ಶಾಸಕ ಯತ್ನಾಳ್ ಮಾತಿಗೆ ವಿಧಾನಸಭೆ ಸ್ಪೀಕರ್ ತೀರ್ಪು ಹೀಗಿದೆ
ಬೆಂಗಳೂರು, ಮಾ. 03: ವಿಧಾನಸಭೆಯ ಎರಡು ದಿನಗಳ ಕಲಾಪ ನುಂಗಿ ಹಾಕಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಮೇಲೆ ನಡೆದ ಚರ್ಚೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತೀರ್ಪು ಕೊಟ್ಟಿದ್ದಾರೆ.
ವಿಧಾನಸಭೆ ಸ್ಪೀಕರ್ ಕೊಟ್ಟಿರುವ ತೀರ್ಪು ಹೀಗಿದೆ: ಶ್ರೀ ಸಿದ್ದರಾಮಯ್ಯ, ಮಾನ್ಯ ವಿರೋಧ ಪಕ್ಷದ ನಾಯಕರು ಇಂದು ನಿಯಮ 363ರಡಿ ಸೂಚನೆಯೊಂದನ್ನು ನೀಡಿ ವಿಧಾನಸಭೆ ಸದಸ್ಯರಾದ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ರವರು ಶ್ರೀ ಎಚ್ ಎಸ್ ದೊರೆಸ್ವಾಮಿಯವರ ವಿರುದ್ಧ ಮಾಡಿರುವ ಆರೋಪದ ಕುರಿತು ಪ್ರಸ್ತಾಪಿಸಿ ಆ ಕಾರಣಕ್ಕಾಗಿ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ರವರನ್ನು ಉಚ್ಛಾಟಿಸಬೇಕೆಂದು ಕೋರಿರುತ್ತಾರೆ.
ಮಾನ್ಯ ವಿರೋಧ ಪಕ್ಷದ ನಾಯಕರು ನೀಡಿರುವ ಸೂಚನೆಯ ನಿಯಮ 363ರ ವ್ಯಾಪ್ತಿಗೆ ಬರುವುದಿಲ್ಲ. ಆದರೂ ನಾನು ವಿವೇಚನಾಧಿಕಾರ ಬಳಸಿ ಚರ್ಚಿಸಲು ಒಪ್ಪಿದ್ದೆ. ಆದರೆ ಅವರು ಸದನದ ಸದಸ್ಯರೊಬ್ಬರ ಮೇಲೆ ಆಪಾದನೆ ಮಾಡುತ್ತಿರುವುದರಿಂದ ನಿಯಮ 328ರ ಮೇರೆಗೆ ಸೂಚನೆಯನ್ನು ಕೊಡಬೇಕಾಗಿತ್ತು ಮತ್ತು ಸೂಚನೆಯ ಪ್ರತಿಯೊಂದನ್ನು ನಾನೇ ಸದಸ್ಯರಿಗೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಿಗೆ ನೀಡಬೇಕಾಗಿತ್ತು. ಸೂಚನೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಯನ್ನು ಆಧರಿಸಿವೆ. ಕೌಲ್ ಆ್ಯಂಡ್ ಶಖ್ದರ್ರವರ Practice and Pricedure of Parliment ಪುಸ್ತಕದ ಪುಟ ಸಂಖ್ಯೆ 1024ರಲ್ಲಿ ವಿವರಿಸಿರುವ ರಿತ್ಯಾ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಯ ಆಧಾರದ ಮೇಲೆ ಮಾಡಲಾಗುವ ಆಪಾದನೆಗಳನ್ನು ಪ್ರಸ್ತಾಪಿಸಲು ಅನುಮತಿ ನೀಡುವುದಕ್ಕೆ ಅವಕಾಶವಿರುವುದಿಲ್ಲ.
ಮಾನ್ಯ ವಿರೋಧ ಪಕ್ಷದ ನಾಯಕರು ನೀಡಿರುವ ಸೂಚನೆಯಲ್ಲಿ ವಿಧಾನಸಭೆ ಸದಸ್ಯರಾದ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ರವರ ಬಗ್ಗೆ ಹೇಳಬೇಕಾದೆಲ್ಲವನ್ನು ಹೇಳಿ ಅವರಿಗೆ ಯಾವ ರೀತಿಯ ಶಿಕ್ಷೆಯನ್ನು ವಿಧಿಸಬೇಕು ಎಂಬುದನ್ನು ಸಹ ತಿಳಿಸಿದ್ದಾರೆ. ಆದರೆ, ಸದಸ್ಯರಿಗೆ ಶಿಕ್ಷೆಯನ್ನು ವಿಧಿಸುವ ಅಧಿಕಾರ ಮಾನ್ಯ ಸಭಾಧ್ಯಕ್ಷರು ಮತ್ತು ಸದನಕ್ಕೆ ಸೇರಿರುತ್ತದೆ.
ಸೂಚನೆಯಲ್ಲಿ ಪ್ರಸ್ತಾಪಿಸಿರುವ ಘಟನೆಯು ಸದನದ ಹೊರಗಡೆ ನಡೆದಿರುವ ಘಟನೆಯಾಗಿರುತ್ತದೆ. ಅಲ್ಲದೆ ಭಾರತ ಸಂವಿಧಾನದ ಅನುಚ್ಛೇದ 51 ಎ ಅಡಿಯಲ್ಲಿ ವಿವರಿಸಿರುವ ಮೂಲಭೂತ ಕರ್ತವ್ಯಗಳ ಉಲ್ಲಂಘನೆಯನ್ನು ಮಾನ್ಯ ಸದಸ್ಯರು ಮಾಡಿಲ್ಲದಿರುವುದು ಕಂಡು ಬಂದಿರುತ್ತದೆ.
ಈ ಹಿನ್ನೆಲೆಯಲ್ಲಿ ಮಾನ್ಯ ವಿರೋಧ ಪಕ್ಷದ ನಾಯಕರು ನೀಡಿರುವ ಸೂಚನೆಯನ್ನು ಪರಿಗಣಿಸಲು ಬರುವುದಿಲ್ಲ. ಆದರಿಂದ ಈ ಸೂಚನೆಯನ್ನು ತಿರಸ್ಕರಿಸಲಾಗಿದೆ.