ಈ ಬಾರಿ ವಿಧಾನಸಭೆ ಅಧಿವೇಶನ ವಿಧಾನಸೌಧದಿಂದ ಹೊರಗೆ?
ಬೆಂಗಳೂರು, ಆ. 06: ಕೊರೊನಾ ವೈರಸ್ ಸಂಕಷ್ಟದ ಮಧ್ಯೆ ವಿಧಾನ ಮಂಡಳ ಅಧಿವೇಶನ ನಡೆಸುವ ಅನಿವಾರ್ಯತೆ ಬಂದಿದೆ. ಬಜೆಟ್ ಅಧಿವೇಶನದಲ್ಲಿ ಪೂರ್ಣ ಬಜೆಟ್ಗೆ ಅನುಮೋದನೆ ಪಡೆಯದ ಹಿನ್ನೆಲೆಯಲ್ಲಿ ಈಗ ಮತ್ತೆ ಅಧಿವೇಶನ ಕರೆಯಲೇಬೇಕಾದ ಅನಿವಾರ್ಯತೆ ಇದೆ. ಇಲ್ಲದೆ ಇದ್ದರೆ ಸರ್ಕಾರದ ಕೆಲಸಗಳಿಗೆ ಹಣ ಬಿಡುಗಡೆಗೂ ಅವಕಾಶ ಇರುವುದಿಲ್ಲ.
Recommended Video
ಜೊತೆಗೆ ಸರ್ಕಾರಿ ನೌಕರರಿಗೆ ವೇತನ ಕೊಡಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಅಧಿವೇಶನ ನಡೆಸಲು ತಯಾರಿ ನಡೆಸಲಾಗಿದೆ. ಈ ಬಗ್ಗೆ ಕಲಾಪವನ್ನು ಎಲ್ಲಿ? ಹೇಗೆ ನಡೆಸಬೇಕು ಎಂಬುದನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ವಿಧಾನಸಭೆಯಲ್ಲಿನ ವ್ಯವಸ್ಥೆಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. ಕೊರೊನಾ ವೈರಸ್ ಸಂದರ್ಭದಲ್ಲಿ ಕಲಾಪ ನಡೆಸುವುದು ಹೇಗೆ ಎಂಬುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಬಜೆಟ್ ಲೇಖಾನುದಾನ
ಕಳೆದ ಬಜೆಟ್ ಅಧಿವೇಶನದಲ್ಲಿ ಅಧಿವೇಶನದಲ್ಲಿ ಆರು ತಿಂಗಳುಗಳ ಅವಧಿಗೆ ಲೇಖಾನುದಾನ ಪಡೆದುಕೊಳ್ಳಲಾಗಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ರಾಜ್ಯ ವಿಧಾನ ಸಭಾ ಅಧಿವೇಶನವು ನಡೆದಿದ್ದು, ಸಂವಿಧಾನಬದ್ದವಾಗಿ ಆರು ತಿಂಗಳ ಒಳಗೆ ಅಂದರೆ ಸೆಪ್ಟೆಂಬರ್ 23 ರೊಳಗೆ ಮತ್ತೊಮ್ಮೆ ಕಲಾಪ ಸಮಾವೇಶಗೊಳ್ಳಬೇಕಿದೆ.
ಕಳೆದೆರಡು ದಿನಗಳಿಂದ ಯಡಿಯೂರಪ್ಪ ಏನು ಮಾಡುತ್ತಿದ್ದಾರೆ?
ಈ ಹಿನ್ನೆಲೆಯಲ್ಲಿ ಸದನದಲ್ಲಿ ರಾಜ್ಯ ಸಚಿವ ಸಂಪುಟದ ಸದಸ್ಯರು ಮತ್ತು ಸದನದ ಸದಸ್ಯರು, ಸದನದಲ್ಲಿ ಹಾಜರಿರುವ ಅಧಿಕಾರಿಗಳು ಹಾಗೂ ಮಾಧ್ಯಮದವರಿಗೆ ಕೋವಿಡ್-19 ರ ಸೋಂಕು ತಗುಲದಂತೆ ಕ್ರಮ ವಹಿಸುವುದು ಹೇಗೆ? ಎಂಬುದರ ಕುರಿತು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸೌಧದ ವಿಧಾನಸಭಾ ಸದನದಲ್ಲಿನ ವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಬೇರೆಡೆ ಅಧಿವೇಶನ?
ಕೋವಿಡ್-19 ರ ಉಪಟಳ ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಿಧಾನ ಸಭಾ ಅಧಿವೇಶನವನ್ನು ನಡೆಸುವುದು ಹೇಗೆ? ಎಂಬ ಬಗ್ಗೆ ವಿವಿಧ ಸ್ತರಗಳಲ್ಲಿ ವಿಸ್ತೃತ ಚರ್ಚೆಗಳು ನಡೆಯುತ್ತಿವೆ. ರಾಜ್ಯದ ರಾಜಧಾನಿಯ ವಿಧಾನಸೌಧ ಹೊರತುಪಡಿಸಿ ಬೇರೆಲ್ಲಾದರೂ ಅಧಿವೇಶನ ನಡೆಸಲು ಸೂಕ್ತ ಸ್ಥಳ ಇದೆಯೇ? ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಗಾಜಿನ ಕವಚ
ವಿಧಾನಸೌಧದ ಮೊದಲನೇಯ ಮಹಡಿಯಲ್ಲಿರುವ ವಿಧಾನಸಭಾ ಸಭಾಂಗಣದಲ್ಲಿ ಪ್ರಸ್ತುತ ಇರುವ ಆಸನ ವ್ಯವಸ್ಥೆಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗಾಜಿನ ಕವಚಗಳನ್ನು ಅಳವಡಿಸುವ ಬಗ್ಗೆಯೂ ಚರ್ಚೆ ನಡೆದಿದೆ.
ಜೊತೆಗೆ ಸದನಕ್ಕೆ ಆಗಮಿಸುವ ಮುಖ್ಯಮಂತ್ರಿಗಳೂ ಸೇರಿದಂತೆ ಸಂಪುಟದ ಎಲ್ಲಾ ಸದಸ್ಯರು, ಪ್ರತಿಪಕ್ಷ ನಾಯಕರೂ ಒಳಗೊಂಡಂತೆ ಸದನದ ಎಲ್ಲ ಸದಸ್ಯರಿಗೆ ಕಡ್ಡಾಯವಾಗಿ ಮುಖಗವಸು ಒದಗಿಸುವುದು ಹಾಗೂ ಮುಖ ರಕ್ಷಕಗಳನ್ನು ಧರಿಸಿ ಬರಬೇಕೆಂಬ ಸಲಹೆಗಳನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ.
ಲೋಕಸಭೆ ಮಾದರಿ
ಲೋಕಸಭೆ ಮತ್ತು ರಾಜ್ಯಸಭೆ ಹಾಗೂ ಇತರೆ ರಾಜ್ಯಗಳಲ್ಲಿನ ವಿಧಾನಸಭೆ ಮತ್ತು ವಿಧಾನ ಪರಿಷತ್ತು ಸಮಾವೇಶಗೊಳ್ಳಲು ಹೇಗೆ ಸಿದ್ಧತೆಗಳನ್ನು ನಡೆಸುತ್ತಿವೆ? ಎಂಬುದರ ಬಗ್ಗೆಯೂ ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಸೂಚಿಸಿದ್ದಾರೆ.
ಮುಂದಿನ ವಾರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿ ಅಧಿವೇಶನ ನಡೆಸಲು ಸ್ಥಳದ ನಿರ್ಣಯ ಮಾಡುವುದಾಗಿ ಸಭಾಧ್ಯಕ್ಷ ಕಾಗೇರಿ ತಿಳಿಸಿದರು.