ಖರ್ಗೆ, ಡಿಕೆಶಿ, ಪರಮೇಶ್ವರ್, ಪಾಟೀಲ್ ಗೆ ಹೊಸ ಜವಾಬ್ದಾರಿ: ಸಿದ್ದರಾಮಯ್ಯ ಭವಿಷ್ಯ?
Recommended Video
ಬೆಂಗಳೂರು, ಫೆಬ್ರವರಿ 10: ರಾಜ್ಯ ಕಾಂಗ್ರೆಸ್ನಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ. ಆದರೆ ಹೊಸಗಾಳಿಯ ಬದಲಿಗೆ ಹಳಬರಿಗೆ ಹೊಸ ಜವಾಬ್ದಾರಿಗಳನ್ನು ನೀಡಿ ಸಂತುಷ್ಟಿಪಡಿಸಲಾಗಿದೆ.
ಲೋಕಸಭೆ ಚುನಾವಣೆ ಹೀನಾಯ ಸೋಲು, ಮೈತ್ರಿ ಸರ್ಕಾರದ ಪತನದ ಬಳಿಕ ರಾಜ್ಯದಲ್ಲಿ ಶಕ್ತಿಕಳೆದುಕೊಂಡಿರುವ ಕಾಂಗ್ರೆಸ್ ಗೆ ನವಚೈತನ್ಯ ತುಂಬುವ ಪ್ರಯತ್ನವನ್ನು ಹೈಕಮಾಂಡ್ ಮಾಡಲು ಸಜ್ಜಾಗಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪ್ರಬಲ ನಾಯಕನ ಹೆಗಲಿಗೆ ವಹಿಸಲು ಸರ್ವ ಸನ್ನದ್ಧವಾಗಿದೆ.
'ನಿರ್ಗತಿಕ ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಊಟ ಹಾಕಿಸಲಿ'
ದೆಹಲಿ ಫಲಿತಾಂಶ (ಫೆಬ್ರವರಿ 11) ರ ಬಳಿಕ ರಾಜ್ಯ ಕಾಂಗ್ರೆಸ್ನ ಪ್ರಮುಖ ನಾಯಕರುಗಳಿಗೆ ಹೊಸ ಜವಾಬ್ದಾರಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಹಂಚಲಿದೆ. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಗೆ ಹೊಸ ಜವಾಬ್ದಾರಿಗಳನ್ನು ನೀಡಲಿದೆ. ಸಿದ್ದರಾಮಯ್ಯ ಅವರನ್ನು ಈಗಿರುವ ಸ್ಥಾನದಲ್ಲಿಯೇ ಹೈಕಮಾಂಡ್ ಮುಂದುವರೆಸಲಿದೆ.
ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ
ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದು ಬಹುತೇಕ ಖಾತ್ರಿ ಆಗಿದೆ. ಆದರೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸಬೇಕೆಂಬ ಸಿದ್ದರಾಮಯ್ಯ ಅವರ ಬೇಡಿಕೆಯನ್ನು ಹೈಕಮಾಂಡ್ ಒಪ್ಪಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಪಕ್ಷದಲ್ಲಿ ಹಿನ್ನಡೆ ಉಂಟು ಮಾಡಿದೆ.
ಮಲ್ಲಿಕಾರ್ಜುನ ಖರ್ಗೆ ಗೆ ಪಕ್ಷದ ಪ್ರಭಾವಿ ಹುದ್ದೆ
ಲೋಕಸಭೆ ಚುನಾವಣೆಯಲ್ಲಿ ಸೋತು ರಾಜಕೀಯದಲ್ಲಿ ಅಪ್ರಸ್ತುತವಾಗುವತ್ತ ಸಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜಕೀಯ ಪ್ರಸ್ತುತತೆ ನೀಡುವ ಕಾರಣಕ್ಕೆ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಡಲಾಗುತ್ತಿದೆ. ಇದೊಂದು ಪ್ರಭಾವಿ ಹುದ್ದೆ ಆಗಿದೆ ಆದರೆ ಖರ್ಗೆ ಅವರು ಮತ್ತೆ ದೆಹಲಿ ರಾಜಕಾರಣಕ್ಕೆ ಮಾತ್ರವೇ ಸೀಮಿತವಾಗಲಿದ್ದಾರೆ.
