ಕೊವೀಡ್ ರಾಜ್ಯ ಸರ್ಕಾರಕ್ಕೆ ಸವಾಲಾದ ದೆಹಲಿ ಜಮಾತ್ ಧಾರ್ಮಿಕ ಸಭೆ
ಬೆಂಗಳೂರು, ಮಾ. 31: ತಬ್ಲೀಘೀ ಎ ಜಮಾತ್ ವತಿಯಿಂದ ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ರಾಜ್ಯದಿಂದ ಭಾಗವಹಿಸಿದ್ದವರು 54 ಜನರಲ್ಲ ಬದಲಿಗೆ 300 ಜನರು ಎಂಬ ಆತಂಕಕಾರಿ ವಿಚಾರ ಬಹಿರಂಗವಾಗಿದೆ. ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ವ್ಯಕ್ತಿಯೊಬ್ಬರು ಕೊರೊನಾ ವೈರಸ್ ಸೋಂಕಿನಿಂದ ಈಗಾಗಲೇ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ತಬ್ಲೀಘೀ ಎ ಜಮಾತ್ ವತಿಯಿಂದ ನಿಜಾಮುದ್ದೀನ್ ದೆಹಲಿಯಲ್ಲಿ ಮಾರ್ಚ್ 7, 8, 9 ಮತ್ತು 15, 16, 17ಗಳಂದು ನಡೆದ ಧಾರ್ಮಿಕ ಸಭೆಯಲ್ಲಿ 3 ಸಾವಿರಕ್ಕಿಂತ ಹೆಚ್ಚು ಜನರು ಭಾಗವಹಿಸಿದ್ದರು. ಇವರಲ್ಲಿ ಹಲವಾರು ಜನರು ವಿದೇಶಗಳಿಂದ ಬಂದಿದ್ದರು. ಆ ಎರಡು ಸಭೆಗಳ ನಂತರ ದೇಶಾದ್ಯಂತ ಪ್ರಯಾಣವನ್ನು ಮಾಡಿರುತ್ತಾರೆ. ಅವರಲ್ಲಿ ಹಲವು ಜನರಿಗೆ ಕೋವಿಡ್-19 ವೈರಸ್ ಇರವುದು ಪತ್ತೆಯಾಗಿದೆ. ರಾಜ್ಯದಿಂದಲೂ 300 ಜನ ಪಾಲ್ಗೊಂಡಿದ್ದರು ಎಂಬುದು ಗಂಭೀರ ಸಮಸ್ಯೆಯಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಜಮಾತ್ ಮಸೀದಿಗೆ ಹೋಗಿದ್ದವರ ರಾಜ್ಯಾವಾರು ಅಂಕಿ-ಅಂಶ ಇಲ್ಲಿದೆ
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಗೃಹ ಸಚಿವ ಬೊಮ್ಮಾಯಿ ಅವರು, ರಾಜ್ಯದ 300 ಜನ ಪಾಲ್ಗೊಂಡಿರುವ ಮಾಹಿತಿ ಲಭ್ಯವಾಗಿದೆ ಎಂದಿದ್ದಾರೆ. ಈ ಸಭೆಯಲ್ಲಿ ಪಾಲ್ಗೊಂಡಿರುವವರಿಗೆ ಕೊರೊನಾ ವೈರಸ್ ತಗಲಿರುವುದು ಖಚಿತಗೊಂಡಿದ್ದು, ತೆಲಂಗಾಣದಲ್ಲಿ, 6 ಜನ, ಅಂಡಮಾನ್ ನಿಕೋಬಾರ್ನಲ್ಲಿ ಒಬ್ಬರು ಮೃತ ಪಟ್ಟಿದ್ದಾರೆ.
ಇತ್ತೀಚೆಗೆ ಶಿರಾದಲ್ಲಿ ಮೃತ ಪಟ್ಟ ವ್ಯಕ್ತಿಯು ಅದೇ ಸಭೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಮಾಹಿತಿ ಇದೆ. ಅಲ್ಲದೇ ಆ ಸಭೆಗೆ ಕರ್ನಾಟಕದಲ್ಲಿದ್ದ ವಿದೇಶಿ ಮೂಲದ ಸುಮಾರು 62 ಜನ ಭಾಗವಹಿಸಿದ್ದರು ಎಂಬ ವರದಿ ಇದೀಗ ಸಿಕ್ಕಿದೆ. ಅವರಲ್ಲಿ 12 ಜನರು ರಾಜ್ಯಕ್ಕೆ ಮತ್ತೆ ವಾಪಸ್ ಬಂದಿದ್ದಾರೆ. ಉಳಿದ 50 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆ ಸಭೆಯಲ್ಲಿ ಪಾಲ್ಗೊಂಡಿರುವ ಎಲ್ಲರನ್ನು ಕ್ವಾರಂಟೈನ್ ಮಾಡಲು ಆದೇಶ ನೀಡಲಾಗಿದ್ದು, ಇದು ಗಂಭೀರ ಸಮಸ್ಯೆಯಾಗಿದ್ದು ಈ ಬಗ್ಗೆ ಗೃಹ ಇಲಾಖೆ ತನಿಖೆ ನಡೆಸುತ್ತಿದೆ. ಜೊತೆಗೆ ಭಾಗವಹಿಸಿದ್ದವರ ಮೇಲೆ ನಿಗಾ ಇಡಲು ರಾಜ್ಯ ಮಟ್ಟದ ವಿಶೇಷ ತಂಡ ರಚಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದಾರೆ.