ಸವಣೂರಿನಲ್ಲಿ ಆಷಾಢ ಅಧಿಕ ಮಾಸದಲ್ಲಿ ಪ್ರತಿನಿತ್ಯ ಶ್ರೀನಿವಾಸ ಕಲ್ಯಾಣ
ಸವಣೂರ, ಜೂ. 14 : ಪರಮ ಪುಣ್ಯ ಸಾಧನಕರವಾದ ಆಷಾಢ ಅಧಿಕಮಾಸದ ಪರ್ಯಂತ ಪ್ರತಿನಿತ್ಯ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವದ ವೈಭವವನ್ನು ಕಾಣುವ ಸೌಭಾಗ್ಯ ಸವಣೂರಿನ ಜನತೆಗೆ ಲಭಿಸಲಿದೆ. ಮಾಸ ಪರ್ಯಂತ ಪ್ರತಿನಿತ್ಯವೂ ಶ್ರೀನಿವಾಸ ಹಾಗೂ ಪದ್ಮಾವತಿಯರ ವಿವಾಹದ ಸಂಬ್ರಮ ಕಾಣಬಹುದಾಗಿದೆ.
ಉತ್ತರಾಧಿಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ ಪೂರ್ಣಾನುಗ್ರಹದೊಂದಿಗೆ ಉತ್ತರಾಧಿಮಠದ ಪರಂಪರೆಯ ಯತಿಶ್ರೇಷ್ಠರಾದ ಶ್ರೀ ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಮಠದ ಸನ್ನಿಧಿಯಲ್ಲಿ ಕಾರ್ಯಕ್ರಮಗಳು ನೆರವೇರಲಿದೆ.
ಕಾರ್ಯಕ್ರಮದ ಎಲ್ಲ ಸಿದ್ದತೆಗಳನ್ನೂ ಕೈಗೊಳ್ಳಲಾಗಿದ್ದು, ಮನ್ಮಥನಾಮ ಸಂವತ್ಸರದ ಆಷಾಢ ಅಧಿಕಮಾಸದ ಆರಂಭ ದಿನವಾದ 17ರಂದು ಭವ್ಯ ಶೋಭಾಯಾತ್ರೆಯ ಮೂಲಕ ವಧು-ವರರನ್ನು ಶ್ರೀಮಠಕ್ಕೆ ಕರೆತರಲಾಗುತ್ತದೆ ಬಳಿಕ, ಜುಲೈ 15ರವರೆಗೆ ಪ್ರತಿ ನಿತ್ಯವೂ ವಿವಾಹದ ಘಟ್ಟಗಳನ್ನು ವಿಧ್ಯುಕ್ತವಾಗಿ ನೆರವೇರಿಸಲಾಗುತ್ತದೆ. ವರ ಹಾಗೂ ಕನ್ಯಾ ಪಕ್ಷಗಳ ಪರವಾಗಿ ಭಕ್ತಾಧಿಗಳು ನೇರವಾಗಿ ವಿವಾಹ ಮಹೋತ್ಸವ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಅಪೇಕ್ಷಿತರಿಗೆ ಪ್ರತ್ಯೇಕವಾಗಿ ಕಂಕಣಗಳನ್ನೂ ವಿತರಿಸಲಾಗುತ್ತದೆ. [ತಿರುಪತಿ ಶ್ರೀನಿವಾಸ ಮೂರ್ತಿಯ ವಿಸ್ಮಯ]
ಪುರುಷೋತ್ತಮ ಮಾಸ ಎಂದು ಪ್ರಸಿದ್ಧಿಯನ್ನು ಪಡೆದಿರುವ ಅಧಿಕ ಮಾಸದಲ್ಲಿ ಮಾಡುವ ಪ್ರತಿಯೊಂದು ಸತ್ಕಾರ್ಯಗಳಿಗೂ ಅಧಿಕ ಫಲವಿದೆ. ಅಪೂಪ ದಾನ ಸೇರಿದಂತೆ ಶಾಸ್ತ್ರ ಸಮ್ಮತವಾದ ಹತ್ತಾರು ದಾನ ಧರ್ಮಗಳಿಗೂ ಅಧಿಕ ಮಾಸ ವಿಶೇಷ ಸಂದರ್ಭವಾಗಿದೆ. ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ನೆರವೇರಿಸಿದರೆ ಎಲ್ಲ ಶುಭ ಕಾರ್ಯಗಳೂ ನಿರ್ವಿಘ್ನವಾಗಿ ಪೂರ್ಣಗೊಳ್ಳುತ್ತದೆ ಎಂದು ಶ್ರೀಮಠದ ಪೂಜಾ ಪರ್ಯಾಯಸ್ಥರಾದ ಗುರುರಾಜಾಚಾರ್ಯ ರಾಯಚೂರ ತಿಳಿಸಿದ್ದಾರೆ. ವಿವರಗಳಿಗೆ ದೂ : 9902258158 ಸಂಪರ್ಕಿಸಬಹುದು.
ಪಾದುಕಾ ಸಮಾರಾಧನೆ : ಈ ಹಿಂದೆ ಸತ್ಯಾತ್ಮತೀರ್ಥರು ತಮ್ಮ 15ನೇ ಚಾತುರ್ಮಾಸ್ಯ ವ್ರತದ ಆಚರಣೆಯನ್ನು ಸವಣೂರಿನಲ್ಲಿ ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ನಿರಂತರ 50 ದಿನಗಳ ಕಾಲ ಧರ್ಮ ಜಾಗೃತಿಯೊಂದಿಗೆ ಜ್ಞಾನದ ಗಂಗೆಯನ್ನು ಹರಿಸಿದ್ದರು. ಬಳಿಕ ಈ ಬಾರಿ ಶ್ರೀನಿವಾಸ ಕಲ್ಯಾಣ ಮಹೋತ್ಸವದೊಂದಿಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿದೆ. [ಆಷಾಧ ಅಧಿಕ ಮಾದ ವಾರದ ಪಂಚಾಂಗ]
ಮನ್ಮಥ ನಾಮ ಸಂವತ್ಸರದ ತಮ್ಮ ಪರ್ಯಾಯದ ಅವಧಿಯಲ್ಲಿ ಸತ್ಯಬೋಧರ ಸನ್ನಿಧಿಗೆ ವಜ್ರ ಕವಚ ಸಮರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಸತ್ಯಾತ್ಮತೀರ್ಥರ ನೇತೃತ್ವದಲ್ಲಿ ಗುರುಗಳ ಪಾದುಕಾ ಸಮಾರಾಧನೆ, ಶ್ರೀಸುಧಾ ಮಂಗಳ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನವಂಬರ್ 26ರಿಂದ 5 ದಿನಗಳ ಕಾಲ ಜರುಗಲಿದೆ ಎಂದು ಪರ್ಯಾಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [ಸೀತಾರಾಮ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ]