ಬಿಎಸ್ವೈ ದೆಹಲಿಯಿಂದ ವಾಪಸ್ ಆಗುತ್ತಿದ್ದಂತೆಯೇ ಮೌನಕ್ಕೆ ಶರಣಾದ ಸಾಹುಕಾರ ಜಾರಕಿಹೊಳಿ
ಹಲವು ಸುತ್ತಿನ ಪ್ರಯತ್ನಗಳ ನಂತರ, ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅನುಮೋದನೆಯನ್ನು ಪಡೆದುಕೊಂಡಿದ್ದಾರೆ. ಅಲ್ಲಿಗೆ, ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ನೂತನ ಶಾಸಕರು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು, ಅದೇನೋ 10+3 ಫಾರ್ಮುಲಾದಲ್ಲಿ ಹಂಚಿಕೆ ಮಾಡಲಾಗುವುದು ಎನ್ನುವ ಮಾತು ಕೇಳಿಬರುತ್ತಿರುವುದರಿಂದ, ಗೆದ್ದ ಇಬ್ಬರು ಶಾಸಕರಲ್ಲಿ (ಬೆಳಗಾವಿ ಭಾಗದಿಂದ), ಸಚಿವಸ್ಥಾನ ಸಿಗುವ ಒಬ್ಬರು ಯಾರು ಎನ್ನುವ ಪ್ರಶ್ನೆಗೆ ಯಡಿಯೂರಪ್ಪನವರ ಬಳಿ ಮಾತ್ರ ಉತ್ತರ ಇದೆ.
ಅಮಿತ್ ಶಾ ವಿಶ್ವಾಸಗಳಿಸುವತ್ತ ಯಡಿಯೂರಪ್ಪ ಪುತ್ರ ವಿಜಯೇಂದ್ರ ಶರವೇಗದ ದಾಪುಗಾಲು
ಇಷ್ಟು ದಿನ ತಾಳ್ಮೆಯಿಂದ ಸಂಪುಟ ವಿಸ್ತರಣೆಗೆ ಕಾಯುತ್ತಿದ್ದ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ , ಕಳೆದ ಎರಡು ದಿನಗಳಿಂದ ಏಕಧಂ ಗರಂ ಆಗಿದ್ದರು. ಯಡಿಯೂರಪ್ಪನವರ ಸರಕಾರದ ವಿರುದ್ದವೇ ಮಾತನಾಡಲಾರಂಭಿಸಿದ್ದರು.
ಏನೂ ಭಯ ಪಡದೇ ಸಂಪುಟ ವಿಸ್ತರಣೆ ಮಾಡಿ: ಸಿಎಂ ಬಿಎಸ್ವೈಗೆ ಜೆಡಿಎಸ್ ಅಭಯ
ಮುಖ್ಯಮಂತ್ರಿ ದೆಹಲಿಯಲ್ಲಿ ಇದ್ದಾಗಲೂ, ಬಂಡಾಯದ ಸೂಚನೆಯ ರೀತಿಯಲ್ಲಿ ಮಾತನಾಡುತ್ತಿದ್ದ ಜಾರಕಿಹೊಳಿ, ಸಿಎಂ, ಬೆಂಗಳೂರಿಗೆ ವಿಮಾನ ಹತ್ತುತ್ತಿದ್ದಂತೆಯೇ ಮೌನಕ್ಕೆ ಶರಣಾಗಿದ್ದಾರೆ. ಕಾರಣ?
