ಕೆ.ಸಿ.ವೇಣುಗೋಪಾಲ್ ತಲೆದಂಡ? ಕೆಪಿಸಿಸಿ ಉಸ್ತುವಾರಿಗೆ ತೇಲಿಬಂದ ಮೊದಲ ಹೆಸರು!
ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಯಾರನ್ನು ನೇಮಕ ಮಾಡಬೇಕು ಎನ್ನುವ ಗೊಂದಲದಿಂದ ಇನ್ನೂ ಹೊರಬರದ ಸೋನಿಯಾ ಗಾಂಧಿ, ಕೆಪಿಸಿಸಿ ಉಸ್ತುವಾರಿಯನ್ನೂ ಬದಲಾಯಿಸುವ ಇಂಗಿತವನ್ನು ಹೊಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಲವು ವರ್ಷಗಳಿಂದ ಕೆಪಿಸಿಸಿ ಉಸ್ತುವಾರಿಯ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬರುತ್ತಿರುವ ಕೆ.ಸಿ.ವೇಣುಗೋಪಾಲ್, ಹೈಕಮಾಂಡ್ ನಿಷ್ಠರೇನೂ ಹೌದು, ಆದರೂ, ಅವರ ಕಾರ್ಯವೈಖರಿಯ ಬಗ್ಗೆ ಸೋನಿಯಾಗೆ ಅಷ್ಟೇನೂ ಸಮಾಧಾನವಿಲ್ಲ ಎಂದು ಹೇಳಲಾಗುತ್ತಿದೆ.
ವೇಣುಗೋಪಾಲ್ ವಿರುದ್ದ ಹಲವು ರಾಜ್ಯ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿಯೇ ಈ ಹಿಂದೆ ಅಸಮಾಧಾನವನ್ನು ಹೊರಹಾಕಿದ್ದರು. ಅವರು ಒಬ್ಬರ ಪರವಾಗಿ ಕೆಲಸ ಮಾಡುತ್ತಾರೆ ಎನ್ನುವ ಆಪಾದನೆಯೂ ಅವರ ಮೇಲಿತ್ತು.
ಜ್ಯೋತಿರಾದಿತ್ಯ ಸಿಂದಿಯಾ ಟ್ವಿಟ್ಟರ್ ಖಾತೆಯಿಂದ 'ಕಾಂಗ್ರೆಸ್' ನಾಪತ್ತೆ!
ಕೆಪಿಸಿಸಿ ಅಧ್ಯಕ್ಷ ಜೊತೆಗೆ, ಉಸ್ತುವಾರಿಯನ್ನೂ ಬದಲಾಯಿಸುವ ಬಗ್ಗೆ ಸೋನಿಯಾ ಗಾಂಧಿ ಚಿಂತನೆ ನಡೆಸಿ, ಯುವ ರಾಷ್ಟ್ರೀಯ ಮುಖಂಡರೊಬ್ಬರಿಗೆ ಇದರ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.
15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ
ಇತ್ತೀಚೆಗೆ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ರಾಜ್ಯ ಕಾಂಗ್ರೆಸ್ ನಾಯಕರನ್ನು ಕಂಗೆಡಿಸಿದ್ದು ಒಂದೆಡೆಯಾದರೆ, ಹೈಕಮಾಂಡ್ ಕೂಡಾ ಈ ಬಗ್ಗೆ ತಲೆ ಕೆಡಿಸಿಕೊಂಡಿತ್ತು. ರಾಜ್ಯ ಉಸ್ತುವಾರಿ ಹೊತ್ತಿರುವ ಕೆ.ಸಿವೇಣುಗೋಪಾಲ್ ತಲೆದಂಡದ ಬಗ್ಗೆಯೂ ಎಲ್ಲೆಲ್ಲೂ ಸುದ್ದಿಯಾಗಿತ್ತು. ಆದರೆ, ಅದಕ್ಕೆಲ್ಲ ಸ್ವತಃ ವೇಣುಗೋಪಾಲ್ ಪ್ರತಿಕ್ರಿಯೆ ನೀಡಿ, ಇದೆಲ್ಲಾ ಕೇವಲ ವದಂತಿ ಎಂದು ಹೇಳಿದ್ದರು.
