ಸ್ಪೀಕರ್ ತೀರ್ಪನಲ್ಲಿಯೂ 'ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರ' ಎಂಬುದಿಲ್ಲ!
ಬೆಂಗಳೂರು, ಮಾ. 03: ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ಅವರ ಕುರಿತು ವಿಧಾನಸಭೆಯಲ್ಲಿ ಕಳೆದ ಎರಡು ದಿನಗಳಿಂದ ಕೋಲಾಹಲವೆ ಎದ್ದಿದೆ. ಆಡಳಿತ ಪಕ್ಷದ ಸದಸ್ಯ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ಅವರು ಕ್ಷಮೇ ಕೇಳಲೇಬೇಕೆಂದು ವಿಪಕ್ಷಗಳು ಪಟ್ಟು ಹಿಡಿದು ಧರಣಿ ನಡೆಸುತ್ತಿವೆ. ಬಿಜೆಪಿಯ ಹಲವು ಸಚಿವರು, ಶಾಸಕರು ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂಬ ಅರ್ಥ ಬರುವಂತೆ ಮಾತನಾಡಿದ್ದಾರೆ. ವಿರ್ಯಾಸವೆಂದರೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ತೀರ್ಪು ಕೊಟ್ಟಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ತೀರ್ಪಿನಲ್ಲಿ ಎಲ್ಲಿಯೂ ಕೂಡ ಎಚ್.ಎಸ್. ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರ ಎಂದು ಉಲ್ಲೇಖಿಸಿಲ್ಲ.
ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಇಡೀ ಬೆಳವಣಿಗೆಯ ಹಿಂದೆ ಆರ್ಎಸ್ಎಸ್ ಇದೇ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಶಾಸಕ ಬಸನಗೌಡ ಫಾಟೀಲ್ ಯತ್ನಾಳ್ ಹೇಳಿಕೆ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು 'ಭಾರತದ ಸ್ವಾತಂತ್ರ್ಯ ಹೋರಾಟಗಾರ' ಎಂದು ಉಲ್ಲೇಖಿಸದೆ ತೀರ್ಪು ಕೊಟ್ಟಿರುವುದನ್ನು ಸಿದ್ದರಾಮಯ್ಯ ಅವರು ಉಲ್ಲೇಖಿಸಿದ್ದಾರೆ. ಸಂವಿಧಾನದ ಮೇಲೆ ಬಿಜೆಪಿಯವರಿಗೆ ಗೌರವ, ನಿಷ್ಠೆಯಿಲ್ಲ ಎಂದಿದ್ದಾರೆ.
ಶಾಸಕ ಯತ್ನಾಳ್ ಹೇಳಿಕೆ ಹಿಂದೆ ಆರ್ಎಸ್ಎಸ್ ಇದೆ
ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಅವರ ಮೇಲೆ ಮಾಡಿರುವ ಅವಹೇಳನಕಾರಿ ಆರೋಪ, ನಂತರ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಕೊಡದೇ ಇರುವುದು ಎಲ್ಲದರ ಹಿಂದೆ ಆರ್ಎಸ್ಎಸ್ ಇದೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿರುವ ಅವರು, ಬಿಜೆಪಿಯವರು ನಮ್ಮ ಸಂವಿಧಾನವನ್ನು ಒಪ್ಪುವುದಿಲ್ಲ. ಸಂವಿಧಾನದ ಮೇಲೆ ನಿಷ್ಠೆ, ಗೌರವ ಅವರಿಗೆ ಇಲ್ಲ. ಸರ್ಕಾರದ ಒತ್ತಡಕ್ಕೆ ಸ್ಪೀಕರ್ ಕಾಗೇರಿ ಅವರು ಮಣಿದಿದ್ದಾರೆ. ಹೀಗಾಗಿ ಚರ್ಚೆಗೆ ಆವಕಾಶ ಕೊಡದೇ ತೀರ್ಪು ಕೊಟ್ಟಿದಾರೆಂದು ಆರೋಪ ಮಾಡಿದ್ದಾರೆ.
ನಾವು ಚರ್ಚೆಗೆ ಅವಕಾಶ ಕೊಡುವಂತೆ ಸಲ್ಲಿಸಿದ್ದ ನೋಟಿಸ್ ಬಗ್ಗೆ ಕಾನೂನು ಬಾಹೀರವಾಗಿ ಸ್ಪೀಕರ್ ಕಾಗೇರಿ ಅವರು ತೀರ್ಪು ಕೊಟ್ಟಿದ್ದಾರೆಂದು ಸಿದ್ದರಾಮಯ್ಯ ಅವರು ಸದನದಲ್ಲಿ ಆರೋಪಿಸಿದ್ದಾರೆ.
