ನೆಪ ಒಂದು, ಉದ್ದೇಶ ಮತ್ತೊಂದು: ದೆಹಲಿಗೆ ಮತ್ತಷ್ಟು ಸಚಿವ ಸ್ಥಾನದ ಆಕಾಂಕ್ಷಿಗಳ ದೌಡು?
ಸಚಿವ ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್ ಹಂತ ತಲುಪಿದೆಯಾ ಎನ್ನುವ ಪ್ರಶ್ನೆ ಎದುರಾಗುತ್ತಿರುವುದು ಒಂದು ಕಡೆ ಯಡಿಯೂರಪ್ಪ ಮಲೆ ಮಹದೇಶ್ವರ ಬೆಟ್ಟದಲ್ಲಿ ನೀಡಿದ ಹೇಳಿಕೆ. ಇನ್ನೊಂದು, ವಿವಿಧ ಕಾರಣಗಳನ್ನು ನೀಡಿ ಬಿಜೆಪಿ ಮುಖಂಡರು ದೆಹಲಿಗೆ ದೌಡಾಯಿಸುತ್ತಿರುವುದು.
ಚುನಾವಣೆಗೆ ಟಿಕೆಟ್ ನೀಡುವುದಾಗಲಿ, ಸಂಪುಟ ಸೇರ್ಪಡೆ ವಿಚಾರವಾಗಲಿ, ರಾಜ್ಯದ ಹಿರಿಯ ಮುಖಂಡರಿಗಿಂತ, ದೆಹಲಿಯ ನಾಯಕರ ಮಾತೇ ಅಂತಿಮ ಎನ್ನುವುದನ್ನು ಸ್ಪಷ್ಟವಾಗಿ ಅರಿತಿರುವ ರಾಜ್ಯ ಬಿಜೆಪಿ ಮುಖಂಡರು, ಅಲ್ಲೇ ಲಾಬಿ ನಡೆಸಲು ಆರಂಭಿಸಿದ್ದಾರೆ.
ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನದ ಲಾಬಿ: ಕವಲು ದಾರಿಯತ್ತು ರಾಜ್ಯ ಬಿಜೆಪಿ
ಕಳೆದ ಒಂದೆರಡು ವಾರದಿಂದ ಸತತವಾಗಿ ದೆಹಲಿ ಪ್ರವಾಸ ಕೈಗೊಳ್ಳುತ್ತಿರುವ ರಮೇಶ್ ಜಾರಕಿಹೊಳಿ ಮತ್ತೆ ದೆಹಲಿಗೆ ಪ್ರಯಾಣಿಸಿದ್ದಾರೆ. ಈ ಬಾರಿ, ವರಿಷ್ಠರೇ ಅವರನ್ನು ರಾಜಧಾನಿಗೆ ಕರೆಸಿಕೊಂಡಿದ್ದಾರೆ. ಹಾಗಾಗಿ, ಜೆ.ಪಿ.ನಡ್ಡಾ ಮತ್ತು ರಮೇಶ್ ಜಾರಕಿಹೊಳಿ ನಡುವಿನ ಮಾತುಕತೆ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.
ರಾಜ್ಯದ ಹಿರಿಯ ಸಚಿವರು ಈಗಗಾಲೇ ದೆಹಲಿಯಲ್ಲಿದ್ದರೆ, ಮತ್ತಷ್ಟು ನಾಯಕರು ಗುರುವಾರ ಅಥವಾ ಶುಕ್ರವಾರದಲ್ಲಿ ದೆಹಲಿಗೆ ಪ್ರಯಾಣಿಸುವ ಸಾಧ್ಯತೆಯಿದೆ. ನಾಳೆ (ನ 27) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಸಿ.ಟಿ.ರವಿಯವರ ಕಚೇರಿ ಪೂಜೆ ದೆಹಲಿಯಲ್ಲಿದೆ.
ತನ್ನನ್ನು ಕಡೆಗಣಿಸುತ್ತಿರುವ ವರಿಷ್ಠರಿಗೆ ಭರ್ಜರಿ ಸಡ್ಡು ಹೊಡೆದ ಯಡಿಯೂರಪ್ಪ?
