ಸೌಜನ್ಯ ಕೊಲೆ:ಸಿಬಿಐ ಆದೇಶದ ಮೇಲೂ ಹೋರಾಟ ತೀವ್ರ
ಬೆಳ್ತಂಗಡಿ/ಮಂಗಳೂರು, ನ 7: ರಾಜ್ಯ ಸರಕಾರ ಸೌಜನ್ಯ ಕೊಲೆ ಮತ್ತು ಅತ್ಯಾಚಾರದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಈ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಹಾಗಾಗಿ ನಮ್ಮ ಹೋರಾಟವನ್ನು ಮುಂದಿನ ದಿನದಲ್ಲಿ ತೀವ್ರ ಗೊಳಿಸಲಿದ್ದೇವೆ ಎಂದು ಕೇಮಾರು ಶ್ರೀಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಸುಪರ್ದಿಯಲ್ಲಿ ಸಿಬಿಐ ತನಿಖೆ ನಡೆಸ ಬೇಕೆನ್ನುವುದು ನಮ್ಮ ಹೋರಾಟ. ಈ ಪ್ರಕರಣವನ್ನು ಸಿಬಿಐ ಅಧಿಕಾರಿಗಳು ಭೇದಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿ ಸಾಗಲಿದೆ ಎಂದು ಕೇಮಾರು ಶ್ರೀಗಳು ಹೇಳಿದ್ದಾರೆ.
ಯಾರ ಒತ್ತಾಯಕ್ಕೂ ಮಣಿಯದೆ ಸಿಬಿಐ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಸೌಜನ್ಯಳನ್ನು ಕೊಂದವರಿಗೆ ಶಿಕ್ಷೆಯಾಗಬೇಕು. ಹೆತ್ತವರಿಗೆ ನ್ಯಾಯ ಸಿಗಬೇಕು. ಈ ಪ್ರಕರಣವನ್ನು ಸರಕಾರ ಮತ್ತು ಸಿಬಿಐ ಗಂಭೀರವಾಗಿ ಪರಿಗಣಿಸಿ, ಜನತೆಗೆ ಸಿಬಿಐ ಮೇಲಿನ ನಂಬಿಕೆ ಉಳಿಯುವಂತಾಗ ಬೇಕು ಎನ್ನುವುದು ನಮ್ಮ ನಿಲುವು ಎಂದು ಕೇಮಾರು ಶ್ರೀಗಳು ಹೇಳಿದ್ದಾರೆ.
ಸಿಐಡಿ ತನಿಖೆಯಲ್ಲಿ ನಂಬಿಕೆ ಬರುವುದಕ್ಕೆ ಸಾಧ್ಯವಿಲ್ಲ. ಸಿಬಿಐ ಅಧಿಕಾರಿಗಳು ಕೂಡಾ ಮನುಷ್ಯರೇ. ಸುಪ್ರೀಂಕೋರ್ಟ್ ಸುಪರ್ದಿಯಲ್ಲಿ, ರಾಜಕೀಯದ ಹಸ್ತಕ್ಷೇಪವಿಲ್ಲದ ಸಿಬಿಐ ತನಿಖೆ ಆಗಬೇಕೆನ್ನುವುದು ನಮ್ಮ ಉದ್ದೇಶ ಎಂದು ಕೇಮಾರು ಶ್ರೀಗಳು ಒನ್ ಇಂಡಿಯಾ ಜೊತೆ ಸಂದರ್ಶನದಲ್ಲಿ ಹೇಳಿದ್ದರು ( ಕೇಮಾರು ಶ್ರೀ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಸಂದರ್ಶನ)
ಸೌಜನ್ಯ ಪ್ರಕರಣ ಸಿಬಿಐಗೆ: ವೀರೇಂದ್ರ ಹೆಗ್ಗಡೆ ಏನಂತಾರೆ? ಮುಂದೆ ಓದಿ..
ಪ್ರತಿಭಟನಾ ಸಭೆ
ಶ್ರೀಈಶ ವಿಠಲದಾಸ ಸ್ವಾಮೀಜಿ ಮತ್ತು ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆಯ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಶನಿವಾರ (ನ 9) ಭಾರೀ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ. ಮಧ್ಯಾಹ್ನ 12ರಿಂದ ಸಂಜೆ ನಾಲ್ಕು ಗಂಟೆಯವರೆಗೆ ನಡೆಯುವ ಈ ಪ್ರತಿಭಟನಾ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಗಮಿಸ ಬೇಕೆಂದು ಕೇಮಾರು ಶ್ರೀಗಳು ಮತ್ತು ಮಹೇಶ್ ಶೆಟ್ಟಿ ವಿನಂತಿಸಿ ಕೊಂಡಿದ್ದಾರೆ.
