'ಹೆಚ್ಚು ಭಾಗ್ಯಗಳನ್ನು ಕೊಡಬೇಡಿ, ಸಿದ್ದರಾಮಯ್ಯ ಸ್ಥಾನದಲ್ಲಿ ಕೂರಬೇಕಾದೀತು'
Recommended Video
ಬೆಂಗಳೂರು, ಜುಲೈ 13: ನಿನ್ನೆ ಬಜೆಟ್ ಮೇಲಿನ ಚರ್ಚೆಗೆ ಸದನದಲ್ಲಿ ಕುಮಾರಸ್ವಾಮಿ ಉತ್ತರಿಸಬೇಕಾದರೆ ರಮೇಶ್ ಕುಮಾರ್ ಅವರ ಹಾಸ್ಯ ಚಟಾಕಿ ಸದನದಲ್ಲಿ ನಗುವಿನ ಅಲೆ ಎಬ್ಬಿಸಿತು.
'ರೈತರ ಸಾಲ ಮನ್ನಾ, ರೈತರಿಗೆ ಪ್ರೋತ್ಸಾಹ ಧನ ಇತರೆ ಇತರೆ ಸೌಲಭ್ಯಗಳನ್ನು ಕೊಡುತ್ತಿದ್ದೇವೆ' ಎಂದು ಕುಮಾರಸ್ವಾಮಿ ಅವರು ಪಟ್ಟಿ ಓದಲು ಪ್ರಾರಂಭಿಸಿದರು. ಈ ಸಮಯದಲ್ಲಿ ಮಧ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, 'ಅತಿಯಾಗಿ ಸೌಲಭ್ಯಗಳನ್ನು ಕೊಡಬೇಡಿ ಸಿದ್ದರಾಮಯ್ಯ ಅವರ ಸ್ಥಾನದಲ್ಲಿ ಕೂರಬೇಕಾದೀತು' ಎಂದು ಹಾಸ್ಯ ಮಾಡಿದರು.
ಬಜೆಟ್ ಬಗ್ಗೆ ವಿರೋಧ ಪಕ್ಷದ ಪ್ರಶ್ನೆಗಳಿಗೆ ಕುಮಾರಸ್ವಾಮಿ ಖಡಕ್ ಉತ್ತರ
'ಅಕ್ಕಿ, ಬೇಳೆ, ಮದುವೆಗೆ ಹಣ, ಲ್ಯಾಪ್ಟಾಪ್ ಅದು ಇದು ಎಲ್ಲಾ ಕೊಟ್ಟು ನೋಡಿ ಸಿದ್ದರಾಮಯ್ಯ ಅವರು ಇಂದು ಎಲ್ಲಿ ಕೂತಿದ್ದಾರೆ' ಎಂದು ರಮೇಶ್ ಕುಮಾರ್ ಹಾಸ್ಯ ಚಟಾಕಿ ಹಾರಿಸಿದರು. ರಮೇಶ್ ಕುಮಾರ್ ಮಾತಿಗೆ ಸದನವೆಲ್ಲಾ ನಗೆಗಡಲಲ್ಲಿ ತೇಲಿತು. ಇದಕ್ಕೆ ಪ್ರತ್ಯುತ್ತರ ನೀಡಿದ ಕುಮಾರಸ್ವಾಮಿ 'ಅದಕ್ಕೆ ಅಲ್ಲವೆ, ತೆರಿಗೆಯನ್ನೂ ಏರಿಸಿರುವುದು' ಎಂದು ನಕ್ಕರು.
ಮತ್ತೆ ಒಂದು ಲಕ್ಷ ಸಾಲಮನ್ನಾ ಮಾಡುತ್ತಿದ್ದಾರೆ ಕುಮಾರಸ್ವಾಮಿ
ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ವಿಶೇಷ ಅಭಿನಂದನೆಗಳನ್ನು ತಮ್ಮ ಭಾಷಣದಲ್ಲಿ ಸಲ್ಲಿಸಿದರು. ಇದಕ್ಕೆ ಮೇಜು ತಟ್ಟಿ ಶಾಸಕರೆಲ್ಲಾ ಸಂತಸ ವ್ಯಕ್ತಪಡಿಸಿದರು. ಕುಮಾರಸ್ವಾಮಿ ತಮ್ಮ ಭಾಷಣದಲ್ಲಿ ಹಲವು ಬಾರಿ ಸಿದ್ದರಾಮಯ್ಯ ಅವರ ಪ್ರಸ್ತಾಪವನ್ನು ಮಾಡಿದ್ದು ವಿಶೇಷವಾಗಿತ್ತು.
