ಐಟಿ ದಾಳಿ ಮುಗಿಯುತ್ತಿದ್ದಂತೇ ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್
ಆದಾಯ ತೆರಿಗೆ ದಾಳಿಯು, ಶನಿವಾರ ಬೆಳಗ್ಗೆ ಮುಗಿಯುತ್ತಿದ್ದಂತೇ ಇಂಧನ ಸಚಿವ ಡಿ ಕೆ ಶಿವಕುಮಾರ್ ನೇರವಾಗಿ ಆಖಾಡಕ್ಕಿಳಿದಿದ್ದಾರೆ. ಗುಜರಾತ್ ಕಾಂಗ್ರೆಸ್ ಶಾಸಕರ ಜವಾಬ್ದಾರಿಯನ್ನು ಡಿಕೆಶಿ ಮತ್ತೆ ವಹಿಸಿಕೊಂಡಿದ್ದಾರೆ.
ಬೆಂಗಳೂರು, ಆ 5: ಬುಧವಾರ (ಆ 2) ಬೆಳಗ್ಗೆ ಆರಂಭವಾದ ಆದಾಯ ತೆರಿಗೆ ದಾಳಿಯು, ಶನಿವಾರ ಬೆಳಗ್ಗೆ ಮುಗಿಯುತ್ತಿದ್ದಂತೇ ಇಂಧನ ಸಚಿವ ಡಿ ಕೆ ಶಿವಕುಮಾರ್ ನೇರವಾಗಿ ಆಖಾಡಕ್ಕಿಳಿದಿದ್ದಾರೆ.
ಐಟಿ ದಾಳಿ ಬಗ್ಗೆ ಪಂಚನಾಮೆ ಬಂದ ನಂತರ ಪೂರ್ಣ ಮಾಹಿತಿಯನ್ನು ನೀಡುವುದಾಗಿ ಮಾಧ್ಯಮದವರಿಗೆ ತಿಳಿಸಿ, ಡಿ ಕೆ ಶಿವಕುಮಾರ್ ತಾನು ನಂಬುವ ವಿಜಯನಗರದಲ್ಲಿರುವ ಕಾಡು ಸಿದ್ದೇಶ್ವರ ಸಂಸ್ಥಾನದ ನಡುವಿನಕೆರೆ ಮಠದ ಅಜ್ಜಯ್ಯನ ಆಶೀರ್ವಾದ ಪಡೆದು ಬಂದಿದ್ದಾರೆ.
ಡಿಕೆಶಿಗೆ ಸರಿಯಾಗಿ ಕೈ ಕೊಡ್ತಾ ಕಾಂಗ್ರೆಸ್ ಹೈಕಮಾಂಡ್
ಅತ್ತ ಡಿ ಕೆ ಶಿವಕುಮಾರ್ ತಾಯಿ ಗೌರಮ್ಮ ಶಕ್ತಿದೇವತೆ ಕನಕಪುರದ ಕಬ್ಬಾಳಮ್ಮ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದು ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಡಿಕೆಶಿ ಸಹೋದರ, ಡಿ ಕೆ ಸುರೇಶ್, ಉಪರಾಷ್ಟ್ರಪತಿ ಚುನಾವಣೆಗೆ ಮತಚಲಾಯಿಸಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ.
ರೆಸಾರ್ಟಿನಿಂದ ಗುಜರಾತಿನ 44 ಶಾಸಕರು ರಾಜಭವನದಲ್ಲಿ ವಜೂಭಾಯಿ ವಾಲಾ ಅವರನ್ನು ಭೇಟಿಯಾದ ವೇಳೆ, ಅಲ್ಲಿ ಶಾಸಕರನ್ನು 'ಉಟ್ಟ ಪಂಚೆ'ಯಲ್ಲೇ ಸೇರಿಕೊಂಡ ಡಿ ಕೆ ಶಿವಕುಮಾರ್, ಗುಜರಾತ್ ಶಾಸಕರ ಜವಾಬ್ದಾರಿಯ ಸಾರಥ್ಯವನ್ನು ಮತ್ತೆ ವಹಿಸಿಕೊಂಡಿದ್ದಾರೆ.
ಗುಜರಾತಿನ ಮಾಜಿ ಹಣಕಾಸು ಸಚಿವ ಮತ್ತು ಸ್ಪೀಕರ್ ಆಗಿದ್ದ ವಜೂಭಾಯ್ ವಾಲಾ ಅವರನ್ನು ಭೇಟಿಯಾಗಿ, ಆಶೀರ್ವಾದ ಪಡೆಯುವ ಉದ್ದೇಶದಿಂದ ರಾಜ್ಯಪಾಲರನ್ನು ಭೇಟಿಯಾಗಿದ್ದೇವೆಂದು, ಗುಜರಾತ್ ಶಾಸಕರು ಹೇಳಿದ್ದಾರೆ. ಮುಂದೆ ಓದಿ..
