ಶ್ರೀರಾಮುಲು-ಸಂತೋಷ್ ಲಾಡ್ ಆಲಿಂಗನ: ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯನ್ನು ಹಣಿಯಲು ಹೊಸ ತಂತ್ರ?
ಸಚಿವ ಬಿ.ಶ್ರೀರಾಮುಲು ಹಾಗೂ ಕಾಂಗ್ರೆಸ್ನ ಸಂತೋಷ್ ಲಾಡ್ ನಡುವಿನ ಅಪರೂಪದ ಆಲಿಂಗನಕ್ಕೆ ಜನರು ಸಾಕ್ಷಿಯಾದರು. ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯನ್ನು ಹಣಿಯುವ ಹೊಸ ತಂತ್ರದ ಭಾಗವಾಗಿ ಈ ಭೇಟಿ ನಡೆದಿದೆಯೇ? ಇಲ್ಲಿದೆ ಇನ್ಸೈಡ್ ವರದಿ
ಬೆಂಗಳೂರು, ಫೆಬ್ರವರಿ 03: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬನ್ನಿಹಟ್ಟಿಯಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಸಚಿವ ಬಿ.ಶ್ರೀರಾಮುಲು ಹಾಗೂ ಕಾಂಗ್ರೆಸ್ನ ಸಂತೋಷ್ ಲಾಡ್ ನಡುವಿನ ಅಪರೂಪದ ಆಲಿಂಗನಕ್ಕೆ ಜನರು ಸಾಕ್ಷಿಯಾದರು. ಈ ಘಟನೆಗೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಧಾರ್ಮಿಕ ಕಾರ್ಯದ ನೆಪದಲ್ಲಿ ಅವರಿಬ್ಬರೂ ಭೇಟಿಯಾಗಿದರು. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಹರಸಿದರು. ಚುನಾವಣೆಗೂ ಮುನ್ನ ಪ್ರತಿಸ್ಪರ್ಧಿ ಪಕ್ಷಗಳ ನೇತಾರರ ನಡುವಿನ ಈ ಸಮ್ಮಿಲನವು ರಾಜಕೀಯ ವಲಯಗಳಲ್ಲಿ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವನ್ನು ಶ್ರೀರಾಮುಲು ನೀಡಿದ್ದಾರೆ. ಇದೇ ಕಾರಣಕ್ಕಾಗಿ, ಶ್ರೀರಾಮುಲು ಕ್ಷೇತ್ರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಸಂಡೂರಿನವರಾದ ಸಂತೋಷ್ ಲಾಡ್ ಅವರು ಕಲಘಟಗಿಯಿಂದ ಎರಡನೇ ಅವಧಿಗೆ ಕಾಂಗ್ರೆಸ್ ಟಿಕೆಟ್ಗಾಗಿ ಯತ್ನ ನಡೆಸುತ್ತಿದ್ದಾರೆ.
Singer Mangli: ಬಳ್ಳಾರಿ ಉತ್ಸವದಲ್ಲಿ ಕಾರಿನ ಮೇಲೆ ದಾಳಿ, ಗಾಯಕಿ ಮಂಗ್ಲಿ ಹೇಳಿದ್ದು ಹೀಗೆ
ಸಂಡೂರಿನಲ್ಲಿ ಶ್ರೀರಾಮುಲು ಸ್ಪರ್ಧೆ?
ಕಳೆದ ಬಾರಿ ಎರಡು ಕ್ಷೇತ್ರಗಳಿಂದ ಬಿಜೆಪಿ ನಾಯಕ ಶ್ರೀರಾಮುಲು ಸ್ಪರ್ಧಿಸಿದ್ದರು. ಚಿತ್ರದುರ್ಗದ ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಸ್ಪರ್ಧಿಸಿ ಸಿದ್ದರಾಮಯ್ಯನವರ ವಿರುದ್ಧ ಸೋಲು ಅನುಭವಿಸಿದ್ದರು. ಈ ಬಾರಿ ಶ್ರೀರಾಮುಲು ಈ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಈಗ ಅವರು ಮತ್ತೆ ಬಳ್ಳಾರಿ ಜಿಲ್ಲೆಯ ಕಡೆಗೆ ಮುಖ ಮಾಡಿದ್ದಾರೆ. ಇದೇ ಜಿಲ್ಲೆಯ ಸಂಡೂರು ಕ್ಷೇತ್ರದಿಂದ ಕಣಕ್ಕಿಳಿಯಲು ಶ್ರೀರಾಮುಲು ಚಿಂತನೆ ನಡೆಸಿದ್ದಾರೆ. ಸಂಡೂರು ಕ್ಷೇತ್ರದಿಂದ ನಾನು ಕಣಕ್ಕಿಳಿಯಬೇಕೆಂದು ತೀವ್ರ ಒತ್ತಡವಿದೆ ಎಂದು ಶ್ರೀರಾಮುಲು ತಿಳಿಸಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ತುಕಾರಾಮ್ ಅವರು ಜಯಗಳಿಸಿದ್ದರು.
