ಕರಿಮೆಣಸು ಬೆಳೆಗಾರನ ಕಂಗೆಡಿಸಿದ 'ಸೊರಗುರೋಗ'
ಸಾಂಬಾರು ಪದಾರ್ಥಗಳಲ್ಲಿ ಅಗ್ರಸ್ಥಾನ ಪಡೆದ ಮಿಶ್ರಬೆಳೆಯಾದ ಕರಿಮೆಣಸು ಬೆಳೆಯುವ ಬೆಳೆಗಾರನ ಮೊಗದಲ್ಲಿ ಕೆಲವು ದಿನಗಳಿಂದ ಮಂದಹಾಸ ಮಿನುಗುವಂತೆ ಮಾಡಿತ್ತು. ಬೇರೆ ಬೆಳೆಗಳಿಗೆ ಹೋಲಿಸಿದರೆ ಇದರಲ್ಲಿ ಖರ್ಚು ಕಡಿಮೆ ಆದಾಯ ಹೆಚ್ಚು. ಆದರೆ ಇದೂ ಕೂಡ ರೈತರ ನಿದ್ದೆಗೆಡಿಸುತ್ತಿದೆ.
ವಾಣಿಜ್ಯ ಬೆಳೆಗಳಿಂದ ಪ್ರತಿ ವರ್ಷವೂ ಏಕರೀತಿಯ ಇಳುವರಿ ಪಡೆಯುವುದು ಅಸಾಧ್ಯವೇ. ಆದರೂ ಒಂದು ವರ್ಷ ಕಡಿಮೆಯಾದರೂ ಮತ್ತೊಂದು ವರ್ಷ ಇಳುವರಿ ಸಿಗುತ್ತೆ ಎಂಬ ಆಶಾಭಾವನೆ ಬೆಳೆಗಾರರಿಗೆ ಇರುತ್ತದೆ. ಆದರೆ ಈ ಯಾವ ಆಶಾಭಾವನೆಯನ್ನು ರೈತರು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಖರ್ಚಿಲ್ಲದೆ ಬರುವ ಆದಾಯಕ್ಕೂ ಇದೀಗ ಕತ್ತರಿ ಬಿದ್ದಿದೆ ಎಂದು ರೈತರು ಚಿಂತಾಕ್ರಾಂತರಾಗುತ್ತಿದ್ದಾರೆ.
ಹೌದು. ಮಲೆನಾಡು ಪ್ರದೇಶದಲ್ಲಿ ಕಾಫಿ ಮತ್ತು ಅಡಿಕೆ ತೋಟದ ನಡುವೆ ಮಿಶ್ರಬೆಳೆಯಾಗಿ ಬೆಳೆಯುವ ಕರಿಮೆಣಸಿನ ಬಳ್ಳಿಗೆ ಸೊರಗು ರೋಗ ಬಾಧಿಸಿದ್ದು, ಕೊಯ್ಲು ಮಾಡಿ, ಒಣಗಿಸಿ ಮಾರಾಟ ಮಾಡಬಹುದು ಎಂದು ಯೋಚಿಸುತ್ತಿರುವಾಗಲೇ ಸೊರಗು ರೋಗದಿಂದ ನಾಶವಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.[ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]
ಕರಿಮೆಣಸು ಬಳ್ಳಿಗೆ ಸೊರಗು ರೋಗ ಯಾವಾಗ ಬರುತ್ತದೆ? ಈ ರೋಗದ ಲಕ್ಷಣಗಳು ಯಾವುವು? ಇದು ಮೊದಲು ಎಲ್ಲಿ ಕಾಣಿಸಿಕೊಂಡಿತ್ತು? ಈ ರೋಗ ತಡೆಗಟ್ಟಲು ಯಾವ ಕ್ರಮಗಳನ್ನು ಅನುಸರಿಸಬೇಕು? ಈ ರೋಗ ವಿನಾಶಕ್ಕೆ ಯಾವುದಾದರೂ ಸಂಶೋಧನೆಗಳು ನಡೆದಿವೆಯೇ ಎಂಬ ಮಾಹಿತಿ ಇಲ್ಲಿದೆ. ಇದನ್ನು ಓದಿ ಕರಿಮೆಣಸ ಬೆಳೆಯನ್ನು ಕಾಪಾಡಿಕೊಳ್ಳಿ.
ಸೊರಗು ರೋಗವನ್ನು ಗುರುತಿಸುವುದು ಹೇಗೆ?
* ಕರಿಮೆಣಸು ಬಳ್ಳಿಗೆ ಸೊರಗು ರೋಗ ಬಂದರೆ ಕರಿಮೆಣಸು ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ಸಾಯುತ್ತದೆ.
* ಬಳ್ಳಿ ಒಣಗಿ ಫಸಲು ಉದುರುತ್ತದೆ.
*
ಬಳ್ಳಿಯ
ಎಲೆಗಳು
ಹಳದಿ
ಬಣ್ಣಕ್ಕೆ
ತಿರುಗಿ
ಬಳ್ಳಿ
ಬೋರಲಾಗಿ
ಸತ್ತು
ಹೋಗುತ್ತದೆ.
