ಮೂರು ಜಿಲ್ಲೆಗಳ ಬಿಜೆಪಿ ವಕ್ತಾರರಾಗಿ ಕೆ ಎಸ್ ಈಶ್ವರಪ್ಪ?
ಮೈಂಡಿಗೂ ಟಾಂಗಿಗೂ ಕನೆಕ್ಷನ್ ಇಲ್ಲದ ರಾಜಕಾರಣಿ ಎಂದೇ ಹೆಸರಾಗಿರುವ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪನವರು ಹೊಸ ವರ್ಷಕ್ಕೆ ಹೊಸ ಸಂಕಲ್ಪದೊಂದಿಗೆ ರಾಜಕೀಯ ಹೆಜ್ಜೆ ಇಡಲಿದ್ದಾರೆ ಎನ್ನುವ ಸುದ್ದಿಯಿದೆ.
ಈಶ್ವರಪ್ಪನವರ ಹೇಳಿಕೆಯಿಂದಾಗಿ ಪಕ್ಷ ಮುಜುಗರ ಅನುಭವಿಸಿದ ಉದಾಹರಣೆಗಳೇ ಹೆಚ್ಚಾಗಿದ್ದರೂ, ಈಶ್ವರಪ್ಪನವರನ್ನು ಮೂರು ಜಿಲ್ಲೆಗೆ ಸೀಮಿತವಾಗಿ ರಾಜ್ಯ ಬಿಜೆಪಿ ಘಟಕದ ವಕ್ತಾರರನ್ನಾಗಿ ನೇಮಿಸುವ ನಿರ್ಧಾರಕ್ಕೆ ಕೇಂದ್ರ ಬಿಜೆಪಿ ಮುಖಂಡರು ಬಂದಿದ್ದಾರೆ ಎನ್ನುವ ಸುದ್ದಿ 2015ರ ಕೊನೆಯ ರಾತ್ರಿಯಂದು ಹರಿದಾಡುತ್ತಿದೆ. (ಪರಿಷತ್ ಫೈಟ್ : ಬಿಜೆಪಿ ಸೋಲಿನ ಹೊಣೆ ಯಾರ ಹೆಗಲಿಗೆ)
ಪಕ್ಷಕ್ಕೆ ಜನ ಬೆಂಬಲವಿದ್ದರೂ, ಕರ್ನಾಟಕದಲ್ಲಿ ಅಧಿಕೃತ ವಿರೋಧ ಪಕ್ಷವಾಗಿ ಇದ್ದೂ ಇರದಂತಿರುವ ಬಿಜೆಪಿಗೆ, ತಮ್ಮ ಪಕ್ಷದ ಕೆಲವೊಂದು ಮುಖಂಡರ ವಿವಾದಕಾರಿ ಹೇಳಿಕೆಯಿಂದಾಗಿ ಮುಜುಗರ ಎದುರಿಸಬೇಕಾಗಿ ಬರುತ್ತಿದೆ.
ವರಿಷ್ಠರು, ರಾಜ್ಯ ಬಿಜೆಪಿಯ ಮುಖಂಡರು ಎಷ್ಟು ಬಾರಿ ತಿದ್ದಿ ತೀಡಿದರೂ, ತನ್ನ 'ವಾಕ್ ಚಾತುರ್ಯ' ವನ್ನು ಕಮ್ಮಿ ಮಾಡಿಕೊಳ್ಳದ ಈಶ್ವರಪ್ಪನವರಿಗೆ ಪಕ್ಷದ ವಕ್ತಾರ ಹುದ್ದೆ ನೀಡುವುದೇ ಲೇಸು ಎನ್ನುವ ನಿರ್ಧಾರಕ್ಕೆ ಅಮಿತ್ ಶಾ ಬಂದಿದ್ದಾರೆ ಎನ್ನುವ ಮಾಹಿತಿಯಿದೆ.
ಪಕ್ಷದ ವಕ್ತಾರ ಸ್ಥಾನದಲ್ಲಿದ್ದರೆ (ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಗೆ ಮಾತ್ರ), ಆ ಮೂಲಕವಾದರೂ ಈಶ್ವರಪ್ಪನವರು ಗಂಭೀರತೆಯಿಂದ ಹೇಳಿಕೆ ನೀಡಬಹುದು ಎನ್ನುವುದು ಕೇಂದ್ರ ಬಿಜೆಪಿ ಮುಖಂಡರ ಲೆಕ್ಕಾಚಾರ.
ಕಂಡೀಶನ್ ಅಪ್ಲೈಯಂತೆ, ವರಿಷ್ಠರು ಈಶ್ವರಪ್ಪನವರನ್ನು ದೆಹಲಿಗೆ ಕರೆಸಿಕೊಂಡು ಅವರ ಜೊತೆ ಮಾತುಕತೆ ನಡೆಸಿ, ಇನ್ನೆರಡು ದಿನದಲ್ಲಿ ಅಧಿಕೃತ ಘೋಷಣೆ ಹೊರಹಾಕಲಿದ್ದಾರೆ. (ನಾನ್ಯಾಕೆ ರಾಜಕೀಯ ಸನ್ಯಾಸ ಸ್ವೀಕರಿಸಲಿ)
ಲಭ್ಯ ಮಾಹಿತಿ ಪ್ರಕಾರ ವರಿಷ್ಠರು ಹಾಕಬಹುದಾದ ಕೆಲವೊಂದು ಕಂಡೀಶನ್ ಗಳು ಏನಿರಬಹುದು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ, ಹಾಗೆಯೇ ಹೊಸವರ್ಷದ ಮೊದಲ ದಿನಕ್ಕೆ ಇದೊಂದು ವಿಡಂಬನಾತ್ಮಕ ಲೇಖನ. ಮುಂದೆ ಓದಿ..