ಕಲಘಟಗಿಯಿಂದ ಮತ್ತೆ ಸ್ಪರ್ಧಿಸಲು ಲಾಡ್ ಯತ್ನ
ಧಾರವಾಡ ಜಿಲ್ಲೆಯ ಕಲಘಟಗಿಯಿಂದ ಕ್ಷೇತ್ರದ ಟಿಕೆಟ್ಗಾಗಿ ಸಂತೋಷ್ ಲಾಡ್ ಅರ್ಜಿ ಸಲ್ಲಿಸಿದ್ದಾರೆ. ಅಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಬಂಗಾರೇಶ ಹಿರೇಮಠ್ ಅರ್ಜಿ ಸಲ್ಲಿಸಿದ್ದಾರೆ. ಇದು ಲಾಡ್ ಅವರನ್ನು ಸಂಕಷ್ಟಕ್ಕೆ ಈಡು ಮಾಡಿದೆ. 'ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ಹಿರಿಯರು. ಅವರು ಸಕ್ರಿಯ ರಾಜಕಾರಣವನ್ನು ಬಿಟ್ಟು, ಕಿರಿಯರಿಗೆ ಅವಕಾಶ ಮಾಡಿಕೊಡಬೇಕು' ಎಂದು ಲಾಡ್ ಹೇಳಿಕೆ ನೀಡಿದ್ದರು. ಇದು ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ಅಸಮಾಧಾನವನ್ನು ಉಂಟು ಮಾಡಿದೆ ಎಂಬ ವರದಿಗಳು ಪ್ರಕಟವಾಗಿದೆ. ಇದು ಲಾಡ್ ಅವರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಲಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. 2018 ರಲ್ಲಿ ಬಿಜೆಪಿಯ ಸಿ.ಎಂ. ನಿಂಬಣ್ಣವರ್, ಸಂತೋಷ್ ಲಾಡ್ ಅವರನ್ನು 25997 ಮತಗಳ ಅಂತರದಿಂದ ಸೋಲಿಸಿದ್ದರು.
ಜನಾರ್ಧನ ರೆಡ್ಡಿ ಮಣಿಸಲು ತಂತ್ರ?
ಮಾಜಿ ಸಚಿವ ಹಾಗೂ ಬಳ್ಳಾರಿಯ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಅವರು ಬಿಜೆಪಿ ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಕ್ಷವನ್ನು ರಚಿಸಿದ್ದಾರೆ. ಹೈದಾರಾಬಾದ್ ಕರ್ನಾಟಕದ ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿಗಳಲ್ಲಿ ಸಕ್ರಿಯರಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಸ್ಪರ್ಧಿಸುವುದಾಗಿಯೂ ಘೋಷಿಸಿದ್ದಾರೆ. ಇದು ಶ್ರೀರಾಮುಲು ಹಾಗೂ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಒಂದು ವೇಳೆ, ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಶ್ರೀರಾಮುಲು ಸ್ಪರ್ಧಿಸಿದರೆ, ಜನಾರ್ಧನ ರೆಡ್ಡಿ ಅಡ್ಡಗಾಲು ಹಾಕಬಹುದು ಎಂಬ ಆತಂಕಗಳು ಶ್ರೀರಾಮುಲು ಅವರಲ್ಲಿ ಮೂಡಿರಬಹುದು ಎಂಬ ಮಾತುಗಳು ಓಡಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಂಡೂರಿನವರೇ ಆದ ಸಂತೋಷ್ ಲಾಡ್ ಅವರ ಶ್ರೀರಕ್ಷೆಯನ್ನು ರಾಮುಲು ಬಯಸಿದ್ದಾರೆ ಎನ್ನಲಾಗುತ್ತಿದೆ.
ಬಳ್ಳಾರಿಯಿಂದ ಪತ್ನಿ ಸ್ಪರ್ಧೆ
ಹೊಸ ಪಕ್ಷ ಕಟ್ಟಿರುವ ಜನಾರ್ಧನ ರೆಡ್ಡಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ವಾರ ನಡೆದ ಸಾರ್ವಜನಿಕ ಸಭೆಯಲ್ಲಿ ತಮ್ಮ ಪತ್ನಿಯನ್ನು ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ. ಈಗ ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಅವರ ಹಿರಿಯ ಸಹೋದರ ಸೋಮಶೇಖರ ರೆಡ್ಡಿ ಅವರು ಬಿಜೆಪಿಯಿಂದ ಶಾಸಕರಾಗಿದ್ದಾರೆ. ಜನಾರ್ಧನ ರೆಡ್ಡಿಯವರ ಈ ನಡೆಯಿಂದ ಶ್ರೀರಾಮುಲು ಹಾಗೂ ಬಿಜೆಪಿ ಸಂಕಷ್ಟಕ್ಕೆ ಒಳಗಾಗಿವೆ ಎನ್ನುವುದಂತೂ ಸತ್ಯ.