ಮೌನವೃತದಲ್ಲಿದ್ದ ಅಜ್ಜಯ್ಯನ ಅಭಯ ಪಡೆಯಲು ಡಿಕೆಶಿಗೆ ಸಾಧ್ಯವಾಗಿಲ್ಲ
ತಾನು ಬಹುವಾಗಿ ನಂಬುವ ಅಜ್ಜಯ್ಯನ ಆಶೀರ್ವಾದ ಪಡೆಯಲು ಐಟಿ ದಾಳಿ ಮುಗಿಯುತ್ತಿದ್ದಂತೇ ಡಿಕೆ ಶಿವಕುಮಾರ್ ಅಲ್ಲಿಗೆ ಹೋಗಿದ್ದರು. ಅಲ್ಲಿ ಕಾಡು ಸಿದ್ದೇಶ್ವರನ ಸನ್ನಿಧಾನದ ಮುಂದೆ ನಿಂತು ಅಜ್ಜಯ್ಯ ಅಭಯ ನೀಡುವ ಪದ್ದತಿಯಿದೆ. ಆದರೆ ಅಜ್ಜಯ್ಯ ಚಂದ್ರಗ್ರಹಣದ ವರೆಗೆ ಮೌನವೃತದಲ್ಲಿ ಇರುವುದರಿಂದ, ಅಜ್ಜಯ್ಯನ ಅಭಯ ಪಡೆಯಲು ಡಿಕೆಶಿಗೆ ಸಾಧ್ಯವಾಗಿಲ್ಲ.
ಡಿ ಕೆ ಶಿವಕುಮಾರ್ ಬರುತ್ತಿದ್ದಂತೇ ಧೈರ್ಯ ತುಂಬಿದ ಶಾಸಕರು
ರಾಜಭವನದಲ್ಲಿ ಡಿ ಕೆ ಶಿವಕುಮಾರ್ ಬರುತ್ತಿದ್ದಂತೇ, ಎಲ್ಲಾ ಗುಜರಾತಿನ ಕಾಂಗ್ರೆಸ್ ಶಾಸಕರು ಡಿಕೆಶಿ ಅವರನ್ನು ಸುತ್ತುವರಿದು ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದು ಕಂಡುಬಂತು. ಐಟಿ ದಾಳಿಯಿಂದ ಡಿಕೆಶಿ ವಿಚಲಿತರಾದಂತೆ ಕಂಡುಬಂದಿಲ್ಲ.
ಗಾಂಧಿ ಪ್ರತಿಮೆ ಮುಂದೆ ರಘಪತಿ ರಾಘವ ರಾಜಾರಾಂ
ರಾಜಭವನದಿಂದ ಗುಜರಾತ್ ಶಾಸಕರನ್ನು ವಿಧಾನಸೌಧದ ಬಳಿ ಕರೆತಂದ ಡಿಕೆಶಿ, ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಫೋಟೋ ಸೆಷನ್ ಮಾಡಿಸಿದರು. ಜೊತೆಗೆ ರಘುಪತಿ ರಾಘವ ರಾಜಾರಾಂ ಹಾಡು ಹಾಡಿಸಿ, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ಪ್ರದರ್ಶಿಸಿದರು. (Photo: DKS FB Page)
ವಿಧಾನಸೌಧದ ಒಳಗೆ ಮಾಧ್ಯಮದವರು ಬರಬೇಡಿ
ಎಲ್ಲಾ ಶಾಸಕರು ಖುಷಿಯಾಗಿದ್ದಾರೆ, ರಾಜ್ಯಪಾಲರನ್ನು ಭೇಟಿಯಾಗಿದ್ದೇವೆ. ವಿಧಾನಸೌಧವನ್ನು ನೋಡಬೇಕೆಂದು ಶಾಸಕರು ಬಯಸಿದ್ದಾರೆ. ಅವರನ್ನು ಕರೆದುಕೊಂಡು ವಿಧಾನಸೌಧ ತೋರಿಸುತ್ತಿದ್ದೇನೆ, ಮಾಧ್ಯಮದವರು ಯಾರೂ ಒಳಗೆ ಬರಬೇಡಿ ಎಂದು ಡಿ ಕೆ ಶಿವಕುಮಾರ್, ಶಾಸಕರನ್ನು ಕರೆದುಕೊಂಡು ಶಕ್ತಿಕೇಂದ್ರದ ಒಳಗೆ ಹೋಗಿದ್ದಾರೆ.(Photo: DKS FB Page)
ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಶಾಸಕರ ಹೇಳಿಕೆ
ನಮಗೆ ಬಿಜೆಪಿ ಮುಖಂಡರು ಕೋಟ್ಯಾಂತರ ರೂಪಾಯಿ ಆಮಿಷವೊಡ್ಡುತ್ತಲೇ ಇದ್ದಾರೆ, ನಮ್ಮ ನಿಷ್ಠೆ ಕಾಂಗ್ರೆಸ್ ಪಕ್ಧದ ಮೇಲಿದೆ. ಡಿಕೆಶಿ ಅವರ ಮುಂದಿನ ತೀರ್ಮಾನದಂತೆ ನಡೆದುಕೊಳ್ಳುತ್ತೇವೆಂದು ಗುಜರಾತ್ ಶಾಸಕರು, ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾರೆ.(Photo: DKS FB Page)