ಪರ್ಸನಲ್ ಸೆಕ್ರೆಟರಿ ನೇಮಕ
ಪಕ್ಷದ ನಿರ್ಧಾರ ಮತ್ತು ಅಧಿಕೃತ ಹೇಳಿಕೆಯನ್ನು ಮಾತ್ರ ಇನ್ಮುಂದೆ ಈಶ್ವರಪ್ಪನವರು ನೀಡಬೇಕು. ಇದಾದ ನಂತರ ಈ ವಿಚಾರದ ಬಗ್ಗೆ ಮಾಧ್ಯಮದವರ ತರವೇವಾರಿ ಪ್ರಶ್ನೆಗೆ ಈಶ್ವರಪ್ಪನವರ ಪರವಾಗಿ ಅವರ ಸೆಕ್ರೆಟರಿ ಉತ್ತರಿಸುತ್ತಾರೆ. ಈಶ್ವರಪ್ಪನವರು ಮಧ್ಯೆ ಮಾತನಾಡುವ ಹಾಗಿಲ್ಲ, ತಮ್ಮ ರಾಜಕೀಯ ಅನುಭವ ತೋರಿಸುವ ಹಾಗಿಲ್ಲ.
ರಾಜಕೀಯ ಸನ್ಯಾಸ
ಯಾವುದೇ ಸಂದರ್ಭದಲ್ಲಿ ರಾಜಕೀಯ ಸನ್ಯಾಸ ತೆಗೆದುಕೊಳ್ಳುವ ಬಗ್ಗೆ ಈಶ್ವರಪ್ಪ ಇನ್ನುಮುಂದೆ ಬಹಿರಂಗ ಹೇಳಿಕೆ ನೀಡುವಂತಿಲ್ಲ. ಒಂದು ವೇಳೆ ರಾಜಕೀಯ ಸನ್ಯಾಸದ ಬಗ್ಗೆ ಹೇಳಿಕೆ ನೀಡಿ ಅದು ಪಕ್ಷಕ್ಕೆ ಮುಜುಗರ ತಂದರೆ, ಪಕ್ಷವೇ ಅವರಿಗೆ ಪರ್ಮನೆಂಟ್ ಆಗಿ ರಾಜಕೀಯ ಸನ್ಯಾಸ ನೀಡಲಿದೆ.
ಅತ್ಯಾಚಾರದ ಬಗ್ಗೆ ಮಾತನಾಡುವ ಹಾಗಿಲ್ಲ
ಅತ್ಯಾಚಾರದ ವಿಚಾರದಲ್ಲಿ ಇನ್ನು ಮುಂದೆ ಈಶ್ವರಪ್ಪ ಯಾವುದೇ ಅಧಿಕೃತ ಹೇಳಿಕೆ ನೀಡುವಂತಿಲ್ಲ. ಇಂತಹ ಸಂದರ್ಭದಲ್ಲಿ ಮೂರು ಜಿಲ್ಲೆಗಳ ಪಕ್ಷದ ಹಿರಿಯ ಅಭಿಪ್ರಾಯ ಪಡೆದುಕೊಂಡು ಸೆಕ್ರೆಟರಿ ಮೂಲಕ ಈಶ್ವರಪ್ಪ ಅಭಿಪ್ರಾಯ ತಿಳಿಸಬಹುದಾಗಿದೆ.
ಮೂರು ಜಿಲ್ಲೆ ಬಿಟ್ಟು ಹೋಗುವಂತಿಲ್ಲ
ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಜಿಲ್ಲೆ ಬಿಟ್ಟು (ಖಾಸಗಿ, ಧಾರ್ಮಿಕ ಕಾರ್ಯಕ್ರಮ ಹೊರತು ಪಡಿಸಿ) ರಾಜ್ಯದ ಇತರ ಭಾಗದಲ್ಲಿ ನಡೆಯುವ ಪಕ್ಷದ ಕಾರ್ಯಕ್ರಮಕ್ಕೆ ಹಾಜರಾಗಲೂ ವರಿಷ್ಠರು ಈಶ್ವರಪ್ಪನವರಿಗೆ ಲಕ್ಷಣರೇಖೆ ಹಾಕುವ ಸಾಧ್ಯತೆಯಿದೆ.
ಲಕ್ವ ಹೋಡೀಲಿ ಅನ್ನುವಂತಿಲ್ಲ
ದನ ತಿನ್ನೋರ ನಾಲಿಗೆ ಕತ್ತರಿಸಿ, ಸಚಿವರ ಮಕ್ಕಳಿಗೆ ಲಕ್ವಾ ಹೋಡೀಲಿ.. ಹೀಗೆ ಅಸಂಬದ್ದ ಪದಗಳನ್ನು ಯಾವ ಪರಿಸ್ಥಿತಿಯಲ್ಲೂ ಹೇಳುವಂತಿಲ್ಲ ಅಥವಾ ಸೆಕ್ರೆಟರಿ ಮೂಲಕ ಹೇಳಿಸುವಂತಿಲ್ಲ. ಈ ರೀತಿಯ ಕೆಲವೊಂದು ಕಂಡೀಶನ್ ಹಾಕಿ ಈಶ್ವರಪ್ಪನವರಿಗೆ ವಕ್ತಾರ ಹುದ್ದೆ ನೀಡಿದರೆ, ಘನತೆಯಿಂದ ನಡೆದುಕೊಂಡು ಪಕ್ಷದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಈಶ್ವರಪ್ಪನವರು ಹಾರಿಸಬಹುದು ಎನ್ನುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರ (ವಿಡಂಬನಾತ್ಮಕ ಲೇಖನ)