ಇಂದು 12.30ಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ: ನೋಡುವುದು ಹೇಗೆ?
ಬೆಂಗಳೂರು ಮೇ 19: ಕೊರೊನಾದ ಕಾರಣಗಳಿಂದಾಗಿ ಪರೀಕ್ಷೆಗಳಿಗೆ ನಾನಾ ಅಡ್ಡಿ ಆತಂಕಗಳ ನಡುವೆ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದು ಫಲಿತಾಂಶದ ನೀರಿಕ್ಷೆಯಲ್ಲಿದ್ದಾರೆ. ಇಂದು (ಮೇ 19) ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದ್ದು ವಿದ್ಯಾರ್ಥಿಗಳು ಹಲವಾರು ವಿಧಾನಗಳ ಮೂಲಕ ಫಲಿತಾಂಶ ತಿಳಿಯಬಹುದು.
ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಮಲ್ಲೇಶ್ವರದಲ್ಲಿರುವ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಯ ನಂತರ ಇಲಾಖೆಯ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಆಯಾ ಶಾಲೆಗಳಲ್ಲೂ ಫಲಿತಾಂಶ ಪ್ರಕಟಿಸಲಾಗುತ್ತದೆ.
SSLC ಫಲಿತಾಂಶ: ಮಕ್ಕಳ ಮಾನಸಿಕ ಒತ್ತಡ ನಿವಾರಣೆಗೆ ಸಹಾಯವಾಣಿ ಆರಂಭ
ಜೊತೆಗೆ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್ಗಳಿಗೆ ಎಸ್ಎಂಎಸ್ ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್ಸೈಟ್ https://karresults.nic.in ಹಾಗೂ kseeb.Karnataka. gov.in ನಲ್ಲಿಯೂ ವೀಕ್ಷಿಸಬಹುದು. ಒಂದು ವೇಳೆ ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಿಸಲು ಸಾಧ್ಯವಾಗದೇ ಇದ್ದರೂ ಭಯಬೀಳುವ ಅಗತ್ಯತೆ ಇಲ್ಲ. ಸರ್ವರ್ ಬ್ಯುಸಿಯಿಂದಾಗಿ ಫಲಿತಾಂಶ ಪ್ರಕಟಗೊಳ್ಳದೇ ಇರಬಹುದು. ಮತ್ತೊಮ್ಮೆ ಪ್ರಯತ್ನಿಸಿ. ಇಲ್ಲವಾದಲ್ಲಿ ನಿಮ್ಮ ಮೊಬೈಲ್ನಲ್ಲಿ ಮೆಸೇಜ್ ಪರಿಶೀಲಿಸಿ. ಮಧ್ಯಾಹ್ನದ ವೇಳೆ ಎಲ್ಲಾ ಶಾಲೆಗಳಲ್ಲೂ ಫಲಿತಾಂಶ ವಿದ್ಯಾರ್ಥಿಗಳು ವೀಕ್ಷಿಸಬಹುದು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಮಾರ್ಚ್ /ಏಪ್ರಿಲ್ 2022 ರ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಗೆ ಒಟ್ಟು 15,387 ಶಾಲೆಗಳಿಂದ 8,73,846 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಗಂಡು ಮಕ್ಕಳು 4,52,732 ಹಾಗೂ 4,21,110 ಹೆಣ್ಣು ಮಕ್ಕಳು, 4 ತೃತೀಯ ಲಿಂಗಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. 5,307 ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ರಾಜ್ಯಾದ್ಯಂತ 3,444 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.
ವೆಬ್ಸೈಟ್ನಲ್ಲಿ ಫಲಿತಾಂಶ ಮತ್ತು ಅಂಕಪಟ್ಟಿ ಪಡೆಯುವುದು ಹೇಗೆ?
> sslc.karnataka.gov.in ವೆಬ್ಸೈಟ್ಗೆ ಭೇಟಿ ನೀಡಿ
> 10ನೇ ತರಗತಿ ಫಲಿತಾಂಶ ಎಂದು ತೋರಿಸುವ ಲಿಂಕ್ ಕ್ಲಿಕ್ ಮಾಡಿ
> ನಂತರ KSEEB SSLC ಫಲಿತಾಂಶ 2022 ಎಂಬ ಲಾಗಿನ್ ವಿಂಡೋವನ್ನು ತೋರಿಸುತ್ತದೆ.
> kseeb.Kar.nic.in ವಿಂಡೋದಲ್ಲಿ ನೋಂದಣಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ಭರ್ತಿ ಮಾಡಿ
> ನಂತರ ನಿಮ್ಮ ಎಸ್ಎಸ್ಎಲ್ಸಿ ಫಲಿತಾಂಶ ವೆಬ್ಸೈಟ್ ಪರದೆಯ ಮೇಲೆ ಕಾಣುತ್ತದೆ.
ಜೊತೆಗೆ ರಾಜ್ಯದಲ್ಲಿ ಇಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಹಾಯವಾಣಿಯನ್ನು ಪ್ರಾರಂಭಿಸಿದೆ. ಫಲಿತಾಂಶ ಬಂದ ನಂತರ ಮಕ್ಕಳ ಒತ್ತಡ ನಿವಾರಿಸುವ ಸಂಬಂಧ ಇದೇ ಮೊದಲ ಬಾರಿಗೆ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಎಸ್ಎಸ್ಎಲ್ಸಿ ಫಲಿತಾಂಶ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಮ್ಹಾನ್ಸ್ ಸಹಾಯದೊಂದಿಗೆ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಸಹಾಯವಾಣಿ ತೆರೆದಿದೆ. ಫಲಿತಾಂಶದ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಈ ಮೂಲಕ ಟೆಲಿ ಕೌನ್ಸಿಲಿಂಗ್ ಒದಗಿಸಲಾಗುತ್ತದೆ. ಒತ್ತಡದಲ್ಲಿರುವ ವಿದ್ಯಾರ್ಥಿಗಳು 080-46110007 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು.