'ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆ ಬೇಡ' ಎಂದ ಶಿಕ್ಷಣ ತಜ್ಞರು!
ಬೆಂಗಳೂರು, ಮೇ 25: ''ಕೋವಿಡ್ 19 ನ ಇಂದಿನ ಭಯಾನಕ ಪರಿಸ್ಥಿತಿಯಲ್ಲಿ ಜೂನ್ನಲ್ಲಿ ನಡೆಸಲು ಉದ್ದೇಶಿಸಿರುವ ಕರ್ನಾಟಕದ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ನಡೆಸುವುದು ಸೂಕ್ತವಲ್ಲ'' ಎಂದು ಹಲವು ಶಿಕ್ಷಣ ತಜ್ಞರು, ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
Recommended Video
20 ಕ್ಕೂ ಹೆಚ್ಚು ಸಂಘಟನೆಗಳು ಸೋಮವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ, 'ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ರದ್ದು ಮಾಡುವುದೇ ಸೂಕ್ತ' ಎಂದು ಸಲಹೆ ನೀಡಿದ್ದಾರೆ.
ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ಮಾವಳ್ಳಿ ಶಂಕರ್, ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ (ಎಐಪಿಟಿಎಫ್) ನ ಬಸವರಾಜ ಗುರಿಕಾರ, ಕರ್ನಾಟಕ ರಾಜ್ಯ ನಿವೃತ್ತ ಶಿಕ್ಷಣ ಅಧಿಕಾರಿಗಳ ವೇದಿಕೆಯ ಜಗನ್ನಾಥರಾವ್ ಡಿ, ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯದ (ಫಾಫ್ರೆ) ನಿರಂಜನಾರಾದ್ಯ .ವಿ.ಪಿ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕರ ಫೆಡರೇಷನ್ನ ಜಯಮ್ಮ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಶುಭಂಕರ್, ರಾಜ್ಯ ಮಹಿಳಾ ಒಕ್ಕೂಟದ ವಿದ್ಯಾ ಪಾಟೀಲ್, ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ನ ಜ್ಯೋತಿ.ಕೆ, ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ,ಕರ್ನಾಟಕದ ಮೊಹಮ್ಮದ್ ಪೀರ್ ಲಟಗೇರಿ, ಕರ್ನಾಟಕ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮೊಯ್ಯುದ್ದೀನ್ ಕುಟ್ಟಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಪತ್ರದ ವಿವರ ಇಲ್ಲಿದೆ...
ವಿಸ್ತೃತವಾಗಿ ಚರ್ಚಿಸಿ ನಿರ್ಧಾರಕ್ಕೆ ಬಂದಿದ್ದೇವೆ
ಶಿಕ್ಷಣ ಕ್ಷೇತ್ರದಲ್ಲಿ ಹಲವು ದಶಕಗಳು ಕೆಲಸ ನಿರ್ವಹಿಸಿದ ಸುಮಾರು 3-4 ದಶಕಗಳ ಅಪಾರ ಆಡಳಿತ ಹಾಗು ಶೈಕ್ಷಣಿಕ ಅನುಭವವುಳ್ಳ ನಿವೃತ್ತ ನಿರ್ದೇಶಕರುಗಳು, ಇಲಾಖೆಯ ಹತ್ತಾರು ಹಿರಿಯ ವಿಶ್ರಾಂತ ಅಧಿಕಾರಿಗಳು ಹಾಗು ಈ ಕ್ಷೇತ್ರದಲ್ಲಿ ಕೆಳಸ್ಥರದಲ್ಲಿ ಕೆಲಸ ನಿರ್ವಹಿಸುವ ಹಲವು ಮೂಲ ವಾರಸುದಾರರರ ಜೊತೆ ವಿಸ್ತೃತವಾಗಿ ಚರ್ಚಿಸಿದ ನಾವು ಈ ದೇಶದ ಪ್ರಜ್ಞಾವಂತ ನಾಗರಿಕರಾಗಿ ಎಸ್ಎಸ್ಎಲ್ ಸಿ ಪರೀಕ್ಷೆಯ ಬಗ್ಗೆ ನಮ್ಮ ಅನಿಸಿಕೆಗಳನ್ನು ಹಾಗು ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕೆಂಬ ತುಡಿತದೊಂದಿಗೆ ಈ ಪತ್ರ ಬರೆಯುತ್ತಿದ್ದೇವೆ.
ಕೋವಿಡ್ ಭಯದಲ್ಲಿ
ಇಡೀ ಪ್ರಪಂಚವೇ ಈ ಕೋವಿಡ್ 19 ರ ಕರಾಳ ಹಸ್ತದಡಿ ನಲುಗಿ ಮುಂದೇನು ಎಂಬ ಭಯದಲ್ಲಿ ನಲುಗುತ್ತಿದೆ. ಇದರಲ್ಲಿ ನಮ್ಮ ದೇಶ ಹಾಗು ನಮ್ಮ ರಾಜ್ಯ ಹೊರತಾಗಿಲ್ಲ ಎನ್ನುವುದು ನಮ್ಮ ಅನಿಸಿಕೆ. ನಮ್ಮ ಮನೆಯ ಜನರೇ ಕೆಲಸದ ನಿಮಿತ್ತ ಹೊರಗೆ ಹೋಗಿ ಮನೆಗೆ ಬಂದರೆ, ಅವರಿಗೆ ಎಲ್ಲಿ ಸೋಂಕು ಬಂದಿದೆಯೋ, ಅವರಿಂದ ನಮಗೆ ಏನಾಗುತ್ತದೆಯೋ ಎನ್ನುವ ಹೆದರಿಕೆ, ಅಪನಂಬಿಕೆ, ಭಯ ಶುರುವಾಗಿದೆ.
ಕೊರೊನಾ ವೈರಸ್ ಭಯ: SSLC ಪರೀಕ್ಷೆ ಮುಂದೂಡಿ
ಪರೀಕ್ಷೆ ಬೇಡ, ಪ್ರಮಾಣಪತ್ರ ನೀಡಿ
ಕರ್ನಾಟಕ ಸರ್ಕಾರ ಜೂನ್ ತಿಂಗಳಿನಲ್ಲಿ ಎಸ್ .ಎಸ್. ಎಲ್. ಸಿ ಪರೀಕ್ಷೆಯನ್ನು ಮಾಡುವುದಾಗಿ ಪ್ರಕಟಿಸಿದೆ. 10 ನೇ ತರಗತಿ ಶೈಕ್ಷಣಿಕ ಏಣಿಯಲ್ಲಿ ಮಹತ್ವದ ಘಟ್ಟವಾಗಿದ್ದು ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರವು ಒಂದು ಮಹತ್ವದ ದಾಖಲೆಯಾಗಿದೆ . ಎಲ್ಲಾ ಮಕ್ಕಳು ತೇರ್ಗಡೆಯಾಗಿ ಆ ಪ್ರಮಾಣ ಪತ್ರವನ್ನು ಪಡೆಯುವುದು ಅತ್ಯಂತ ಮಹತ್ವದ ವಿಷಯವೆಂಬುದನ್ನು ನಾವು ಮನಗಂಡಿದ್ದೇವೆ. ಆದರೆ ವಿದ್ಯಾರ್ಥಿಗಳ ಜೀವದ ಹಿತದೃಷ್ಟಿಯಿಂದ, ಈ ಸಂದರ್ಭದಲ್ಲಿ ಪರೀಕ್ಷೆಯಿಲ್ಲದೆ ಅವರ ಹಿಂದಿನ ಶೈಕ್ಷಣಿಕ ಪ್ರತಿಭೆ, ಕಾರ್ಯಕ್ಷಮತೆಯನ್ನು ನೋಡಿ ತೇರ್ಗಡೆ ಮಾಡುತ್ತಿರುವುದರಿಂದ ಮಕ್ಕಳ ಪ್ರೊಫೈಲ್ ಇದ್ದೇ ಇರುತ್ತದೆ. ನಮ್ಮ ಕಳಕಳಿ ಪರೀಕ್ಷೆ ಬೇಡವೆನ್ನುವದಷ್ಟೇ ಹೊರತು ಮಹತ್ವ ಪ್ರಮಾಣ ಪತ್ರದ ಬಗ್ಗೆ ಅಲ್ಲ . ಪರೀಕ್ಷೆ ಇಲ್ಲದೆಯೂ ಎಲ್ಲಾ ಮಕ್ಕಳಿಗೆ ಎಂದಿನಂತೆ ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ ದೊರೆಯಬೇಕು. ಕೋವಿಡ್ ನ ಈ ಸಂಕಷ್ಟದ ಸಂದರ್ಭದಲ್ಲಿ ಇದೊಂದು ನಿರ್ಣಾಯಕ ತೀರ್ಮಾನವಾಗಲಿದ್ದು ಲಕ್ಷ-ಲಕ್ಷ ಮಕ್ಕಳು ಪಾಲಕರು ಆತಂಕ , ಖಿನ್ನತೆ ಮತ್ತು ಭಯದಿಂದ ಹೊರಬಂದು ಸರ್ಕಾರದ ಈ ನಿರ್ಣಯಕ್ಕೆ ಚಿರಋಣಿಗಳಾಗಲಿದ್ದಾರೆ.
ಪರೀಕ್ಷೆಯನ್ನು ನಡೆಸುವುದು ಅನಿವಾರ್ಯವೇ?
ಈ ಹಿನ್ನೆಲೆಯಲ್ಲಿ , ನಿಜವಾಗಿಯೂ ಪರೀಕ್ಷೆಯನ್ನು ನಡೆಸುವುದು ಅನಿವಾರ್ಯವೇ? ಅತಿಮುಖ್ಯವೇ? ಸಮಂಜಸವೇ? ಈ ಪರೀಕ್ಷೆ ವಿದ್ಯಾರ್ಥಿಗಳ ಜೀವಕ್ಕಿಂತ ದೊಡ್ಡದೇ? ಎನ್ನುವುದನ್ನು ಸರ್ಕಾರ ಮನಗಾಣಬೇಕಿದೆ . ಈ ವಿಷಯದಲ್ಲಿ ಈಗಾಗಲೇ ಹಲವು ರಾಜ್ಯಗಳು ಪರೀಕ್ಷೆ ರದ್ದುಮಾಡಿ ಎಲ್ಲಾ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ . ಪ್ರಸ್ತುತ ಸಂದರ್ಭದಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಿ, ಎಲ್ಲಾ ವಿದ್ಯಾರ್ಥಿಗಳಿಗೂ ತೇರ್ಗಡೆ ಮಾಡಿ ಅವರಿಗೆ ಪ್ರಮಾಣ ಪತ್ರಗಳನ್ನು ನೀಡಬೇಕು ಎಂಬುದಕ್ಕೆ ಸ್ಪಷ್ಟವಾದ ವೈಜ್ಞಾನಿಕ ಕಾರಣಗಳನ್ನೊಳಗೊಂಡ ಅಂಶಗಳನ್ನು ನಿಮ್ಮ ಬಳಿ ತಿಳಿಸಿದ್ದೇವೆ.
