ಸಿದ್ದರಾಮಯ್ಯ ಸಮಾವೇಶ ಮಾಡಿ ಹೋದ ಬೆನ್ನಲ್ಲೇ, ಪುತ್ರ ಯತೀಂದ್ರ ಎಂಟ್ರಿ
ನಿರ್ದಿಷ್ಟ ಗುರಿಯಿಟ್ಟುಕೊಂಡು ರಾಜಕೀಯ ಮಾಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈ ಹಿಂದೆ ತಮಗೆ ಬಲನೀಡಿದ ಅಹಿಂದ ವರ್ಗದ ಮೊರೆಹೋಗಲು ಮುಂದಾಗಿರುವುದು ಗೊತ್ತಿರುವ ವಿಚಾರ.
ಅಹಿಂದ ವರ್ಗ ಯಾವತ್ತಿದ್ದರೂ ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಲ್ಲುತ್ತದೆ ಎನ್ನುವ ವಿಶ್ವಾಸವನ್ನು ಹೊಂದಿದ್ದವರು ಸಿದ್ದರಾಮಯ್ಯ. ಆದರೆ, ಕಳೆದ ಅಸೆಂಬ್ಲಿ ಚುನಾವಣೆ ಮತ್ತು ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ "ಅಹಿಂದ ವರ್ಗ ತಮ್ಮಿಂದ ದೂರವಾಗುತ್ತಿದೆಯಾ" ಎನ್ನುವ ಸಂಶಯವನ್ನು ಅವರು ಪರೋಕ್ಷವಾಗಿ ವ್ಯಕ್ತಪಡಿಸಿದ್ದರು.
ತಾವು ಬಯಸಿದ್ದ ವಿರೋಧ ಪಕ್ಷದ ನಾಯಕನ ಸ್ಥಾನ ದಕ್ಕಿದ ಮೇಲೆ, ಅಹಿಂದ ಸಮಾವೇಶಕ್ಕೆ ಚಾಲನೆ ನೀಡಿರುವ ಸಿದ್ದರಾಮಯ್ಯ, ಎರಡು ದಿನಗಳ ಕೆಳಗೆ ಬೀದರ್ ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಭೆಯಲ್ಲಿ ಭಾಗವಹಿಸಿದ್ದರು.
ಇನ್ನೆರಡು ತಿಂಗಳು ಮಾತ್ರ ಯಡಿಯೂರಪ್ಪ ಸಿಎಂ, ನಂತರ ರಾಜ್ಯಪಾಲ?
ಸಿದ್ದರಾಮಯ್ಯ ಸಮಾವೇಶ ನಡೆಸಿ ಹೋದ ಬೆನ್ನಲ್ಲೇ, ಅವರ ಪುತ್ರ ಡಾ. ಯತೀಂದ್ರ ಗುಪ್ತವಾಗಿ ಸಭೆ ನಡೆಸಿಹೋಗಿದ್ದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಪಕ್ಷದೊಳಗೆ, ಈ ಸಮಾವೇಶಕ್ಕೆ ಅಪಸ್ವರ ಏಳುತ್ತಿರುವುದಕ್ಕೆ ಇದು ಕಾರಣವಾ, ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಅಹಿಂದ ವರ್ಗದಿಂದ ಮುಖ್ಯಮಂತ್ರಿ ಹುದ್ದೆಗೇರುವಷ್ಟರ ಮಟ್ಟಿಗೆ ಸಿದ್ದುಗೆ ಬಲ
2013ರ ಅಸೆಂಬ್ಲಿ ಚುನಾವಣೆಯಲ್ಲಿ ತಾನು ಬಲವಾಗಿ ನಂಬಿದ್ದ ಅಹಿಂದ ವರ್ಗದಿಂದ ಮುಖ್ಯಮಂತ್ರಿ ಹುದ್ದೆಗೇರುವಷ್ಟರ ಮಟ್ಟಿಗೆ ಸಿದ್ದರಾಮಯ್ಯನವರಿಗೆ ಬಲ ವ್ಯಕ್ತವಾಗಿತ್ತು. ಇದಾದ ನಂತರ, 2018ರ ಅಸೆಂಬ್ಲಿ ಚುನಾವಣೆಯಲ್ಲಿ ಇದು ಪುನರಾವರ್ತನೆ ಗೊಂಡಿರಲಿಲ್ಲ. ಇದಕ್ಕಾಗಿ, ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗಲೇ, ಸಮಾವೇಶಕ್ಕೆ ಸಿದ್ದರಾಮಯ್ಯ ಮುಂದಾಗಿದ್ದರು. ಇದಕ್ಕೆ, ದೇವೇಗೌಡರಿಂದ ವಿರೋಧ ವ್ಯಕ್ತವಾಗಿತ್ತು. ಜೆಡಿಎಸ್ ನಲ್ಲಿದ್ದ ಸಿದ್ದರಾಮಯ್ಯನವರನ್ನು ಅಹಿಂದ ಸಮಾವೇಶ ನಡೆಸಿದ್ದಕ್ಕಾಗಿಯೇ ಗೌಡ್ರು ಪಕ್ಷದಿಂದ ಉಚ್ಚಾಟಿಸಿದ್ದರು.
ಬೀದರ್ ನಲ್ಲಿ 'ಶೋಷಿತರ ಸಮಾವೇಶ'
'ಶೋಷಿತರ ಸಮಾವೇಶ' ಎನ್ನುವ ಹೆಸರಿನಲ್ಲಿ ಬೀದರ್ ನಲ್ಲಿ ಅಹಿಂದ ಸಮಾವೇಶ ಆಯೋಜಿಸಲಾಗಿತ್ತು. ಇದರಲ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡಾ ಭಾಗವಹಿಸಿದ್ದರು. "ಶೋಷಿತ ಸಮಾಜಗಳು ತಮ್ಮ ಪರವಾಗಿರುವವರನ್ನು ಬೆಂಬಲಿಸಿದರೆ ಮಾತ್ರ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸಾಧ್ಯ. ಅಹಿಂದ ನನ್ನ ಜತೆಗೆ ನಿಲ್ಲಬೇಕು" ಎನ್ನುವ ಮಾತನ್ನು ಸಿದ್ದರಾಮಯ್ಯ ಹೇಳಿದ್ದರು.
ಇತಿಹಾಸ ತಿರುಚಿ ವಂಚಿಸುವವರು ಬಿಜೆಪಿಯವರು: ಸಿದ್ದರಾಮಯ್ಯ
ಸಿದ್ದರಾಮಯ್ಯ ಸಭೆ ಬೆನ್ನಲ್ಲೇ ಯತೀಂದ್ರ ಸಭೆ
ಸಿದ್ದರಾಮಯ್ಯ , ನವೆಂಬರ್ ನಾಲ್ಕರಂದು ಈ ಸಭೆಯಲ್ಲಿ ಭಾಗವಹಿಸಿದ್ದರು. ಇದರ ಬೆನ್ನಲ್ಲೇ, ಯತೀಂದ್ರ, ಯಾದಗಿರಿಯಲ್ಲಿ ಅಹಿಂದ ಮುಖಂಡರ ಗುಪ್ತ ಸಮಾಲೋಚನೆ ನಡೆಸಿದ್ದು, ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. "ಈ ವರ್ಗದ ಮತಗಳು ಹರಿದುಹಂಚಿ ಹೋಗದಂತೆ ನೋಡಿಕೊಳ್ಳಿ" ಎಂದು ಕೆಲವು ಮುಖಂಡರು, ಯತೀಂದ್ರಗೆ ಸಲಹೆ ನೀಡಿದ್ದರು ಎನ್ನುವ ಮಾಹಿತಿಯಿದೆ.
ಅಹಿಂದ ವರ್ಗದ ನಾಯಕರ ಜೊತೆ ಮಾತುಕತೆ
ಅಹಿಂದ ವರ್ಗದ ನಾಯಕರ ಜೊತೆ ಮಾತುಕತೆ ನಡೆಸಿರುವ ಯತೀಂದ್ರ, ಅವರ ಅಭಿಪ್ರಾಯವನ್ನು ಸಂಗ್ರಹಿಸಿ. ಕೆಪಿಸಿಸಿ ಮುಂದಿಡುವ ಸಾಧ್ಯತೆಯಿದೆ. ಆದರೆ, ಈ ಸಮಾವೇಶಕ್ಕೆ ಕಾಂಗ್ರೆಸ್ ನಲ್ಲಿ ಅಪಸ್ವರ ಎದ್ದಿದೆ ಎನ್ನುವ ಮಾತಿದೆ. ಇದನ್ನು ಹೇಗೆ ಸಿದ್ದರಾಮಯ್ಯ ಸಂಭಾಳಿಸಿಕೊಂಡು ಹೋಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಲಿಂಗಾಯ ಪ್ರತ್ಯೇಕ ಧರ್ಮ ಮಾಡಲು ಹೊರಟಿದ್ದು, ಪಕ್ಷಕ್ಕೆ ಭಾರೀ ಡ್ಯಾಮೇಜ್
ಕಳೆದ ಚುನಾವಣೆಯ ವೇಳೆ, ಲಿಂಗಾಯ ಪ್ರತ್ಯೇಕ ಧರ್ಮ ಮಾಡಲು ಹೊರಟಿದ್ದು, ಪಕ್ಷಕ್ಕೆ ಭಾರೀ ಡ್ಯಾಮೇಜ್ ತಂದೊಡ್ಡಿತ್ತು. ಈಗ, ಅಹಿಂದ ಸಮುದಾಯದ ಓಲೈಕೆಗೆ ಮುಂದಾದರೆ, ಲಿಂಗಾಯತ, ಒಕ್ಕಲಿಗೆ ಮತಬ್ಯಾಂಕ್ ಗೆ ತೊಂದರೆ ಬರಬಹುದು ಎನ್ನುವುದು ಹಿರಿಯ ಕಾಂಗ್ರೆಸ್ಸಿಗರ ಅಭಿಪ್ರಾಯ ಎಂದು ಹೇಳಲಾಗುತ್ತಿದೆ.