಪರೀಕ್ಷೆ ನೋಂದಣಿ ಮಾಡಿಸಿಲ್ಲ ಎಂಬುದರಲ್ಲಿ ಸತ್ಯವಲ್ಲ" ಎಂದಿದ್ದಾರೆ.
ಜೊತೆಗೆ ವಿದ್ಯಾರ್ಥಿನಿ ಗ್ರೀಷ್ಮಾ ಅತ್ಯಂತ ಪ್ರತಿಭಾವಂತೆ ಎಂದು ಶಾಲೆಯ ಶಿಕ್ಷಕರು ಹೇಳುತ್ತಾರೆ. ಹೀಗಾಗಿ ತನ್ನದಲ್ಲದ ತಪ್ಪಿಗೆ ಆ ಮಗು ತೊಂದರೆಗೆ ಸಿಲುಕಬಾರದು ಎಂದು ಬಹಳಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ ಅವಳ ತಂದೆಯ ಮಾತನಾಡುವ ವರ್ತನೆಯೆ ಸರಿಯಿಲ್ಲ ಎಂದು ಪ್ರಕಾಶ್ ಶೆಟ್ಟಿ ಆಳ್ವಾ ಅವರು ಆರೋಪಿಸಿದ್ದಾರೆ. ಇದೀಗ ಆಗಷ್ಟ್ನಲ್ಲಿ ಗ್ರೀಷ್ಮಾ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಸಿದ್ಧವಾಗುತ್ತಿರುವುದು ನೆಮ್ಮದಿಯ ವಿಚಾರ.