ಬಿ.ಎಲ್. ಸಂತೋಷ್ ಭೇಟಿಯಾದ ಕೆ.ಎಸ್.ಈಶ್ವರಪ್ಪ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನಡುವಿನ ರಾಜಕೀಯ ಸಂಬಂಧ ಹೇಗಿದೆ ಎನ್ನುವುದು ಗೊತ್ತಿರುವ ವಿಚಾರ. ಈಶ್ವರಪ್ಪ ತಮ್ಮ ಸಮುದಾಯದ ಕೆಲಸಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿದ್ದಾರೆ. ನಿಯೋಗದೊಂದಿಗೆ ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜೊತೆಗೆ ಮಾತುಕತೆಯನ್ನೂ ನಡೆಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಶಶಿಕಲಾ ಜೊಲ್ಲೆ
ಇನ್ನು ಸಚಿವ ವಿ.ಸೋಮಣ್ಣ ಕೂಡಾ ದೆಹಲಿಯಲ್ಲಿದ್ದಾರೆ. ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಶಶಿಕಲಾ ಜೊಲ್ಲೆ ಕೂಡಾ ದೆಹಲಿಗೆ ಹೋಗಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ ಎಂದು ಹೇಳುತ್ತಿದ್ದ ಶಶಿಕಲಾ ಜೊಲ್ಲೆ, "ಯಡಿಯೂರಪ್ಪನವರ ಸಂಪುಟದಲ್ಲಿರುವ ಏಕೈಕ ಮಹಿಳೆ ನಾನು. ನನ್ನನ್ನು ಕೈಬಿಡುವುದಿಲ್ಲ ಎನ್ನುವ ನಂಬಿಕೆಯಿದೆ. ಸ್ಥಾನ ಬಿಡಬೇಕು ಎನ್ನುವ ನಿರ್ದೇಶನವೂ ಪಕ್ಷದಿಂದ ನನಗೆ ಬಂದಿಲ್ಲ"ಎಂದು ಇವರು ಹೇಳಿದ್ದಾರೆ.
ಪ್ರಲ್ಹಾದ್ ಜೋಶಿ ಭೇಟಿಯಾಗಿ, ದಿನ ದೆಹಲಿಯಲ್ಲೇ ತಂಗಿದ್ದ ಜಾರಕಿಹೊಳಿ
ಕಳೆದ ವಾರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರನ್ನು ಭೇಟಿಯಾಗಿ, ಮೂರ್ನಾಲ್ಕು ದಿನ ದೆಹಲಿಯಲ್ಲೇ ತಂಗಿದ್ದ ರಮೇಶ್ ಜಾರಕಿಹೊಳಿ, ಮತ್ತೆ, ಬುಧವಾರ (ನ 25) ದೆಹಲಿಗೆ ತೆರಳಿದ್ದಾರೆ. ಸಂಪುಟ ವಿಸ್ತರಣೆಯ ಸಂಬಂಧ, ಮಾತುಕತೆ ನಡೆಸುವುದಾಗಿಯೂ ಜಾರಕಿಹೊಳಿ ಹೇಳಿದ್ದಾರೆ. ರಾಷ್ಟ್ರಾಧ್ಯಕ್ಷ ನಡ್ಡಾ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ. ಈಗಾಗಲೇ ಎರಡು ಬಾರಿ ಬಿ.ಎಲ್.ಸಂತೋಷ್ ಅವರನ್ನು ಜಾರಕಿಹೊಳಿ ಭೇಟಿಯಾಗಿದ್ದಾಗಿದೆ.
Recommended Video
ಸಿ.ಟಿ.ರವಿಯವರ ನೂತನ ಕಚೇರಿ ಪೂಜೆ ನಾಳೆ ದೆಹಲಿಯಲ್ಲಿ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರ ನೂತನ ಕಚೇರಿ ಪೂಜೆ ನಾಳೆ ದೆಹಲಿಯಲ್ಲಿ ನಡೆಯಲಿದೆ. ಇದನ್ನು ನೆಪವಾಗಿ ಇಟ್ಟುಕೊಂಡು ಇನ್ನಷ್ಟು ಆಕಾಂಕ್ಷಿಗಳು ಇಂದು ಅಥವಾ ನಾಳೆ ದೆಹಲಿಗೆ ಪ್ರಯಾಣಿಸುವ ಸಾಧ್ಯತೆಯಿದೆ. ಆ ಮೂಲಕ, ನೆಪವೊಂದು, ಕೆಲಸ ಇನ್ನೊಂದು ಎನ್ನುವಂತೆ, ವರಿಷ್ಠರನ್ನು ಭೇಟಿಯಾಗಿ ತಮ್ಮ ಆಕಾಂಕ್ಷೆಯನ್ನುತೋಡಿಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಸಚಿವ ಆರ್.ಅಶೋಕ್ ಮತ್ತು ಡಿಸಿಎಂ ಲಕ್ಷ್ಮಣ ಸವದಿ ದೆಹಲಿಗೆ ಹೋಗುವುದು ನಿಗದಿಯಾಗಿದೆ.