ಎಸ್ಸೆಸೆಲ್ಸಿ : 8.26 ಲಕ್ಷ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್
ಬೆಂಗಳೂರು, ಮಾ.28: ಲೋಕಸಭೆ ಚುನಾವಣೆ ಭರಾಟೆ, ಯುಗಾದಿ ಹಬ್ಬದ ನಡುವೆ ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆಗೆ ಕೌಂಟ್ ಡೌನ್ ಶುರುವಾಗಿದೆ. ಮಾರ್ಚ್ 28 ರಿಂದ ಏ. 9ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಈ ಬಾರಿ ಸುಮಾರು 8.26 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾರ್ಯದರ್ಶಿ ನಾಗೇಂದ್ರ ಕುಮಾರ್ ತಿಳಿಸಿದ್ದಾರೆ.
ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳ ಕಾಲಾವಕಾಶ ನೀಡಲಾಗುವುದು ಎಂದು ಕಾರ್ಯದರ್ಶಿ ನಾಗೇಂದ್ರ ಕುಮಾರ್ ತಿಳಿಸಿದ್ದಾರೆ.[ವೇಳಾಪಟ್ಟಿ ಇಲ್ಲಿದೆ]
ಕರ್ನಾಟಕದ 3,016 ಪರೀಕ್ಷಾ ಕೇಂದ್ರಗಳಲ್ಲಿ 163 ಕೇಂದ್ರಗಳನ್ನು ಸೂಕ್ಷ್ಮ ಹಾಗೂ 51 ಪರೀಕ್ಷಾ ಕೇಂದ್ರಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ನಕಲು ಮಾಡುವುದನ್ನು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ.
ಒಟ್ಟಾರೆ 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಕೂರಲಿದ್ದು, ಈ ಪೈಕಿ 7.63 ಲಕ್ಷ ಮಂದಿ ಪ್ರಥಮ ಬಾರಿಗೆ ಪರೀಕ್ಷೆ ಬರೆಯುತ್ತಿದ್ದರೆ, 21,670ಖಾಸಗಿ ಹಾಗೂ 41,269 ಮಂದಿ ರೀಪಟರ್ಸ್ ಇದ್ದಾರೆ. ವಿದ್ಯಾರ್ಥಿಗಳಿಗೆ ಸಹಾಯವಾಣಿಯನ್ನು ಪ್ರಕಟಿಸಲಾಗಿದ್ದು 080 - 2331 0075 / 76 ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮಹಮ್ಮದ್ ಮೊಹ್ಸೀನ್ ಹೇಳಿದ್ದಾರೆ. ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಒನ್ ಇಂಡಿಯಾ ಕನ್ನಡ ಶುಭ ಹಾರೈಸುತ್ತದೆ.
ಲೋಕಸಭೆ ಚುನಾವಣೆ ಮತದಾನದ ಹಿನ್ನೆಲೆಯಲ್ಲಿ ಎಸ್ಸೆಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಏ.14ರ ಬದಲಿಗೆ ಏ.19ರಿಂದ ನಡೆಸಲಾಗುತ್ತದೆ. ಮುಂದಿನ ಬದಲಾವಣೆ ಬಗ್ಗೆ ಕೆಎಸ್ ಇಇಬಿ ಅಧಿಕಾರಿಗಳು ಪ್ರಕಟಣೆ ಹೊರಡಿಸಲಿದ್ದಾರೆ.