ಮರವೊಂದರ
ಬುಡಕ್ಕೆ
ಬಳ್ಳಿನೆಟ್ಟು
ಒಂದಿಷ್ಟು
ಗೊಬ್ಬರ
ಹಾಕಿದರೂ
ಯಾವುದೇ
ಪ್ರಯೋಜನವಾಗುವುದಿಲ್ಲ.
ಈ ರೋಗ ಹರಡಲು ಕಾರಣವಾದ ಶಿಲೀಂದ್ರ ಯಾವುದು?
ಈ ರೋಗ ಫೈಟೋಫೋರಾ ಕ್ಯಾಪ್ಸಿಸಿ ಎಂಬ ಶಿಲೀಂದ್ರದಿಂದ ಬರುತ್ತದೆ. ಈ ಶಿಲೀಂದ್ರವು ಮೊದಲು ಬಳ್ಳಿಯ ಬೇರಿಗೆ ಆಕ್ರಮಣ ಮಾಡುತ್ತದೆ. ಇದರಿಂದ ನೀರು, ಆಹಾರಗಳ ಚಲನೆಗೆ ಅಡ್ಡಿಯಾಗಿ ಬೇರು ಸಾಯುತ್ತದೆ. ನಂತರ ಬಳ್ಳಿ ಎಲೆಗಳನ್ನು ಆಕ್ರಮಿಸುತ್ತದೆ.
ಸೊರಗು ರೋಗ ಕಾಣಿಸಿಕೊಳ್ಳುವುದು ಯಾವ ಕಾಲದಲ್ಲಿ?
ಸೊರಗು ರೋಗವು ಮಳೆಗಾಲದಲ್ಲಿ ಹರಡುತ್ತದೆ. ಏಕೆಂದರೆ ಮಳೆಗಾಲದಲ್ಲಿ ಮಳೆಹನಿ ಬಿದ್ದು ಚಿಮ್ಮುವಾಗ ಬಳ್ಳಿ ಹಾಗೂ ಎಲೆಗಳಲ್ಲಿರುವ ಶಿಲೀಂದ್ರದ ಬೀಜಾಣುಗಳು ಸುಲಭವಾಗಿ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುತ್ತವೆ. ಇನ್ನು 'ಮೆಲೋಯ್ಡೋಗೈನ್ ಇಂಕಾಗ್ನಿಟ' ಎಂಬ ಜಂತು ಹುಳದಿಂದಲೂ ಸೊರಗು ರೋಗ ಹರಡುತ್ತದೆ ಎಂದು ಹೇಳಲಾಗುತ್ತಿದೆ.
ಸೊರಗು ರೋಗ ಮೊದಲು ಕಾಣಿಸಿಕೊಂಡಿದ್ದು ಎಲ್ಲಿ?
ಕರಿಮೆಣಸಿಗೆ ಕಂಠಕವಾಗಿರುವ ಸೊರಗು ರೋಗ ಮೊದಲಿಗೆ ಕೇರಳದ ವೈನಾಡಿನಲ್ಲಿ 1920ರಲ್ಲಿ ಕಾಣಿಸಿಕೊಂಡಿತು. ಆದರೆ ಅದು ಕರ್ನಾಟಕದಲ್ಲಿ ನಿಧಾನಗತಿಯಲ್ಲಿಯೇ ಹರಡಿದೆ. ಮೊದಲಿಗೆ ಅಲ್ಲೊಂದು ಇಲ್ಲೊಂದು ಬಳ್ಳಿಗಳು ಸಾವನ್ನಪ್ಪುತ್ತಿದ್ದವು. ಆದರೆ 1991ರ ನಂತರ ಕರ್ನಾಟಕದಲ್ಲಿ ಇದು ತೀವ್ರಗತಿಯಲ್ಲಿ ಹರಡಿದ್ದು, ಇಲ್ಲಿಯವರೆಗೂ ರೋಗವನ್ನು ಸಮರ್ಪಕವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ.
ಸೊರಗು ರೋಗದಲ್ಲಿ ಎಷ್ಟು ವಿಧಗಳಿವೆ?
ಸೊರಗುರೋಗದಲ್ಲಿ ಎರಡು ವಿಧವಿದೆ. ಒಂದು ಶೀಘ್ರಗತಿಯಲ್ಲಿ ಹರಡಿದರೆ ಮತ್ತೊಂದು ನಿಧಾನಗತಿಯ ಸೊರಗುರೋಗ. ನಿಧಾನಗತಿಯ ಸೊರಗುರೋಗಕ್ಕೆ ತುತ್ತಾದ ಬಳ್ಳಿಯ ಶಾಖೆ ಬೇರುಗಳಿಗೆ ಶಿಲೀಂದ್ರಗಳು ದಾಳಿ ಮಾಡುವುದರಿಂದ ಬೇರು ಸಾಯುತ್ತದೆ. ನೀರು, ಗೊಬ್ಬರ ಬಳ್ಳಿಗೆ ದೊರೆಯದೆ ಎಲೆಗಳು ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಬಳಿಕ ಉದುರುತ್ತದೆ. ಆದರೆ ಕೆಲವೊಮ್ಮೆ ಮಳೆಗಾಲದಲ್ಲಿ ಮತ್ತೆ ಚೇತರಿಸಿದಂತೆ ಕಂಡು ಬಂದರೂ ಬಳಿಕ ಅದು ಸಾಯುತ್ತದೆ.