ಗೆದ್ದವರಿಗೂ, ಸೋತವರಿಗೂ, ಇಬ್ಬರಿಗೂ ಸಚಿವ ಸ್ಥಾನ ನೀಡಬೇಕು
ಗೆದ್ದವರಿಗೂ, ಸೋತವರಿಗೂ, ಇಬ್ಬರಿಗೂ ಸಚಿವ ಸ್ಥಾನ ನೀಡಬೇಕೆಂದು ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ನೀಡಿದ್ದರು. ಆದರೆ, ಹಿಂದಿನ ತಮ್ಮ ಕಠಿಣ ನಿಲುವಿನಿಂದ ಹಿಂದಕ್ಕೆ ಸರಿದಿದ್ದ ಜಾರಕಿಹೊಳಿ, ತನಗೆ, ಡಿಸಿಎಂ ಇಲ್ಲಾಂದ್ರೂ ಓಕೆ, ಜಲಸಂಪನ್ಮೂಲ ಖಾತೆಗೆ ಡಿಮಾಂಡ್ ಮಾಡಿದ್ದರು ಎಂದು, ಬಿಜೆಪಿ ವಲಯದಲ್ಲಿ ಹೇಳಿದ್ದರು ಎಂದು ಸುದ್ದಿಯಾಗಿತ್ತು.
ನಾವು ಬರೀ ಹದಿನೇಳಲ್ಲ, ಐವತ್ತು ಶಾಸಕರಿದ್ದೇವೆ
ಇದಲ್ಲದೇ, "ನಾವು ಬರೀ ಹದಿನೇಳಲ್ಲ, ಐವತ್ತು ಶಾಸಕರಿದ್ದೇವೆ" ಎನ್ನುವ ಹೇಳಿಕೆಯನ್ನು ನೀಡುವ ಮೂಲಕ, ಸಂಪುಟ ವಿಸ್ತರಣೆ ಬೇಗ ಆಗದಿದ್ದಲ್ಲಿ, ಬಂಡಾಯ ಗ್ಯಾರಂಟಿ ಎನ್ನುವ ಸಂದೇಶವನ್ನು ಪರೋಕ್ಷವಾಗಿ ಜಾರಕಿಹೊಳಿ ಸಾರಿದ್ದರು. ಇದು, ಮೂಲ ಬಿಜೆಪಿಯವರ ಸಿಟ್ಟಿಗೆ ಕಾರಣವಾಗಿತ್ತು.
ರಮೇಶ್ ಜಾರಕಿಹೊಳಿ ಮೌನಕ್ಕೆ ಶರಣು
ಆದರೆ, ಯಡಿಯೂರಪ್ಪನವರಿಗೆ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ, ರಮೇಶ್ ಜಾರಕಿಹೊಳಿ ಮೌನಕ್ಕೆ ಶರಣಾಗಿದ್ದಾರೆ. "ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ, ಒಂದಿಬ್ಬರ ಮನವೊಲಿಸಬೇಕಿದೆ" ಎನ್ನುವ ಮಾತನ್ನು ಬಿಎಸ್ವೈ ಹೇಳಿರುವುದರಿಂದ, ಸಾಹುಕಾರ ಜಾರಕಿಹೊಳಿ ಸುಮ್ಮನಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಸರಕಾರದ ಇಮೇಜಿಗೆ ಧಕ್ಕೆಯಾಗುವ ಹೇಳಿಕೆಯನ್ನು ನೀಡಿದರೆ ಎಚ್ಚರಿಕೆ
ಇನ್ನೊಂದು ಮೂಲದ ಪ್ರಕಾರ, ಸಂಪುಟ ವಿಸ್ತರಣೆ ಅಬ್ಬಬ್ಬಾ ಅಂದರೆ ಒಂದು ವಾರದೊಳಗೆ ಆಗಲಿದೆ. ಅಲ್ಲಿಯವರೆಗೆ, ಬಹಿರಂಗವಾಗಿ ಏನೂ ಹೇಳಿಕೆಯನ್ನು ನೀಡಬಾರದು. ಸರಕಾರದ ಇಮೇಜಿಗೆ ಧಕ್ಕೆಯಾಗುವ ಹೇಳಿಕೆಯನ್ನು ನೀಡಿದರೆ, ತೊಂದರೆ ಅನುಭವಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ, ಜಾರಕಿಹೊಳಿಗೆ ಹೋಗಿದೆ ಎನ್ನುವ ಗುಸುಗುಸು ಸುದ್ದಿಯೂ ಹರಿದಾಡುತ್ತಿದೆ.