ಚುನಾವಣಾ ಫಲಿತಾಂಶ: ಪಾಪ ಕಣ್ರಿ ಇವರು ಸೋಲಬಾರದಿತ್ತು
ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ ಹಲವು ಘಟಾನುಘಟಿ ನಾಯಕರುಗಳು, ಹಾಲಿ ಸಚಿವರೂ ಕೂಡ ಈ ಬಾರಿ ಮಣ್ಣು ಮುಕ್ಕಿದ್ದಾರೆ. ಆದರೆ ಈ ಬಾರಿ ಕೆಲವು ನಿರ್ವಿವಾದಿತ ನಾಯಕರು ಸೋಲುಂಡಿರುವುದು ಬೇಸರದ ಸಂಗತಿ.
ಹೌದು, ಸರಳ, ಸಜ್ಜನಿಕೆಯ, ವಿವಾದಗಳಿಂದ ದೂರ ಇದ್ದವರು, ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡಿದ್ದವರು ಎನಿಸಿಕೊಂಡಿದ್ದ ಕೆಲವು ನಾಯರು ಈ ಬಾರಿ ಚುನಾವಣೆಯಲ್ಲಿ ಸೋಲುಂಡಿದ್ದಾರೆ.
ಕರ್ನಾಟಕ ಚುನಾವಣೆ ಫಲಿತಾಂಶ : ಜಿಲ್ಲಾವಾರು ಗೆದ್ದವರು- ಸೋತವರು
ಕೆಲವು ಕಡೆ ವಿವಾದಿತ ನಾಯಕರೆನಿಸಿಕೊಂಡವರು ಸೋತಿದ್ದರೆ ಕೆಲವು ಕಡೆ ಗೆದ್ದಿದ್ದಾರೆ. ಏನೇ ಆಗಲಿ ಮತದಾರರ ನಿರ್ಣಯವೇ ಅಂತಿಮ ವಿವಾದಿತವೇ ಆಗಿರಲಿ ನಿರ್ವಿವಾದಿತವೇ ಆಗಿರಲಿ ಮತದಾರರ ಆಶೀರ್ವಾದ ಪಡೆದವರು ಗೆದ್ದಿದ್ದಾರೆ ಅಷ್ಟೆ.
ಸರಳ ವ್ಯಕ್ತಿತ್ವದ ನಾಯಕ
ಕಡೂರಿನ ಜೆಡಿಎಸ್ ಅಭ್ಯರ್ಥಿಯಾಗಿದ್ದ ವೈ.ಎಸ್.ವಿ.ದತ್ತ ಅವರು ಬಿಜೆಪಿಯ ಕೆ.ಎಸ್.ಪ್ರಕಾಶ್ ಅವರ ವಿರುದ್ಧ ಸುಮಾರು 15000 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಸರಳ ಜೀವನ, ಸ್ನೇಹಪರ ಮನಸ್ಸಿನಿಂದ ಉತ್ತಮ ರಾಜಕೀಯ ನಾಯಕ ಎನಿಸಿಕೊಂಡಿದ್ದ ದತ್ತ ಅವರು ಹೀನಾಯವಾಗಿ ಸೋತಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ವಿವಾದಾತೀತ ಕಿಮ್ಮನೆಗೆ ಎರಡನೇ ಸ್ಥಾನ
ಕಾಂಗ್ರೆಸ್ನ ಉತ್ತಮ ನಾಯಕರುಗಳಲ್ಲಿ ಕಿಮ್ಮನೆ ರತ್ನಾಕರ್ ಅವರು ಕೂಡಾ ಒಬ್ಬರು. ಶಿಕ್ಷಣ ಸಚಿವರಾಗಿ ದುಡಿದಿದ್ದ ಅವರು, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಆದ ನಂತರ ಸಚಿವ ಸ್ಥಾನದಿಂದ ಕೆಳಗಿಳಯಬೇಕಾಯಿತು ಆದರೆ ಅವರೊಬ್ಬ ಭ್ರಷ್ಟ ಎಂಬ ಆರೋಪ ಅವರ ವಿರೋಧಿಗಳೂ ಮಾಡಲಾರರು ಆದರೆ ಅವರೂ ಸಹ ಈ ಬಾರಿ ಸೋತಿದ್ದಾರೆ. ತೀರ್ಥಹಳ್ಳಿಯಲ್ಲಿ ಬಿಜೆಪಿಯ ಅರಗ ಜ್ಞಾನೇಂದ್ರ ವಿರುದ್ಧ ಅವರು ಸೋತಿದ್ದಾರೆ.
ಕಾಗೋಡು ತಿಮ್ಮಪ್ಪಗೆ ಸೋಲು
ಶಿಸ್ತಿಗೆ ಹೆಸರಾಗಿದ್ದ ಕಾಗೋಡು ತಿಮ್ಮಪ್ಪ ಅಜಾತ ಶತೃ. ಆಡಳಿತದಲ್ಲಿ ಲೋಪ ಕಂಡುಬಂದಾಗ ತಮ್ಮ ಪಕ್ಷವನ್ನೇ ತರಾಟೆಗೆ ತೆಗೆದುಕೊಳ್ಳುತ್ತಿದ್ದರು ಕಾಗೋಡು. ಅವರೂ ಸಹ ಕ್ಲೀನ್ ಹ್ಯಾಂಡ್ ರಾಜಕೀಯ ಮುಂಖಂಡ ಎಂದೇ ಹೆಸರಾದವರು ಆದರೆ ಈ ಬಾರಿ ಅವರೂ ಸೋತಿದ್ದಾರೆ. ಸಾಗರ ಕ್ಷೇತ್ರದಲ್ಲಿ ಬಿಜೆಪಿಯ ಹರತಾಳು ಹಾಲಪ್ಪ ವಿರುದ್ಧ ಅವರು 8000 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ಠೇವಣಿ ಕಳೆದುಕೊಂಡ 5 ರೂಪಾಯಿ ಡಾಕ್ಟರ್
ಮಂಡ್ಯದಲ್ಲಿ 5 ರೂಪಾಯಿ ಡಾಕ್ಟ್ರು ಎಂದೇ ಪ್ರಸಿದ್ಧವಾಗಿದ್ದ ಶಂಕರೇಗೌಡರು ಠೇವಣಿ ಕಳೆದುಕೊಂಡಿದ್ದಾರೆ. ಕೇವಲ 5 ರೂಪಾಯಿಗೆ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಶಂಕರೇಗೌಡರು ಸಮಾಜಸೇವೆಯನ್ನೇ ಉಸಿರಾಗಿ ಮಾಡಿಕೊಂಡಿದ್ದರು. ಇನ್ನೂ ಹೆಚ್ಚಿನ ಜನಸೇವೆ ಮಾಡಲೆಂದು ಅವರು ಮಂಡ್ಯ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದರು ಆದರೆ ಅವರು ಅಲ್ಲಿ ಠೇವಣಿಯನ್ನೇ ಕಳೆದುಕೊಂಡಿದ್ದಾರೆ. ಜನಸೇವೆಯನ್ನೇ ಉಸಿರಾಗಿಸಿಕೊಂಡಿದ್ದ ವೈದ್ಯರ ಕೈಯನ್ನು ಜನ ಹಿಡಿದಿಲ್ಲ.
ದರ್ಶನ್ ಪುಟ್ಟಣ್ಣಯ್ಯಗೆ ಅನುಕಂಪದ ಅಲೆಯೂ ಇಲ್ಲ
ಮೇಲುಕೋಟೆ ಶಾಸಕ ರೈತ ನಾಯಕ ಪುಟ್ಟಣ್ಣಯ್ಯ ಅವರು ವಿಧಿವಶರಾದ ಬಳಿಕ ಮೇಲುಕೋಟೆ ಕ್ಷೇತ್ರದಿಂದ ಸ್ವರಾಜ್ ಇಂಡಿಯಾ ಪಕ್ಷದ ಮೂಲಕ ದರ್ಶನ್ ಪುಟ್ಟಣ್ಣಯ್ಯ ಅವರು ಕಣಕ್ಕಿಳಿದಿದ್ದರು. ವಿದೇಶದ ತಮ್ಮ ಕಂಪೆನಿಗೆ ರಾಜಿನಾಮೆ ನೀಡಿ ರೈತ ಸೇವೆಗೆಂದು ಇಲ್ಲಿಗೆ ವಾಪಾಸ್ಸಾಗಿದ್ದರು. ಆದರೆ ಜನ ಅವರ ಕೈಹಿಡಿಯಲಿಲ್ಲ, ಇಲ್ಲಿ ಜೆಡಿಎಸ್ನ ಸಿಎಸ್ ಪುಟ್ಟರಾಜು ಅವರು ಗೆಲುವು ಸಾಧಿಸಿದ್ದಾರೆ. ದರ್ಶನ್ ಪುಟ್ಟಣ್ಣಯ್ಯಗೆ ಕಾಂಗ್ರೆಸ್ ಬೆಂಬಲ ನೀಡಿತ್ತಾದರೂ ಮೇಲುಕೋಟೆ ಜನ ದರ್ಶನ್ ಪುಟ್ಟಣ್ಣಯ್ಯ ಕೈಹಿಡಿಯಲಿಲ್ಲ.