ಸೊರಗು ರೋಗ ತಡೆಗಟ್ಟಲು ಯಾರು ಏನು ಸಂಶೋಧನೆ ಮಾಡಿದ್ದಾರೆ?
ಸೊರಗುರೋಗ ತಡೆಗಟ್ಟಲು ಕೆಲವು ಸುಧಾರಿತ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಕಲ್ಲಿಕೋಟೆಯ ನ್ಯಾಷನಲ್ ರೀಸರ್ಚ್ ಸೆಂಟರ್ ಫಾರ್ ಸ್ಪೈಷಸ್ ಜೈವಿಕ ನಿಯಂತ್ರಣದಿಂದ ಟ್ರೈಕೋಡರ್ಮ್ ಹಾಗೂ ಗ್ಲಿಯೋಕ್ಲಾಡಿಯಂನ ಕೆಲವು ಪ್ರಭೇದಗಳನ್ನು ಉಪಯೋಗಿಸಿ ಸಂಶೋಧನೆ ನಡೆಸಿ ಯಶಸ್ಸು ಕಂಡಿದೆ. ಅವರ ಸಂಶೋಧನೆಯ ಪ್ರಕಾರ ರೋಗವನ್ನು ಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲ. ಆದರೆ ಕೆಲವು ಕ್ರಮಗಳನ್ನು ಅನುಸರಿಸಿ ರೋಗವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು.
ರೋಗ ತಡೆಗಟ್ಟಲು ಏನು ಮಾಡಬೇಕು?
ತೋಟದೊಳಗೆ ಬಸಿಲು ಕಾಲುವೆಯನ್ನು ತೋಡುವುದರ ಮೂಲಕ ಮಣ್ಣಿನ ತೇವಾಂಶ ಕಡಿಮೆಗೊಳಿಸಿ, ಭೂಮಿಯ ಮೇಲೆ ಕೊಳೆತ ಎಲೆ, ಹುಲ್ಲಿನ ಕಡ್ಡಿಯ ಪದರವಿರುವಂತೆ ಮಾಡಬೇಕು. ಬಳ್ಳಿಯ ಬುಡದಿಂದ ಚಿಗುರಿ ನೆಲದಲ್ಲಿ ಹರಡುವ ಮರಿ ಬಳ್ಳಿಗಳನ್ನು ಕತ್ತರಿಸಿ ಅಥವಾ ಮೇಲೆ ಹಬ್ಬುವಂತೆ ಮಾಡಿ ರೋಗ ತಡೆಗಟ್ಟಬಹುದು. ತೋಟದಲ್ಲಿ ಬಿಸಿಲಿರುವಂತೆ ನೋಡಿಕೊಳ್ಳಬೇಕು. ರೋಗರಹಿತ ಪಾತಿಯಿಂದಲೇ ಆಯ್ದು ಆರೋಗ್ಯವಂತ ಬಳ್ಳಿಯ ತುಂಡುಗಳನ್ನು ಸಸ್ಯಾಭಿವೃದ್ಧಿಗೆ ಉಪಯೋಗಿಸಬೇಕು.
ಸೊರಗು ರೋಗ ಕಂಡು ಬಂದಾಗ ಅನುಸರಿಸುವ ಕ್ರಮಗಳು?
ತೋಟದಲ್ಲಿ ರೋಗವಿದೆ ಎಂದಾದಲ್ಲಿ ನೆಡುವ ಜಾಗವನ್ನು 'ಮೆಟಲಕ್ಸಿಲ್' ಎಂಬ ಶಿಲೀಂದ್ರ ನಾಶಕದ ಶೇ. 0.3 ದ್ರಾವಣದಿಂದ ತೋಯಿಸಬೇಕು. ಮಳೆಗಾಲ ಬರುವ ಮುನ್ನ ಮೇ, ಜೂನ್ ತಿಂಗಳಲ್ಲಿ ಶೇ. ಒಂದರ ಬೋರ್ಡೋ ಮಿಶ್ರಣವನ್ನು ಬಳ್ಳಿಗೆ ಮೊದಲು ಸಿಂಪಡಿಸಬೇಕು. ಈ ರೀತಿಯ ಕೆಲವು ಕ್ರಮಗಳನ್ನು ಮಾಡುವುದರಿಂದ ರೋಗವನ್ನು ಸ್ವಲ್ಪ ಮಟ್ಟಿಗೆ ಹತೋಟಿಗೆ ತರಬಹುದು.