ಈ ಸಲ ವಿಧಾನಮಂಡಲ ಅಧಿವೇಶನ ಎಲ್ಲಿ ನಡೆಯಲಿದೆ?
ಬೆಂಗಳೂರು, ಆ. 18: ಬರುವ ಸೆಪ್ಟಂಬರ್ ಅಂತ್ಯದೊಳಗೆ ಪೂರ್ಣ ಪ್ರಮಾಣದ ಬಜೆಟ್ಗೆ ಅನುಮೋದನೆ ಪಡೆದುಕೊಳ್ಳುವ ಅನಿವಾರ್ಯತೆ ರಾಜ್ಯ ಸರ್ಕಾರಕ್ಕಿದೆ. ಹೀಗಾಗಿ ಸೆಪ್ಟಂಬರ್ ಮುಗಿಯುವುದರೊಳಗೆ ವಿಧಾನಮಂಡಲ ಅಧಿವೇಶನ ನಡೆಸಬೇಕು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಅಧಿವೇಶನವನ್ನು ಎಲ್ಲಿ ನಡೆಸಬೇಕು ಎಂಬುದು ತೀರ್ಮಾನವಾಗಿರಲಿಲ್ಲ.
Recommended Video
ಇದೀಗ ವಿಧಾನ ಮಂಡಲ ಅಧಿವೇಶನವನ್ನು ಎಲ್ಲಿ ನಡೆಸಬೇಕು ಎಂಬುದಕ್ಕೆ ತೆರೆ ಬಿದ್ದಿದೆ. ಕೊರೊನಾ ವೈರಸ್ ಸಂಕಷ್ಟದ ಹಿನ್ನೆಲೆಯಲ್ಲಿ ಎಲ್ಲಿ ಅಧಿವೇಶನ ನಡೆಸಬೇಕು ಎಂಬ ಚರ್ಚೆ ನಡೆದಿತ್ತು. ಆದರೆ ಅದೆಲ್ಲದಕ್ಕೂ ಉತ್ತರದ ರೂಪದಲ್ಲಿ ಇದೀಗ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಈ ಬಾರಿ ವಿಧಾನಸಭೆ ಅಧಿವೇಶನ ವಿಧಾನಸೌಧದಿಂದ ಹೊರಗೆ?
ಬೆಂಗಳೂರಿನ ಜಿಕೆವಿಕೆ ಮೈದಾನ, ಅರಮನೆ ಮೈದಾನದಲ್ಲಿ ಅಧಿವೇಶನ ನಡೆಸಲು ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ವಿಧಾನಸೌಧದ ವಿಧಾನಸಭಾ ಸಭಾಂಗಣದಲ್ಲಿ ಕಲಾಪ ನಡೆಸುವ ಬಗ್ಗೆ ಸ್ವತಃ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪರಿಶೀಲನೆ ನಡೆಸಿದ್ದರು. ಜೊತೆಗೆ ಸದಸ್ಯರ ಮಧ್ಯೆ ಹೇಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬಹುದು ಎಂಬುದರ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಇದೀಗ ಅಧಿವೇಶನ ಎಲ್ಲಿ ನಡೆಸಬೇಕು ಎಂಬುದನ್ನು ಸ್ಪೀಕರ್ ಕಾಗೇರಿ ಅವರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಜಿಕೆವಿಕೆ ಆವರಣ ಮತ್ತು ಅರಮನೆ ಮೈದಾನದಲ್ಲಿ ಅಧಿವೇಶನ ನಡೆಸಲು ಸ್ಪೀಕರ್ ಕಚೇರಿ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದರು.
ಮಳೆಗಾಲದ ಅಧಿವೇಶನ
ವಿಧಾನ ಮಂಡಲ ಮಳೆಗಾಲದ ಅಧಿವೇಶನವನ್ನು ವಿಧಾನಸೌಧದಲ್ಲೇ ನಡೆಸಲು ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಬಂದಿದೆ. ಬರುವ ಸೆ.14 ಇಲ್ಲವೆ 21ಕ್ಕೆ ಅಧಿವೇಶನ ಆರಂಭವಾಗುವ ಸಾಧ್ಯತೆಯಿದೆ. ಒಟ್ಟು 10 ದಿನ ಅಧಿವೇಶನ ನಡೆಸಲು ಚಿಂತನೆ ನಡೆಸಲಾಗಿದ್ದು, ಅಧಿವೇಶನ ನಡೆಸುವ ಕುರಿತು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಪತ್ರ ಬರೆದು ವಿವರಣೆ ನೀಡಿದ್ದಾರೆ.
ಸದಸ್ಯರ ಆಸನಗಳ ಮಧ್ಯದಲ್ಲಿ ಪ್ಲಾಸ್ಟಿಕ್ ಮೆಶ್ ಹಾಕುವ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ತೀರ್ಮಾನ ಮಾಡಲಾಗಿದೆ. ವಿಧಾನಸೌಧ ಹೊರತು ಪಡಿಸಿ ಬೇರೆಡೆ ಅಧಿವೇಶನ ನಡೆಸಿದರೆ ಆಗುವ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಬಳಿಕ ವಿಧಾನಸೌಧಲ್ಲಿಯೇ ಅಧಿವೇಶನ ನಡೆಸಲು ಸ್ಪೀಕರ್ ತೀರ್ಮಾನ ಮಾಡಿದ್ದಾರೆ.
ಇವರಿಗೆ ಪ್ರವೇಶ ನಿಷೇಧ
ಸಚಿವರು ಹಾಗೂ ಶಾಸಕರ ಆಪ್ತ ಸಹಾಯಕರು, ಗನ್ಮ್ಯಾನ್ ಮತ್ತು ಹಿಂಬಾಲಕರಿಗೆ ಅಧಿವೇಶನ ನಡೆಯುವ ಮೊದಲ ಮಹಡಿಗೆ ಪ್ರವೇಶ ನಿಷೇಧ ಮಾಡುವ ಕುರಿತು ಚಿಂತನೆ ನಡೆದಿದೆ. ಕೇವಲ ಅಧಿಕಾರಿಗಳು ಮತ್ತು ಪತ್ರಕರ್ತರಿಗೆ ಮಾತ್ರ ಪ್ರವೇಶ ನೀಡಲು ತೀರ್ಮಾನ ಮಾಡಲಾಗಿದೆ.
ವಿಧಾನಸಭೆ ಹಾಗೂ ವಿಧಾನ ಪರಿಷತ್ ಸಭಾಂಗಣಗಳಿರುವ ವಿಧಾನಸೌಧದ ಮೊದಲ ಮಹಡಿಯಲ್ಲಿ ಸೋಂಕು ಹರಡದಂತೆ ತಡೆಯಲು ಸಂಪೂರ್ಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಹಿರಿಯ ಸದಸ್ಯರ ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಹಿರಿಯ ಶಾಸಕರು
ಹಿರಿಯ ಸದಸ್ಯರಿಗೆ ಹೆಚ್ಚಿನ ನಿಗಾ ವಹಿಸಲು ತೀರ್ಮಾನ ಮಾಡಲಾಗಿದೆ. ಹೀಗಾಗಿ 60 ವರ್ಷಕ್ಕೂ ಹೆಚ್ಚಿನ ವಯಸ್ಸಿನ ಶಾಸಕ ಪಟ್ಟಿ ತಯಾರಿಸಲಾಗಿದೆ. ಒಟ್ಟು 90 ಶಾಸಕರು 60 ವರ್ಷಕ್ಕಿಂತ ಹೆಚ್ಚಿನ ವಯೋಮಿತಿಯವರಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೇರಿದಂತೆ 19 ಶಾಸಕರು 70 ವರ್ಷ ಮೀರಿದವರಾಗಿದ್ದಾರೆ. ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ (89), ಹಾನಗಲ್ ಶಾಸಕ ಸಿ.ಎಂ. ಉದಾಸಿ (83) ಹಾಗೂ ಸಿಂಧಗಿ ಶಾಸಕ ಎಂ.ಸಿ. ಮನಗೂಳಿ (84) ಅವರು ಅತ್ಯಂತ ಹಿರಿಯ ಶಾಸಕರಾಗಿದ್ದಾರೆ. ಇವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ತೀರ್ಮಾನ ಮಾಡಲಾಗಿದೆ.
ಪ್ರೇಕ್ಷಕರ ಗ್ಯಾಲರಿ ನಿಷೇಧ
ವಿಧಾನಸೌಧಕ್ಕೆ ಆಗಮಿಸುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಜೊತೆಗೆ ಹೆಡ್ ಶೀಲ್ಡ್ ಮತ್ತು ಕೈಗವಸು ಧರಿಸುವಂತೆ ಶಾಸಕರಿಗೆ ಸೂಚನೆ ನೀಡಲು ನಿರ್ಧಾರ ಮಾಡಲಾಗಿದೆ. ಈ ಬಾರಿ ಪ್ರೇಕ್ಷಕರ ಗ್ಯಾಲರಿಗೆ ಸಾರ್ವಜನಿಕರ ಪ್ರವೇಶ ಸಂಪೂರ್ಣ ನಿಷೇಧ ಹೇರಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕಲಾಪ ನಡೆಸಲು ತೀರ್ಮಾನ ಮಾಡಲಾಗಿದೆ.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಇದೇ ಗುರುವಾರ (ಆ.20) ದಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನದ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.