ಪಕ್ಷ ಸೇರಲು ಶ್ರೀರಾಮುಲು ಇಟ್ಟ ಬೇಡಿಕೆಗೆ ಬಿಜೆಪಿ ನಾಯಕರು ಸುಸ್ತು
ಬೆಂಗಳೂರು, ಅ 3: ಅತ್ತ ದಿನಕ್ಕೊಂದರಂತೆ ಬೇಡಿಕೆ ಇಡುತ್ತಿರುವ ಯಡಿಯೂರಪ್ಪ ಜೊತೆಗಿನ ಮಾತುಕತೆಯಲ್ಲಿ ಹೆಚ್ಚಿನ ಪ್ರಗತಿ ಕಾಣದೇ ಇದ್ದರೂ, ಇತ್ತ BSR ಕಾಂಗ್ರೆಸ್ ಪಕ್ಷವನ್ನು ವಿಲೀನಗೊಳಿಸಲು ಬಿಜೆಪಿ ನಾಯಕರು ಭಗೀರಥ ಪ್ರಯತ್ನ ಮುಂದುವರಿಸಿದ್ದಾರೆ.
ಯಡಿಯೂರಪ್ಪ ಮತ್ತು ಶ್ರೀರಾಮುಲು ಬಿಜೆಪಿ ನಾಯಕರ ಆಹ್ವಾನಕ್ಕೆ ಸೂಕ್ತವಾಗಿ ಸ್ಪಂಧಿಸುತ್ತಿದ್ದರೂ ಅವರ ಬೇಡಿಕೆಗಳು ಪಕ್ಷಕ್ಕೆ ಬಿಸಿತುಪ್ಪವಾಗಿ ಪರಿಣಮಿಸುತ್ತಿದೆ. ಗಣಿ ಹಗರಣದಲ್ಲಿ ಜನಾರ್ಧನ ರೆಡ್ಡಿ ಬಂಧನಕ್ಕೊಳಗಾದ ನಂತರ ಬಿಜೆಪಿ ತೊರೆದು ಹೊಸ ಪಕ್ಷ ಸ್ಥಾಪಿಸಿದ ಶ್ರೀರಾಮುಲು ಮತ್ತೆ ಬಿಜೆಪಿ ಸೇರುವ ಬಗ್ಗೆ ಆಸಕ್ತಿಯೇನೋ ತೋರುತ್ತಿದ್ದಾರೆ.
ಆದರೆ, ಒಂದು ಕಾಲದಲ್ಲಿ ಅಮ್ಮ ಮಕ್ಕಳಂತಿದ್ದ ರೆಡ್ಡಿ ಕುಟುಂಬ ಮತ್ತು ಸುಷ್ಮಾ ಸ್ವರಾಜ್ ನಡುವಣ ಸಂಬಂಧ ಈಗ ಸಂಪೂರ್ಣ ಹಳಸಿ ಹೋಗಿದೆ. ಶ್ರೀರಾಮುಲು ಬಿಜೆಪಿಗೆ ಮರು ಸೇರ್ಪಡೆಯಾಗಲು ಇರುವ ಏಕೈಕ ವಿರೋಧವೆಂದರೆ ಅದು ಸುಷ್ಮಾ ಸ್ವರಾಜ್ ಅನ್ನಲಾಗುತ್ತಿದೆ.
ಯಾವ ಕಾರಣಕ್ಕೂ ಶ್ರೀರಾಮುಲು ಅವರನ್ನು ಮತ್ತೆ ಕರೆತರುವ ಬಗ್ಗೆ ನನ್ನ ಬಳಿ ಮಾತುಕತೆಗೆ ಬರಬೇಡಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಸುಷ್ಮಾ ಖಡಕ್ ಫರ್ಮಾನು ಹೊರಡಿಸಿದ್ದರೂ, ರಾಜ್ಯ ಮುಖಂಡರು ಸುಷ್ಮಾ ಅವರಿಗೆ ವಸ್ತುಸ್ಥಿತಿಯ ಚಿತ್ರಣವನ್ನು ಮನದಟ್ಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಶ್ರೀರಾಮುಲು ಇಟ್ಟಿರುವ ಏಕವೇವ ಡಿಮಾಂಡ್ ಏನು? ಸ್ಲೈಡಿನಲ್ಲಿ..
ರಾಷ್ಟೀಯ ನಾಯಕರು
ರಾಜ್ಯ ಮುಖಂಡರ ಜೊತೆ ರಾಷ್ಟೀಯ ನಾಯಕರುಗಳೂ ಸೇರಿ ಸುಷ್ಮಾ ಸ್ವರಾಜ್ ಮನವೊಲಿಸುವ ಕಾರ್ಯ ಮುಂದುವರಿಸಿದ್ದಾರೆ. ಬಳ್ಳಾರಿ ಭಾಗದಲ್ಲಿ ಶ್ರೀರಾಮುಲು ಬಿಜೆಪಿ ಪಕ್ಷಕ್ಕೆ ಎಷ್ಟು ಮುಖ್ಯವಾಗ ಬಹುದು ಎನ್ನುವುದರ ಬಗ್ಗೆಯೂ ನಾಯಕರುಗಳು ಸುಷ್ಮಾ ಅವರಿಗೆ ಸಂಪೂರ್ಣವಾಗಿ ವಿವರಿಸಿದ್ದಾರೆ.
