ಗೌರಿ ಹತ್ಯೆ ಆರೋಪಿಯನ್ನು 'ಧರ್ಮ ರಕ್ಷಕ' ಎಂದ ಶ್ರೀರಾಮಸೇನೆ ರಾಜ್ಯ ಕಾರ್ಯದರ್ಶಿ
ಬೆಂಗಳೂರು, ಜೂನ್ 13: ಗೌರಿ ಹತ್ಯೆ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆಯ ಬಂಧನ ಆಗಿರುವ ಬೆನ್ನಲ್ಲೆ ಶ್ರೀರಾಮಸೇನೆ ರಾಜ್ಯ ಕಾರ್ಯದರ್ಶಿ ನೀಲಕಂಠ ಕಂದಗಲ್ ಅವರು ಫೇಸ್ಬುಕ್ನಲ್ಲಿ ಹಾಕಿರುವ ಪೋಸ್ಟ್ ಗಮನಸೆಳೆಯುತ್ತಿದೆ.
ಪರಶುರಾಮ್ ವಾಗ್ಮೋರೆಯ ಚಿತ್ರ ಹಾಕಿರುವ ನೀಲಕಂಠ ಕಂದಗಲ್ 'ಧರ್ಮ ರಕ್ಷಕ' ಎಂದು ಬರೆದಿದ್ದಾರೆ. ಅಷ್ಟೆ ಅಲ್ಲದೆ 'ಮಾತೃಭೂಮಿ ರಕ್ಷಣೆಗೆ ಮುಡಿಪಾಗಿದೆ ನನ್ನ ಪ್ರಾಣ, ಧರ್ಮಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ' ಎಂದು ಬರೆದುಕೊಂಡಿದ್ದಾರೆ.
ಎಸ್ಐಟಿ ಬಂಧಿಸಿರುವ ಗೌರಿ ಹತ್ಯೆ ಆರೋಪಿಗಳ ಹಿನ್ನೆಲೆ ಏನು?
ಶ್ರೀರಾಮಸೇನೆಯ ರಾಜ್ಯ ಕಾರ್ದರ್ಶಿಯೇ ಈ ಪೋಸ್ಟ್ ಹಾಕಿರುವುದು ಅನುಮಾನ ಮೂಡಿಸಿದ್ದು, ಗೌರಿ ಲಂಕೇಶ್ ಹತ್ಯೆ ಆರೋಪಿಗೆ ಶ್ರೀರಾಮಸೇನೆ ಬಹಿರಂಗವಾಗಿ ಬೆಂಬಲ ನೀಡಿದೆ. ಈ ಪೋಸ್ಟ್ ಹಲವರು ಜೈ ಶ್ರೀರಾಮ್ ಎಂದು ಕಮೆಂಟ್ ಕೂಡಾ ಹಾಕಿದ್ದಾರೆ.
ಗೌರಿ ಲಂಕೇಶ್ ಮೇಲೆ ಗುಂಡು ಹಾಕಿದ್ದಾನೆ ಎಂದು ಆರೋಪಿಸಲಾಗಿರುವ ಪರಶುರಾಮ್ ವಾಗ್ಮೋರೆ ಶ್ರೀರಾಮಸೇನೆಯ ಸದಸ್ಯನಾಗಿದ್ದ ಎನ್ನಲಾಗಿದೆ. ಆದರೆ ಶ್ರೀರಾಮಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿ ಅದನ್ನು ಅಲ್ಲಗಳೆದಿದ್ದರು ಆದರೆ ಇಂದು ಅದೇ ಸಂಘಟನೆ ರಾಜ್ಯ ಮಟ್ಟದ ಮುಖಂಡರು ಆತನನ್ನು ಧರ್ಮ ರಕ್ಷಕ ಎಂದು ಕರೆದಿದ್ದಾರೆ.
ಬಜರಂಗ ದಳದ ರಾಜ್ಯ ವಕ್ತಾರ ಮೋಹನ್ ಗೌಡ ಅವರ ಹೆಸರೂ ಕೂಡ ಗೌರಿ ಹತ್ಯೆ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ ಆದರೆ ಇದನ್ನು ಮೋಹನ್ ಗೌಡ ಅವರು ಅಲ್ಲಗಳೆದಿದ್ದಾರೆ.