ಸಿದ್ದರಾಮಯ್ಯಗೆ ಸಂಕಟ ತಂದ ಸೋನಿಯಾ ಗಾಂಧಿ ಸಂದೇಶ!
Recommended Video
ಬೆಂಗಳೂರು, ಅಕ್ಟೋಬರ್ 18 : ಮಾಜಿ ಮುಖ್ಯಮಂತ್ರಿ, ಕರ್ನಾಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಹೈಕಮಾಂಡ್ ನೀಡಿದ ಸಂದೇಶ ಪಾಲನೆ ಅನಿವಾರ್ಯವಾಗಿದೆ. ಆದರೆ, ಇದನ್ನು ಪಾಲಿಸುವುದು ತಂತಿಯ ಮೇಲಿನ ನಡಿಗೆಯಾಗಿದೆ.
ಬುಧವಾರ ಸಿದ್ದರಾಮಯ್ಯ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾಗಿದ್ದರು. ಆಗ ಅವರು ನೀಡಿರುವ ಒಂದು ಸಾಲಿನ ಸಂದೇಶ ಸಿದ್ದರಾಮಯ್ಯಗೆ ಸಂಕಟ ತಂದಿದೆ. ಕರ್ನಾಟಕದಲ್ಲಿ ಪಕ್ಷವನ್ನು ಉಳಿಸಲು ಸಂದೇಶವನ್ನು ಪಾಲಿಸಲೇಬೇಕಿದೆ.
ಉಪ ಚುನಾವಣೆ; ಸಿದ್ದರಾಮಯ್ಯ ತಂತ್ರದಿಂದ ಬಿಜೆಪಿಗೆ ಸಂಕಷ್ಟ!
ಡಿಸೆಂಬರ್ 5ರಂದು ನಡೆಯುವ ಉಪ ಚುನಾವಣೆ ಬಗ್ಗೆ ಚರ್ಚೆ ನಡೆಸಲು, ಪ್ರತಿಪಕ್ಷ ನಾಯಕರಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಸಲ್ಲಿಸಲು ಸಿದ್ದರಾಮಯ್ಯ ಸೋನಿಯಾ ಗಾಂಧಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಅವರು ಸೂಚನೆ ನೀಡಿ ಕಳಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮೊದಲ ಟಾಸ್ಕ್ ಕೊಟ್ಟ ಹೈಕಮಾಂಡ್!
ಉಪ ಚುನಾವಣೆ ಸಂಪೂರ್ಣ ಉಸ್ತುವಾರಿಯನ್ನು ಸಿದ್ದರಾಮಯ್ಯಗೆ ಹೈಕಮಾಂಡ್ ವಹಿಸಿದೆ. 15 ಕ್ಷೇತ್ರಗಳ ಪೈಕಿ ಕನಿಷ್ಠ 10 ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂದು ಸಿದ್ದರಾಮಯ್ಯ ಪಣ ತೊಟ್ಟಿದ್ದಾರೆ. ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಪಕ್ಷಗಳು ತಯಾರಿ ಆರಂಭಿಸಿವೆ.
ಸೋನಿಯಾ ಗಾಂಧಿ ಜೊತೆ ಸಿದ್ದರಾಮಯ್ಯ ಮಹತ್ವದ ಚರ್ಚೆ
ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಿ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗಿ ಎಂಬ ಒಂದು ಸಾಲಿನ ಸಂದೇಶ ನೀಡಿದ್ದಾರೆ. ಸಿದ್ದರಾಮಯ್ಯ ನಾಯಕತ್ವದ ವಿರುದ್ಧ ಅಸಮಾಧಾನ ಎದ್ದಿರುವಾಗ ಎಲ್ಲರನ್ನೂ ಒಗ್ಗಟಾಗಿ ಕರೆದುಕೊಂಡು ಹೋಗುವುದು ಸಿದ್ದರಾಮಯ್ಯ ಮುಂದಿರುವ ದೊಡ್ಡ ಸವಾಲಾಗಿದೆ.
ನಾಯಕರು ಒಂದಾಗಿಲ್ಲ
ಕರ್ನಾಟಕ ಕಾಂಗ್ರೆಸ್ನಲ್ಲಿ ಎಲ್ಲಾ ನಾಯಕರು ಈಗ ಒಂದಾಗಿಲ್ಲ. ಅದರಲ್ಲೂ ಸಿದ್ದರಾಮಯ್ಯರನ್ನು ಪ್ರತಿಪಕ್ಷ ನಾಯಕರಾಗಿ ಆಯ್ಕೆ ಮಾಡಿದ್ದು ಅಸಮಾಧಾನವನ್ನು ಹುಟ್ಟು ಹಾಕಿದೆ. ಉಪ ಚುನಾವಣೆ ಬಗ್ಗೆ ಚರ್ಚಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಕರೆದಿದ್ದ ಸಭೆಗೆ ಕೆ. ಎಚ್. ಮುನಿಯಪ್ಪ, ಬಿ. ಕೆ. ಹರಿಪ್ರಸಾದ್, ರಾಮಲಿಂಗಾ ರೆಡ್ಡಿ, ಎಚ್. ಕೆ. ಪಾಟೀಲ್ ಸೇರಿದಂತೆ ಹಲವು ಹಿರಿಯ ನಾಯಕರು ಗೈರಾಗಿದ್ದರು.
ಸಿದ್ದರಾಮಯ್ಯ ದೆಹಲಿ ಭೇಟಿ
ಸಿದ್ದರಾಮಯ್ಯ ದೆಹಲಿಯಲ್ಲಿ ಸೋನಿಯಾ ಗಾಂಧಿ ಭೇಟಿ ಮಾಡಿದಾಗ ಜೊತೆಗಿದ್ದ ನಾಯಕರು ಭೈರತಿ ಸುರೇಶ್, ಅಶೋಕ್ ಪಟ್ಟಣ ಮುಂತಾದವರು. ಹಿರಿಯ ನಾಯಕರು ಎಲ್ಲಿ? ಎಂಬ ಪ್ರಶ್ನೆ ಸಹಜವಾಗಿ ಹೈಕಮಾಂಡ್ ಮುಂದೆ ಬಂದಿದೆ.
ಕೆಪಿಸಿಸಿಯಲ್ಲಿಯೇ ಬಣ
ಕೆಪಿಸಿಸಿಯಲ್ಲಿಯೇ ಬಣ ರಾಜಕೀಯವಿದೆ ಎಂಬ ಆರೋಪವಿದೆ. ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಹೇಳಿದಂತೆ ಕೇಳುತ್ತಾರೆ ಎಂಬುದು ಹಲವು ನಾಯಕರ ದೂರು. ಡಾ. ಜಿ. ಪರಮೇಶ್ವರ, ಕೆ. ಎಚ್. ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ನಾಯಕರೆಲ್ಲಾ ಬೇರೆ-ಬೇರೆ ಗುಂಪು ಮಾಡಿಕೊಂಡಿದ್ದಾರೆ ಎಂಬ ವಿಶ್ಲೇಷಣೆ ಇದ್ದು, ಎಲ್ಲರನ್ನೂ ಒಗ್ಗಟ್ಟಾಗಿಸುವುದು ಸಿದ್ದರಾಮಯ್ಯಗೆ ದೊಡ್ಡ ಸವಾಲಾಗಿದೆ.