ಎಸ್ಎಸ್ಎಲ್ಸಿ ಪರೀಕ್ಷೆ2021: ಮಾದರಿ OMR ಉತ್ತರ ಪತ್ರಿಕೆ ಬಗ್ಗೆ ತಿಳಿದುಕೊಳ್ಳಿ!
ಬೆಂಗಳೂರು, ಜೂ. 09: ಪೋಷಕರ ವಿರೋಧ, ಗೊಂದಲ ನಡುವೆ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಪೂರ್ವ ತಯಾರಿ ನಡೆಸಿದೆ. ಇದರ ಭಾಗವಾಗಿ ವಿದ್ಯಾರ್ಥಿಗಳ ಒಎಮ್ಅರ್ ಶೀಟ್ ಮಾದರಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದೆ. ವಿದ್ಯಾರ್ಥಿಗಳು ತಿಳಿಲೇಬೇಕಾದ ಒಎಮ್ಆರ್ ಶೀಟ್ ಕುರಿತ ಪ್ರಥಮ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ ಪಿಯುಸಿ ಪರೀಕ್ಷೆ ರದ್ದಾಗಿದೆ. ಪುನರಾವರ್ತಿತ ಪಿಯುಸಿ ವಿದ್ಯಾರ್ಥಿಗಳಿಗೆ ಪಿಯುಸಿ ಪರೀಕ್ಷೆ ನಿಗದಿ ಪಡಿಸಿದ್ದು, ಇದನ್ನು ಪ್ರಶ್ನಿಸಿ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಇದರ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ತಯಾರಿ ನಡೆಸಿದೆ. ಉದ್ಯೋಗ ನೇಮಕಾತಿಗೆ ನಡೆಸುವ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.
ಇದರ ನಡುವೆ ರಾಜ್ಯದಲ್ಲಿ ಆರು ಸಾವಿರ ಪರೀಕ್ಷಾ ಕೇಂದ್ರಗಳ ಗುರುತಿಸುವ ಕಾರ್ಯದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ನಿರತರಾಗಿದ್ದಾರೆ. ಹೀಗಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಬಹುತೇಕ ನಡೆಯುವುದು ಖಚಿತ ಎಂಬುದು ನಡೆಯುತ್ತಿರುವ ಬೆಳವಣಿಗೆಯಿಂದ ದೃಢಪಟ್ಟಿದೆ. ಪಿಯುಸಿ ಪರೀಕ್ಷೆ ರದ್ದು ಮಾನದಂಡ ಇಟ್ಟುಕೊಂಡು ಪೋಷಕರು ನ್ಯಾಯಾಲಯದ ಮೊರೆ ಹೋಗಿ ತಾರತಮ್ಯ ನೀತಿ ಪ್ರಶ್ನಿಸಿದಲ್ಲಿ ಪರೀಕ್ಷೆ ರದ್ದಾಗಬಹುದು, ಅಥವಾ ಶಿಕ್ಷಣ ಇಲಾಖೆ ಕೊಡುವ ಸಮರ್ಥ ವಾದ ಅನುಸರಿಸಿ ಪರೀಕ್ಷೆಗೆ ಅವಕಾಶ ನೀಡಬಹುದು.
Recommended Video
ಒಎಮ್ಅರ್ ಶೀಟ್ ಮಾದರಿ
ಇನ್ನು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಉತ್ತರ ಗುರುತು ಮಾಡುವ ಒಎಮ್ಆರ್ ಶೀಟ್ ಮಾದರಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಈ ಒಎಮ್ಆರ್ ಶೀಟ್ನಲ್ಲಿ ಸ್ವಲ್ಪ ತಪ್ಪಾದರೂ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟದಲ್ಲಿ ಗೊಂದಲಕ್ಕೆ ಎಡೆ ಮಾಡಲಿದೆ. ಕಂಪ್ಯೂಟರ್ ಆಧಾರಿತ ಮೌಲ್ಯ ಮಾಪನ ಇರುವ ಕಾರಣದಿಂದ ವಿದ್ಯಾರ್ಥಿಗಳು ಅತಿ ಸೂಕ್ಷ್ಮವಾಗಿ ಎರಡು ಬಾರಿ ಖಚಿತ ಪಡಿಸಿಕೊಂಡು ವಿವರಗಳನ್ನು ತುಂಬಬೇಕಾಗುತ್ತದೆ. ಈ ಕುರಿತು ಪರೀಕ್ಷಾ ಕೇಂದ್ರದಲ್ಲಿ ಮಾಹಿತಿ ನೀಡಲಾಗುತ್ತದೆ. ಆದರೂ ಮಾದರಿ ಒಎಮ್ಆರ್ ಶೀಟ್ನ್ನು ಅಭ್ಯಾಸ ನಡೆಸಲೆಂದು ಮಾದರಿ ಒಎಮ್ಅರ್ ಶೀಟ್ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒನ್ಇಂಡಿಯಾ ಕನ್ನಡ ವತಿಯಿಂದ ಒಎಮ್ಅರ್ ಶೀಟ್ನ್ನು ಇಲ್ಲಿ ನೀಡಲಾಗಿದೆ. ಡೌನ್ ಲೋಡ್ ಲಿಂಕ್ :
ತುಂಬುವುದು ಹೇಗೆ
ಕಪ್ಪು ಅಥವಾ ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ನನ್ನು ಮಾತ್ರ ವಿದ್ಯಾರ್ಥಿಗಳು ಪರೀಕ್ಷೆಗೆ ಬಳಸಬೇಕು. ಇನ್ನು ವಿದ್ಯಾರ್ಥಿ ಹೆಸರು, ಪರೀಕ್ಷಾ ಕೇಂದ್ರದ ವಿವರ ಎಲ್ಲವೂ ಒಎಮ್ಆರ್ ಶೀಟ್ನಲ್ಲಿ ಮುದ್ರಣವಾಗಲಿದೆ. ಪ್ರಶ್ನೆ ಪತ್ರಿಕೆ ಮಾದರಿ, ವಿದ್ಯಾರ್ಥಿಯ ಸಹಿ, ಸೆಂಟರ್ ಕೋಟ್, ವಿಷಯದ ಕೋಡ್ಗಳನ್ನು ಸಮರ್ಪಕವಾಗಿ ತುಂಬಬೇಕು. ಒಎಮ್ಆರ್ ಶೀಟ್ನಲ್ಲಿ ವಿದ್ಯಾರ್ಥಿಯ ಗೈರು ಕಲಂ ಇದ್ದು, ಅಪ್ಪಿ ತಪ್ಪಿಯೂ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಆ ಕಲಂ ನಲ್ಲಿ ಚುಕ್ಕಿ ಇಟ್ಟು ತುಂಬಬಾರದು. ಮತ್ತು ಪ್ರಶ್ನೆ ಪತ್ರಿಕೆ ನಾಲ್ಕು ಮಾದರಿ ಇರಲಿದ್ದು, ವಿದ್ಯಾರ್ಥಿಗೆ ಲಭ್ಯವಾಗುವ ಪ್ರಶ್ನೆ ಪತ್ರಿಕೆ ವರ್ಷನ್ ( ಉದಾಹರಣೆ AB ಲಭ್ಯವಾಗಿದ್ದರೆ, ಎಬಿ ಮಾದರಿ ಮುಂದಿನ ವೃತ್ತವನ್ನು ಎಚ್ಚರಿಕೆಯಿಂದ ತುಂಬಬೇಕು. ಸ್ವಲ್ಪ ತಪ್ಪಾದರೂ ನೀವು ಸರಿ ಉತ್ತರ ಬರೆದರೂ ಮಹಾ ಎಡವಟ್ಟು ಆಗಲಿದೆ. ಈ ಬಗ್ಗೆ ವಿದ್ಯಾರ್ಥಿಗಳು ಭಾರೀ ಎಚ್ಚರಿಕೆ ವಹಿಸಬೇಕು. ಮೊದಲು ಪೆನ್ಸಿಲ್ನಲ್ಲಿ ಗುರುತು ಮಾಡಿ, ಸರಿಯಾಗಿರುವುದನ್ನು ಖಚಿತ ಪಡಿಸಿಕೊಂಡು ಆನಂತರ ಪೆನ್ ಮೂಲಕ ವೃತ್ತವನ್ನು ತುಂಬುದು ಸೂಕ್ತ.
ಪ್ರಶ್ನೆ ಪತ್ರಿಕೆ ಮಾದರಿ ಕಲಂ ಎಚ್ಚರವಿರಲಿ
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪ್ರತಿ ವಿಷಯಕ್ಕೆ ತಲಾ 40 ಪ್ರಶ್ನೆಗಳು ಇರುತ್ತವೆ. ಮೂರು ವಿಷಯಗಳಿಗೆ ಒಂದು ಪ್ರಶ್ನೆ ಪತ್ರಿಕೆಯಲ್ಲಿ 120 ಪ್ರಶ್ನೆ ಪತ್ರಿಕೆ ಯುಳ್ಳ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. ಮೂರು ಗಂಟೆ ಕಾಲಾವಕಾಶ ಇರುತ್ತದೆ. ವಿಷಯವಾರು ಮೂರು ವಿಭಾಗಗಳನ್ನು ಒಂದೇ ಒಎಮ್ಆರ್ ಶೀಟ್ನಲ್ಲಿ ನೀಡಲಾಗುತ್ತದೆ. ಪ್ರಶ್ನೆ ಪತ್ರಿಕೆ ಕೂಡ ಅದೇ ಮಾದರಿ ಇರುತ್ತದೆ. ಪ್ರಶ್ನೆ ಪತ್ರಿಕೆ ಮಾದರಿಯನ್ನು ಪ್ರತಿ ವಿಷಯಕ್ಕೂ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಗಮನಿಸಿ ತುಂಬಬೇಕು. ಗಣಿತ ವಿಷಯಕ್ಕೆ ಸಿಗುವ ಪ್ರಶ್ನೆ ಪತ್ರಿಕೆ ಮಾದರಿ, ವಿಜ್ಞಾನ ವಿಷಯಕ್ಕೆ ಸಿಗುವ ಪ್ರಶ್ನೆ ಪತ್ರಿಕೆ ಮಾದರಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ತುಂಬಬೇಕು. ಯಾಕೆಂದರೆ ಮಾದರಿ ಒಎಮ್ಆರ್ ಶೀಟ್ನಲ್ಲಿ ಪ್ರತಿ ವಿಷಯವಾರು ಪ್ರಶ್ನೆ ಪತ್ರಿಕೆ ಮಾದರಿ ತುಂಬುವ ಕಲಂ ನೀಡಿದ್ದು, ಸ್ವಲ್ಪ ಗೊಂದಲ ಮೂಡಿದರೂ ಪರೀಕ್ಷೆ ಪರಿವೀಕ್ಷಕರನ್ನು ಕೇಳಿ ತಪ್ಪಾಗದಂತೆ ತುಂಬಬೇಕು.
ಯಾಕೆ 120 ಪ್ರಶ್ನೆಗಳಿವೆ ಗೊತ್ತಾ?
ಪ್ರತಿ ವಿಷಯಕ್ಕೆ ತಲಾ 40 ಪ್ರಶ್ನೆಗಳಂತೆ ಒಂದು ಪ್ರಶ್ನೆ ಪತ್ರಿಕೆಗೆ 120 ಬಹು ಅಯ್ಕೆ ಪ್ರಶ್ನೆ ಪತ್ರಿಕೆ ತಯಾರಿಸಲಾಗುತ್ತದೆ. ಪ್ರತಿ ಪ್ರಶ್ನೆಗೂ ನಾಲ್ಕು ಆಯ್ಕೆ ಉತ್ತರಗಳಿರುತ್ತವೆ. ನೂರು ಪ್ರಶ್ನೆ ನೀಡುವ ಬದಲಿಗೆ 120 ಪ್ರಶ್ನೆ ಪತ್ರಿಕೆ ನೀಡಿರುವುದರ ಹಿಂದೆ ಶಿಕ್ಷಣ ಇಲಾಖೆಯ ಕ್ಷಾಣಾಕ್ಷತೆ ಎದ್ದು ಕಾಣುತ್ತಿದೆ. ಮೂರು ವಿಷಯಗಳಿಗೆ ಕೇವಲ 100 ಪ್ರಶ್ನೆ ನೀಡಿದಲ್ಲಿ, ಬುದ್ಧಿವಂತ ವಿದ್ಯಾರ್ಥಿಗಳು ಒಂದೇ ಅಯ್ಕೆ ( 100 ಪ್ರಶ್ನೆಗಳಿಗೆ ಒಂದೇ ಅಯ್ಕೆ ಉದಾಹರಣೆಗೆ ಎ ಗೆ ಗುರುತು ಮಾಡಿದರೂ 25 ಅಂಕ ಗ್ಯಾರೆಂಟಿ) ಮಾಡಿದರೂ ಸರಾಸರಿ ಪಾಸಿನ ಅಂಕ ಆಜು ಬಾಜು ತಲುಪಬಹುದು. ಹೀಗಾಗಿ 120 ಪ್ರಶ್ನೆ ನೀಡಿರುವುದರಿಂದ ಸರಾಸರಿ ಉತ್ತೀರ್ಣರಾಗಲು ನಲವತ್ತು ಅಂಕ ಗಳಿಸಬೇಕು. ಹೀಗಾಗಿ 120 ಪ್ರಶ್ನೆಗಳನ್ನು ನೀಡಲಾಗಿದೆ. ಇನ್ನು ಮೂರು ವಿಷಯಕ್ಕೆ ಸಂಬಂಧಿಸಿದಂತೆ ಎರಡು ವಿಷಯದಲ್ಲಿ ಪೂರ್ಣ ಅಂಕ ಗಳಿಸಿ ಒಂದು ವಿಷಯದಲ್ಲಿ ಒಂದು ಪ್ರಶ್ನೆಗೂ ಉತ್ತರಿಸದಿದ್ದರೂ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಅಗಿರುವುದರಿಂದ ಪಾಸಾಗುವ ಸಾಧ್ಯತೆಯಿದೆ. ಆದರೆ, ಪ್ರತಿ ವಿಷಯದಲ್ಲೂ ಇಷ್ಟು ಅಂಕ ಕಡ್ಡಾಯ ಗಳಿಸಬೇಕೇ? ಬೇಡವೇ? ಇಲ್ಲವೇ ಮೂರು ವಿಷಯದ ಸರಾಸರಿ ಅಂಕ ಪರಿಗಣಿಸಿ ಉತ್ತೀರ್ಣ ಅಂಕ ಪರಿಗಣಿಸುತ್ತಾರಾ ಎಂಬುದರ ಬಗ್ಗೆ ಶಿಕ್ಷಣ ಇಲಾಖೆ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಪ್ರಶ್ನೆ ಪತ್ರಿಕೆ, ಹಾಗೂ ಉತ್ತೀರ್ಣ ಬಗ್ಗೆಯೂ ಗೊಂದಲ ಮೂಡಿಸಿದೆ.
ನಿಜವಾಗಿಯೂ ಎಲ್ಲರೂ ಪಾಸ್?
ಇನ್ನು ಎಸ್ಎಸ್ಎಲ್ಸಿ ಪರಿಕ್ಷೆ ನಡೆಸಲಾಗುವುದು. ಯಾರನ್ನೂ ಅನುತ್ತಿರ್ಣ ಮಾಡುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದರು. ಒಟ್ಟು 240 ಪ್ರಶ್ನೆಗಳಿಗೆ ಸರಾಸರಿ ಒಂದು ಅಂಕ ಅಂತ ಪರಿಗಣಿಸಿದರೂ, ಅಥವಾ ಎರಡು ಅಂಕ ನೀಡುಗತ್ತಾರೋ ಸ್ಪಷ್ಟನೆ ಸಿಕ್ಕಿಲ್ಲ. ಉತ್ತೀರ್ಣದ ಮಾನದಂಡ ಪರಿಗಣಿಸಿ ಹೇಳುವುದಾದರೆ, 85 ಅಂಕ ಗಳಿಸಬೇಕು. ಅರು ವಿಷಯಗಳಲ್ಲಿ ಕನಿಷ್ಠ ಇಷ್ಟು ಉತ್ತರ ಸರಿ ಇರಬೇಕು ಎಂದು ಪರಿಗಣಿಸಿ ಉತ್ತೀರ್ಣ ಮಾಡುತ್ತಾರೋ ಇಲ್ಲವೇ ಆರು ವಿಷಯಗಳ ಸರಾಸರಿ ಅಂಕ ಪರಿಗಣಿಸಿ ಫಲಿತಾಂಶ ಪ್ರಕಟ ಮಾಡುತ್ತಾರೋ ಈವರೆಗೂ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿಲ್ಲ. ಆತುರದಲ್ಲಿ ಪರೀಕ್ಷೆ ನಡೆಸುತ್ತಿರುವ ಕಾರಣದಿಂದ ಈ ರೀತಿಯ ಗೊಂದಲ ಏರ್ಪಟ್ಟಿದೆ.
ಈಗಾಗಲೇ ಈ ಗೊಂದಲದ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಬೇಕಿತ್ತು. ನೀಡದೇ ಪರೀಕ್ಷಾ ತರಾತುರಿಯಲ್ಲಿ ಮುಳುಗಿ ಹೋಗಿದೆ. ನಿಜವಾಗಿಯೂ ಸಚಿವರ ಮಾತೇ ನಿಜವಾಗಿದ್ದಲ್ಲಿ ಕೊರೊನಾ ಸಂಕಷ್ಟದಲ್ಲಿ ನಿಜವಾಗಿಯೂ ಪರೀಕ್ಷೆ ನಡೆಸುವ ಅಗತ್ಯವೇ ಇರುತ್ತಿರಲಿಲ್ಲ. ಇನ್ನು ಬಹು ಅಯ್ಕೆ ಪ್ರಶ್ನೆ ಪತ್ರಿಕೆ ವೈಜ್ಞಾನಿಕವಾಗಿ ನೋಡುವುದಾದರೆ, ಪ್ರಶ್ನೆಯೊಂದಕ್ಕೆ ಸಮೀಪ ಉತ್ತರ ಎನಿಸುವ ನಾಲ್ಕು ಅಯ್ಕೆಗಳಿರುತ್ತವೆ. ಸ್ವಲ್ಪ ತಪ್ಪಾದರೂ ಅಂಕ ಲಭ್ಯವಾಗುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸಾಮಾನ್ಯ ಪರೀಕ್ಷೆಯಂತೆ ಅಂಕ ನಿರೀಕ್ಷಿಸಲು ಅಸಾಧ್ಯ. ಸಾಮಾನ್ಯ ಪರೀಕ್ಷೆಯಲ್ಲಿ ಎರಡು ಅಂಕದ ಪ್ರಶ್ನೆಗೆ ಸಮೀಪ ಉತ್ತರ ಬರೆದರೂ ಒಂದು ಅಂಕ ಸಿಗುವ ಅವಕಾಶ ಇರುತ್ತಿತ್ತು. ಈ ಭಾರಿ ಇರುವುದಿಲ್ಲ. ಉತ್ತೀರ್ಣದ ಮಾನದಂಡದ ಬಗ್ಗೆ ದೊಡ್ಡ ಗೊಂದಲ ಏರ್ಪಟ್ಟಿದೆ.