ಕೊರೊನಾ ಇದ್ದರೂ ವಿಧಾನಸಭೆ ಕಲಾಪಕ್ಕೆ ಬಂದರಾ ಪ್ರಿಯಾಂಕ್ ಖರ್ಗೆ?
ಬೆಂಗಳೂರು, ಸೆ. 25: ಕೊರೊನಾ ವೈರಸ್ ಪಾಸಿಟಿವ್ ಇದ್ದರೂ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ವಿಧಾನಸಭೆ ಕಲಾಪಕ್ಕೆ ಹಾಜರಾದರಾ? ಇಂಥದ್ದೊಂದು ಚರ್ಚೆ ವಿಧಾನಸಭೆ ಕಲಾಪ ಆರಂಭವಾದ ತಕ್ಷಣ ನಡೆಯಿತು. ವಿಧಾನ ಮಂಡಲ ಮಳೆಗಾಲದ ಅಧಿವೇಶನ ಆರಂಭವಾಗಿ ಐದನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಅವರು ಎರಡು ದಿನಗಳ ಬಳಿಕ ಇವತ್ತು ಕಲಾಪದಲ್ಲಿ ಭಾಗವಹಿಸಿದ್ದರು.
ಪ್ರಿಯಾಂಕ್ ಖರ್ಗೆ ಅವರನ್ನು ಸದನದಲ್ಲಿ ನೋಡುತ್ತಿದ್ದಂತೆಯೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಆಕ್ಷೇಪ ಎತ್ತಿದರು. ಶಾಸಕ ಪ್ರಿಯಾಂಕ್ ಖರ್ಗೆ ಅವರು ಕೋವಿಡ್ ಪಾಸಿಟೀವ್ ಬಂದು ಎರಡೇ ದಿನಕ್ಕೆ ಸದನಕ್ಕೆ ಬಂದಿದ್ದಾರೆ ಎಂದು ಅವರು ಪ್ರಸ್ತಾಪಿಸಿದರು. ಅದಕ್ಕೆ ಸ್ಪಷ್ಟನೆ ಕೊಟ್ಟ ಪ್ರಿಯಾಂಕ್ ಖರ್ಗೆ ಅವರು, ಕೊರೊನಾ ಪಾಸಿಟಿವ್ ಕುರಿತು ಸದನದಲ್ಲಿ ಸ್ಪಷ್ಟನೆ ಕೊಟ್ಟರು.
ಅವಿಶ್ವಾಸ ನಿರ್ಣಯ: ವಿಧಾನಸಭೆ ಅಜೆಂಡಾದಲ್ಲಿ ಇಲ್ಲ; ಇದು ಭಂಡ ಸರ್ಕಾರ
ಮೊದಲು ನನಗೆ ಕೊರೊನಾ ಪಾಸಿಟಿವ್ ಎಂದು ವೈದ್ಯರು ವರದಿ ಕೊಟ್ಟಿದ್ದರು. ನಂತರ 48 ಗಂಟೆಗಳ ಬಳಿಕ ನೆಗೆಟಿವ್ ಎಂದು ವರದಿ ಬಂತು. ಅನುಮಾನ ಬಂದು ವೈದ್ಯರನ್ನು ಸಂಪರ್ಕಿಸಿ ಮತ್ತೆ ಪರೀಕ್ಷೆಗೆ ಒಳಗಾದಾಗ ನೆಗೆಟಿವ್ ಎಂದು ವರದಿ ಬಂತು. ನಂತರ ವೈರಲಾಜಿಸ್ಟ್ ಅವರನ್ನು ಭೇಟಿ ಮಾಡಿ, ಕೊನೆಗೆ RTPCR ಪರೀಕ್ಷೆಗೂ ಒಳಗಾಗಿದ್ದೆ. ಅದರಲ್ಲಿಯೂ ನೆಗಟಿವ್ ಎಂದಿದೆ. ಹೀಗಾಗಿ ಯಾರಿಗೂ ತೊಂದರೆಯಾಗಬಾರದೆಂದು ಎರಡು ದಿನ ಮನೆಯಲ್ಲಿಯೇ ಇದ್ದೆ. ನಿಮಗೆ ಕೊರೊನಾ ಬಂದೇ ಇಲ್ಲ ಅಂತ ವೈರಲಾಜಿಸ್ಟ್ ಹೇಳಿದ ಬಳಿಕ ನಾನು ಸದನಕ್ಕೆ ಹಾಜರಾಗಿದ್ದೇನೆ ಎಂದು ತಮ್ಮ ಕೊರೊನಾ ಬಗ್ಗೆ ಪ್ರಿಯಾಂಕ ಖರ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
Recommended Video
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಕಾಗೇರಿ ಅವರೂ ಸ್ಪಷ್ಟನೆ ಕೊಟ್ಟಿರು. ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಅವರ ಕೊರೊನಾ ಪರೀಕ್ಷಾ ವರದಿಯ ನೆಗೆಟಿವ್ ರಿಪೋರ್ಟ್ ನನ್ನ ಬಳಿ ಇದೆ. ಆತಂಕಬೇಡ ಎಂದು ಎಂದು ಮಾಧುಸ್ವಾಮಿ ಅವರಿಗೆ ಕಾಗೇರಿ ಸ್ಪಷ್ಟನೆ ಕೊಟ್ಟರು.