ಅಧಿವೇಶನದ ಕುರಿತು ಮಾಹಿತಿ ನೀಡಿದ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ!
ಬೆಂಗಳೂರು, ಸೆ. 28: ವಿಧಾನಸಭೆ ಕಲಾ ಇನ್ನಷ್ಟು ಉತ್ತಮವಾಗಿ ನಡೆಯಲು ಅನುಕೂಲವಾಗುವಂತೆ ನಿಯಮಾವಳಿ ಸಮಿತಿ ರಚನೆ ಮಾಡಲಾಗುವುದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ. ಮಳೆಗಾಲದ ವಿಧಾನ ಮಂಡಲ ಅಧಿವೇಶನದ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
15ನೇ ವಿಧಾನಸಭೆಯ 7ನೇ ಅಧಿವೇಶನ ಶನಿವಾರ ಮುಕ್ತಾಯವಾಗಿದೆ. ಒಟ್ಟು ಕಲಾಪ 6 ದಿನಗಳಲ್ಲಿ 48 ಗಂಟೆಗಳ ಕಲಾಪ ನಡೆಸಲಾಗಿದೆ. ವಿಧಾನಸಭೆಯಲ್ಲಿ ಒಟ್ಟು 36 ವಿಧೇಯಕಗಳನ್ನು ಅಂಗೀಕಾರ ಮಾಡಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಹೇಳಿದರು. ಸದಸ್ಯರಿಂದ ಒಟ್ಟು 3,071 ಪ್ರಶ್ನೆಗಳನ್ನು ಸ್ವೀಕರಿಸಲಾಗಿತ್ತು. ಅವುಗಳ ಪೈಕಿ 1,109 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಮಂಡನೆ ಮಾಡಲಾಗಿದೆ.
ಮಳೆಗಾಲದ ಅಧಿವೇಶನ ಒಟ್ಟು ಎಂಟು ದಿನಗಳ ಕಾಲ ನಡೆಯಬೇಕಿತ್ತು. ಆದರೆ ಕೊರೊನಾ ಸಂಕಷ್ಟದ ಹಿನ್ನಲೆಯಲ್ಲಿ ಆರು ದಿನ ಮಾತ್ರ ಕಲಾಪ ನಡೆಸಲು ಸಲಹಾ ಸಮಿತಿಯಲ್ಲಿ ತೀರ್ಮಾನ ಮಾಡಲಾಗಿತ್ತು. ಅದರಂತೆ ನಡೆದುಕೊಳ್ಳಲಾಗಿದೆ. ಕಲಾಪದ ಭಾಗವನ್ನು ಶೇಕಡಾ 90 ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ಇದು ದಾಖಲೆಯಾಗಿದೆ. ಒಟ್ಟು ಮಂಡಿಸಲಾಗಿದ್ದ 37 ವಿಧೇಯಕಗಳ ಪೈಕಿ 36 ವಿಧೇಯಕಗಳು ಅಂಗೀಕಾರವಾಗಿವೆ. ವಿಧೇಯಕಗಳ ಮೇಲೆ ಚರ್ಚೆ ಮಾಡಿಯೇ ಅಂಗೀಕಾರವಾಗಿವೆ.
ಜೊತೆಗೆ ವಿರೋಧ ಪಕ್ಷದ ನಾಯಕರು ಮಂಡಿಸಿದ್ದ ಅವಿಶ್ವಾಸ ನಿರ್ಣಯ ಪ್ರಸ್ತಾಪ ಧ್ವನಿಮತದಿಂದ ತಿರಸ್ಕಾರವಾಗಿದೆ. ಕೈಗಾರಿಕಾ ವಿವಾದಗಳು ಮತ್ತು ಕೆಲವು ಕಾನೂನುಗಳ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್ತಿನಲ್ಲಿ ತಿರಸ್ಕೃತಗೊಂಡಿವೆ ಎಂದು ಅಧಿವೇಶನದ ಕುರಿತು ಸ್ಪೀಕರ್ ಮಾಹಿತಿ ನೀಡಿದ್ದಾರೆ.
Recommended Video
ನಿಯಮಾವಳಿ ಸಮಿತಿ ರಚನೆ: ವಿಧಾನಸಭೆ ಕಲಾಪವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸುಗಮವಾಗಿ ನಡಸಲು ನಿಯಮಾವಳಿ ಸಮಿತಿ ರಚನೆ ಮಾಡಲಾಗುವುದು ಎಂದು ಸ್ಪೀಕರ್ ತಿಳಿಸಿದ್ದಾರೆ. ಸದನ, ಕಾರ್ಯಕಲಾಪಗಳಲ್ಲಿ ಇನ್ನೂ ಸುಧಾರಣೆ ತರುವ ನಿಟ್ಟಿನಲ್ಲಿ ಈ ಸಮಿತಿ ರಚನೆ ಮಾಡಲಾಗುವುದು. ಜೊತೆಗೆ ರಾಜ್ಯದ ಜನತೆಯೂ ಸಲಹೆಗಳನ್ನು ನೀಡಬಹುದಾಗಿದೆ ಎಂದಿದ್ದಾರೆ.