ಮುತಾಲಿಕ್ ಆರೋಗ್ಯ ಹದಗೆಟ್ರೆ ಅಷ್ಟೆ, ಸಿದ್ದುಗೆ ಎಚ್ಚರಿಕೆ!
ಗದಗ, ನವೆಂಬರ್,16 : ಪೊಲೀಸರ ಅಚಾತುರ್ಯದಿಂದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕರ ಆರೋಗ್ಯಕ್ಕೆ ತೊಂದರೆಯಾದಲ್ಲಿ ಇಡೀ ರಾಜ್ಯದಲ್ಲಿ ಅವ್ಯವಸ್ಥೆ ತಲೆದೋರಲಿದೆ ಎಂದು ಗದಗ ಜಿಲ್ಲಾ ಶ್ರೀರಾಮ ಸೇನೆ ಸಂಚಾಲಕ ರಾಜು ಖಾನಪ್ಪನವರ ಎಚ್ಚರಿಸಿದ್ದಾರೆ.
ಪ್ರಮೋದ್ ಮುತಾಲಿಕರನ್ನು ಬಂಧಿಸಿದ ಪೊಲೀಸರ ಕ್ರಮ ಖಂಡಿಸಿ ಶನಿವಾರ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರಾಜು ಖಾನಪ್ಪನವರ, 'ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮತ್ತು ನಾಯಕರಿಗೆ ತೀವ್ರ ತೊಂದರೆ ನೀಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಂ ನೀತಿ ಅನುಸರಿಸುತ್ತಿದ್ದಾರೆ' ಎಂದು ದೂರಿದರು.[ಮುತಾಲಿಕ್ ವಿರುದ್ಧ ಎಫ್ ಐಆರ್ ದಾಖಲಿಸಿದ ಕಾಂಗ್ರೆಸ್]
'ಟಿಪ್ಪು ಸುಲ್ತಾನ ಜನ್ಮದಿನ ನವೆಂಬರ್ 20 ರಂದಿದೆ. ಆದರೆ ಮುಖ್ಯಮಂತ್ರಿಗಳು ಜನರ ಗಮನವನ್ನು ಸಚಿವ ಎಚ್.ಆಂಜನೇಯ ಅವರ ಪತ್ನಿ ವಿಜಯಾ ಅವರ ಭ್ರಷ್ಟಾಚಾರ ಪ್ರಕರಣದಿಂದ ಬೇರೆ ಕಡೆಗೆ ಸೆಳೆಯುವ ಹುನ್ನಾರದಿಂದ ಟಿಪ್ಪು ಜಯಂತಿಯನ್ನು ಸರ್ಕಾರದಿಂದ ನೆರವೇರಿಸಿ ವಿವಾದ ಸೃಷ್ಟಿಸಿದ್ದಾರೆ. ಸಾಹಿತಿ ಗಿರೀಶ ಕಾರ್ನಾಡರಿಂದ ವಿವಾದಾತ್ಮಕ ಹೇಳಿಕೆಯನ್ನು ಮುಖ್ಯಮಂತ್ರಿಯವರೇ ಹೇಳಿಸಿದ್ದಾರೆ' ಎಂದು ಆರೋಪಿಸಿದರು.[ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಿ: ಕಾರ್ನಾಡ್]
ಟಿಪ್ಪು ಜಯಂತಿ ವಿರೋಧಿಸಿ ಮಡಿಕೇರಿಯಲ್ಲಿ ನಡೆದ ಬಂದ್ ನ ಅವಧಿಯಲ್ಲಿ ಸಾವನ್ನಪ್ಪಿದ ವಿಶ್ವ ಹಿಂದೂ ಪರಿಷತ್ತಿನ ಕುಟ್ಟಪ್ಪನ ಪ್ರಕರಣವನ್ನು ಸರ್ಕಾರ ಕೂಡಲೇ ಸಿಬಿಐ ತನಿಖೆಗೆ ಒಳಪಡಿಸಬೇಕು. ಮುಸ್ಲಿಂರ ಹಲ್ಲೆಯಿಂದ ಸಾವನ್ನಪ್ಪಿದ ಕುಟ್ಟಪ್ಪನ ಕುಟುಂಬ ವರ್ಗಕ್ಕೆ ಕೂಡಲೇ 50ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಮಹಾತ್ಮಾಗಾಂಧಿ ವರ್ತುಳದಲ್ಲಿ ಒಂದು ಗಂಟೆ ಕಾಲ ರಸ್ತೆ ತಡೆ ನಡೆಸಿದ ಶ್ರೀರಾಮ ಸೇನೆ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.