ಶೀಘ್ರ ಎಂ-ಒನ್ ಆಪ್ಗೆ ಆಧಾರ್ ಸಂಖ್ಯೆಯೂ ಲಾಗಿನ್ ಐಡಿ!
ಬೆಂಗಳೂರು, ಜ. 16: ಕರ್ನಾಟಕ ಮೂಲದ ಸಾಫ್ಟ್ವೇರ್ ದಿಗ್ಗಜ ನಂದನ್ ನೀಲೇಕಣಿ ನೇತೃತ್ವದಲ್ಲಿ ಜಾರಿಗೆ ತಂದಿದ್ದ ಆಧಾರ್ ಯೋಜನೆ ಹಲವು ಕ್ಷೇತ್ರಗಳಲ್ಲಿ ತನ್ನ ಪ್ರಾಮುಖ್ಯತೆಯನ್ನು ಸಾಬೀತುಪಡಿಸುತ್ತಿದೆ. ಬಿಜೆಪಿ ಕೂಡ ಅಧಿಕಾರಕ್ಕೇರಿದ ಮೇಲೆ 'ಯೂ' ಟರ್ನ್ ಪಡೆಯಿತು. ಎಲ್ಪಿಜಿ ಸಿಲಿಂಡರ್ಗಳಿಗೆ ಆಧಾರ್ ಸಂಖ್ಯೆ ಕಡ್ಡಾಯ ಮಾಡುವಲ್ಲಿ ಯುಪಿಎ ಸರ್ಕಾರಕ್ಕಿಂತ ಹೆಚ್ಚು ಆಸಕ್ತಿ ತೋರುತ್ತಿದೆ.
ಈಗ ರಾಜ್ಯ ಸರ್ಕಾರ ಕೂಡ ಈ ಆಧಾರ್ ಸಂಖ್ಯೆಯನ್ನು ತನ್ನ ಮಹತ್ವಾಕಾಂಕ್ಷಿ ಯೋಜನೆ 'ಮೊಬೈಲ್ ಒನ್'ಗೆ ಸೇರಿಸಲು ಯೋಚಿಸುತ್ತಿದೆ. ಪ್ರಸ್ತುತ ಮೊಬೈಲ್ ಒನ್ ಸೇವೆ ಪಡೆಯಲು ಲಾಗಿನ್ ಆಗುವ ಪ್ರಕ್ರಿಯೆ ಅತ್ಯಂತ ನಿಧಾನವಾಗುತ್ತಿದೆ. ಹಲವು ಕಾರಣಗಳಿಂದ ಅನೇಕ ಬಾರಿ ಲಾಗಿನ್ ಆಗುವುದೇ ಸಾಧ್ಯವಾಗುತ್ತಿಲ್ಲ. ಆದ್ದರಿಂದ 'ಆಧಾರ್' ಕಾರ್ಡ್ ಸಂಖ್ಯೆಯನ್ನೇ ಮೊಬೈನ್ ಒನ್ ಸೇವೆಗೆ 'ಐಡಿ' ಆಗಿ ಉಪಯೋಗಿಸುವ ಅವಕಾಶ ನೀಡಲು ಯೋಜನೆ ರೂಪಿಸಿದೆ. [ಮೊಬೈಲ್ ಒನ್ ಜನರಿಗೆ ಅರ್ಪಣೆ]
"ಪ್ರತಿದಿನ ಮೊಬೈಲ್ ಒನ್ ಆಪ್ ಮೂಲಕ ಅಸಂಖ್ಯಾತ ವ್ಯವಹಾರಗಳು ನಡೆಯುತ್ತಿವೆ. ಆದ್ದರಿಂದ ಈ ವೇದಿಕೆಯನ್ನು ಇನ್ನಷ್ಟು ಸುರಕ್ಷಿತಗೊಳಿಸುವುದು ನಮ್ಮ ಉದ್ದೇಶ" ಎಂದು ಕರ್ನಾಟಕದ ಇ-ಆಡಳಿತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರತನ್ ಯು ಕೇಲ್ಕರ್ ತಿಳಿಸಿದ್ದಾರೆ. [ಮೊಬೈಲ್ ಒನ್ ಸೇವೆ ಪಡೆಯುವುದು ಹೇಗೆ?]
1 ಲಕ್ಷ ಡೌನ್ಲೋಡ್ : ಕರ್ನಾಟಕ ಸರ್ಕಾರವು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಸುಮಾರು 4,000 ಸೇವೆಗಳಿಗೆ ಎಂ-ಒನ್ ಅಪ್ಲಿಕೇಶನ್ ಜಾರಿಗೆ ತಂದಿದೆ. ಇಲ್ಲಿಯವರೆಗೆ ಸುಮಾರು ಒಂದು ಲಕ್ಷ ಜನರು ತಮ್ಮ ಆಂಡ್ರಾಯ್ಡ್ ಹಾಗೂ ಐಓಎಸ್ ಮೊಬೈಲ್ಗೆ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಿದ್ದಾರೆಂದು ಇ-ಆಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. [ಎಂ ಆಡಳಿತ ಸೇವೆ ಕನ್ನಡದಲ್ಲಿರಲಿ]
ಮೊಬೈಲ್ ಒನ್ ಸೇವೆಯಲ್ಲಿ ಇನ್ನಷ್ಟು ನಾವೀನ್ಯತೆ ತರಲು ಹಲವು ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿನ್ನೂ ರೈತರಲ್ಲಿ ಎನ್-ಒನ್ ಸೇವೆ ಕುರಿತು ಅಷ್ಟು ಜಾಗೃತಿ ಮೂಡಿಲ್ಲ. ಆದ್ದರಿಂದ ಗ್ರಾಮಗಳಲ್ಲಿ ಈ ಸೇವೆಯ ಬಳಕೆ ನಿರೀಕ್ಷೆಯನ್ನು ಮುಟ್ಟುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. [ಮೊಬೈಲ್ ಒನ್ ನನ್ನ ಅನಿಸಿಕೆ]