ಕರ್ನಾಟಕದ ಕರಾವಳಿ ಭಾಗದಲ್ಲಿ ತಗ್ಗಿದ ವರುಣನ ಆರ್ಭಟ
ಬೆಂಗಳೂರು, ಆಗಸ್ಟ್ 12: ಕರ್ನಾಟಕದ ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಕೊಂಚ ಕಡಿಮೆಯಾಗಿದೆ. ದಿನದಲ್ಲಿ ಒಂದೆರೆಡು ಬಾರಿ ಜೋರು ಮಳೆಯಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನದಿಂದ ಭಾರೀ ಮಳೆ ಆಗುತ್ತಿದೆ. ಒಂದು ದಿನ ವಿರಾಮ ನೀಡಿದ್ದ ಮಳೆ ಮತ್ತೆ ತನ್ನ ರೌದ್ರಾವತಾರದೊಂದಿಗೆ ಕರುಣೆ ಇಲ್ಲದಂತೆ ಜನರನ್ನು ನರಕಯಾತನೆಗೆ ದೂಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಲ್ಲದ ಮಳೆ; ತಗ್ಗು ಪ್ರದೇಶಗಳಿಗೆ ಹರಿದ ನೀರು
ಎರಡು ದಿನದ ಹಿಂದೆ ಏಕಾಏಕಿ ಭಾರೀ ಪ್ರಮಾಣದಲ್ಲಿ ಸುರಿದ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮತ್ತು ಕುಮಟಾ ತಾಲೂಕಿನ ಗ್ರಾಮೀಣ ಭಾಗ ಶರಾವತಿ ನದಿ ಪ್ರವಾಹಕ್ಕೆ ಸಿಲುಕಿ ಮುಳುಗಡೆ ಭಿತಿ ಎದುರಿಸಿದ್ದವು.
ಸುಮಾರು 45 ಮನೆಗಳಿಗೆ ನೀರು ತುಂಬಿ ಮನೆ ಕಡೆ ಹೋಗಲಾಗದ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಕುಮಟಾ ತಾಲ್ಲೂಕಿನ ಊರುಕೇರಿ ಸೇರಿ ಅಕ್ಕಪಕ್ಕದ ಗ್ರಾಮಗಳು ಮುಳುಗಡೆ ಆಗಿವೆ. ಕೆಲವು ಕಡೆ ಪ್ರವಾಹ ತಗ್ಗಿದೆ. ಮಳೆಯೂ ತಗ್ಗಿದೆ. ಆದರೆ ಊರು ಕೇರಿ ಎನ್ನುವ ಗ್ರಾಮದಲ್ಲಿ ಇನ್ನು ಕೂಡ ಪ್ರವಾಹ ಇಳಿಯದೆ ಜನ ಕಂಗಾಲಾಗಿದ್ದಾರೆ. ಮನೆ ಮಠ ಬಿಟ್ಟು ಬಂದ ಕುಟುಂಬಸ್ಥರು ಕಾಳಜಿ ಕೇಂದ್ರ ಸೇರಿಕೊಂಡಿದ್ದು, ಮನೆಯಲ್ಲಿದ್ದ ಸಾಮಾನು ಸರಂಜಾಮು ಪ್ರವಾಹದ ನೀರಿಗೆ ಕೊಚ್ಚಿ ಹೋಗಿವೆ.
ಕೊಡಗು ಹಾಗೂ ದಕ್ಷಿಣ ಕನ್ನಡದಲ್ಲೂ ಮಳೆ ಕಡಿಮೆಯಾಗಿದೆ. ಸಿದ್ದಾಪುರ, ಧರ್ಮಸ್ಥಳ, ಕಾರ್ಕಳ, ಬೆಳ್ತಂಗಡಿ, ಭಾಗಮಂಡಲ, ಶೃಂಗೇರಿ, ಕಳಸ, ಕಮ್ಮರಡಿಯಲ್ಲಿ ಭಾರಿ ಮಳೆಯಾಗಿದೆ.
ಸುಬ್ರಹ್ಮಣ್ಯ, ಬ್ರಹ್ಮಾವರ, ಕೊಪ್ಪ, ಮೂಡಬಿದಿರೆ, ನಾಪೊಕ್ಲು, ಕೊಟ್ಟಿಗೆಹಾರ, ಮಾಣಿ, ಲೋಂಡಾ, ತಾಳಗುಪ್ಪ, ಮಾದಾಪುರ, ಪುತ್ತೂರು, ವಿಟ್ಲ, ಹಳಿಯಾಳ, ಪೊನ್ನಂಪೇಟೆ, ಕಾರವಾರ, ಕೊಟ್ಟೂರು, ದೊಡ್ಡಬಳ್ಳಾಪುರ, ಬ್ರಹ್ಮಸಾಗರದಲ್ಲಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.