CBSE ಮಾನದಂಡ ಮಾದರಿಯಲ್ಲೇ ರಾಜ್ಯದಲ್ಲಿ SSLC ಪರೀಕ್ಷೆಗೆ ಚಿಂತನೆ?
ಬೆಂಗಳೂರು, ಜೂನ್ 01: ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ನಡೆಸುವ ಸಂಬಂಧ ಕೇಂದ್ರ ಸಿಬಿಎಸ್ಇ ಪರೀಕ್ಷಾ ಮಾನದಂಡ ಅನುಸರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಕಡಿಮೆಯಾಗದ ಹಿನ್ನೆಲೆಯಲ್ಲಿ SSLC ಪರೀಕ್ಷೆಯನ್ನು ಸಿಬಿಎಸ್ಇ ಮಾದರಿಯಲ್ಲಿ ರದ್ದು ಪಡಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಈ ಕುರಿತು ಇನ್ನೆರಡು ದಿನದಲ್ಲಿ ತೀರ್ಮಾನ ಪ್ರಕಟವಾಗುವ ಸಾಧ್ಯತೆಯಿದೆ.
ರಾಷ್ಟ್ರದಲ್ಲಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಪದವಿ ಸೇರಲು ಪಿಯುಸಿ ಮಾನದಂಡವನ್ನಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ರಾಷ್ಟ್ರದಲ್ಲಿ ಪಿಯುಸಿ ಪರೀಕ್ಷೆ ನಡೆಸುವ ಸಾಧ್ಯತೆಯಿದೆ. ಇನ್ನು ಸಿಬಿಎಸ್ಇ ಬೋರ್ಡ್ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಈಗಾಗಲೇ ರದ್ದು ಮಾಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ಎಸ್ಎಸ್ಎಸ್ ಸಿ ಪರೀಕ್ಷೆಯನ್ನು ನಡೆಸಬೇಕಾ ಅಥವಾ ಕೇಂದ್ರದ ಮಾದರಿಯಲ್ಲಿ ರದ್ದು ಪಡಿಸಬೇಕಾ ಎಂಬುದರ ಬಗ್ಗೆ ಶಿಕ್ಷಣ ಇಲಾಖೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ಪರೀಕ್ಷೆ ನಡೆಸುವುದಾದರೆ, ಆಫ್ಲೈನ್ ಪರೀಕ್ಷೆ ನಡೆಸುವುದೇ? ಇಲ್ಲವೇ ಸಿಬಿಎಸ್ಇ ಮಾದರಿಯಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸಬೇಕಾ? ಎಂಬುದರ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಕೊರೊನಾ ಹಿನ್ನೆಲೆಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಶಾಲಾ ಹಂತದಲ್ಲಿಯೇ ನಡೆಸಬೇಕು ಎನ್ನುವ ವಾದ ಕೇಳಿ ಬರುತ್ತಿದೆ. ಹೀಗೆ ನಾನಾ ಗೊಂದಲ ಏರ್ಪಟ್ಟಿರುವ ಬೆನ್ನಲ್ಲೇ ಕೇಂದ್ರದ ಮಾನದಂಡ ಮಾದರಿಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಮೌಲ್ಯಾಂಕನ ಆಧಾರದ ಮೇಲೆ ನಡೆಸಲು ಅಧಿಕಾರಿಗಳು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
Recommended Video
ರಾಜ್ಯದ ಗ್ರಾಮೀಣ ಭಾಗದಲ್ಲಿ ಕೊರೊನಾ ಎರಡನೇ ಅಲೆ ಅಪ್ಪಳಿಸುತ್ತಿದೆ. ಬೆಂಗಳೂರಿನಲ್ಲಿ ಓದುತ್ತಿದ್ದ ಅನೇಕ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ಬಗ್ಗೆ ಗೊಂದಲ ಏರ್ಪಟ್ಟು ವಿದ್ಯಾರ್ಥಿಗಳು ಕೂಡ ಆಸಕ್ತಿ ಕಳೆದುಕೊಂಡಿದ್ದಾರೆ. ಸಿಬಿಎಸ್ಇ ಶಾಲೆಗಳಲ್ಲಿ ಓದಿದ ಮಕ್ಕಳು ಈಗಾಗಲೇ ಮೌಲ್ಯಾಂಕನ ಆಧಾರದ ಮೇಲೆ ಉತ್ತೀರ್ಣರಾಗಿದ್ದು ಕಾಲೇಜುಗಳಲ್ಲಿ ದಾಖಲಾತಿ ಆಗುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಶಿಕ್ಷಣ ಇಲಾಖೆ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬ ಪ್ರಶ್ನೆ ಮೂಡಿದೆ.