ಸೌಜನ್ಯ ಪ್ರಕರಣ: ವೀರೇಂದ್ರ ಹೆಗ್ಗಡೆ
ಸೌಜನ್ಯ ಹತ್ಯಾ ಪ್ರಕರಣವನ್ನು ರಾಜ್ಯ ಸರಕಾರವು ಸಿಬಿಐ ತನಿಖೆಗೆ ಒಪ್ಪಿಸಿರುವುದನ್ನು ಸ್ವಾಗತಿಸುತ್ತೇನೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ. ಪ್ರಕರಣದ ಸತ್ಯಾಸತ್ಯತೆಗಳು ಹೊರಬರುವುದಲ್ಲದೆ, ಯುವತಿಯ ಕುಟುಂಬಕ್ಕೆ ನ್ಯಾಯ ಸಿಗುವಂತಾಗಲಿ. ನೇರವಾಗಿ, ನಮ್ಮ ಮೇಲೆ ಮತ್ತು ಕುಟುಂಬದವರ ಮೇಲೆಯೂ ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳು ಇನ್ನೂ ಸಹ ಸಭೆಗಳಲ್ಲಿ ಮುಂದುವರೆಯುತ್ತಿರುವುದು ವಿಷಾದನೀಯ. ಏನೇ ಇರಲಿ, ಸಿಬಿಐ ತನಿಖೆಯು ನ್ಯಾಯಯುತವಾಗಿ ನಡೆಯುತ್ತದೆ ಎನ್ನುವ ವಿಶ್ವಾಸವು ನಮಗಂತೂ ಇದೆ. ಈ ಸಂದರ್ಭದಲ್ಲಿ ಸಿಬಿಐ ವರದಿ ಹೊರಗೆ ಬರುವವರೆಗೂ ಸಹನೆ ವಹಿಸುವಂತೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವೃಥಾ ಆರೋಪ ಮಾಡುವುದನ್ನು ನಿಲ್ಲಿಸುವಂತೆ ಸರಕಾರವು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೆಗ್ಗಡೆ ಕೋರಿದ್ದಾರೆ.
ಸೌಜನ್ಯ ಪ್ರಕರಣ: ಕಲ್ಲಡ್ಕ ಪ್ರಭಾಕರ್ ಭಟ್
ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಪ್ರಕರಣ ಸಿಬಿಐ ತನಿಖೆಗೆ ವಹಿಸುವ ನಿರ್ಧಾರವನ್ನು ಸ್ವಾಗತಿಸುತ್ತೇನೆ. ತನಿಖೆಯ ವೇಳೆ ಪ್ರತಿಷ್ಠೆ, ರಾಜಕೀಯ, ಹಣ ಯಾವುದೇ ಅಡ್ಡಿಯಾಗದಿರಲಿ. ಈ ಘಟನೆ ಜಿಲ್ಲೆಯ ಹೆಸರಿಗೆ ಕಳಂಕ ತಂದಿದೆ. ಹೆಣ್ಣಿನ ನೋವು, ಕುಟುಂಬದ ವೇದನೆ ಅರ್ಥ ಮಾಡಿಕೊಳ್ಳಬೇಕು. ಅಪರಾಧಿಗಳಿಗೆ ದೊಡ್ಡ ಮಟ್ಟದ ಶಿಕ್ಷೆಯಾಗಿ ಪಾತಕಿಗಳಿಗೆ ಎಚ್ಚರಿಕೆಯ ಗಂಟೆಯಾಗಲಿ. ತನಿಖಾಧಿಕಾರಿಗಳಿಗೆ ಮಂಜುನಾಥನೇ ಪ್ರೇರಣೆಯಾಗಲಿ ಎಂದು RSS ದಕ್ಷಿಣ ಕ್ಷೇತ್ರೀಯ ಸಂಪರ್ಕ್ ಪ್ರಮುಖ್ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಉಡುಪಿ ಪೇಜಾವರ ಶ್ರೀ
ಸೌಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸಿರುವ ಕ್ರಮ ಸ್ವಾಗತಾರ್ಹ. ಪ್ರಕರಣದ ಸತ್ಯಾಸತ್ಯತೆ ಬಯಲಾಗಿ ಕುಟುಂಬಕ್ಕೆ ನ್ಯಾಗ ಸಿಗಲಿ. ಧರ್ಮಸ್ಥಳದ ಹೆಗ್ಗಡೆಯವರೂ ಸಿಬಿಐ ತನಿಖೆಯಾಗಲಿ ಎಂದು ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದರು ಎಂದು ಉಡುಪಿ ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದಾರೆ.
ವಸಂತ ಬಂಗೇರ
ಸಿಬಿಐ ತನಿಖೆಯಾಗ ಬೇಕೆಂದು ನಾನು ಒತ್ತಾಯಿಸಿ ಕೊಂಡು ಬಂದಿದ್ದೇನೆ. ಹೆಗ್ಗಡೆಯವರು ಸಿಬಿಐ ತನಿಖೆಯಾಗಲಿ ಎನ್ನುವ ಬಗ್ಗೆ ಸರಕಾರಕ್ಕೆ ಬರೆದಿದ್ದ ಪತ್ರವನ್ನು ನನ್ನ ಕಾರ್ಯದರ್ಶಿಯ ಮೂಲಕ ಸಿಎಂಗೆ ತಲುಪಿಸಿದ್ದೆ. ಸಿಬಿಐ ತನಿಖೆಯಿಂದ ಕುಟುಂಬಕ್ಕೆ ನ್ಯಾಯ ಸಿಗಲಿ ಮತ್ತು ಧರ್ಮಸ್ಥಳಕ್ಕೆ ಅಂಟಿಕೊಂಡಿರುವ ಕಳಂಕ ದೂರವಾಗಲಿ ಎಂದು ಬೆಳ್ತಂಗಡಿ ಶಾಸಕ ವಸಂತ ಬಂಗೇರ ಹೇಳಿದ್ದಾರೆ.
ಸಿಪಿಎಂ
ಸೌಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸುವ ನಿರ್ಧಾರವನ್ನು ಸಿಪಿಎಂ ಸ್ವಾಗತಿಸಿದೆ. ಧರ್ಮಸ್ಥಳದಲ್ಲಿ ನಡೆದ ಎಲ್ಲಾ ಅಸಹಜ ಸಾವು ಪ್ರಕರಣದ ಸಿಬಿಐ ತನಿಖೆಯಾಗಲಿ ಎಂದು ಸಿಪಿಎಂ ದಕ್ಷಿಣಕನ್ನಡ ಜಿಲ್ಲಾಸಮಿತಿ ಹೇಳಿದೆ.