ಜನಾರ್ದನ ಪೂಜಾರಿ ಆತ್ಮಕಥೆಯಲ್ಲಿನ ಕೆಲವು ಸ್ಫೋಟಕ ಸತ್ಯಗಳು!
ಇತ್ತೀಚಿನ ದಿನಗಳಲ್ಲಿ ಸ್ಪಪಕ್ಷೀಯರ ವಿರುದ್ದವೇ ಕೆಂಡಕಾರುತ್ತಿರುವ ಕಾಂಗ್ರೆಸ್ಸಿನ ಹಿರಿಯ ಮುಖಂಡ ಜನಾರ್ದನ ಪೂಜಾರಿಯವರ ಬಹು ನಿರೀಕ್ಷಿತ ಆತ್ಮಕಥೆ, "ಸಾಲಮೇಳದ ಸಂಗ್ರಾಮ" ಗಣರಾಜ್ಯೋತ್ಸವದ ದಿನದಂದು ಮಂಗಳೂರು ಕುದ್ರೋಳಿ ದೇವಾಲಯದಲ್ಲಿ ಲೋಕಾರ್ಪಣೆ ಗೊಂಡಿದೆ.
ಕಾಂಗ್ರೆಸ್ಸಿನವರು ಅಕ್ಷರಶಃ ಮುಗಿಬೀಳುವ ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ, ಬಿಜೆಪಿ ಮುಖಂಡರು ಜೊತೆಗೆ ರಮಾನಾಥ ರೈ ಕೃತಿ ಬಿಡುಗಡೆಯ ವೇಳೆ ಹಾಜರಿದ್ದದ್ದು ವಿಶೇಷ. ತಮ್ಮ ಸುದೀರ್ಘ ನಾಲ್ಕು ದಶಕಗಳ ರಾಜಕೀಯ ಜೀವನದ ಬಗ್ಗೆ ಆತ್ಮಕಥೆಯಲ್ಲಿ ಬರೆದಿದ್ದೇನೆಂದು ಪೂಜಾರಿಯವರು ಈಗಾಗಲೇ ಹೇಳಿರುವುದರಿಂದ, ಈ ಕೃತಿಯಲ್ಲಿ ಏನಿರುತ್ತದೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.
ಜನಾರ್ದನ ಪೂಜಾರಿ ಆತ್ಮಕಥೆ 'ಸಾಲಮೇಳದ ಸಂಗ್ರಾಮ' ಬಿಡುಗಡೆ
216 ಪುಟಗಳ ಜನಾರ್ಧನ ಪೂಜಾರಿಯವರ ಆತ್ಮಕಥನದಲ್ಲಿ ರಾಷ್ಟ್ರ ರಾಜಕಾರಣ, ಇಂದಿರಾ ಗಾಂಧಿಯವರ ಜೊತೆಗಿನ ತಮ್ಮ ರಾಜಕೀಯ ಒಡನಾಟ, ಬಂಗಾರಪ್ಪ, ದೇವರಾಜ ಅರಸು ಮತ್ತು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಪೂಜಾರಿ ಪ್ರಸ್ತಾವಿಸಿದ್ದಾರೆ.
ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಮತ್ತು ಪೂಜಾರಿಯವರ ಪರಮಾಪ್ತ ಹರಿಕೃಷ್ಣ ಬಂಟ್ವಾಳ ಸಂಪಾದಕತ್ವದಲ್ಲಿ ಮೂಡಿಬಂದಿರುವ "ಸಾಲಮೇಳದ ಸಂಗ್ರಾಮ" ಕೃತಿ, ಸದ್ಯ ಬಿಸಿಕೇಕ್ ನಂತೆ ಮಾರಾಟವಾಗುತ್ತಿದೆ.
ತನ್ನ ನೇರ, ನಿಷ್ಠುರ ನುಡಿಯಿಂದ ಹಲವರನ್ನು ಎದುರು ಹಾಕಿಕೊಂಡಿರುವ ಜನಾರ್ದನ ಪೂಜಾರಿ, ತಮ್ಮ ಆತ್ಮಕಥನದಲ್ಲಿ ಕೆಲವೊಂದು ಸ್ಫೋಟಕ ವಿಚಾರವನ್ನು ಬರೆದಿದ್ದಾರೆ. ಅದರಲ್ಲಿ, ಇಂದಿರಾ ಗಾಂಧಿಯವರ ಮೇಲೆ ಮಾಜಿ ಸಿಎಂ ಬಂಗಾರಪ್ಪ ಹಲ್ಲೆ ನಡೆಸಲು ಮುಂದಾಗಿದ್ದರು ಎನ್ನುವುದೂ ಒಂದು. ಪುಸ್ತಕದ ಕೆಲವೊಂದು ಹೈಲೆಟ್ಸ್, ಮುಂದೆ ಓದಿ..
ಇಂದಿರಾ ಗಾಂಧಿಯವರ ಮೇಲೆ ಹಲ್ಲೆಗೆ ಮುಂದಾಗಿದ್ದ ದಿ.ಬಂಗಾರಪ್ಪ
ದಿ.ಬಂಗಾರಪ್ಪ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮೇಲೆ ಹಲ್ಲೆಗೆ ಮುಂದಾಗಿದ್ದ ಸ್ಪೋಟಕ ಪ್ರಸಂಗವನ್ನು ಜನಾರ್ದನ ಪೂಜಾರಿ ಕಥನದಲ್ಲಿ ಬಯಲು ಮಾಡಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗುವ ಕನಸಿಗೆ ಭಂಗ ಉಂಟಾದಾಗ ಬಂಗಾರಪ್ಪ ನಡೆದುಕೊಂಡ ರೀತಿಯನ್ನು ಕೃತಿಯಲ್ಲಿ ಪೂಜಾರಿ ಅನಾವರಣ ಗೊಳಿಸಿದ್ದಾರೆ. ದೆಹಲಿಯಲ್ಲಿ ಇಂದಿರಾಗಾಂಧಿಯವರನ್ನು ಅವರ ಎದುರಲ್ಲೇ ಬಂಗಾರಪ್ಪ ಅತ್ಯಂತ ಕೆಟ್ಟಮಾತುಗಳಿಂದ ಬೈದದ್ದು ನಂತರ ಅವರ ಮೇಲೆ ಹಲ್ಲೆಗೆ ಮುಂದಾದ ಪ್ರಸಂಗವನ್ನು ಪೂಜಾರಿ ತಮ್ಮ ಆತ್ಮ ಚರಿತ್ರೆಯಲ್ಲಿ ವಿವರಿಸಿದ್ದಾರೆ.
ಸುನಿಲ್ ದತ್ ಅವರನ್ನು ಪವಾರ್ ಸಿಕ್ಕಿಸಿಹಾಕಿಸಲು ನೋಡಿದ್ದರು
ಶರದ್ ಪವಾರ್ ಮಹಾರಾಷ್ಟ್ರದ ಸಿಎಂ ಆಗಿದ್ದ ವೇಳೆ, ಸುನಿಲ್ ದತ್ ಮೇಲೆ ಅವರ ಹಗೆಯ ಬಗ್ಗೆ ಕೂಡಾ ವಿವರಿಸಿರುವ ಪೂಜಾರಿ, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವ ಬಯಕೆ ಹೊಂದಿದ್ದ ಶರದ್ ಪವಾರ್ ಅವರನ್ನು ದತ್ ವಿರೋಧಿಸಿದ್ದರು. ನಂತರ ಸಿಎಂ ಆಗಿ ಪವಾರ್ ಅಧಿಕಾರ ವಹಿಸಿಕೊಂಡ ಬಳಿಕ 1993 ರಲ್ಲಿ ಮುಂಬಯಿಯಲ್ಲಿ ಸರಣಿ ಸ್ಪೋಟಗಳು ನಡೆದವು. ಆ ಬಳಿಕ ಹಿಂದೂ ಮುಸ್ಲಿಂ ಗಲಾಟೆ, ಈ ವೇಳೆ ಸುನಿಲ್ ದತ್ ಪುತ್ರ ಸಂಜಯ್ ದತ್ ಮನೆಯಲ್ಲಿ ಎಕೆ.47 ಗನ್ ಸಿಕ್ಕಿತ್ತು. ಈ ಗನ್ ಉಗ್ರಗಾಮಿಗಳೇ ನೀಡಿದ್ದರು ಎಂದು ಹೇಳಿ ಸಂಜಯ್ ದತ್ ಅವರನ್ನು ಪವಾರ್ ಸಿಕ್ಕಿಸಿಹಾಕಿಸಲು ನೋಡಿದ್ದರು, ಯಶಸ್ವಿಯಾದರು ಎಂದು ಪೂಜಾರಿ ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದಿದ್ದಾರೆ.
ಕೇಂದ್ರಕ್ಕೆ ಪಾರ್ಟಿ ಫಂಡ್ ಸಂಗ್ರಹಿಸುವ ಕಲೆ ನನಗೆ ತಿಳಿದಿಲ್ಲ
ನಾಲ್ಕು ಬಾರಿ ಮುಖ್ಯಮಂತ್ರಿಯಾಗುವ ಚಾನ್ಸ್ ನನಗೆ ಸಿಕ್ಕಿತ್ತು ಎಂದು ಬರೆದುಕೊಂಡಿರುವ ಪೂಜಾರಿ, ಸಿಎಂ ಆದರೆ, ಕೇಂದ್ರಕ್ಕೆ ಪಾರ್ಟಿ ಫಂಡ್ ಸಂಗ್ರಹಿಸಬೇಕು. ಆ ಕಲೆ ನನಗೆ ತಿಳಿದಿಲ್ಲ. ಹಾಗಾಗಿ ನಾನು ಮುಖ್ಯಮಂತ್ರಿ ಹುದ್ದೆ ಬೇಡವೆಂದು ನಿರಾಕರಿಸಿದ್ದೆ ಎಂದು ಪೂಜಾರಿ ತಮ್ಮ ಕಥನದಲ್ಲಿ ಪ್ರಸ್ತಾವಿಸಿದ್ದಾರೆ.
ಕುದ್ರೋಳಿ ದೇವಾಲಯಕ್ಕೆ ಬರುತ್ತೇನೆಂದು ವಚನಭಂಗ ಮಾಡಿದ ಗೌಡರು
ಒಂದು ದಿನ ಮಾಜಿ ಪ್ರಧಾನಿ ದೇವೇಗೌಡರು ಭೇಟಿಯಾಗಿದ್ದರು. ನೀವು ಮನಸ್ಸು ಮಾಡಿದರೆ, ನಾನು ಈ ದೇಶದ ಪ್ರಧಾನಿಯಾಗಬಹುದು ಎಂದು ನನ್ನಲ್ಲಿ ಮನವಿ ಮಾಡಿದರು. ನಾನು ಗೌಡರ ಮನವಿಗೆ ಒಪ್ಪಿಕೊಂಡು, ಒಂದು ಷರತ್ತು ವಿಧಿಸಿದ್ದೆ, ಪಿಎಂ ಆಗಿ ಒಂದು ತಿಂಗಳೊಳಗೆ ನೀವು ಕುದ್ರೋಳಿ ದೇವಸ್ಥಾನಕ್ಕೆ ಬರಬೇಕೆಂದು, ಅದಕ್ಕೆ ಗೌಡರು ಒಪ್ಪಿಕೊಂಡಿದ್ದರು. ಆದರೆ ಅವರು ವಚನಭಂಗ ಮಾಡಿದರು ಎಂದು ಪೂಜಾರಿ ಪುಸ್ತಕದಲ್ಲಿ ಹೇಳಿದ್ದಾರೆ.
ಚುನಾವಣಾ ಖರ್ಚಿಗೆ ದುಡ್ಡು ಬೇಕೆಂದು ಕೇಳಿದ್ದ ಇಂದಿರಾ
ಧರ್ಮಸ್ಥಳ ಗೆಸ್ಟ್ ಹೌಸಿನಲ್ಲಿ ತಂಗಿದ್ದ ಇಂದಿರಾ ಗಾಂಧಿ, ಚುನಾವಣಾ ಖರ್ಚಿಗೆ ದುಡ್ಡು ಬೇಕೆಂದು ಕೇಳಿದ್ದರು. ದೇವರಾಜ ಅರಸು ಅವರು ದುಡ್ಡು ಹೊಂದಿಸಿಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ನಾನು ನನ್ನ ಸ್ನೇಹಿತರು, ಕುಟುಂಬದವರ ಬಳಿ ಇಂದಿರಾ ಹಣ ಕೇಳಿದ ವಿಚಾರವನ್ನು ಪ್ರಸ್ತಾವಿಸಿ, ಆಗಿನ ಕಾಲದಲ್ಲಿ ದೊಡ್ಡ ಮೊತ್ತವಾದ 90ಸಾವಿರ ರೂಪಾಯಿಯನ್ನು ಹೊಂದಿಸಿ, ಇಂದಿರಾ ಅವರಿಗೆ ಕೊಟ್ಟಿದ್ದೆ ಎಂದು ಪೂಜಾರಿ, ಆತ್ಮಕಥನದಲ್ಲಿ ಹೇಳಿದ್ದಾರೆ.
ಇಂದಿರಾ ಎಚ್ಚರಿಕೆ ನಂತರವೂ ನಾನು ಮೊಯ್ಲಿಗೆ ಒಳಿತನ್ನೇ ಬಯಸಿದೆ
ಬಿಳಿ ಇದ್ದದ್ದನ್ನೆಲ್ಲಾ ಹಾಲು ಎಂದು ನಂಬುವವರು ನೀವು, ವೀರಪ್ಪ ಮೊಯ್ಲಿಯವರನ್ನು ಯಾವ ಕಾರಣಕ್ಕೂ ನಂಬಲು ಹೋಗಬೇಡಿ ಎಂದು ಇಂದಿರಾ ಗಾಂಧಿ ನನ್ನಲ್ಲಿ ಹೇಳಿದ್ದರು. ನೀವು ಹೀಗೇ ಅವರನ್ನು ನಂಬಿಕೊಂಡು ಹೋದರೆ, ನೀವು ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ ಎಂದಿದ್ದರು. ಇಂದಿರಾ ಎಚ್ಚರಿಕೆ ನಂತರವೂ ನಾನು ಮೊಯ್ಲಿಗೆ ಒಳಿತನ್ನೇ ಬಯಸಿದ್ದೆ. ಇಂದಿರಾ ಹೇಳಿದಂತೆ, ನಾನೀಗ ಪಶ್ಚಾತ್ತಾಪ ಪಡುತ್ತಿದ್ದೇನೆ - ಪೂಜಾರಿ ಆತ್ಮಕಥನದಲ್ಲಿ ಬರೆದದ್ದು.