ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಸ್ಪೀಕರ್ ರಮೇಶ್ ಕುಮಾರ್ ಕೂಡಾ ಕಾರಣ!
ಸೋಲಿಲ್ಲದ ಸರದಾರ ಎಂದು ಬಿರುದಾಂಕಿತರಾಗಿದ್ದ, ಮಾಜಿ ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಈ ಬಾರಿ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಸೋಲಾಗಲು ಕಾರಣವಾದ ಅಂಶಗಳು ಯಾವುವು?
ಪರೋಕ್ಷವಾಗಿ ಖರ್ಗೆ ಸೋಲಿಗೆ ಸ್ಪೀಕರ್ ರಮೇಶ್ ಕುಮಾರ್ ಕೂಡಾ ಕಾರಣರಾದರೆ ಎನ್ನುವ ಪ್ರಶ್ನೆಗೆ, ಪಕ್ಷದ ಒಳಗಿನಿಂದ ಮತ್ತು ಕಾರ್ಯಕರ್ತರಿಂದ ಬರುವ ಉತ್ತರ ಹೌದು.
ಖರ್ಗೆ ಕುಟುಂಬದ ಜೊತೆಗಿನ ವೈಮನಸ್ಸಿನಿಂದ ಕಾಂಗ್ರೆಸ್ ತೊರೆದಿದ್ದ ಆ ಭಾಗದ ಪ್ರಭಾವೀ ನಾಯಕ ಡಾ. ಉಮೇಶ್ ಜಾಧವ್, ಖರ್ಗೆ ಅವರನ್ನು ಲೋಕಸಭಾ ಚುನಾವಣೆಯಲ್ಲಿ 95,452 ಮತಗಳ ಅಂತರದಿಂದ ಸೋಲಿಸಿದ್ದರು.
ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರದಲ್ಲಿ ರಾಜಕೀಯವಿಲ್ಲ: ಸ್ಪೀಕರ್
ರಮೇಶ್ ಕುಮಾರ್ ಅವರು ಖರ್ಗೆ ಸೋಲಿಗೆ ಹೇಗೆ ಕಾರಣರಾಗುತ್ತಾರೆ ಎನ್ನುವ ಪ್ರಶ್ನೆಗೆ ಉಮೇಶ್ ಜಾಧವ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದರಿಂದ, ಖರ್ಗೆ ಸೋಲಿಗೆ ಪರೋಕ್ಷವಾಗಿ ಇವರೂ ಕಾರಣರು ಎನ್ನುವ ಮಾತು ಹರಿದಾಡುತ್ತಿದೆ.
ಕಾಂಗ್ರೆಸ್ ಶಾಸಕರಾಗಿದ್ದ ಡಾ. ಉಮೇಶ್ ಜಾಧವ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದರು
ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಡಾ. ಉಮೇಶ್ ಜಾಧವ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದರು. ಇದಾದ ನಂತರ, ಅವರನ್ನು ಕಲಬರುಗಿ ಕ್ಷೇತ್ರದಿಂದ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಇವರ ಸ್ಪರ್ಧೆಗೆ ರಮೇಶ್ ಕುಮಾರ್ ಅವರ ಅನುಮತಿಯ ಅಗತ್ಯವಿತ್ತು. ಸ್ಪೀಕರ್ ಅನುಮತಿ ನಿರಾಕರಿಸಿದ್ದಲ್ಲಿ, ಇವರ ಸ್ಪರ್ಧೆ ಅನೂರ್ಜಿತವಾಗುವ ಸಾಧ್ಯತೆಯಿತ್ತು. ಜಾಧವ್ ಅವರು ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಸ್ಪೀಕರ್ ಆಂಗೀಕರಿಸಬೇಕಾಗಿತ್ತು.
ಕಾಂಗ್ರೆಸ್ಸಿನ ನಾಲ್ವರು ಅತೃಪ್ತ ಶಾಸಕರನ್ನು ಅನರ್ಹ ಮಾಡುವಂತೆ ಸಿದ್ದು ಕೋರಿಕೆ
ಕಾಂಗ್ರೆಸ್ಸಿನ ನಾಲ್ವರು ಅತೃಪ್ತ ಶಾಸಕರನ್ನು ಅನರ್ಹ ಮಾಡುವಂತೆ ಕೋರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದರು. ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಲು ಮನವಿ ಮಾಡಿದ್ದರು. ಎರಡೆರಡು ಬಾರಿ ಶೋಕಾಸ್ ನೋಟಿಸ್, ವಿಪ್ಗಳನ್ನು ಜಾರಿ ಮಾಡಿದ್ದರೂ ಅತೃಪ್ತ ಶಾಸಕರಾಗಿದ್ದ ಉಮೇಶ್ ಜಾಧವ್ ಸೇರಿದಂತೆ ಇತರ ಮೂವರು ಅದನ್ನು ಉಲ್ಲಂಘನೆ ಮಾಡಿದ್ದರು.
ಅನರ್ಹತೆ ಶಿಕ್ಷೆಯಿಂದ ಪಾರಾದ ನಾಲ್ವರು ರೆಬೆಲ್ ಶಾಸಕರು
ಜಾಧವ್ ರಾಜೀನಾಮೆ ವಿಚಾರದಲ್ಲಿ ಕಾನೂನು ಚೌಕಟ್ಟು ಮೀರಿ ನಾನು ವರ್ತಿಸುವುದಿಲ್ಲ
ನಾನು ನ್ಯಾಯಾಧೀಶನಂತೆ ಕಾರ್ಯನಿರ್ವಹಿಸುತ್ತಿದ್ದೇನೆ, ಸಂವಿಧಾನ ಬದ್ಧವಾಗಿ, ಶಾಸಕಾಂಗದ ಗೌರವ ಉಳಿಸುವುದಷ್ಟೆ ನನ್ನ ಕೆಲಸ. ಜಾಧವ್ ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಕಾನೂನು ಚೌಕಟ್ಟು ಮೀರಿ ನಾನು ವರ್ತಿಸುವುದಿಲ್ಲ, ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದಿದ್ದ, ಸ್ಪೀಕರ್ ರಮೇಶ್ ಕುಮಾರ್, ಚಿಂಚೋಳಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಉಮೇಶ್ ಜಾಧವ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದರು.
ಜಾಧವ್ ರಾಜೀನಾಮೆ ಆಂಗೀಕರಿಸುವುದನ್ನು ಮುಂದೂಡಬಹುದಾಗಿತ್ತು
ಉಮೇಶ್ ಜಾಧವ್ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಜಾರಿ ಮಾಡಬೇಕು ಎಂಬುದು ಕಾಂಗ್ರೆಸ್ ನ ಒತ್ತಾಯವಾಗಿತ್ತು, ಜೊತೆಗೆ, ರಮೇಶ್ ಕುಮಾರ್ ಮನಸ್ಸು ಮಾಡಿದ್ದರೆ, ಜಾಧವ್ ಅವರ ರಾಜೀನಾಮೆಯನ್ನು ಆಂಗೀಕರಿಸುವುದನ್ನು ಮುಂದೂಡಬಹುದಾಗಿತ್ತು. ಕಾಂಗ್ರೆಸ್ ಮುಖಂಡರು ಈ ಸಂಬಂಧ ಒತ್ತಾಯವನ್ನೂ ಮಾಡಿದ್ದರು. ಈ ಹಿಂದೆ, ವೈಎಸ್ಆರ್ ಕಾಂಗ್ರೆಸ್ ಸಂಸದರು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್ ಆಗಿದ್ದ ಸುಮಿತ್ರಾ ಮಹಾಜನ್ ತಕ್ಷಣ ಅಂಗೀಕರಿಸಿರಲಿಲ್ಲ. ಐದಾರು ತಿಂಗಳು ಕಳೆದರೂ ಈ ಬಗ್ಗೆ ಮುಂದಿನ ಕ್ರಮ ಜರುಗಿಸಿರಲಿಲ್ಲ.
ಖರ್ಗೆ ಸೋಲಿಗೆ, ರಮೇಶ್ ಕುಮಾರ್ ಕೂಡಾ ಕಾರಣ ಎನ್ನುವ ಮಾತು ಚಾಲ್ತಿಯಲ್ಲಿ
ಜಾಧವ್ ರಾಜೀನಾಮೆಯನ್ನು ತಕ್ಷಣಕ್ಕೆ ಆಂಗೀಕರಿಸದೇ ಇದ್ದಿದ್ದಲ್ಲಿ ಅವರ ಸ್ಪರ್ಧೆ ಡೋಲಾಯಮಾನವಾಗುತ್ತಿತ್ತು. ಉದ್ದೇಶಪೂರ್ವಕವಾಗಿಯೇ ರಮೇಶ್ ಕುಮಾರ್, ಜಾಧವ್ ರಾಜೀನಾಮೆಯನ್ನು ಬೇಗನೇ ಆಂಗೀಕರಿಸಿದ್ದಾರೆಂದು ಕೋಲಾರದ ಮಾಜಿ ಸಂಸದ ಕೆ ಎಚ್ ಮುನಿಯಪ್ಪ, ಹೈಕಮಾಂಡ್ ನಲ್ಲಿ ದೂರು ನೀಡಿದ್ದರು ಎಂದು ವರದಿಯಾಗಿತ್ತು. ಒಟ್ಟಿನಲ್ಲಿ, ಕಾಂಗ್ರೆಸ್ಸಿನ ಹೆವಿವೈಟ್ ಮಲ್ಲಿಕಾರ್ಜುನ ಖರ್ಗೆ ಸೋಲಿಗೆ, ಸ್ಪೀಕರ್ ರಮೇಶ್ ಕುಮಾರ್ ಕೂಡಾ ಕಾರಣ ಎನ್ನುವ ಮಾತು ಚಾಲ್ತಿಯಲ್ಲಿದೆ.