ಭೂತಾರಾಧನೆ ಬಗ್ಗೆ ಗೌರವ ಇದೆ, ಕ್ಷಮೆ ಕೇಳಿದ ಸೃಜನ್
ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಭೂತಾರಾಧನೆ ಬಗ್ಗೆ ಅಪಹಾಸ್ಯ ಮಾಡಿದ್ದಾರೆ ಎಂದು ಟೀಕೆಗೆ ಗುರಿಯಾಗಿದ್ದ ಸೃಜನ್ ಲೋಕೇಶ್ ಕ್ಷಮೆ ಕೇಳಿದ್ದಾರೆ.
ಬೆಂಗಳೂರು, ಮಾರ್ಚ್ 20: ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಭೂತಾರಾಧನೆ ಬಗ್ಗೆ ಅಪಹಾಸ್ಯ ಮಾಡಿದ್ದಾರೆ ಎಂದು ಟೀಕೆಗೆ ಗುರಿಯಾಗಿದ್ದ ಸೃಜನ್ ಲೋಕೇಶ್ ಕ್ಷಮೆ ಕೇಳಿದ್ದಾರೆ.
ಈ ಕುರಿತು ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ಸೃಜನ್ ಲೋಕೇಶ್, "ಭೂತರಾಧನೆ ಬಗ್ಗೆ ನಾನು ತಮಾಷೆ ಮಾಡಿದೆ ಅಂತ ಕೆಲವು ಫೇಸ್ ಬುಕ್ ಪೋಸ್ಟ್ ಗಮನಿಸಿದೆ. ನನ್ನ ಉದ್ದೇಶ ಖಂಡಿತ ಭೂತರಾಧನೆಯನ್ನು ಅವಮಾನಿಸೋದಾಗಲೀ, ತಮಾಷೆ ಮಾಡೋದಾಗಲಿ ಆಗಿರಲಿಲ್ಲ. ನಾನು ಸಹ ಭೂತರಾಧನೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ದೈವಭಕ್ತ," ಎಂದು ಹೇಳಿದ್ದಾರೆ.[ಭೂತಕೋಲಕ್ಕೆ ಅಪಹಾಸ್ಯ, ಸೃಜನ್ ವಿರುದ್ಧ ಕರಾವಳಿಗರ ಆಕ್ರೋಶ]
"ನನಗೆ ಅದರ ಅರಿವಿರುವುದರಿಂದಲೇ ನಾನು 'ಭೂತರಾಧನೆ' ಪ್ರಸ್ತಾಪಿಸಿದ್ದು. ಯಾರ ಭಾವನೆಗಳಿಗೂ ಧಕ್ಕೆಯಾಗದ ಹಾಗೆ ನಿಮ್ಮನ್ನು ನಗಿಸೋ ಪ್ರಯತ್ನ ಮಾಡುತ್ತಾ ಬಂದಿದ್ದೇವೆ. ನನಗಿರಿವಿದ್ದೋ, ಅರಿವಿಲ್ಲದೆಯೋ ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ... ನಿಮ್ಮ ಸೃಜನ್ ಲೋಕೇಶ್," ಎಂದು ಪೋಸ್ಟ್ ಮಾಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಹಾಸ್ಯ ಕಾರ್ಯಕ್ರಮ ಮಜಾ ಟಾಕೀಸ್ ನಲ್ಲಿ ಸೃಜನ್ ಲೋಕೇಶ್ ನೀಡಿದ ಹೇಳಿಕೆಯೊಂದು ಈ ಹಿಂದೆ ವಿವಾದಕ್ಕೆ ಕಾರಣವಾಗಿತ್ತು.
ಮಜಾ ಟಾಕೀಸ್ ನಿರೂಪಕರಾದ ಸೃಜನ್ ಲೋಕೇಶ್ ತುಳುನಾಡಿನ ನಂಬಿಕೆಯ ಭೂತಾರಾಧನೆಗೆ ನಿನ್ನೆ (ಭಾನುವಾರ) ಯ ಕಾರ್ಯಕ್ರಮದಲ್ಲಿ ಅಪಹಾಸ್ಯ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ವಿವಾದಕ್ಕೆ ಸೃಜನ್ ಅಂತಿಮ ಮುದ್ರೆ ಒತ್ತಿದ್ದು ಕ್ಷಮೆ ಕೇಳಿದ್ದಾರೆ.