ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸ್ಪೀಕರ್ ಕಚೇರಿಯ ಸಂದೇಶ
ಬೆಂಗಳೂರು, ಫೆಬ್ರವರಿ 17 : ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಕರ್ನಾಟಕ ವಿಧಾನಸಭೆ ಸ್ಪೀಕರ್ ಕಚೇರಿಯಿಂದ ಸಂದೇಶ ನೀಡಲಾಗಿದೆ. ಆಯುಕ್ತರು ವಿಧಾನಸಭೆ ಮೊಗಸಾಲೆಗೆ ಸಮವಸ್ತ್ರ ಧರಿಸಿ ಬಂದಿದ್ದಕ್ಕೆ ಈ ಸಂದೇಶ ಕಳಿಸಲಾಗಿದೆ.
ಸೋಮವಾರ ಕರ್ನಾಟಕ ವಿಧಾನಸಭೆ ಸ್ಪೀಕರ್ ಕಚೇರಿಯಿಂದ ಸಂದೇಶವನ್ನು ಕಳಿಸಲಾಗಿದೆ. ಇಂದಿನಿಂದ ಕರ್ನಾಟಕ ವಿಧಾನಸಭೆ ಕಲಾಪ ಆರಂಭವಾಗಿದೆ. ಸಮವಸ್ತ್ರ ಧರಿಸಿ ವಿಧಾನಸಭೆ ಮೊಗಸಾಲೆಗೆ ಆಯುಕ್ತರು ಬಂದಿದ್ದರಿಂದ ಸಂದೇಶ ನೀಡಲಾಗಿದೆ.
ಪರಿಷತ್ ಚುನಾವಣೆ; ಜೆಡಿಎಸ್ ಶಾಸಕನಿಂದ ಬಿಜೆಪಿ ಅಭ್ಯರ್ಥಿಗೆ ಮತ!
ಇನ್ನು ಮುಂದೆ ಈ ರೀತಿ ಆಗದಂತೆ ಸೂಚನೆ ನೀಡಿ ಪೊಲೀಸ್ ಆಯುಕ್ತರ ಕಚೇರಿಗೆ ಸಂದೇಶ ರವಾನೆ ಮಾಡಲಾಗಿದೆ. ಪೊಲೀಸ್ ಆಯುಕ್ತರು ಸಮವಸ್ತ್ರ ಧರಿಸಿ ವಿಧಾನಸಭೆ ಮೊಗಸಾಲೆ ಪ್ರವೇಶಿಸಿರುವುದಕ್ಕೆ ಹಿರಿಯ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಪರಿಷತ್ ಚುನಾವಣೆ: ಅಭ್ಯರ್ಥಿ ಹಿಂದಕ್ಕೆ, ಲಕ್ಷ್ಮಣ ಸವದಿ ಹಾದಿ ಸುಗಮ
ಪೊಲೀಸ್ ಸಮವಸ್ತ್ರ ಧರಿಸಿ ವಿಧಾನಸಭೆಯ ಸಭಾಂಗಣವನ್ನು ಪ್ರವೇಶ ಮಾಡುವಂತಿಲ್ಲ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಡಿಜಿ & ಐಜಿಪಿ ಶಂಕರ ಬಿದರಿ ವಿಧಾನಸಭೆಗೆ ಸಮವಸ್ತ್ರ ಧರಿಸಿ ಬಂದಿದ್ದು, ತೀವ್ರ ಚರ್ಚೆಗೆ ಕಾರಣವಾಗಿತ್ತು.
ವಿಧಾನಸೌಧದಲ್ಲಿ ಆಗಿದ್ದೇನು?
ಸೋಮವಾರ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ರಾಜ್ಯಪಾಲರು ವಿಧಾನಸೌಧಕ್ಕೆ ಆಗಮಿಸಿದರು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ರಾಜ್ಯಪಾಲರನ್ನು ಸ್ವಾಗತಿಸಿದರು.
ಆಯುಕ್ತರನ್ನು ತಡೆದ ಮಾರ್ಷಲ್ಗಳು
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ರಾಜ್ಯಪಾಲರ ಜೊತೆ ಬರುತ್ತಿದ್ದರು. ಅವರು ವಿಧಾನಸಭೆ ಸಭಾಂಗಣವನ್ನು ಪ್ರವೇಶಿಸಲು ಪ್ರಯತ್ನ ನಡೆಸಿದರು. ಆಗ ಮಾರ್ಷಲ್ಗಳು ವಿಧಾನಸಭೆ ಸಭಾಂಗಣದ ಒಳ ಹೋಗದಂತೆ ತಡೆದರು. ರಾಜ್ಯಪಾಲರು ಸಭಾಂಗಣ ಪ್ರವೇಶ ಮಾಡಿದ ಕೂಡಲೇ ಬಾಗಿಲು ಮುಚ್ಚಿದರು.
ಒಳಗೆ ಬಿಡಲು ಪೊಲೀಸರ ನಕಾರ
ಭಾಸ್ಕರ್ ರಾವ್ ಒಳಗೆ ಬಿಡಲು ನಿರಾಕರಿಸಿದ ಮಾರ್ಷಲ್ಗಳು ಪೊಲೀಸ್ ಸಮಸ್ತ್ರದಲ್ಲಿ ಒಳಗೆ ಬಿಡುವ ಅವಕಾಶವಿಲ್ಲ. ನಿಯಮಗಳ ಪ್ರಕಾರ ಪೊಲೀಸ್ ಸಮವಸ್ತ್ರದಲ್ಲಿ ಸದನದ ಒಳ ಪ್ರವೇಶಿಸುವಂತಿಲ್ಲ ಎಂದು ಹೇಳಿದರು.
ಯು. ಟಿ. ಖಾದರ್ ಅಸಮಾಧಾನ
ನಿಯಮ ಬಾಹಿರವಾಗಿ ವಿಧಾನಸಭೆಯೊಳಗೆ ಭಾಸ್ಕರರಾವ್ ಬಂದಿದ್ದಕ್ಕೆ ಮಾಜಿ ಸಚಿವ ಯು. ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದರು. "ಸಮವಸ್ತ್ರದಲ್ಲಿ ಯಾರೂ ಕೂಡಾ ವಿಧಾನ ಸಭೆಗೆ ಪ್ರವೇಶ ಮಾಡುವಂತಿಲ್ಲ. ಅವರು ಯಾಕೆ ಈ ರೀತಿ ನಡೆದು ಕೊಂಡರೋ ಗೊತ್ತಿಲ್ಲ. ಸಭಾಧ್ಯಕ್ಷರು ಇದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು" ಎಂದು ಹೇಳಿದ್ದಾರೆ.