ಅಂತೂ ನಡೆದುಹೋದ ಸಂಪುಟ ವಿಸ್ತರಣೆ: ಡಿ.ಕೆ.ಶಿವಕುಮಾರ್ ಅಂದು ನುಡಿದ ಭವಿಷ್ಯ ಠುಸ್ ಪಟಾಕಿ
ಪರಮೇಶ್ವರ್ ಅವರಿಗೆ ಸಮಾಧಾನಕರ ಸ್ಥಾನ?
ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರಿಗೆ ಸಮನ್ವಯ ಸಮಿತಿ ಮುಖ್ಯಸ್ಥ ಸ್ಥಾನವನ್ನು ಕೊಡಲು ಹೈಕಮಾಂಡ್ ನಿರ್ಣಯಿಸಿದೆ. ಮಾಜಿ ಕೆಪಿಸಿಸಿ ಅಧ್ಯಕ್ಷರಾಗಿರುವ ಪರಮೇಶ್ವರ್ ಇನ್ನಷ್ಟು ಗಟ್ಟಿ ಸ್ಥಾನವನ್ನು ನಿರೀಕ್ಷಿಸಿದ್ದರು. ಆದರೆ ಈ ಸ್ಥಾನ ಅವರಿಗೆ ನಿರಾಸೆ ಮೂಡಿಸುವ ಸಾಧ್ಯತೆ ಇದೆ.
ಎಂ.ಬಿ.ಪಾಟೀಲ್ ಮೇಲೆ ಸಿದ್ದರಾಮಯ್ಯ ಕೃಪೆ
ಸಿದ್ದರಾಮಯ್ಯ ಆಪ್ತ ಎಂ.ಬಿ.ಪಾಟೀಲ್ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ಹೈಕಮಾಂಡ್ ನೀಡಲಿದೆ. ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಅಥವಾ ಕಾರ್ಯಾಧ್ಯಕ್ಷ ಸ್ಥಾನವನ್ನು ನೀಡುವಂತೆ ಸಿದ್ದರಾಮಯ್ಯ ಹೈಕಮಾಂಡ್ ಬಳಿ ಲಾಭಿ ಮಾಡಿದ್ದರು. ಆದರೆ ಡಿ.ಕೆ.ಶಿವಕುಮಾರ್ ಒತ್ತಾಯಕ್ಕೆ ಮಣಿದ ಹೈಕಮಾಂಡ್ ಹೆಚ್ಚುವರಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಬ್ರೇಕ್ ಹಾಕಿ, ಸಿದ್ದರಾಮಯ್ಯ ಅವರ ಬೇಡಿಕೆಗೂ ಅಲ್ಪ ಮನ್ನಣೆ ಕೊಟ್ಟು ಪಾಟೀಲರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿಸಿದೆ.
ಸಿದ್ದರಾಮಯ್ಯ ಭವಿಷ್ಯವೇನು?
ಶಾಸಕಾಂಗ ಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರನ್ನು ಅದೇ ಸ್ಥಾನದಲ್ಲಿ ಮುಂದುವರೆಯುವಂತೆ ಹೈಕಮಾಂಡ್ ಸೂಚಿಸಲಿದೆ. ಮತ್ತು ವಿರೋಧ ಪಕ್ಷದ ನಾಯಕರಾಗಿಯೂ ಸಿದ್ದರಾಮಯ್ಯ ಅವರೇ ಮುಂದುವರೆಯಲಿದ್ದಾರೆ. ಈಶ್ವರ್ ಖಂಡ್ರೆ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ ಹಾಗಾಗಿ ಅವರು ಅದೇ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ.