ಕಾಮನೆ ಮೆಟ್ಟಿ ಜ್ಞಾನ ಬೋಧಿಸಿದ ಸತ್ಯಬೋಧರ ಆರಾಧನೆ
ಸವಣೂರ, ಮಾ. 7 : ಮನದ ದುಷ್ಟಕಾಮನೆಗಳನ್ನು ದೂರೀಕರಿಸಿ, ಸತ್ಯನಾದ ಭಗವಂತನ ಜ್ಞಾನವನ್ನು ಬೋಧನೆ ಮಾಡುವ ಶ್ರೀ ಸತ್ಯಬೋಧರ ಸ್ಮರಣೆ ಅತ್ಯಂತ ಪಾವನಕರ ಎಂದು ಶ್ರೀಮದ್ ಉತ್ತರಾಧಿಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಸವಣೂರಿನ ಶ್ರೀ ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಸನ್ನಿಧಿಯಲ್ಲಿ ಶುಕ್ರವಾರ ಜರುಗಿದ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡ ಗುರುಗಳು, ಶ್ರೀ ದಿಗ್ವಿಜಯ ಮೂಲರಾಮ ದೇವರ ಮಹಾಪೂಜೆಯೊಂದಿಗೆ ನೆರೆದಿದ್ದ ಸಹಸ್ರಾರು ಭಕ್ತವೃಂದಕ್ಕೆ ಅಮೃತೋಪದೇಶ ನೀಡಿದರು.
ಭಾಗೀರಥಿಯ ಸಾಕ್ಷಾತ್ಕಾರದೊಂದಿಗೆ ಸವಣೂರಿನಲ್ಲಿ ಶ್ರೀಮದಾಚಾರ್ಯರ ಗ್ರಂಥಗಳಿಂದ ಬರುವ ಜ್ಞಾನಗಂಗೆಯನ್ನೂ ಹರಿಸಿದ ಮಹಾನುಭಾವರು ಶ್ರೀ ಸತ್ಯಬೋಧ ತೀರ್ಥರು. ಜ್ಞಾನಗಂಗೆಯ ಮೂಲಕವೂ ಪಾಪ ಪರಿಹಾರ ಮಾಡಿದ ಸತ್ಯಬೋಧರು, ಅಪತ್ಯ ಭಕ್ಷಣದ ವಿಷದ ಬಾಧೆಯನ್ನೂ ದೂರಗೊಳಿಸಿದವರು. ತಮ್ಮ ಆಯುಷ್ಯವನ್ನೂ ಧಾರೆ ಎರೆಯುವ ಮೂಲಕ ಧರ್ಮದಲ್ಲಿನ ನಿಷ್ಠುರತೆ ಹಾಗೂ ಭಕ್ತರ ಮೇಲಿನ ಕಾರುಣ್ಯವನ್ನೂ ತೋರಿದವರು ಎಂದು ಗುರು ಸ್ಮರಣೆ ಕೈಗೊಂಡರು. [ಸೋಂದಾ ವಾದಿರಾಜ ಗುರುಗಳಿಗೆ ಸಾಲಿಗ್ರಾಮ ಹಾರ ಸಮರ್ಪಣೆ]
ನಿರಂತರವಾಗಿ ಸವಣೂರಿನಲ್ಲಿಯೇ ನೆಲೆಸಿ ಅತ್ಯಂತ ಭಕ್ತಿ, ಶೃದ್ಧೆಯಿಂದ ದೇವರ ಸೇವೆಯನ್ನು ಮಾಡಿದ, ಅನೇಕ ವಿದ್ವಾಂಸರ ಹುಟ್ಟಿಗೆ ಕಾರಣರಾದ ಶ್ರೀ ಸತ್ಯಬೋಧರು, ನಮ್ಮ ಯೋಗ್ಯತೆಗೆ ತಕ್ಕಂತೆ ಜ್ಞಾನ ಭಕ್ತಿ ವೈರಾಗ್ಯಗಳನ್ನು ನೀಡಲಿ ಎಂದು ಕೋರಿದರು.