ಸ್ಪೀಕರ್ ತೀರ್ಪಿನಲ್ಲಿ ಎಚ್.ಎಸ್. ದೊರೆಸ್ವಾಮಿ ಎಂದು ಉಲ್ಲೇಖ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊಟ್ಟಿದ್ದ ನೋಟಿಸ್, ಅದರ ಮೇಲೆ ನಡೆದ ಚರ್ಚೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿರ್ಫು ಕೊಟ್ಟಿದ್ದಾರೆ. ಆದರೆ ತೀರ್ಪಿನಲ್ಲಿ ಎಲ್ಲಿಯೂ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಎಂದು ಉಲ್ಲೇಖಿಸಿಲ್ಲ, ಬದಲಿಗೆ ಎಚ್.ಎಸ್. ದೊರೆಸ್ವಾಮಿ ಅವರು ಎಂದು ಉಲ್ಲೇಖಿಸಿದ್ದಾರೆ. ಪ್ರಮುಖವಾಗಿ ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರ ಎಂದು ಉಲ್ಲೇಖಿಸದೇ ಇರುವುದು ವಿರೋಧ ಪಕ್ಷಗಳ ಸದಸ್ಯರಲ್ಲಿ ಮತ್ತಷ್ಟು ಆಕ್ರೋಶವನ್ನುಂಟು ಮಾಡಿದೆ.
ಸ್ಫಿಕರ್ ಕೊಟ್ಟಿರುವ ತೀರ್ಪು ಹೀಗಿದೆ: ಶ್ರೀ ಸಿದ್ದರಾಮಯ್ಯ, ಮಾನ್ಯ ವಿರೋಧ ಪಕ್ಷದ ನಾಯಕರು ಇಂದು ನಿಯಮ 363ರಡಿ ಸೂಚನೆಯೊಂದನ್ನು ನೀಡಿ ವಿಧಾನಸಭೆ ಸದಸ್ಯರಾದ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ರವರು ಶ್ರೀ ಎಚ್ ಎಸ್ ದೊರೆಸ್ವಾಮಿಯವರ ವಿರುದ್ಧ ಮಾಡಿರುವ ಆರೋಪದ ಕುರಿತು ಪ್ರಸ್ತಾಪಿಸಿ ಆ ಕಾರಣಕ್ಕಾಗಿ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ರವರನ್ನು ಉಚ್ಛಾಟಿಸಬೇಕೆಂದು ಕೋರಿರುತ್ತಾರೆ. ಮಾನ್ಯ ವಿರೋಧ ಪಕ್ಷದ ನಾಯಕರು ನೀಡಿರುವ ಸೂಚನೆಯಲ್ಲಿ ವಿಧಾನಸಭೆ ಸದಸ್ಯರಾದ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ರವರ ಬಗ್ಗೆ ಹೇಳಬೇಕಾದೆಲ್ಲವನ್ನು ಹೇಳಿ ಅವರಿಗೆ ಯಾವ ರೀತಿಯ ಶಿಕ್ಷೆಯನ್ನು ವಿಧಿಸಬೇಕು ಎಂಬುದನ್ನು ಸಹ ತಿಳಿಸಿದ್ದಾರೆ. ಆದರೆ, ಸದಸ್ಯರಿಗೆ ಶಿಕ್ಷೆಯನ್ನು ವಿಧಿಸುವ ಅಧಿಕಾರ ಮಾನ್ಯ ಸಭಾಧ್ಯಕ್ಷರು ಮತ್ತು ಸದನಕ್ಕೆ ಸೇರಿರುತ್ತದೆ. ಸೂಚನೆಯಲ್ಲಿ ಪ್ರಸ್ತಾಪಿಸಿರುವ ಘಟನೆಯು ಸದನದ ಹೊರಗಡೆ ನಡೆದಿರುವ ಘಟನೆಯಾಗಿರುತ್ತದೆ. ಅಲ್ಲದೆ ಭಾರತ ಸಂವಿಧಾನದ ಅನುಚ್ಛೇದ 51 ಎ ಅಡಿಯಲ್ಲಿ ವಿವರಿಸಿರುವ ಮೂಲಭೂತ ಕರ್ತವ್ಯಗಳ ಉಲ್ಲಂಘನೆಯನ್ನು ಮಾನ್ಯ ಸದಸ್ಯರು ಮಾಡಿಲ್ಲದಿರುವುದು ಕಂಡು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಮಾನ್ಯ ವಿರೋಧ ಪಕ್ಷದ ನಾಯಕರು ನೀಡಿರುವ ಸೂಚನೆಯನ್ನು ಪರಿಗಣಿಸಲು ಬರುವುದಿಲ್ಲ. ಆದರಿಂದ ಈ ಸೂಚನೆಯನ್ನು ತಿರಸ್ಕರಿಸಲಾಗಿದೆ.
ಹೀಗೆ ತೀರ್ಪಿನಲ್ಲಿಯೂ ಕೂಡ ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರ ಎಂಬುದನ್ನು ಬಿಜೆಪಿ ಸರ್ಕಾರ ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂಬುದು ಕಂಡು ಬಂದಿದೆ.
ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾಹಿತಿ ಕೊಟ್ಟ ಕಾಂಗ್ರೆಸ್
ಎಚ್.ಎಸ್. ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರ ಎಂಬುದಕ್ಕೆ ಸ್ವತಃ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಹಿತಿ ಕೊಡುವಂತಹ ಸ್ಥಿತಿಯನ್ನು ಬಿಜೆಪಿ ಸದಸ್ಯರು ತಂದಿಟ್ಟಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು, ಕ್ವಿಟ್ ಇಂಡಿಯ ಚಳುವಳಿಯಲ್ಲಿ ಹೋರಾಟ ಮಾಡಿದ್ದಾರೆ. ಅವರು ಜೈಲಿಗೆ ಹೋಗಿ ಬಿಡುಗಡೆ ಹೊಂದಿರುವ ಬಗ್ಗೆಯೂ ದಾಖಲೆಗಳಿವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಹಿತಿ ಕೊಟ್ಟಿದ್ದಾರೆ. 18/12/1942 ರಲ್ಲಿ ದೊರೆಸ್ವಾಮಿ ಅವರು ಒಂದು ವರ್ಷ ಜೈಲಿಗೆ ಹೋಗಿದ್ದರು. ನಂತರ 08/12/1942ರಂದು ಜೈಲಿನಿಂದ ಬಿಡುಗಡೆ ಆಗಿದ್ದರು. ಅವರಿಗೆ ಕೈದಿ ನಂಬರ್ 7743 ಕೊಡಲಾಗಿತ್ತು. ಮೈಸೂರಿನ ಸೆಂಟ್ರಲ್ ಜೈಲಿನಲ್ಲಿದ್ದ ಅವರಿಗೆ ಆಗ 25 ವರ್ಷ ವಯಸ್ಸಾಗಿತ್ತು. ಅವರ ಬಗ್ಗೆಯೆ ಬಿಜೆಪಿಯವರು ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಅಂತಹ ಬಿಜೆಪಿಯವರೊಂದಿಗೆ ನಾವು ಸದನದಲ್ಲಿ ಭಾಗವಹಿಸುವುದಾದರೂ ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಕೆಸರೆರಚಾಟ!
ಒಂದು ಕಡೆ ಬಿಜೆಪಿ ನಾಯಕರು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಮುಂದುವರೆಸಿದ್ದರೆ, ಮತ್ತೊಂದೆಡೆ ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ಇದು ರಾಜಕೀಯ ಕೆಸರೆರಚಾಟವಲ್ಲದೆ ಬೇರೇನೂ ಅಲ್ಲ ಎಂದು ರಾಜ್ಯದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಈಗಲೂ ಆ್ಯಕ್ಟಿವ್ ಆಗಿ ಸಂವಿಧಾನ ವಿರೋಧಿ ನಡೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ. ಅದು ಕೆಲವು ನಾಯಕರಿಗೆ ಸಹ್ಯವಾಗುತ್ತಿಲ್ಲ. ಹೀಗಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರನ್ನೇ ಅವಹೇಳನ ಮಾಡುವವರು, ಸ್ವಾತಂತ್ರ್ಯಾ ನಂತರದ ಸಂವಿಧಾನವನ್ನು ಒಪ್ಪುತ್ತಾರಾ? ಎಂದು ಹಲವು ಜನರು ಪ್ರಶ್ನೆ ಮಾಡಿದ್ದಾರೆ. ಒಟ್ಟಾರೆ ಕಳೆದ ಫೆಬ್ರವರಿ ತಿಂಗಳಿನಿಂದ ಸ್ವಾತಂತ್ರ್ಯಕ್ಕಾಗಿ ತಮ್ಮದೆಲ್ಲವನ್ನೂ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನವಾಗುವ ರೀತಿಯಲ್ಲಿ ಬೆಳವಣಿಗೆಗಳು ಆಗುತ್ತಿರುವುದು ಸ್ವತಂತ್ರ ಭಾರತದ ದುರಂತವಲ್ಲದೇ ಮತ್ತೇನೂ?