ಶಂಕರ್ ನಂತರ ರಮೇಶ್, ಮಹೇಶ್ ಕೂಡಾ ಅನರ್ಹ : ಸ್ಪೀಕರ್
ಬೆಂಗಳೂರು, ಜುಲೈ 25: ಕಾಂಗ್ರೆಸ್ -ಜೆಡಿಎಸ್ ಶಾಸಕರ ರಾಜೀನಾಮೆ ಹಾಗೂ ಅನರ್ಹತೆ ಕುರಿತಂತೆ ಸುದ್ದಿಗೋಷ್ಠಿ ಕರೆದಿದ್ದ ಸ್ಪೀಕರ್ ಕೆ. ಆರ್ ರಮೇಶ್ ಕುಮಾರ್ ಅವರು ಮೂರು ಶಾಸಕರನ್ನು 15ನೇ ವಿಧಾನಸಭೆಯಿಂದ ಅನರ್ಹಗೊಳಿಸಿ, ಗುರುವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಕಲಾಪದಲ್ಲಿ ವಿವರಿಸಿದಂತೆ : "ಸಂವಿಧಾನದ 10ನೇ ಶೆಡ್ಯೂಲ್ ನ ಪ್ಯಾರಗ್ರಾಫ್ 2ಎ ಮತ್ತು 1ಎ, ಬಿ ಎಂಬ ಕ್ಲಾಸ್ಗಳಿವೆ. ಒಂದರಲ್ಲಿ ವಿಪ್, ರಾಜೀನಾಮೆ ಕೊಡಬೇಕಾಗಿಲ್ಲ. ಪಕ್ಷ ವಿರೋಧಿ ಚಟುವಟಿಕೆಗಳು ನಡೆದರೆ ಅನರ್ಹತೆಗೆ ಅವಕಾಶವಿದೆ. 2ಎ ಬಿನಲ್ಲಿ ಕೂಡ ಅನರ್ಹತೆಗೆ ಅವಕಾಶವಿದೆ".
ಇದರ ಪ್ರಕಾರ, ಪಕ್ಷೇತರ ಶಾಸಕರಾಗಿ ಕೆಪಿಜೆಪಿಯಿಂದ ಸ್ಪರ್ಧಿಸಿ ನಂತರ ಕಾಂಗ್ರೆಸ್ ಜತೆ ಪಕ್ಷ ವಿಲೀನಗೊಳಿಸಿದ ರಾಣೇಬೆನ್ನೂರು ಕ್ಷೇತ್ರದಿಂದ ಗೆದ್ದ ಆರ್ ಶಂಕರ್ ಅವರು ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ, ಹೀಗಾಗಿ, ಮೂವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ರಮೇಶ್ ಕುಮಾರ್ ಗೆ ದೂರು ಸಲ್ಲಿಸಿದ್ದರು.
BREAKING: 2023ರ ತನಕ ಶಾಸಕ ಸ್ಥಾನದಿಂದ ಆರ್ ಶಂಕರ್ ಅನರ್ಹ
ದೂರನ್ನು ಸ್ವೀಕರಿಸಿ, ವಿಚಾರಣೆಗೆ ಹಾಜರಾಗುವಂತೆ ಮೂವರು ಶಾಸಕರಿಗೆ ನೋಟಿಸ್ ಜಾರಿಗೊಳಿಸಿ ಸ್ಪೀಕರ್ ಅವರು ಸೂಚಿಸಿದ್ದರು. ಆದರೆ, ಮೂವರು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ, ಶಂಕರ್ ಅವರನ್ನು ತಮಿಳುನಾಡಿನ ಮಾದರಿಯಲ್ಲಿ, ರಮೇಶ್ ಹಾಗೂ ಮಹೇಶ್ ಅವರನ್ನು ಉಮೇಶ್ ಜಾಧವ್ ಅವರ ಪ್ರಕರಣವನ್ನು ಮುಂದಿಟ್ಟುಕೊಂಡು ಜನಪ್ರತಿನಿಧಿ ಕಾಯ್ದೆ 164 1ಬಿ ಸಂವಿಧಾನದ 10ನೇ ಶೆಡ್ಯೂಲ್ ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಮೂವರನ್ನು ಅನರ್ಹಗೊಳಿಸಲು ನಿರ್ಧರಿಸಲಾಗಿದೆ ಎಂದು ರಮೇಶ್ ಕುಮಾರ್ ಹೇಳಿದರು.