ಕರ್ನಾಟಕರ ಉಸ್ತುವಾರಿ ಬೇಡ ಎಂದು ಹೈಕಮಾಂಡ್ ಗೆ ಹೇಳಿದ್ದೆ, ಕೆ.ಸಿ.ವೇಣುಗೋಪಾಲ್
"ಲೋಕಸಭಾ ಚುನಾವಣೆ ವೇಳೆಯಲ್ಲಿಯೇ ಕರ್ನಾಟಕರ ಉಸ್ತುವಾರಿ ಬೇಡ ಎಂದು ಹೈಕಮಾಂಡ್ ಗೆ ಹೇಳಿದ್ದೆ" ಎಂದು ಸ್ವತಃ ಕೆ.ಸಿ.ವೇಣುಗೋಪಾಲ್ ಅವರೇ ಹೇಳಿಕೊಂಡಿದ್ದರು. "ಅಂದೇ ನಾನು ಉಸ್ತುವಾರಿ ಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದೆ" ಎಂದು ವೇಣುಗೋಪಾಲ್, ಉಪಚುನಾವಣಾ ಫಲಿತಾಂಶದ ಪ್ರತಿಕ್ರಿಯೆ ನೀಡುವಾಗ ಹೇಳಿದ್ದರು. ಇದಕ್ಕೆ, ಈಗ ಸಮಯ ಕೂಡಿ ಬಂದಂತಿದೆ.
ಉಪ ಚುನಾವಣೆ ಸೋಲು: ಕೆ.ಸಿ.ವೇಣುಗೋಪಾಲ್ ಹೇಳಿದ್ದೇನು?
ಎಐಸಿಸಿ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಜ್ಯೋತಿರಾದಿತ್ಯ ಸಿಂಧಿಯಾ
ಎಐಸಿಸಿ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಜ್ಯೋತಿರಾದಿತ್ಯ ಸಿಂದಿಯಾ ಅವರ ಹೆಸರು ಕೆಪಿಸಿಸಿ ಉಸ್ತುವಾರಿಗೆ ಕೇಳಿಬರುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ನಂತರ, ಸಕ್ರಿಯ ರಾಜಕಾರಣದಿಂದ ಸ್ವಲ್ಪದಿನ ಸಿಂದಿಯಾ ದೂರ ಸರಿದಿದ್ದರು. ಜೊತೆಗೆ, ಇವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿದ್ದವು.
ಸೋನಿಯಾ ಗಾಂಧಿ ಕುಟುಂಬಕ್ಕೆ ಹಿಂದಿನಿಂದಲೂ ಪರಮಾಪ್ತರಾಗಿರುವ ಸಿಂಧಿಯಾ ಕುಟುಂಬ
ಸೋನಿಯಾ ಗಾಂಧಿ ಕುಟುಂಬಕ್ಕೆ ಹಿಂದಿನಿಂದಲೂ ಪರಮಾಪ್ತರಾಗಿರುವ ಸಿಂದಿಯಾ ಕುಟುಂಬದ, ಯುವ ಮುಖಂಡ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು ಕೆಪಿಸಿಸಿ ಉಸ್ತುವಾರಿಯನ್ನಾಗಿ ನೇಮಿಸಲು ಸೋನಿಯಾ ಉತ್ಸುಕರಾಗಿದ್ದಾರೆ ಎನ್ನುವ ಮಾಹಿತಿಯಿದೆ. ಎರಡು ಬಣದಂತಾಗಿರುವ ಕರ್ನಾಟಕ ಕಾಂಗ್ರೆಸ್ ಅನ್ನು ಒಂದಾಗಿ ಮುನ್ನಡೆಸಲು ಸಿಂದಿಯಾ ಈಸ್ ದಿ ರೈಟ್ ಚಾಯಿಸ್ ಎನ್ನುವ ನಿರ್ಧಾರಕ್ಕೆ ಸೋನಿಯಾ ಬಂದಿದ್ದಾರೆಂದು ಹೇಳಲಾಗುತ್ತಿದೆ.
ಸೋನಿಯಾ ಗಾಂಧಿ ಯಾವರೀತಿ ಇಲ್ಲಿ ಹೆಜ್ಜೆಯಿಡಲಿದ್ದಾರೆ?
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಯಾರು ಆಯ್ಕೆಯಾಗಬಹುದು ಎನ್ನುವ ಕುತೂಹಲದ ನಡುವೆ, ಉಸ್ತುವಾರಿಯನ್ನು ಬದಲಾಯಿಸುವ ಮಾತು ಕೇಳಿಬರುತ್ತಿರುವುದು ರಾಜ್ಯ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ. ಸೋನಿಯಾ ಗಾಂಧಿ ಯಾವರೀತಿ ಇಲ್ಲಿ ಹೆಜ್ಜೆಯಿಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.