ಪರೀಕ್ಷೆಯನ್ನು ತೆಗೆದುಕೊಳ್ಳಬಹುದಾದ ವಿದ್ಯಾರ್ಥಿಗಳ ಸಂಖ್ಯೆ 8.5 ಲಕ್ಷ
ಈ ಬಾರಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದಾದ ವಿದ್ಯಾರ್ಥಿಗಳ ಅಂದಾಜು ಸಂಖ್ಯೆ 8.5 ಲಕ್ಷ. ಪರೀಕ್ಷೆಯ ನಿರ್ವಾಹಕ ಸಿಬ್ಬಂದಿ ಅಂದಾಜು 2.2 ಲಕ್ಷ. ಇವರಲ್ಲಿ ದುರದ್ರಷ್ಟವಶಾತ್ ಯಾರಿಗಾದರೂ ಸೋಂಕು ಉಂಟಾಗಿ ಅವರಿಗೆ ಏನಾದರು ಆದರೆ ಇದರ ಜವಾಬ್ದಾರರು ಯಾರು ಎಂಬುದು ಕುಟುಂಬದವರ ಪ್ರಶ್ನೆ. ಪರೀಕ್ಷೆಯ ಸಂದರ್ಭದಲ್ಲಿ , ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಯ ಕುಟುಂಬ (ಕನಿಷ್ಠ ಮೂರು ಮಂದಿ)ಹಾಗು ನಿರ್ವಹಣಾ ಸಿಬ್ಬಂದಿ ಅಂದರೆ ಸುಮಾರು 25-30 ಲಕ್ಷ ಮಂದಿಯು ಪ್ರತಿದಿನ ಆತಂಕದಲ್ಲಿ ಇರುತ್ತಾರೆ. ವಿದ್ಯಾರ್ಥಿಗಳು ಕೂಡ ಇಂತಹ ಭಯದ ಸನ್ನಿವೇಶದಲ್ಲಿ ಹೇಗೆ ಅವರು ತಮ್ಮ ಗಮನವನ್ನು ಕೇಂದ್ರೀಕರಿಸಿ ಆತಂಕರಹಿತವಾಗಿ ಪರೀಕ್ಷೆಯನ್ನು ಬರೆಯಲು ಹೇಗೆ ಸಾಧ್ಯವಾಗುತ್ತದೆ? ಪರೀಕ್ಷೆಯ ನಿರ್ವಾಹಕ ಸಿಬ್ಬಂದಿಯು ಹೇಗೆ ತಾನೇ ಮಾನಸಿಕ ಒತ್ತಡದಲ್ಲಿ ಪರೀಕ್ಷೆಯನ್ನು ನಡೆಸಲು ಸಾಧ್ಯ? ಪರೀಕ್ಷೆ ನಡೆಸುವ ಹಾಗು ನಂತರದಲ್ಲಿ ಪರೀಕ್ಷೆಯಲ್ಲಿ ನೇರವಾಗಿ ಭಾಗಿಯಾಗುವವರಿಗೆ ಸೋಂಕು ಹರಡುವ ಭಯ, ಅವರ ಕುಟುಬದವರಿಗೆ ಯಾವಾಗ ಏನಾಗುವುದೋ ಎನ್ನುವ ಆತಂಕ ಮತ್ತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಕೂಡ ಅದೇ ಬಗೆಯ ಉದ್ವೇಗ ಮತ್ತು ಒತ್ತಡ ಹೆಚ್ಚುವುದಿಲ್ಲವೇ?
ಪರೀಕ್ಷಾ ಕೇಂದ್ರಗಳಿರುವುದು ಜಿಲ್ಲಾ ಕೇಂದ್ರಗಳಲ್ಲಿ
ಬಹುತೇಕ ಪರೀಕ್ಷಾ ಕೇಂದ್ರಗಳಿರುವುದು ಜಿಲ್ಲಾ ಕೇಂದ್ರಗಳಲ್ಲಿ. ಆದರೆ, ರಾಮನಗರ ಹೊರತು ಪಡಿಸಿ ಎಲ್ಲಾ ಜಿಲ್ಲೆಗಳು ಕೋವಿಡ್ ಕಂಟೈನ್ ಮೆಂಟ್ ಜೋನ್ ನಲ್ಲಿವೆ. ಇನ್ನು ಉಳಿದಿರುವ ಕೇಂದ್ರಗಳು ಹೋಬಳಿ ಮತ್ತು ತಾಲೂಕು ಮಟ್ಟದ ಕ್ಲಸ್ಟರ್ ಕೇಂದ್ರಗಳಾಗಿರುವುದರಿಂದ ಮತ್ತೊಮ್ಮೆ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಮತ್ತು ಅಷ್ಟೇ ಸಂಖ್ಯೆಯ ಪೋಷಕರು ಪರಸ್ಪರ ಭೇಟಿಯಾದರೆ ಇದಕ್ಕಿಂತ ದುರಂತ ಮತ್ತೇನಿದೆ. ಜಿಲ್ಲಾ ಕೇಂದ್ರಗಳು ಹಲವು ಶಾಲೆಗಳನ್ನು ಹೊಂದಿರುವ ಕ್ಲಸ್ಟರ್ ಪರೀಕ್ಷಾ ಕೇಂದ್ರ ಗಳನ್ನು ಹೊಂದಿರುವುದರಿಂದ ಇದು ಪೋಷಕರು ಮತ್ತು ವಿದ್ಯಾರ್ಥಿಗಳು ನಗರದಾದ್ಯಂತ ಸಂಚರಿಸಲು ಅನುವು ಮಾಡಿಕೊಟ್ಟಂತಾಗುವುದಿಲ್ಲವೇ ?
