ರಾಜೀನಾಮೆ ಪತ್ರ ಜೇಬಿನಲ್ಲಿಟ್ಟುಕೊಂಡು ಕಲಾಪ ನಡೆಸಿದ ಸ್ಪೀಕರ್
ಬೆಂಗಳೂರು, ಜುಲೈ 23: ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಟುಕೊಂಡೇ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಇಂದಿನ ಕಲಾಪವನ್ನು ನಡೆಸುತ್ತಿದ್ದಾರೆ.
ಹೌದು, ಕಾರಣಾಂತರಗಳಿಂದ ಅಕಸ್ಮಾತ್ ಇಂದು ಸಹ ವಿಶ್ವಾಮತ ಯಾಚನೆ ಪ್ರಕ್ರಿಯೆ ಮುಗಿಯಲಿಲ್ಲವೆಂದರೆ, ತಾವು ವಚನ ಭ್ರಷ್ಟರಾಗಬಾರದು ಎಂದು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ವಾಪಸ್ ಹೋಗಲು ನಿಶ್ಚಿಯಿಸಿಯೇ ಸದನಕ್ಕೆ ಬಂದಿರುವುದಾಗಿ ರಮೇಶ್ ಕುಮಾರ್ ಹೇಳಿದರು.
Live Updates ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆರಂಭ
ತಾವು ಜೇಬಿನಲ್ಲಿ ಇಟ್ಟುಕೊಂಡಿದ್ದ ರಾಜೀನಾಮೆ ಪತ್ರವನ್ನು ತೆಗೆದು ಯಡಿಯೂರಪ್ಪ ಅವರು ಓದಲೆಂದು ಅವರಿಗೆ ನೀಡಿದರು. ಯಡಿಯೂರಪ್ಪ ಅವರು ಪತ್ರವನ್ನು ಓದಿ ಸ್ಪೀಕರ್ ಅವರಿಗೆ ವಾಪಸ್ ಮರಳಿಸಿದರು.
ಅತೃಪ್ತ ಶಾಸಕರ ವಿಶ್ವನಾಥ್ ಅವರು ಮಾಧ್ಯಮಗಳ ಮುಂದೆ ಸ್ಪೀಕರ್ ಅವರ ಬಗ್ಗೆ ಆರೋಪ ಮಾಡಿದ್ದನ್ನು ಸಿಎಂ ಕುಮಾರಸ್ವಾಮಿ ಅವರು ಉಲ್ಲೇಖಿಸಿದ ಕಾರಣ, ವಿಶ್ವನಾಥ್ ಅವರ ಮೇಲೆ ಸಿಟ್ಟಿನಿಂದ ರಮೇಶ್ ಕುಮಾರ್ ಅವರು ತಾವು ಬರೆದುಕೊಂಡು ಇರಿಸಿಕೊಂಡಿದ್ದ ರಾಜೀನಾಮೆ ಪತ್ರವನ್ನು ಸದನಕ್ಕೆ ತೋರಿಸಿದರು.
ಇವತ್ತೇ ಕಡೆ, ಎಲ್ಲವೂ ಮುಗಿಯುತ್ತದೆ: ಸ್ಪೀಕರ್ ರಮೇಶ್ ಕುಮಾರ್
ನೂರು ಜನ್ಮ ಎತ್ತಿ ಬಂದರು ಆತ ನನ್ನ ಹಾಗೆ ಪ್ರಾಮಾಣಿಕವಾಗಿ ಬದುಕಲು ಆಗುವುದಿಲ್ಲ ಎಂದು ಕೋಪದಿಂದ ಹೇಳಿದ ರಮೇಶ್ ಕುಮಾರ್ ಅವರು, ಆ ವ್ಯಕ್ತಿ ಪೀಠದ ಮೇಲೆ ಆರೋಪ ಮಾಡಿದ್ದಾರೆ ಅದರ ಜೊತೆಗೆ ವಿಧಾನಸಭೆಗೆ ಅವಮಾನ ಮಾಡಿದ್ದಾರೆ ಎಂದು ಕೋಪದಿಂದ ನುಡಿದರು.
ಭಾವುಕರಾದ ರಮೇಶ್ ಕುಮಾರ್ ಅವರು, ದೇವರಾಜ ಅರಸು ಅವರ ಗರಡಿಯಿಂದಲೇ ನಾವಿಬ್ಬರೂ ಬಂದಿದ್ದು, ಅರಸು ಅವರನ್ನು ಅವರು ಹೇಗೆ ಕೈ ಬಿಟ್ಟರು ಎಂದು ಗೊತ್ತಿದೆ ಅದರ ಬಗ್ಗೆ ಈಗ ಚರ್ಚೆ ಬೇಡ ಎಂದು ರಮೇಶ್ ಕುಮಾರ್ ಹೇಳಿದರು.