ಇಲ್ಲಪ್ಪಾ ಮಣಿಪಾಲ್ ಆಸ್ಪತ್ರೆಯಲ್ಲಿ ಯಡಿಯೂರಪ್ಪ ಜೊತೆ ಮಾತಾಡಿಲ್ಲ!
ಬೆಂಗಳೂರು, ಸೆ. 26: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಇವತ್ತು ವಿಧಾನಸಭೆಯಲ್ಲಿ ಚರ್ಚೆಗೆ ಬರಲಿದೆ. ರಾಜ್ಯ ಸರ್ಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ. ಜೊತೆಗೆ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದಾರೆ.
ಕಾಂಗ್ರೆಸ್ ಅವಿಶ್ವಾಸ ನಿರ್ಣಯದ ಹಿನ್ನೆಲೆಯಲ್ಲಿ ನಿನ್ನೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲ ಶಾಸಕರೂ ಕಡ್ಡಾಯವಾಗಿ ಕಲಾಪಕ್ಕೆ ಹಾಜರಾಗಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚಿಸಿದ್ದಾರೆ. ಆದರೆ ಇವತ್ತು ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಡಿರುವ ಘೋಷಣೆಯಿಂದ ಸರ್ಕಾರಕ್ಕೆ ಇದೀಗ ಆತಂಕ ಶುರುವಾಗಿದೆ. ವಿಧಾನಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮೇಲೆ ಚರ್ಚೆ ನಡೆಯಲಿದ್ದು, ಬಳಿಕ ಪ್ರಸ್ತಾವನೆಯನ್ನು ಮತಕ್ಕೆ ಹಾಕಬೇಕು. ಹಾಗೆ ಮತಕ್ಕೆ ಹಾಕಿದಾಗ ಸದನದಲ್ಲಿ ಇರುವ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಸರ್ಕಾರದ ಭವಿಷ್ಯ ನಿರ್ಧಾರವಾಗುತ್ತದೆ. ವಿರೋಧ ಪಕ್ಷದ ಸದಸ್ಯರಿಗಿಂತ ಆಡಳಿತ ಪಕ್ಷದ ಸದಸ್ಯರ ಸಂಖ್ಯೆ ಕಡಿಮೆಯಿದ್ದಲ್ಲಿ ಸರ್ಕಾರ ಪತನವಾಗುತ್ತದೆ.
ಈ ಮಧ್ಯೆ ಕೊರೊನಾ ವೈರಸ್ ಸೋಂಕಿತ ಶಾಸಕರು ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕುವಾಗ ಕಲಾಪದಲ್ಲಿ ಹಾಜರಾಗುವಂತಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಣೆ ಮಾಡಿದ್ದಾರೆ. ಇದು ಸರ್ಕಾರದ ಆತಂಕಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿನ ರಾಜಕೀಯ ಕೂಡ ಚರ್ಚೆಗೆ ಬಂದಿದೆ.
ಪಿಪಿಇ ಕಿಟ್ ಹಾಕಿಕೊಂಡರೂ ಪ್ರವೇಶವಿಲ್ಲ
ವಿಧಾನಸಭೆ ಕಲಾಪ ಆರಂಭದಲ್ಲಿಯೇ ಅವಿಶ್ವಾಸ ಗೊತ್ತುವಳಿ ಚರ್ಚೆ ವೇಳೆ ಕೋವಿಡ್ ಪಾಸಿಟಿವ್ ಆದವರಿಗೆ ಪ್ರವೇಶವಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಣೆ ಮಾಡಿದರು. ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆದ ಬಳಿಕ ವಿಶ್ವಾಸಮತ ಯಾಚನೆ ಮತಕ್ಕೆ ಹಾಕುವಾಗ ಪಾಸಿಟಿವ್ ಇರೋರಿಗೆ ಪ್ರವೇಶ ನೀಡುವುದಿಲ್ಲ ಎಂದು ಕಾಗೇರಿ ಪ್ರಕಟಿಸಿದ್ದಾರೆ.
ಕೊರೊನಾ ವೈರಸ್ ಪಾಸಿಟಿವ್ ಇರುವ ಶಾಸಕರು ಪಿಪಿಇ ಕಿಟ್ ಹಾಕಿಕೊಂಡು ಬರಲು ಸಹ ಅವಕಾಶ ಕೊಡಲ್ಲ ಎಂಬ ಸಂದೇಶವನ್ನು ಸ್ಪೀಕರ್ ಕಾಗೇರಿ ಅವರು ನೀಡಿದ್ದಾರೆ. ಆಡಳಿತ ಮತ್ತು ವಿರೋಧ ಪಕ್ಷದವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಮತ ಹಾಕುವಾಗ ಪಿಪಿಇ ಕಿಟ್ ಹಾಕಿಕೊಂಡು ಬರಲು ಅವಕಾಶ ಕೊಡೋದಿಲ್ಲ ಎಂದು ಸೂಚಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಸಹಮತ!
ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರ ಮಾತಿಗೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಅರ್ಥ ಮಾಡಿಕೊಳ್ಳೋಣ, ವಿಶ್ವಾಸಮತ ಯಾಚನೆಯನ್ನು ಮತಕ್ಕೆ ಹಾಕುವ ಪದ್ದತಿ ಅನುಸರಿಸುವುದು ಬೇಡ. ಧ್ವನಿಮತದ ಮೂಲಕ ವಿಶ್ವಾಸಮತ ಯಾಚಿಸಲಿ ಎಂದು ಸಿದ್ದರಾಮಯ್ಯ ಅವರು ಮನವಿ ಮಾಡಿದರು.
ಪಿಪಿಇ ಕಿಟ್ ಹಾಕಿಕೊಂಡು ಸದನಕ್ಕೆ ಬರುವುದು ಕಾನೂನು ಬಾಹಿರ. ಮನುಷ್ಯತ್ವ ಹಾಗೂ ಜೀವನ ಬಹಳ ಮುಖ್ಯವಾಗುತ್ತದೆ. ದ್ವನಿಮತದ ಮೂಲಕ ವಿಶ್ವಾಸಮತಯಾಚನೆ ಪ್ರಕ್ರಿಯೆ ಮುಗಿಸೋಣ ಎಂದು ಸಿದ್ಧರಾಮಯ್ಯ ಹೇಳಿದರು.
ಡಿ.ಜೆ. ಹಳ್ಳಿ ಗಲಭೆ ಪ್ರಸ್ತಾಪ
ಡಿ.ಜೆ.ಹಳ್ಳಿ ಗಲಭೆ ಕುರಿತು ಅವಿಶ್ವಾಸ ನಿರ್ಣಯದ ಚರ್ಚೆಯ ವೇಳೆ ಮಾತನಾಡುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಅವಿಶ್ವಾಸ ನಿರ್ಣಯವನ್ನು ನಾವು ಮಂಡನೆ ಮಾಡಿರುವುದರಿಂದ ನಮಗೆ ಮಾತನಾಡಲು ಹೆಚ್ಚು ವೇಳೆಯನ್ನು ಕೊಡಬೇಕು ಎಂದು ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.
ಅವಿಶ್ವಾಸ ನಿರ್ಣಯದ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಹೇಳಿಕೆ ನೀಡಿರೋದನ್ನು ಗಮನಿಸಿದ್ದೇನೆ. ನನಗೆ ಶಕ್ತಿ ಕೊಡಲು ಅವಿಶ್ವಾಸ ನಿರ್ಣಯವನ್ನು ಕಾಂಗ್ರೆಸ್ ತಂದಿದೆ ಎಂದಿದ್ದಾರೆ. ಸಿಎಂ ಯಡಿಯೂರಪ್ಪ ಅವರೇ ನಿಮ್ಮ ಮೇಲೆ ನಿಮ್ಮ ಶಾಸಕರಿಗೂ ವಿಶ್ವಾಸ ಬರಲಿ ಎಂದು ನಿರ್ಣಯ ಮಂಡನೆ ಮಾಡಿದ್ದೇನೆ ಎಂದು ಸಿದ್ಧರಾಮಯ್ಯ ಹೇಳಿದರು.
Recommended Video
ಮಣಿಪಾಲ್ ಆಸ್ಪತ್ರೆಯಲ್ಲೇ?!
ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದಂತೆಯೆ, ಇದನ್ನು ಮಣಿಪಾಲ್ ಆಸ್ಪತ್ರೆಯಲ್ಲೇ ತಿರ್ಮಾನ ಮಾಡಿದ್ರಾ ಎಂದು ಉಳಿದ ಶಾಸಕರು ಛೇಡಿಸಿದ ಪ್ರಸಂಗ ನಡೆಯಿತು. ಅದಕ್ಕೆ ಉತ್ತರ ಕೊಟ್ಟ ಸಿದ್ದರಾಮಯ್ಯ ಅವರು, ಇಲ್ಲಪ್ಪಾ ಮಣಿಪಾಲ್ ಆಸ್ಪತ್ರೆಯಲ್ಲಿ ಯಡಿಯೂರಪ್ಪ ಜೊತೆಗೆ ಮಾತಾಡಿಲ್ಲ. ನಾನು ರಾಜಕೀಯವಾಗಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ವೈಯಕ್ತಿಕವಾಗಿ ಯಡಿಯೂರಪ್ಪ ಅವರ ಬಗ್ಗೆ ಗೌರವ ಇದೆ. ಅವರ ಹುಟ್ಟುಹಬ್ಬಕ್ಕೆ ಹೋಗಿ ಮಾತನಾಡಿ ಬಂದಿದ್ದೇನೆ. ಬೇರೆ ವಿರೋಧ ಪಕ್ಷದವರು ಬರಲಿಲ್ಲ, ನಾನು ಹೋಗಿದ್ದೇನೆ ಎಂದು ವಿಧಾನಸಭೆಯಲ್ಲಿ ಸಿದ್ಧರಾಮಯ್ಯ ಸ್ಪಷ್ಟನೆ ಕೊಟ್ಟರು.