ಬಿಜೆಪಿ ಗೆಲ್ಲಿಸಿದ ಹಾಸನಕ್ಕೆ ಕೊಟ್ಟ ಅನುದಾನ ವಾಪಸ್ ಪಡೆಯಲೇ
ಹಾಸನಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದಾರೆ ಎಂಬ ಪ್ರಶ್ನೆಗೆ ಹಾಸ್ಯ ಮಿಶ್ರಿತವಾಗಿ ಉತ್ತರಿಸಿದ ಕುಮಾರಸ್ವಾಮಿ, ಹಾಸನಕ್ಕೆ ಈ ಮುಂಚೆ ನೀಡಿದ್ದ ಅನುದಾನಕ್ಕಿಂತಲೂ ಈ ಬಾರಿ ಕಡಿಮೆ ನೀಡಿದ್ದೇವೆ ಎಂದರು. ಅಷ್ಟೆ ಅಲ್ಲ ಬಿಜೆಪಿ ಅಭ್ಯರ್ಥಿಯನ್ನು ಮೊದಲ ಬಾರಿಗೆ ಹಾಸನ ಜನತೆ ಗೆಲ್ಲಿಸಿದ್ದಾರೆ ಅವರು ಬೇಡವೆಂದರೆ ಹೇಳಲಿ ಅನುದಾನ ವಾಪಾಸ್ ಪಡೆಯುತ್ತೇನೆ ಎಂದು ಕುಮಾರಸ್ವಾಮಿ ನಕ್ಕರು. ಹಾಸದಿಂದ ಗೆದ್ದ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಕೂತಲ್ಲಿಂದಲೇ ಬೇಡ ಎಂದು ಕೈಯಾಡಿಸಿದರು.
ಕಾಳು ಹಾಕಿ ಹಕ್ಕಿ ಹಿಡಿಯುವ ತಂತ್ರವೇ?
ಕುಮಾರಸ್ವಾಮಿ ಅವರ ಮಾತುಕೇಳಿ ಎದ್ದು ನಿಂತ ಸಿಟಿ ರವಿ, ಏನು ಸಾರ್ ಕಾಳು ಹಾಕಿ ಹಕ್ಕಿ ಹಿಡಿಯುವ ತಂತ್ರದಂತೆ ಹಾಸನಕ್ಕೆ ಅನುದಾನ ಕೊಟ್ಟು ನಮ್ಮ ಶಾಸಕನನ್ನು ಸೆಳೆಯುವ ತಂತ್ರ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದರು. ಅದಕ್ಕೆ ಆಡಳಿತ ಪಕ್ಷಗಳ ಸದ್ಯರು 'ಏನ್ರಿ ರವಿ ನಿಮ್ಮ ಪಕ್ಷದ ಶಾಸಕನ ಮೇಲೆ ನಿಮಗೆ ನಂಬಿಕೆ ಇಲ್ಲವೆ?' ಎಂದು ಕಾಲೆಳೆದರು.
ಕುಮಾರಸ್ವಾಮಿ ಕರ್ಣನೇ ಬಿಡಿ
ಈ ಚರ್ಚೆ ನಡುವೆ ಬಂದ ಸ್ಪೀಕರ್ ರಮೇಶ್ ಕುಮಾರ್, ನೀವು ಮೊನ್ನೆ ನಿಮ್ಮನ್ನು ಕರ್ಣ ಎಂದು ಕರೆದುಕೊಂಡಿರಿ ಅದು ನಿಜವೇ ಬಿಡಿ, ಬಿಜೆಪಿ ಶಾಸಕ ಇರುವ ಕ್ಷೇತ್ರಕ್ಕೆ ಹೆಚ್ಚು ಅನುದಾನ ಕೊಟ್ಟು ಕರ್ಣನೇ ಎಂದು ಸಾಬೀತು ಮಾಡಿಕೊಂಡಿರಿ ಎಂದರು. ವಿರೋಧ ಪಕ್ಷದ ಸದಸ್ಯರೂ ನಕ್ಕು ಹಗುರಾದರು.
ಯಡಿಯೂರಪ್ಪ ಹುಟ್ಟಿದ ಮಂಡ್ಯ ಜಿಲ್ಲೆ ಅನುದಾನ
ಮಂಡ್ಯ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ಮಾತನಾಡುತ್ತಿದ್ದಾಗ ಆಡಳಿತ ಪಕ್ಷದ ಸದಸ್ಯರೊಬ್ಬರು ಅದು ಯಡಿಯೂರಪ್ಪ ಅವರ ಜಿಲ್ಲೆ ಎಂದು ಕೂಗಿ ಹೇಳಿದರು. ಕೂಡಲೇ ಕುಮಾರಸ್ವಾಮಿ ಅವರು 'ಹೌದಾ, ನನಗೆ ಗೊತ್ತೇ ಇಲ್ವಲ್ರಿ, ನೋಡ್ರಿ ಇಲ್ಲೂ ಬಿಜೆಪಿ ಜಿಲ್ಲೆಯವರಿಗೇ ಹೆಚ್ಚಿನ ಅನುದಾನ ಕೊಟ್ಟುಬಿಟ್ಟಿದ್ದೇನೆ' ಎಂದು ನಕ್ಕರು. ಯಡಿಯೂರಪ್ಪ ಅವರು ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಎಲ್ಲವೂ ಮಂಡ್ಯದಲ್ಲೇ ಆ ನಂತರ ಅವರು ತಮ್ಮ ಕಾರ್ಯಸ್ಥಾನವನ್ನು ಶಿವಮೊಗ್ಗಕ್ಕೆ ಬದಲಾಯಿಸಿಕೊಂಡರು.