ಟಿಪ್ಪು ಸುಲ್ತಾನ್ ವಿಶ್ವವಿದ್ಯಾಲಯ ಈಗ ಕೋಲಾರದಲ್ಲಿ
ಗಮನಾರ್ಹವೆಂದರೆ, ಈ ಹಿಂದೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿಶ್ವವಿದ್ಯಾಲಯ ಸ್ಥಾಪನೆ ಪ್ರಸ್ತಾವನೆ ಬಂದಾಗ 'ಅಸಲಿಗೆ ಅಂತಹ ವಿವಿ ಸ್ಥಾಪನೆ ಸಾಧ್ಯವಿಲ್ಲ. ಸಂವಿಧಾನ ಮತ್ತು ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ಹಾಗಾಗಿ ಪ್ರಸ್ತಾವನೆಯನ್ನು ಅನುಮೋದಿಸಲಾಗದು ಎಂದು ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ ಅಧ್ಯಕ್ಷ ಪ್ರೊ. ಸುಖ್ ದೇವ್ ಥೋರಟ್ ನೇತೃತ್ವದ ತಜ್ಞರ ಸಮಿತಿ ರೆಡ್ ಸಿಗ್ನಲ್ ತೋರಿದೆ.
ಆದರೆ, ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಹಾಯಕ ಸಚಿವ ಕೆಎಚ್ ಮುನಿಯಪ್ಪ ಅವರು 'ಸುಮಾರು 50 ಎಕರೆ ಜಮೀನು ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿದಲ್ಲಿ ಕೋಲಾರದಲ್ಲಿ ಟಿಪ್ಪು ವಿವಿಯನ್ನು ಶೀಘ್ರವಾಗಿ ಆರಂಭಿಸಲಾಗುವುದು' ಎಂದು ಹೇಳಿದ್ದಾರೆ.
ಕೇಂದ್ರ ಅಲ್ಪಸಂಖ್ಯಾತ ಸಚಿವ ರೆಹಮಾನ್ ಖಾನ್ ಕೋಲಾರದಲ್ಲಿ ಟಿಪ್ಪು ವಿವಿ ಆರಂಭಿಸಲು ಒಲವು ತೋರಿಸಿದ್ದು, ಅಲ್ಲಿ ಜಮೀನು ಗುರುತಿಸುವುದರೊಂದಿಗೆ ಇತರ ಎಲ್ಲ ಕೆಲಸಗಳೂ ಕೂಡ ಪ್ರಗತಿಯಲ್ಲಿವೆ ಎಂದೂ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಕೇಂದ್ರೀಯ ವಿವಿಯನ್ನು ಆರಂಭಿಸಲು ಉದ್ದೇಶಿಸಿತ್ತಾದರೂ ಅಲ್ಲಿ ವಿವಿ ಆರಂಭ ಕುರಿತು ವಿವಾದ ಎದ್ದಿರುವುದರಿಂದ ಅಲ್ಲಿ ವಿವಿ ಆರಂಭವನ್ನು ಕೈ ಬಿಡಲಾಗಿದೆ ಎಂದು ಮುನಿಯಪ್ಪ ಪುನರುಚ್ಚರಿಸಿದ್ದಾರೆ.