ಮಧ್ಯಾರಾಧನಾ ಕಾರ್ಯಕ್ರಮದ ಅನ್ವಯ ಶ್ರೀಮಠದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಪ್ರಾತಃಕ್ಕಾಲ ಉದಯರಾಗ, ಅಷ್ಟೋತ್ತರ, ಅಲಂಕಾರ ಸೇವಾ, ವಿಶೇಷ ಪಂಚಾಮೃತ ಅಭಿಷೇಕ ರಜತ ರಥೋತ್ಸವ, ಕನಕಾಭಿಷೇಕ, ಪುಷ್ಪಾಲಂಕಾರ, ಹಸ್ಥೋದಕ, ತೀರ್ಥ ಪ್ರಸಾದ ವಿತರಣೆಗಳು ಪೂರ್ವಾರಾಧನೆಯಂದು ನೆರವೇರಿದವು.
ಗುರುಗಳ ಮೂಲವೃಂದಾವನ ಸನ್ನಿಧಿಯಲ್ಲಿ ಶ್ರೀ ದಿಗ್ವಿಜಯ ಮೂಲರಾಮದೇವರ ಮಹಾಪೂಜೆಯನ್ನು ವಿಜೃಂಭಣೆಯಿಂದ ಕೈಗೊಂಡ ಸತ್ಯಾತ್ಮತೀರ್ಥರು, ನೆರೆದ ಸಹಸ್ರಾರು ಭಕ್ತರಿಗೆ ತಪ್ತಮುದ್ರಾಧಾರಣೆ ಕೈಗೊಂಡರು. ಸಂಜೆ ಭಕ್ತರಿಗೆ, ಸೇವಾಕರ್ತರಿಗೆ ಫಲಮಂತ್ರಾಕ್ಷತೆ ವಿತರಿಸಿ, ಅನುಗ್ರಹಿಸಿದರು.
ಆರಾಧನಾ ಪ್ರಯುಕ್ತ ನಾಡಿನ ಪ್ರಮುಖ ಗಾಯಕರಾದ ಅನಂತ ಕುಲಕರ್ಣಿ ಹಾಗೂ ಸಂಗಡಿಗರಿಂದ ದಾಸರ ಪದಗಳ ಗಾಯನ ಕಾರ್ಯಕ್ರಮ ಜರುಗಿತು. ವಿದ್ವಾಂಸರಿಂದ ಉಪನ್ಯಾಸ, ಪಲ್ಲಕ್ಕಿ ಉತ್ಸವ, ಅಷ್ಠಾವಧಾನ ಸೇವಾ, ತೊಟ್ಟಿಲೋತ್ಸವ, ಹರಿಕೀರ್ತನೆ ನೆರವೇರಿದವು.
ಉತ್ತರಾಧಿಮಠದ ದಿವಾನರಾದ ಪಂ. ಪ್ರಲ್ಹಾದಾಚಾರ್ಯರು ಸೇರಿದಂತೆ ಎಲ್ಲ ಶಿಷ್ಯ ವರ್ಗ, ಪಂ. ಮಳಗಿ ಜಯತೀರ್ಥಾಚಾರ್ಯ ಸೇರಿದಂತೆ ಹಲವಾರು ಪಂಡಿತರು, ವಿದ್ವಾಂಸರು ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಪೂಜಾ ಪರ್ಯಾಯಸ್ಥರಾದ ಸತ್ಯಪ್ರಿಯಾಚಾರ್ಯ, ಸತ್ಯಬೋಧಾಚಾರ್ಯ ಹಾಗೂ ನಾರಾಯಣಾಚಾರ್ಯ ರಾಯಚೂರ ಆರಾಧನಾ ಮಹೋತ್ಸವ ನಿರ್ವಹಿಸಿದರು.