ಎಸ್ಸೆಸ್ಸೆಲ್ಸಿ: ಸಾಮೂಹಿಕ ನಕಲಿಗೆ ಅಧಿಕಾರಿಗಳ ಸಾಥ್
ವಿಜಯಪುರ, ಮಾ. 31: ಪರೀಕ್ಷಾ ಕೇಂದ್ರದ ಕಿಟಕಿಗಳ ಮೂಲಕ ಕಾಪಿ ಚೀಟಿಗಳು, ಪುಸ್ತಕಗಳು ತೂರಿ ಬರುತ್ತಿದ್ದವು. ಇದನ್ನು ಪ್ರಶ್ನಿಸಬೇಕಾದ ಅಧಿಕಾರಿಗಳು, ನಿಯೋಜನೆಗೊಂಡಿದ್ದ ಪೊಲೀಸರು ಕೈ ಕಟ್ಟಿ ನಿಂತಿದ್ದರು.
ಇದು ಬಿಹಾರದ ಕತೆಯಲ್ಲ. ನಮ್ಮದೇ ರಾಜ್ಯದ ವಿಜಯಪುರದ ನೈಜ ಚಿತ್ರಣ. ಮುದ್ದೇಬಿಹಾಳದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಸೋಮವಾರ ಸಂತೆಯಂತೆ ಕಂಡುಬಂದಿತು. ಮಕ್ಕಳಿಕೆ ನಕಲು ಮಾಡಲು ನೆರವಾಗುತ್ತಿದ್ದ ಪಾಲಕರು ಮತ್ತು ಸ್ನೇಹಿತರಿಗೆ ಪೊಲೀಸ್ ಅಧಿಕಾರಿಗಳೇ ಸಹಕಾರ ನೀಡುತ್ತಿದ್ದರು.[ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ]
ಪ್ರಥಮ ಭಾಷೆ 'ಕನ್ನಡ' ಪರೀಕ್ಷೆಯಲ್ಲೇ ವ್ಯಾಪಕ ನಕಲು ನಡೆದಿದೆ. ಜಿಲ್ಲಾಧಿಕಾರಿ ಡಿ. ರಣ್ ದೀಪ್ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ ನಿಷೇಧಾಜ್ಞೆ ಇದ್ದರೂ ಸ್ಥಳದ ಸುತ್ತ ಜನ ಸೇರಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದ ಅಧಿಕಾರಿಗಳು, ಪೊಲೀಸರು ಅಸಹಾಯಕರಾಗಿ ನಿಂತಿದ್ದರು. ಈ ಬಗ್ಗೆ ಪ್ರಶ್ನಿಸಿದ ಅಧಿಕಾರಿಯೊಬ್ಬರಿಗೆ ಜನರು 'ನಿಮ್ಮ ಕೆಲಸ ನೋಡಿಕೊಳ್ಳಿ' ಎಂಬ ರೀತಿಯಲ್ಲಿ ಉತ್ತರ ನೀಡಿದ್ದಾರೆ.
ಜನರು ಪರೀಕ್ಷಾ ಕೇಂದ್ರದ ಕಿಟಕಿಗಳಲ್ಲಿ ಕಾಪಿ ಚೀಟಿಗಳನ್ನು, ಪುಸ್ತಕಗಳನ್ನು ಒಳಗಡೆಗೆ ಎಸೆಯುತ್ತಿದ್ದರು. ಪರೀಕ್ಷಾ ಮೇಲ್ವಿಚಾರಕರು ಸಹ ಸಾಮೂಹಿಕ ನಕಲಿಗೆ ನೆರವು ನೀಡುತ್ತಿದ್ದರು.[2015ರಿಂದ ಎಸೆಸ್ಸೆಲ್ಸಿಯಲ್ಲಿ 'ಕ್ಲಾಸ್' ಬದಲಿಗೆ 'ಗ್ರೇಡ್']
ವಿಬಿಸಿ ಮತ್ತು ಜ್ಞಾನ ಭಾರತಿ ಶಾಲೆ ಸೇರಿದಂತೆ ಅನೇಕ ಕೇಂದ್ರಗಳಲ್ಲಿ ವ್ಯಾಪಕ ಸಾಮೂಹಿಕ ನಕಲು ನಡೆದ ವರದಿಯಾಗಿದ್ದು ಈ ಬಗ್ಗೆ ಸಕಲ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಣ್ ದೀಪ್ ಮಾಹಿತಿ ನೀಡಿದ್ದಾರೆ.