ಇಂತಹ ಸಮಯದಲ್ಲಿ ನನಗೆ ಜ್ವರವಿದೆಯೆಂದು ಯಾರು ತಾನೆ ಹೇಳುತ್ತಾರೆ?
ಇನ್ನು ಪ್ರಶ್ನೆ ಪತ್ರಿಕೆ ಪೂರೈಕೆಯಾಗುವುದು ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಿಂದ. ಇದರಿಂದ ಸೋಂಕು ಜಿಲ್ಲಾ ಕೆಂದ್ರಗಳಿಂದ ತಾಲೂಕು ಕೇಂದ್ರ ಗಳತ್ತ ಪಸರಿಸಲು ಇದು ದಾರಿ ಮಾಡಕೊಡುವುದಿಲ್ಲವೆ? ಪರೀಕ್ಷೆ ಬರೆಯಲು ಜ್ವರ ವಿರುವವರಿಗೆ ಬೇರೆ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದೀರಾದರು ಇಂತಹ ಸಮಯದಲ್ಲಿ ನನಗೆ ಜ್ವರವಿದೆಯೆಂದು ಯಾರು ತಾನೆ ಹೇಳುತ್ತಾರೆ? ಇದು ಸಾಧ್ಯವಿಲ್ಲದ ಮಾತು.ಇನ್ನು ಥರ್ಮಲ್ ಸ್ಕ್ಯಾನರ್ ಮಾತು ಜ್ವರದಿಂದ ಬಳಲುವವರು ಪ್ಯಾರಾಸಿಟಮಲ್ ಔಷಧಿ ಸೇವನೆ ಮಾಡಿದ್ದರೆ ಜ್ವರ ಪತ್ತೆ ಯಾಗದೇ ಇರುವ ಸಾಧ್ಯತೆಯೆ ಹೆಚ್ಚು. ಯಾವುದಾದರೊಂದು ಪರೀಕ್ಷಾ ಕೇಂದ್ರದಲ್ಲಿ ಕೋವಿದ್ ಪ್ರಕರಣ ನುಸುಳಿದರೆ ಯಾರನ್ನು ಕ್ವಾರಂಟಯಿನ್ ಮಾಡುತ್ತೀರಿ? ಪರೀಕ್ಷೆಯನ್ನು ನಡೆಸಲು ಹೆಚ್ಚಿನ ಕಟ್ಟಡಗಳು, ಸಿ.ಸಿ.ಟಿ.ವಿ ಕ್ಯಾಮರಾಗಳು ಹಾಗು ದೈಹಿಕ ದೂರವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಪೀಠೋಪಕರಣಗಳು/ ಆಸನ ವ್ಯವಸ್ಥೆಗೆ ಹೆಚ್ಚಿನ ಖರ್ಚು, ಇದನ್ನು ಭರಿಸಲು ಸರ್ಕಾರದ ಮೇಲೆ ಆರ್ಥಿಕ ಒತ್ತಡವಾಗುವುದಿಲ್ಲವೇ ?
