ಉಪಚುನಾವಣೆಗೆ ಡೇಟ್ ಫಿಕ್ಸ್ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಜಂಘಾಬಲಕ್ಕೆ ಭಾರೀ ಹೊಡೆತ!
ಒಂದು ರೀತಿಯಲ್ಲಿ ಸೊರಗಿ ಹೋಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಘಟಕಕ್ಕೆ ಹೊಸ ಹುಮ್ಮಸ್ಸು, ಹುರುಪು ಬಂದಿದ್ದು ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದ ಮೇಲೆ. ಬಿಜೆಪಿ ಸರಕಾರದ ವಿರುದ್ದ ಮುಗಿಬೀಳಲು ಪಕ್ಷದ ಮೊದಲ ಪಂಕ್ತಿಯ ಮುಖಂಡರನ್ನು ಒಗ್ಗೂಡಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದರು ಕೂಡಾ.
Recommended Video
ಕೋವಿಡ್ ಉಪಕರಣ ಖರೀದಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅವ್ಯವಹಾರ, ಭೂಸುಧಾರಣಾ ಕಾಯಿದೆ, ಎಪಿಎಂಸಿ ಮುಂತಾದ ವಿಚಾರಗಳನ್ನು ಜನರ ಮುಂದಿಡಲು ಸಂಪೂರ್ಣವಾಗಿ ಯಶಸ್ವಿಯಾಗದಿದ್ದರೂ, ಒಂದು ಹಂತಕ್ಕೆ ಡಿಕೆಶಿ ಮತ್ತು ತಂಡ ಸಕ್ಸಸ್ ಆಗಿತ್ತು.
ಉಪ ಚುನಾವಣೆ: ಜೆಡಿಎಸ್ ಜೊತೆ ಮೈತ್ರಿಯ ಕುರಿತು ಡಿಕೆಶಿ ಮಹತ್ವದ ಹೇಳಿಕೆ!
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದವಿ ಸ್ವೀಕರಿಸಿದ ನಂತರ, ಅವರಿಗೀಗ ಮೊದಲ ಸತ್ವ ಪರೀಕ್ಷೆ ಎದುರಾಗಿದೆ. ಎರಡು ಅಸೆಂಬ್ಲಿ ಕ್ಷೇತ್ರಕ್ಕೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ನವೆಂಬರ್ ಮೂರರಂದು ನಡೆಯಲಿದೆ.
ಆದರೆ, ಉಪಚುನಾವಣೆ ದಿನಾಂಕ ಪ್ರಕಟವಾದ ಮರುದಿನವೇ ಡಿಕೆಶಿಗೆ ಆಘಾತವೊಂದು ಎದುರಾಗಿದೆ. ಅವರ ಆಪ್ತನನ್ನು ವಿಚಾರಣೆಗೆ ಬರುವಂತೆ, ಜಾರಿ ನಿರ್ದೇಶನಾಲಯ (ಇಡಿ) ಸೂಚಿಸಿದ್ದು, ದೆಹಲಿಯಲ್ಲಿ ಇಂದು (ಅ 1) ಹಾಜರಾಗಬೇಕಾಗಿದೆ.
ಡಿಕೆಶಿಯವರ ಆಪ್ತ, ರಾಮನಗರ ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್
ಮೇಲ್ನೋಟಕ್ಕೆ ಡಿ.ಕೆ.ಶಿವಕುಮಾರ್ ಅವರ ಆಪ್ತನನ್ನು ದೆಹಲಿಗೆ ವಿಚಾರಣೆಗೆ ಬರುವಂತೆ ಸೂಚಿಸಿದ್ದರೂ, ಇದರ ಹಿಂದೆ ಡಿಕೆಶಿಯನ್ನು ಹಣೆಯುವ ಉದ್ದೇಶವಿದೆಯೇ ಎನ್ನುವುದು ಸದ್ಯ ಚರ್ಚೆಯ ವಿಷಯವಾಗಿದೆ. ಡಿಕೆಶಿಯವರ ಆಪ್ತ, ರಾಮನಗರ ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ ಗೆ ಇಡಿ ಸಮನ್ಸ್ ಕಳುಹಿಸಿದ್ದು, ದೆಹಲಿಯಲ್ಲಿ ವಿಚಾರಣೆಗೆ, ಅಕ್ಟೋಬರ್ ಒಂದರಂದು ಹಾಜರಾಗಬೇಕಿದೆ.
ಇಡಿ ಸಮನ್ಸ್ ಹಿಂದಿನ ಉದ್ದೇಶವಾದರೂ ಏನು?