ಬಳ್ಳಾರಿ, ಕೊಪ್ಪಳ
ಕಳೆದ ವಿಧಾನಸಭಾ ಚುನಾವಣೆಯಲ್ಲಿ BSR ಕಾಂಗ್ರೆಸ್ ಪಕ್ಷದಿಂದಾಗಿ ಬಿಜೆಪಿಗಾಗಿರುವ ಮತ ವಿಭಜನೆ, ಬಿಜೆಪಿ ಕೋಟೆಯಾಗಿದ್ದ ಬಳ್ಳಾರಿ ಕಾಂಗ್ರೆಸ್ ಪಾಲಾಗಿದ್ದು, ಬಳ್ಳಾರಿ, ಕೊಪ್ಪಳ, ಗದಗ, ರಾಯಚೂರು ಭಾಗದಲ್ಲಿ ಶ್ರೀರಾಮುಲು ಅವರಿಗೆ ಜನಪ್ರಿಯತೆಯನ್ನು ಬಿಜೆಪಿ ನಾಯಕರು ಸುಷ್ಮಾ ಸ್ವರಾಜ್ ಅವರಿಗೆ ವಿವರಿಸಿದ್ದಾರೆ ಎನ್ನುವುದು ಸುದ್ದಿ.
ಶ್ರೀರಾಮುಲು ಡಿಮಾಂಡ್
BSR ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ಜೊತೆಗೆ ವಿಲೀನಗೊಳಿಸಲು ಶ್ರೀರಾಮುಲು ಒಂದೇ ಒಂದು ಡಿಮಾಂಡ್ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ವಿಧಾನಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಉಪನಾಯಕನಾಗಿ ತನ್ನನ್ನು ಆಯ್ಕೆ ಮಾಡ ಬೇಕೆನ್ನುವುದು ಶ್ರೀರಾಮುಲು ಇಟ್ಟಿರುವ ಬೇಡಿಕೆ. ನಾಯಕನಾಗಿ ಸದ್ಯ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇದ್ದರೆ ಉಪನಾಯಕನಾಗಿ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಇದ್ದಾರೆ.
ಬಿಜೆಪಿಗೆ ಇದುವೇ ತೊಂದರೆ
ಶಾಸಕಾಂಗ ಪಕ್ಷದ ಉಪ ನಾಯಕನಾಗಿರುವ ಅಶೋಕ್ ಒಕ್ಕಲಿಗ ಸಮುದಾಯದವರು. ಅಶೋಕ್ ಅವರನ್ನು ಬದಲಿಸಿ ಶ್ರೀರಾಮುಲು ಅವರಿಗೆ ಮಣೆ ಹಾಕಿದರೆ ರಾಜ್ಯದ ಎರಡನೇ ಪ್ರಭಲ ಸಮುದಾಯದವರು ಪಕ್ಷದ ಮೇಲೆ ಮುನಿಸಿಕೊಳ್ಳಬಹುದು. ಇದರಿಂದ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷಕ್ಕೆ ಹಿನ್ನಡೆಯಾಗ ಬಹುದು ಎನ್ನುವ ಕಾರಣಕ್ಕಾಗಿ ಶ್ರೀರಾಮುಲು ಅವರ ಈ ಬೇಡಿಕೆಗೆ ಬಿಜೆಪಿ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ.
ವಾಲ್ಮೀಕಿ ಸಮುದಾಯ
ಉತ್ತರ ಕರ್ನಾಟಕದ ಭಾಗದಲ್ಲಿ ವಾಲ್ಮೀಕಿ ಸಮುದಾಯದವರು ಗಣನೀಯ ಪ್ರಮಾಣದಲ್ಲಿದ್ದಾರೆ. ಶ್ರೀರಾಮುಲು ಮೂಲಕ ಬಿಜೆಪಿ ಆ ಸಮುದಾಯದ ಮತವನ್ನು ತನ್ನತ್ತ ಸೆಳೆಯವ ಉದ್ದೇಶವನ್ನು ಹೊಂದಿದೆ. ತಾನು ಇಟ್ಟಿರುವ ಬೇಡಿಕೆಯನ್ನು ಕೈಬಿಟ್ಟು ಪಕ್ಷ ಸೇರುವಂತೆ ಬಿಜೆಪಿ ನಾಯಕರು ಭಾರೀ ಪ್ರಯತ್ನ ಮುಂದುವರಿಸಿದ್ದಾರೆ. ಒಂದು ವೇಳೆ ಬಿಜೆಪಿ ನಾಯಕರ ಪರಿಶ್ರಮಕ್ಕೆ ಫಲ ಸಿಕ್ಕಿ ಶ್ರೀರಾಮುಲು ಪಕ್ಷ ವಿಲೀನವಾದರೆ, ಬಿಜೆಪಿಗೆ ಅಸೆಂಬ್ಲಿಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಸಿಗಲಿದೆ.
ಬಳ್ಳಾರಿ ಮತ್ತು ರಾಯಚೂರು
ಬಳ್ಳಾರಿ ಸಂಸದೆ ಶಾಂತಾ ಮತ್ತು ರಾಯಚೂರು ಸಂಸದ ಸಣ್ಣಫಕೀರಪ್ಪ ಬಿಜೆಪಿ ಟಿಕೆಟಿನಿಂದ ಕಳೆದ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಪ್ರಸಕ್ತ ಅವರು ಶ್ರೀರಾಮುಲು ಜೊತೆ ಗುರುತಿಸಿ ಕೊಂಡಿದ್ದರೂ BSR ಕಾಂಗ್ರೆಸ್ ಪಕ್ಷ ಬಿಜೆಪಿ ಜೊತೆ ವಿಲೀನವಾದರೆ ಮುಂದಿನ ಲೋಕಸಭೆ ಚುನಾವಣೆಗೆ ಮತ್ತೆ ಅವರಿಗೇ ಟಿಕೆಟ್ ನೀಡಲೂ ಬಿಜೆಪಿ ಮುಂದಾಗಿದೆ.