ಮುಂದಿನ ವರ್ಷ ಮತ್ತೆ ಬಳಸಬಹುದಲ್ಲವೇ?
ಪರೀಕ್ಷೆಯ ನಂತರ ಕೇಂದ್ರೀಕೃತ ಮೌಲ್ಯಮಾಪನ; ಇದರಲ್ಲಿ ಭಾಗಿಯಾಗುವ ಶಿಕ್ಷಕರ ಮನೋಸ್ಥಿತಿ ಹಾಗು ಇದಕ್ಕೆ ತಗಲುವ ವೆಚ್ಚ ಸುಮಾರು 15 ರಿಂದ 20 ಕೋಟಿ. ಪರೀಕ್ಷೆ ನಡೆಸದಿದ್ದರೆ ಕೆಲವು ವಿದ್ಯಾರ್ಥಿಗಳಿಗೂ ಹಾಗು ಅವರ ಪೋಷಕರಿಗೆ ನಿರಾಸೆಯಾಗಬಹುದು. ಪರೀಕ್ಷಾಮಂಡಳಿ ಮುದ್ರಿಸಿರುವ ಪ್ರಶ್ನೆ ಪತ್ರಿಕೆಗಳು ಈ ವರ್ಷ ಬಳಕೆಯಾಗುವುದಿಲ್ಲ . ಆದರೆ, ಪರೀಕ್ಷೆಯನ್ನು ನಡೆಸಿ ನಮ್ಮ ಯುವ ವಿದ್ಯಾರ್ಥಿಗಳ ಜೀವಕ್ಕೆ ಆಗುವ ತೊಂದರೆಯ ಮುಂದೆ ಬಹುಷಃ, ಕೆಲವು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಆಗುವ ನಿರಾಸೆಯನ್ನು ಸಹಿಸಿಕೊಳ್ಳಬಹುದು ಎಂದು ಭಾವಿಸುತ್ತೇವೆ. ಮುದ್ರಿಸಿರುವ ಪ್ರಶ್ನೆಪತ್ರಿಕೆಗಳನ್ನು ಜೋಪಾನವಾಗಿ ಕಾಯ್ದಿರಿಸಿ, ಮುಂದಿನ ವರ್ಷ ಮತ್ತೆ ಬಳಸಬಹುದಲ್ಲವೇ?.
ಪರೀಕ್ಷೆಗಳನ್ನು ರದ್ದು ಮಾಡುವುದು ಸೂಕ್ತ
ಪರೀಕ್ಷೆಗೆ ತಗಲುವ ಕೋಟಿಗಟ್ಟಲೆ ಹಣವನ್ನು ಶಿಕ್ಷಣ ಕ್ಷೇತ್ರದಲ್ಲಿನ ಪ್ರಮುಖ ಸಮಸ್ಯೆಗಳಾದ ಮೂಲಸೌಕರ್ಯ , ಪೌಷ್ಠಿಕಾಂಶ , ಮಕ್ಕಳ ಆರೋಗ್ಯ ಅಥವಾ ರಾಜ್ಯವು ಭರಿಸುತ್ತಿರುವ ವೈದ್ಯಕೀಯ ವೆಚ್ಚಗಳನ್ನು ನಿರ್ವಹಿಸಲು ಇತ್ಯಾದಿಗಳಿಗೆ ಬಳಬಹುದಲ್ಲವೇ ? (ಪರೀಕ್ಷೆಯಿಂದ ಉಂಟಾಗುವ ಆತಂಕ, ಭಯ, ಒತ್ತಡಗಳ ಖರ್ಚು-ವೆಚ್ಚವನ್ನು ಲೆಕ್ಕ ಮಾಡಲು ಸಾಧ್ಯವಿಲ್ಲ) . ಹಾಗಾಗಿ ಇವೆಲ್ಲ ಅಂಶಗಳನ್ನು ಪರಿಗಣಿಸಿ ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ರದ್ದು ಮಾಡುವುದು ಸೂಕ್ತ ಎಂದು ಒತ್ತಾಯಿಸಲಾಗಿದೆ.