ಕೊರೊನಾ ವೈರಸ್: ಜೈಲು ಸಿಬ್ಬಂದಿ, ಕೈದಿಗಳ ಸುರಕ್ಷತೆಗೆ ವಿಶೇಷ ಅನುದಾನ!
ಬೆಂಗಳೂರು, ಮೇ 14: ಮಾರಕ ಕೊರೊನಾ ವೈರಸ್ ದಾಳಿಗೆ ಇಡೀ ವಿಶ್ವವೆ ತತ್ತರಿಸಿದೆ. ಸಾಕಷ್ಟು ಜೀವ ಹಾನಿಯನ್ನು ಕೊರೊನಾ ವೈರಸ್ ಜಗತ್ತಿನಾದ್ಯಂತ ಮಾಡುತ್ತಿದೆ. ಹೀಗಾಗಿ ನಮ್ಮ ದೇಶದಲ್ಲಿಯೂ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಕಳೆದ ಒಂದೂವರೆ ತಿಂಗಳುಗಳಿಂದ ಲಾಕ್ಡೌನ್ನಿಂದಾಗಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಎಲ್ಲರಿಗೂ, ಎಲ್ಲ ಕ್ಷೇತ್ರಗಳಿಗೂ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಇದೀಗ ರಾಜ್ಯದ ಎಲ್ಲ ಕಾರಾಗೃಹಗಳಿಗೆ ಅನುದಾನ ಬಿಡುಗಡೆ ಮಾಡಿ ಆದೇಶ ಮಾಡಿದೆ.
ಕೊರೊನಾ ವೈರಸ್ನಿಂದ ಕಾರಾಗೃಹಗಳ ಸುರಕ್ಷತೆಗೆ ಕಂದಾಯ ಇಲಾಖೆಯಿಂದ 2 ಕೋಟಿ ರೂ. ಗಳ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. ಕೋವಿಡ್ ಸೋಂಕಿನ ನಿಯಂತ್ರಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದ್ದು, ಕಾರಾಗೃಹದ ಅಧಿಕಾರಿಗಳು, ಸಿಬ್ಬಂದಿ, ಕೈದಿಗಳು, ಜೈಲಿನ ವೈದ್ಯಾಧಿಕಾರಿಗಳಿಗೆ ತಪಾಸಣೆ, ಸುರಕ್ಷತಾ ಉಪಕರಣಗಳ ಖರೀದಿಗೆ 2 ಕೋಟಿ ರೂ. ಅನುದಾನ ಕೊಡಲಾಗಿದೆ.
ಆರೋಪಿಗಳ ಸ್ಥಳಾಂತರ: ರಾಮನಗರ ಜೈಲು ಖಾಲಿ ಖಾಲಿ
ಅನುದಾನ ಬಳಕೆಗೆ ಹಲವು ಷರತ್ತುಗಳನ್ನು ರಾಜ್ಯ ಕಂದಾಯ ಇಲಾಖೆ ವಿಧಿಸಿದೆ. ಸೋಂಕು ಹರಡದಂತೆ ತಡೆಯಲು ಕೇಂದ್ರ ಗೃಹ ಇಲಾಖೆಯ ನಿರ್ದೇಶನದಂತೆ ಅನುದಾನ ಬಳಕೆ ಮಾಡಬೇಕು. ಸೋಂಕು ತಡೆಯುವುದನ್ನು ಬಿಟ್ಟು ಬೇರೆ ಉದ್ದೇಶಕ್ಕೆ ಅನುದಾನ ಬಳಸುವಂತಿಲ್ಲ ಎಂದು ಷರತ್ತುಗಳನ್ನು ವಿಧಿಸಲಾಗಿದೆ. ರಾಜ್ಯಾದ್ಯಂತ ಒಟ್ಟು 107 ಜೈಲುಗಳಲ್ಲಿ 15,600 ಕೈದಿಗಳಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ 5080 ಕೈದಿಗಳಿದ್ದು, ಅವರಲ್ಲಿ 1100 ಶಿಕ್ಷೆಗೆ ಒಳಗಾಗಿರುವ ಕೈದಿಗಳಿದ್ದಾರೆ.