ಡಿಕೆಶಿ ಮೇಲೆ ಅದಿರು ಖರೀದಿ, ಡಿನೋಟಿಫಿಕೇಶನ್ ಆರೋಪ
ಹುಬ್ಬಳ್ಳಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಎಸ್.ಆರ್.ಹಿರೇಮಠ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವರಾಗಿದ್ದ ಡಿಕೆ ಶಿವಕುಮಾರ್ ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಲಿಮಿಟೆಡ್ ಕಂಪನಿಗೆ ನಷ್ಟವಾಗುವ ರೀತಿಯಲ್ಲಿ 10.8 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅತಿ ಕಡಿಮೆ ದರದಲ್ಲಿ ಖರೀದಿಸಿದ್ದು, ಇದರಿಂದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ್ದಾರೆ ಎಂದರು.
ಇದರ ಜೊತೆಗೆ ಎಂಎಂಎಲ್ನಿಂದ ಅತಿ ಕಡಿಮೆ ದರದಲ್ಲಿ ವಿಕ್ಟರಿ ಎಕ್ಸ್ಪೋರ್ಟ್, ಇಂಡಿಯನ್ ರಾಕ್ಸ್, ವಲ್ಲಿಶ್, ಸುವಿ ಗ್ರಾನೈಟ್ಸ್, ಸ್ಕಂದ ಎಂಟರ್ಪ್ರೈಸಸ್, ಸಾಯಿ ಟ್ರೇಡಿಂಗ್ ಕಂಪನಿ, ನೆಟ್ ಪ್ರಾಜೆಕ್ಟ್ ಸಲ್ಯೂಶನ್ಸ್ ಮತ್ತು ಪ್ರದೀಪ ಎಕ್ಸ್ಪೋರ್ಟ್ ಕಂಪನಿಗಳಿಗೆ 2,500 ರೂ. ಇದ್ದ ಟನ್ ಅದಿರನ್ನು ಕೇವಲ 50 ರೂ. ನಿಂದ 75 ರೂ., 175 ರೂ. ಹಾಗೂ 250 ರೂ.ಗಳಿಗೂ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು. [ಎಸ್ಆರ್ ಹಿರೇಮಠ ಅವರಿಗೆ ಒನ್ಇಂಡಿಯ ಪ್ರಶಸ್ತಿ]
ಎಸ್ಎಂ ಕೃಷ್ಣ ಅವಧಿಯಲ್ಲಿ ಮಾತ್ರವಲ್ಲದೇ ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದ ಅವಧಿಯಲ್ಲೂ ಹೀಗೆ ಅದಿರು ಖರೀದಿ ಮಾಡಿದ್ದಾರೆ. ಮಾಜಿ ಸಚಿವ ವಿ.ಮುನಿಯಪ್ಪ ಹಾಗೂ ಪಿ.ಜಿ.ಆರ್.ಸಿಂಧ್ಯ ಕೂಡ ಎಂಎಂಎಲ್ನಿಂದ ಅದಿರು ಪೂರೈಸುವಂತೆ ಶಿಫಾರಸು ಮಾಡಿದ್ದಾರೆ ಎಂದು ಹಿರೇಮಠ ಆರೋಪಿಸಿದರು. [ಎಸ್ಆರ್ ಹಿರೇಮಠ ಯಾರು?]
ಈ ಅಕ್ರಮದಲ್ಲಿ ಡಿಕೆ ಶಿವಕುಮಾರ್ ಅವರ ಸಹೋದರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್ ಹಾಗೂ ಅವರ ಕುಟುಂಬದ ಸದಸ್ಯರು, ಎಂಎಂಎಲ್ನ ಉನ್ನತ ಅಧಿಕಾರಿಗಳು, ಸತ್ಯಾ ಗ್ರಾನೈಟ್ಸ್ನ ಪಿ.ಕೆ.ಪೊನ್ನರಾಜು ಕೂಡ ಶಾಮೀಲಾಗಿದ್ದಾರೆ ಎಂದು ಹಿರೇಮಠ ಹೇಳಿದ್ದಾರೆ.
ಡಿನೋಟಿಫಿಕೇಶನ್ : ಸಚಿವ ಡಿಕೆ ಶಿವಕುಮಾರ್ ಭೂಮಿ ಖರೀದಿಯಲ್ಲೂ ಅಕ್ರಮವೆಸಗಿದ್ದಾರೆ. ಎಸ್ಎಂ ಕೃಷ್ಣ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾಗ ಬೆಂಗಳೂರಿನ ಬೆನ್ನಿಗಾನಹಳ್ಳಿ ಗ್ರಾಮದ ಸರ್ವೇ ನಂ.50/2 ರಲ್ಲಿ ಬಿ.ಕೆ.ಶ್ರೀನಿವಾಸ ಎಂಬುವರಿಗೆ ಸೇರಿದ 4.20 ಎಕರೆ ಭೂಮಿಯನ್ನು ಅಕ್ರಮವಾಗಿ ನೋಟಿಫಿಕೇಶನ್ ಮಾಡಿಕೊಂಡಿದ್ದಾರೆ.
ಈ ಜಮೀನನ್ನು ಅಕ್ರಮವಾಗಿ 2003 ಡಿ.18ರಂದು ಮಾರಾಟ ಮಾಡಲಾಗಿದ್ದು, ಇದು 1991ರ ಕರ್ನಾಟಕ ಲ್ಯಾಂಡ್ ರೆವಿನ್ಯೂ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಹಿರೇಮಠ ಹೇಳಿದರು. ಅಲ್ಲದೆ, ಕೈಗಾರಿಕೆಗೆ ಮೀಸಲಿದ್ದ ಸರ್ಕಾರಿ ಭೂಮಿಯನ್ನು ವಸತಿಗಾಗಿ ಬದಲಾವಣೆ ಮಾಡಿದ್ದು, ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಆಸ್ತಿಯ ಮೂಲ ಮಾಲೀಕರ ಹೆಸರು ತೆಗೆಯದೆ ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ದೂರಿದರು.
ಸಂಪುಟದಿಂದ ಕೈಬಿಡಿ : ಸಿದ್ದರಾಮಯ್ಯ ಸಂಪುಟದಲ್ಲಿ ಡಿಕೆಶಿವಕುಮಾರ್ ಇಂಧನ ಸಚಿವರಾಗಿದ್ದಾರೆ. ಅವರು ಹಣ ಹಾಗೂ ಅಧಿಕಾರದಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗಿದ್ದು, ಎದುರಾಳಿಗಳನ್ನು ಎದುರಿಸಲು ಸಮರ್ಥರಾಗಿದ್ದಾರೆ. ಆದ್ದರಿಂದ ಡಿಕೆ ಶಿವಕುಮಾರ್ ಅವರ ವಿರುದ್ಧ ಇರುವ ಆರೋಪಗಳನ್ನು ಸ್ವತಂತ್ರ ನ್ಯಾಯಾಧೀಶರನ್ನು ನೇಮಿಸಿ ತನಿಖೆ ಮಾಡಬೇಕು. ತನಿಖೆ ಮುಗಿಯುವ ತನಕ ಡಿಕೆ ಶಿವಕುಮಾರ್ ಅವರನ್ನು ಸಂಪುಟದಿಂ ಕೈ ಬಿಡಬೇಕು ಎಂದು ಹಿರೇಮಠ ಆಗ್ರಹಿಸಿದರು.