ಗ್ರಾನೈಟ್ ಉದ್ಯಮಿಯೂ ಆಗಿರುವ ಇಕ್ಬಾಲ್ ಅವರನ್ನು ಆದಾಯಕ್ಕಿಂತ ಹೆಚ್ಚಿನ ಆಸ್ತಿಗೆ ಸಂಬಂಧಿಸಿದಂತೆ ವಿಚಾರಣೆಗೆ ಕರೆಯಲಾಗಿದೆಯೋ ಅಥವಾ ಅವರ ವಿಚಾರಣೆಯ ಮೂಲಕ ಡಿಕೆಶಿಯವರ ಇನ್ನಷ್ಟು ವಿಚಾರವನ್ನು ಬಾಯಿಬಿಡಿಸುವ ಉದ್ದೇಶವನ್ನು ಜಾರಿ ನಿರ್ದೇಶನಾಲಯ ಹೊಂದಿದೆಯೋ ಎನ್ನುವುದು ಸದ್ಯಕ್ಕೆ ಉತ್ತರವಿಲ್ಲದ ಪ್ರಶ್ನೆಯಾಗಿದೆ.
ಡಿಕೆಶಿಗೆ ಜಾರಿ ನಿರ್ದೇಶನಾಲಯದ ಸಮನ್ಸ್
ಆಗಸ್ಟ್ ಎರಡು, 2017ರಂದು ಐಟಿ ಅಧಿಕಾರಿಗಳು ಡಿಕೆಶಿಗೆ ಸೇರಿದ ಬೆಂಗಳೂರು ಮತ್ತು ದೆಹಲಿಯ ಮನೆಗಳ ಮೇಲೆ ದಾಳಿ ಮಾಡಿ 8,59,69,100 ರೂ.ಯನ್ನು ಜಪ್ತಿ ಮಾಡಿದ್ದರು. ಇದಾದ ನಂತರ ಒಂದಲ್ಲಾ ಒಂದು ಸಂಕಷ್ಟಕ್ಕೆ ಎದುರಾದ ಡಿಕೆಶಿಗೆ ಕಳೆದ ವರ್ಷ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಕಳುಹಿಸಿತ್ತು. ಇದಾದ ಮೂರೇ ದಿನದಲ್ಲಿ ಅಂದರೆ ಸೆಪ್ಟಂಬರ್ 04, 2019ರಂದು ಮನಿ ಲಾಂಡ್ರಿಂಗ್ ಕೇಸ್ ನಲ್ಲಿ ಡಿಕೆಶಿ ಬಂಧನವಾಗಿತ್ತು.
ಐವತ್ತು ದಿನ ದೆಹಲಿಯ ತಿಹಾರ್ ಜೈಲಿನಲ್ಲಿ ಕಳೆದಿದ್ದ ಡಿಕೆಶಿ
ಸುಮಾರು ಐವತ್ತು ದಿನ ದೆಹಲಿಯ ತಿಹಾರ್ ಜೈಲಿನಲ್ಲಿ ಕಳೆದಿದ್ದ ಡಿಕೆಶಿ, ಅಕ್ಟೋಬರ್ 23, 2019ರಂದು ಬಿಡುಗಡೆಯಾಗಿದ್ದರು. ಅಂದಿನಿಂದ ಇಂದಿನವರೆಗೆ ಒಂದು ವರ್ಷದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದ ಡಿಕೆಶಿಯನ್ನು ಎಐಸಿಸಿ ಅಳೆದು ತೂಗಿ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿತ್ತು. ಪಕ್ಷ ಮತ್ತೆ ಟ್ರ್ಯಾಕ್ ಗೆ ಮರಳಲಾರಂಭಿಸಿತ್ತು. ಆದರೆ...
ಡಿಕೆಶಿ ತನ್ನ ಎಂದಿನ ಗತ್ತಿನಲ್ಲೇ ಪಕ್ಷವನ್ನು ಮುನ್ನಡೆಸಲು ಆರಂಭಿಸಿದರು
ಸಕ್ರಿಯ ರಾಜಕಾರಣಕ್ಕೆ ಮರಳಿದ ನಂತರ ಡಿಕೆಶಿ ತನ್ನ ಎಂದಿನ ಗತ್ತಿನಲ್ಲೇ ಪಕ್ಷವನ್ನು ಮುನ್ನಡೆಸಲು ಆರಂಭಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರದ ವೈಫಲ್ಯವನ್ನು ಪ್ರತೀದಿನ ಜನರ ಮುಂದಿಡುತ್ತಿರುವ ಅವರನ್ನು ಹಣೆಯಲು, ಅವರ ಆಪ್ತರಿಗೆ ಇಡಿ ಸಮನ್ಸ ಕಳುಹಿಸಿದೆಯಾ? ಈ ನಡೆಯ ಹಿಂದೆ ಡಿ.ಕೆ.ಶಿವಕುಮಾರ್ ಅವರ ಜಂಘಾಬಲವನ್ನು ಅಡಗಿಸುವ ಕೆಲಸ ನಡೆಯುತ್ತಿದೆಯಾ ಎನ್ನುವುದಕ್ಕೆ ಸದ್ಯಕ್ಕೆ ಉತ್ತರವಿಲ್ಲ.